Wednesday, November 30, 2011

ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...


















ಮಾನ್ಯ ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೆ ಸಪ್ರೇಮ ವಂದನೆಗಳು...

ನಿಮ್ಮಗಳ ಕೃಪಾಶೀರ್ವಾದದಿಂದ ಕರ್ನಾಟಕದ ನಾವೆಲ್ಲ ಜನತೆ ಆರೋಗ್ಯದಿಂದಿದ್ದೇವೆ...ನೀವು ಸಹ ಆರೋಗ್ಯದಿಂದ ಇರುವುವಿರೆಂದು ಭಾವಿಸುತ್ತೇನೆ. ಈ ರೀತಿಯ ಪತ್ರಗಳು, ಸಾರ್ವಜನಿಕರಿಂದ ಬರುವ ಪತ್ರಗಳು ನಿಮಗೇನೂ ಹೊಸದಲ್ಲ ಮತ್ತು ಈ ನನ್ನ ಪತ್ರಕ್ಕೆ ತಮ್ಮಿಂದ ಯಾವುದೇ ಉತ್ತರ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ಕೂಡ ನಾನು ಹೊಂದಿಲ್ಲ. ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕಾಯಕದಲ್ಲಿ ನನ್ನದೂ ಒಂದು ಪಾಲಿರುವುದರಿಂದ ಈ ಪತ್ರವನ್ನು ನಿಮಗೆ ಬರೆಯುವ ಅನಿವಾರ್ಯತೆ ಇಂದು ನನ್ನ ಮುಂದಿದೆ. ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಇದನ್ನು ಓದುವ ಕೃಪೆತೋರಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ನನಗೆ ತಿಳುವಳಿಕೆ ಬಂದ ಮೇಲೆ, ಕರ್ನಾಟಕ ರಾಜ್ಯ ರಾಜಕಾರಣವನ್ನು ನೋಡುತ್ತ ಬಂದಿದ್ದೇನೆ. ಆದರೆ ರಾಜಕೀಯದ ನಿಜವಾದ ಖದರು ಏನು ಎಂದು ನಮಗೆಲ್ಲ ಅರ್ಥವಾಗಿದ್ದು, ಕರ್ನಾಟಕ ರಾಜ್ಯ ರಾಜಕಾರಣದ ಚುಕ್ಕಾಣಿಯನ್ನು ನಿಮ್ಮ ಪಕ್ಷ ಹಿಡಿದ ಮೇಲೆಯೇ. ಅಧಿಕಾರವನ್ನು ವಹಿಸಿಕೊಂಡ ನಂತರ ಮೊದಲ ಮೂರು ವರ್ಷಗಳ ಕಾಲ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ರಾಜ್ಯಭಾರಮಾಡಿ ಅದೆಷ್ಟು ಸಲ ರೆಸಾರ್ಟ್ ರಾಜಕಾರಣಕ್ಕೆ ಮುನ್ನುಡಿಯನ್ನು ಬರೆದರೋ, ಅದೆಷ್ಟು ಸಲ ಮಾಧ್ಯಮದ ಮುಂದೆ ಕಣ್ಣೀರು ಹಾಕಿ ಇಂತಹ ತಪ್ಪನ್ನು ಇನ್ನು ಮುಂದೆ ಪುನರಾವರ್ತಿಸುವುದಿಲ್ಲ ಎಂದು ಹೇಳಿದರೋ, ಎಲ್ಲ ಅವಘಡಗಳಿಗೆ "ಇದು ಮಾಧ್ಯಮಗಳ" ಪಿತೂರಿ ಎಂಬ ಶೀರ್ಷಿಕೆಗಳನ್ನು ಕೊಟ್ಟರೋ...ಕ್ಷಮಿಸಿ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ.

ತಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಸಲೀಸಾಗಿ ಸಾಗಿಸಿ ಬಿಡಬಹುದು ಎಂಬುದನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿರುವ ಯಡಿಯೂರಪ್ಪನವರು, ಮೊದಲಿನಿಂದಲೂ ಅಂದರೆ ಅಧಿಕಾರಕ್ಕೆ ಬಂದ ದಿನದಿಂದಲೂ ಸಾಬೀತು ಪಡಿಸುತ್ತ ಹೋದರು. ಅದನ್ನು ತಮ್ಮ ಅಧಿಕಾರ ಹೋದ ನಂತರವೂ ಸಾಧಿಸುತ್ತಿದ್ದಾರೆ. ಲೋಕಾಯುಕ್ತದ ವರದಿಯನ್ನು ನಮ್ಮ ಸರಕಾರ ಇನ್ನೂ ಅಂಗೀಕರಿಸಿಲ್ಲ ಹಾಗೆಯೇ ತಿರಸ್ಕರಿಸಿಯೂ ಇಲ್ಲ. ಹಾಗಿದ್ದ ಪಕ್ಷದಲ್ಲಿ ಅವರು ಜೈಲು ಸೇರಿರುವುದು ಲೋಕಾಯುಕ್ತ ವರದಿ ಆಧಾರಿತ ಎಂದು ಹೇಗೆ ಹೇಳುತ್ತೀರಿ? ಒಬ್ಬ ಸಾಮಾನ್ಯ ಪ್ರಜೆ ಕೂಡ ಅರ್ಥ ಮಾಡಿಕೊಳ್ಳ ಬಲ್ಲ ಈ ಪ್ರಕರಣ, ನೀವು ಜೈಲಿಗೆ ಹೋಗಿದ್ದು ಖಾಸಗೀ ದೂರಿನ ಕಾರಣದಿಂದಾಗಿಯೇ ಹೊರತು, ಲೋಕಾಯುಕ್ತ ವರಧಿಯ ಆಧಾರದ ಮೇಲೆ ಅಲ್ಲ. ಬಹುಷಃ ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗಬಹುದೆಂಬ ಸಿದ್ಧಾಂತಕ್ಕೆ ನೀವು ಜೋತು ಬಿದ್ದಿರಬಹುದು.

ಹಿಂದೆ ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷದವರು, ಮಾಧ್ಯಮದವರು, ಬಳ್ಳಾರಿಯಲ್ಲಿನ ಆಡಳಿತ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದಾಗ, ನೀವು ಹಾಗಾಗಲು ಸಾಧ್ಯವೇ ಇಲ್ಲ. ಅಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ನಮ್ಮ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಸಹಿಸದವರು ಹೀಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬ ಪುಕಾರುಗಳನ್ನು ತೇಲಿ ಬಿಟ್ಟಿರಿ. ಇದನ್ನು ನೀವೊಬ್ಬರೇ ಮಾಡಲಿಲ್ಲ, ಬದಲಿಗೆ ನಿಮ್ಮ ಎಲ್ಲ ಶಿಷ್ಯ ಬಳಗ ಕಂಡ ಕಂಡಲ್ಲೆಲ್ಲ ಗಂಟಲು ಹರಿಯುವಂತೆ ಕಿರುಚಾಡುತ್ತ ಹೇಳಿದರು. ಪರಿಸ್ಥಿತಿಗಳು ಬದಲಾದವು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಗಳು ಬಂದರು. ನಿಮ್ಮ ಸುಪರ್ದಿಯಲ್ಲೇ ಅವರು ಇನ್ನೂ ರಾಜ್ಯಭಾರ ಮಾಡುತ್ತಿದ್ದಾರೆ. ಅವರೂ ಸಹ ನಿಮ್ಮ ಮಾತುಗಳನ್ನೇ ಪುನರಾವರ್ತಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಗೂಂಡಾ ರಾಜ್ಯವಿದೆ ಎಂಬ ಮಾತುಗಳು ನಿಮ್ಮಿಂದ ಮಾತ್ರವಲ್ಲ, ಬಳ್ಳಾರಿಯಲ್ಲಿ ಉಪಚುನಾವಣೆ ಘೋಷಣೆಯಾದದ್ದೇ ತಡ, ನಿಮ್ಮ ಪಕ್ಷದ ಎಲ್ಲ ನಾಯಕರ ಬಾಯಿಂದ ಈ ಅಣಿಮುತ್ತುಗಳು ಉದುರಲಾರಂಭಿಸಿದವು. ರೆಡ್ಡಿಗಳನ್ನು ಬೆಳಸಿದವರು ನೀವೇ ಅಲ್ಲವೇ? ಅವರ ತಾಳಕ್ಕೆ ತಕ್ಕಂತೆ ನೀವು ಕುಣಿದಿರಿ. ಅವರನ್ನು ಬೇಕಾದಂತೆ ಬಳಸಿಕೊಂಡಿರೆ, ಅವರು ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ಮಾಧ್ಯಮಗಳ ಮುಂದೆ ಬಂದು ಕಣ್ಣೀರುಹಾಕಿದಿರಿ... ಮರುದಿನವೇ ಅವರೊಂದಿಗೆ ಎಲ್ಲ ನಾಯಕರೂ ಸೇರಿ, ವಿಜಯದ ಸಂಕೇತದ ಚಿತ್ರವನ್ನು ಮಾಧ್ಯಮಗಳಿಗೆ ತೇಲಿ ಬಿಟ್ಟಿರಿ. ಒಟ್ಟಾರೆಯಾಗಿ ನೀವು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಏನು ಸಂದೇಶವನ್ನು ಕೊಡಲು ಹೊರಟಿದ್ದಿರಿ?

"ಆಪರೇಷನ್ ಕಮಲ" ಎಂಬ ಅಕ್ರಮಗಳಿಗೆ ಕೈಹಾಕಿ, ಮೂರುವರೆ ವರ್ಷಗಳಲ್ಲಿ ನಮ್ಮ ನಾಡಿನ ಜನ ಹಿಂದೆಂದೂ ಕಾಣದಷ್ಟು ಉಪಚುನಾವಣೆಗಳನ್ನ ಕಂಡರು. ರಾಜ್ಯಕ್ಕೆ ಸ್ಥಿರ ಸರ್ಕಾರವನ್ನ ನೀಡಬೇಕು ಅನ್ನುವ ಒಂದೇ ಉದ್ದೇಶದಿಂದ "ಆಪರೇಷನ್ ಕಮಲ" ನಡೆಸಿದ ನಿಮ್ಮ ಪಕ್ಷ, ಜನ ಸಾಮಾನ್ಯರು ಬೆವರು, ರಕ್ತ ಸುರಿಸಿ ಗಳಿಸಿ, ಕಟ್ಟಿದ ತೆರಿಗೆ ಹಣದಿಂದ ಮೋಜು ಮಸ್ತಿ ಉಡಾಯಿಸಿದ ಪರಿಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಇಂತಹ ಅಕ್ರಮ ಚಟುವಟಿಕೆಗಳಿಗೆ ನೀವೇ ಅಲ್ಲವೇ ರೆಡ್ಡಿಗಳ ಬೆಂಗಾವಲಾಗಿ ನಿಂತಿದ್ದು. ಅಂದೇಕೆ ಅವರನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ? ಅದೂ ಸಾಲದೆಂಬಂತೆ ಬಳ್ಳಾರಿ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ, ಶ್ರೀರಾಮುಲು ಹಿಂದೆ ಬಿ-ಫಾರ್ಮ್ ಹಿಡಿದುಕೊಂಡು ನಿಮ್ಮ ಇಡೀ ಪಕ್ಷ ಅಲೆದಾಡಿತು. ಆಗಲೂ ಕೂಡ ನಿಮಗೆ ಅವರ ಅಕ್ರಮಗಳು, ಗೂಂಡಾಗಿರಿಯ ದರ್ಶನವಾಗಲೇ ಇಲ್ಲವೇ? ಹೇಗೆ ನಂಬೋದು? ಯಾವಾಗ ಶ್ರೀರಾಮುಲು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಕರಾರು ತೆಗೆದರೋ, ಅವರ ಎಲ್ಲ ಗೂಂಡಾಗಿರಿಯ ದರ್ಶನ ನಿಮಗೆಲ್ಲ ಒಮ್ಮೆಲೇ ಅವಿರ್ಭವಿಸತೊಡಗಿದವು. ರಾಜಕಾರಣದಲ್ಲಿ ಯಾರೂ ಖಾಯಂ ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ. ಗೊತ್ತು.. ಈ ಮಾತು ಚೆನ್ನಾಗಿ ಗೊತ್ತು... ಆದರೆ ಇಲ್ಲಿ ನಡೆಯುತ್ತಿರುವುದು ರಾಜಕೀಯ ಅಲ್ಲ. ಇದು ನಮ್ಮ ನಾಡಿನ ಸಮಸ್ತ ಜನತೆಯ ಕಿವಿಯ ಮೇಲೆ ಹೂವನ್ನಿಟ್ಟು, ಅವರನ್ನು ಮೂರ್ಖರನ್ನಾಗಿಸುತ್ತಿದ್ದೀರಿ.

ಬಳ್ಳಾರಿ ಉಪಚುನಾವಣೆಯ ನಂತರ ರಾಜ್ಯ ರಾಜಕೀಯ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ. ಮತ್ತೆ ಚುನಾವಣೆಯನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ಆಗೇನು ಕಾರಣ ಕೊಡುತ್ತೀರಿ ನಮಗೆ? ಮತ್ತೆ ನಿಮ್ಮನ್ನು ಕ್ಷಮಿಸುವಂತೆ ಗೋಗರೆಯುತ್ತೀರಾ? ಈ ತಪ್ಪು ಮತ್ತೊಮ್ಮೆ ಆಗಲಾರದು ಎಂದು ಅಂಗಲಾಚುತ್ತೀರಾ? ಒಂದು ಕೆಲಸ ಮಾಡಿ.... ನಿಮ್ಮ ಯಾವ ಯಾವ ಕೆಲಸಗಳಿಗೆ ಅಥವಾ ನೀವು ಮಾಡುವ ಯಾವ ಯಾವ ಕೆಲಸಗಳಿಗೆ ನಾವು ನಿಮ್ಮನ್ನು ಕ್ಷಮಿಸಬೇಕು ಎಂದು ಒಂದು ಪಟ್ಟಿ ಸಿದ್ಧ ಮಾಡಿ ಅದನ್ನ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಬಿಡಿ. ಅಂದರೆ ನಿಮ್ಮ ನಿಲುವು ನಮಗೆ ಸ್ಪಷ್ಟವಾಗುತ್ತದೆ.

ಈ ಎಲ್ಲ ಅವಘಡಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ವಿರೋಧ ಪಕ್ಷಗಳು. ಯಾವುದೇ ಸಿದ್ಧಾಂತಕ್ಕೆ ಬದ್ಧವಾಗಿರದೇ, ಅವೂ ಸಹ ತಮ್ಮ ಆಂತರಿಕ ಕಚ್ಚಾಟಗಳಿಂದ, ಗುಂಪುಗಾರಿಕೆಗಳಿಂದ ಸಮರ್ಥ ವಿಪಕ್ಷಗಳಾಗಲೇ ಇಲ್ಲ.

ನಮ್ಮಲ್ಲಿ ಅನೇಕ ಸಮಸ್ಯೆಗಳಿಗೆ... ನೆರೆ ಸಂತ್ರಸ್ತರಿಗೆ ಇನ್ನೂ ಸರಿಯಾಗಿ ಆಸರೆ ಮನೆಗಳು ಸಿಕ್ಕಿಲ್ಲ. ಶಾಲಾ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಒದ್ದಾಡುತ್ತಿವೆ.... ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.. ಇಂತಹ ಅನೇಕ ಸಮಸ್ಯೆಗಳು ನಮ್ಮ ತಲೆತಿನ್ನುತ್ತಿದ್ದಾಗ..ರಾಜ್ಯದ ಆಡಳಿತ ಯಂತ್ರವನ್ನು ಸಂಪೂರ್ಣ ಸ್ಥಗಿತಗೊಳಿಸಿ, ಒಂದು ಯಕಶ್ಚಿತ್ ಉಪ ಚುನಾವಣೆಗೆ ಎಲ್ಲ ಮಂತ್ರಿ ಮಹೋದಯರನ್ನ ಕರೆದುಕೊಂಡು ಬಳ್ಳಾರಿಯಲ್ಲಿ ಠಿಕಾಣಿ ಹೂಡಿದ ನಿಮ್ಮ ರಾಜ್ಯಭಾರದಲ್ಲಿ ಬದುಕುತ್ತಿರುವ ನಾವೇ ಧನ್ಯರು....