Wednesday, December 30, 2009

ಒಂದೆಡೆ ಯಜಮಾನನ ಅಗಲಿಕೆಯ ನೋವು...ಇನ್ನೊಂದೆಡೆ ಹೇಸಿಗೆ ತರಿಸುವಷ್ಟು ರಾಜಕೀಯ...











ಮನೆಯ ಯಜಮಾನನ ನಿರ್ಗಮನವಾಗಿದೆ...ಅಲ್ಲಿ ಈಗ ಕೇವಲ ನೀರವ ಮೌನ ಮಾತ್ರ....ಬಿಕ್ಕಳಿಕೆಗಳಿಗೂ ಹೊಸ ಅರ್ಥಗಳು ಹುಟ್ಟಲಾರಂಭಿಸಿವೆ....ಹುಟ್ಟು ಸಾವುಗಳನ್ನು ನಾನು ಮೊದಲಿನಿಂದಲೂ ಸಮಾನವಾಗಿ ಸ್ವೀಕರಿಸುತ್ತ ಬಂದವ...ನನ್ನ ಪ್ರಾಣ ಸ್ನೇಹಿತನ ತಂದೆಯವರು ನನ್ನ ತೊಡೆಯ ಮೇಲೆ ತಮ್ಮ ಪ್ರಾಣವನ್ನು ಬಿಟ್ಟಾಗ ಸಾವನ್ನು ಕಣ್ಣಾರೆ ಕಂಡವ ನಾನು..ಆಗ ನನಗೆ ೨೩ ವರ್ಷ ವಯಸ್ಸು....ಆಗಲೂ ಸಹ ನನಗೆ ಕಣ್ಣಿನಿಂದ ಒಂದು ಹನಿ ನೀರು ಹೊರಬರಲಿಲ್ಲ...ಬದಲಾಗಿ ಅವರ ನಿರ್ಜೀವ ದೇಹವನ್ನು ನನ್ನ ತೊಡೆಯಿಂದ ಕೆಳಗೆ ಇಳಿಸಿದವನೆ ಹೊರಗೆ ಅವರ ಅಂತಿಮ ಸಂಸ್ಕಾರದ ತಯಾರಿಗಳನ್ನು ಮಾಡುವತ್ತ ನಡೆದೆ....

ಆದರೆ ಯಾಕೋ ಗೊತ್ತಿಲ್ಲ..ಡಾ. ವಿಷ್ಣುವರ್ಧನ್ ಅವರ ಸಾವು ನನ್ನಲ್ಲಿ ಒಂದು ತರಹದ ಮೂಕವೇದನೆಯನ್ನು ಸೃಷ್ಟಿಸಿದೆ....ಟಿವಿ ಚಾನೆಲ್‍ಗಳಲ್ಲಿ ಅವರ ನಿಧನದ ಸುದ್ದಿಯನ್ನು ನೋಡುತ್ತಿದ್ದಂತೆಯೆ ಅದೆಲ್ಲಿತ್ತೋ ಗೊತ್ತಿಲ್ಲ ದುಖಃ ತನ್ನಷ್ಟಕ್ಕೆ ತಾನೇ ಉಕ್ಕಿ ಬಂತು....ಖಂಡಿತವಾಗಿಯೂ ವಿಷ್ಣು ಒಬ್ಬ ಮಾನವತಾವಾದಿ..ಎಂದಿಗೂ ಅವರು ತಾವಾಗಿಯೇ ಗೊಂದಲಗಳಲ್ಲಿ ಬೀಳಲಿಲ್ಲ...ರಾಜಕೀಯದಿಂದ ನಾನೊಂದು ತೀರ ನೀನೊಂದು ತೀರ ಎಂಬಂತೆ ಬದುಕಿದರು....ಅದೊಂದು ವಿಶಿಷ್ಟ ವ್ಯಕ್ತಿತ್ವ....ಇಂಟರೆಸ್ಟಿಂಗ್ ಕ್ಯಾರೆಕ್ಟರ್...ಮುಂದೆ ಅನಿರುದ್ಧ ಅವರ ಅಳಿಯನಾದ...ಅವನು ಧಾರವಾಡದಲ್ಲಿ ನಮ್ಮ ಗರಡಿಯಲ್ಲಿ ಪಳಗಿದವ..ನಮ್ಮೊಂದಿಗೆ ನಾಟಕ ಮಾಡಿದ ಹುಡುಗ....ರಂಗಭೂಮಿಯ ಬಗ್ಗೆ ಅವನಿಗಿರುವ ನಿಷ್ಠೆ, ಒಲವನ್ನು ಯಾರೇ ಆಗಲಿ ಮೆಚ್ಚಲೇ ಬೇಕು...ಅವನ ತಂಗಿ ಅರುಂಧತಿ ಸಹ ಅಷ್ಟೇ...

ಇಡೀ ರಾಜ್ಯ ವಿಷ್ಣು ಅವರ ಸಾವಿನ ಶೋಕಾಚರಣೆಯಲ್ಲಿ ಮುಳುಗಿತ್ತು..ರಾಜ್ಯ ಸರ್ಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಅಗಲಿದ ಜೀವಕ್ಕೆ ಶಾಂತಿ ಕೋರಿತು....ಆದರೆ...ನಮ್ಮ ನೀಚ ನಾಲಾಯಕ್ ರಾಜಕಾರಣಿಗಳು ಮಾತ್ರ ಇದೇನೂ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸಿದ್ದು, ನಮ್ಮ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿತು. ಒಂದು ಕಡೆ ವಿಷ್ಣುವರ್ಧನ್ ಅವರ ಸಾವಿಗೆ ಸಂತಾಪ ಸೂಚಿಸುವ ಸಲುವಾಗಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ, ವಿಧಾನ ಸಭೆಯಲ್ಲಿ ಇದನ್ನಾವುದನ್ನು ಲೆಕ್ಕಿಸದೇ ವಿಧಾನ ಸಭಾಧ್ಯಕ್ಷರ ಆಯ್ಕೆಯ ಪ್ರಕ್ರೀಯೆಯಲ್ಲಿ ತೊಡಗಿಕೊಂಡಿತು. ಇದು ನಮ್ಮ ನಾಡಿನ ಹಿರಿಯ ಕಲಾವಿದರಿಗೆ ಕೊಡುವ ಗೌರವವೇ? ಇಷ್ಟಕ್ಕೆ ಸುಮ್ಮನಾಗದ ನಮ್ಮ ಪ್ರತಿಪಕ್ಷದ ನಾಯಕರುಗಳು ಅಲ್ಲಿ ವರ್ತಿಸಿದ ರೀತಿ ಇನ್ನೂ ಘೋರ....

ಮುಖ್ಯ ಮಂತ್ರಿಗಳೆ ನೀವು ನಿಮ್ಮ ಖುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ಗಳಿಂದ ಜನಸಾಮಾನ್ಯರಾದ ನಮಗೆ ವಾಕರಿಕೆ ಬರುತ್ತಿದೆ....ನಿಮಗೆ ಶೇಮ್! ಶೇಮ್!! ನಾಚಿಕೆಯಾಗಬೇಕು ನಿಮ್ಮಂತಹ ಹಿರಿಯ ನಾಯಕರಿಗೆ...ವಿಧಾನ ಸಭಾಧ್ಯಕ್ಷರ ಆಯ್ಕೆ/ಚುನಾವಣೆ ಒಂದು ದಿನ ಮುಂದೂಡಿದ್ದರೆ ಇಡೀ ವಿಶ್ವ ಪ್ರಳಯ ವಾಗುತ್ತಿತ್ತೇ? ಅಥವಾ ನಿಮ್ಮ ಬೊಕ್ಕಸಕ್ಕೆ ಬಂದು ಬೀಳುವ ಮಾಮೂಲಿ ನಿಂತು ಹೋಗುತ್ತಿತ್ತೇ? ಥೂ ನಿಮ್ಮ....ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತೀರಿ..ಮತ್ತೆ ಜನರ ಮುಂದೆ ಕಣ್ಣೀರು ಹಾಕುವುದು....ಇಂತಹ ತಪುಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂಬ ಸಾರ್ವಜನಿಕ ಹೇಳಿಕೆ ನೀಡುವುದು...ಏನಾಗಿದೆ ನಿಮ್ಮ ಬುದ್ಧಿಗೆ?

ಒಂದು ಕಡೆ ರಾಜಕಾರಣಿಗಳ ಹಾರಾಟ ನಡೆಯುತ್ತಿದ್ದರೆ, ಕನ್ನಡದ ಹೆಸರಿನಲ್ಲಿ ಗೂಂಡಾ ಪ್ರವೃತ್ತಿಯಲ್ಲಿ ತೊಡಗಿಕೊಂಡವರ ಕೆಲವರ ಪುಂಡತನ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕಾರು/ಜೀಪುಗಳಲ್ಲಿ ಕನ್ನಡದ ಧ್ವಜವನ್ನು ಹಿಡಿದುಕೊಂಡು ಅಂಗಡಿ ಮುಗ್ಗಟ್ಟುಗಳನ್ನು, ಕಚೇರಿಗಳನ್ನು ಮುಚ್ಚಿಸುವ ಕಾಯಕದಲ್ಲಿ ತೊಡಗಿದ್ದರು. ಯಾರಾದರೂ ಸ್ವಲ್ಪ ವಿರೋಧ ವ್ಯಕ್ತಪಡಿಸಿದಲ್ಲಿ ಅವರ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಗೊಳಿಸಿ, ಅವರನ್ನು ಸಹ ಮನ ಬಂದಂತೆ ಥಳಿಸಿ ಅಲ್ಲಿಂದ ಕಾಲ್ಕಿತ್ತುತ್ತಿದ್ದರು. ಯಾವ ಪುರುಷಾರ್ಥಕ್ಕಾಗಿ ಈ ಎಲ್ಲ ಸಾಹಸ? ಹೀಗೆ ಒತ್ತಾಯ ಪೂರ್ವಕವಾಗಿ "ಬಂದ್" ಮಾಡಿಸಿ ಇವರುಗಳು ಏನನ್ನು ಸಾಧಿಸ ಹೊರಟಿದ್ದಾರೆ? ಬದಲಿಗೆ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಇವರು ತಮ್ಮ ಎಲ್ಲ ಶಕ್ತಿಯನ್ನು ಪ್ರದರ್ಶಿಸಿದ್ದರೆ ಅದು ನಾಡಿನ ಉಳಿದೆಲ್ಲರಿಗೆ ಮಾದರಿಯಾಗುತ್ತಿತ್ತು.

ಯಾಕೋ ಗೊತ್ತಿಲ್ಲ....ನಮ್ಮ ನಾಡಿಗೆ ಒಳ್ಳೆಯ ಗತಿ ಬರುವ ಲಕ್ಷಣಗಳಂತೂ ಸಧ್ಯಕ್ಕೆ ತೋರುತ್ತಿಲ್ಲ....

Monday, December 28, 2009

ಮಣಿಯ ದೈತ್ಯ ಬರವಣಿಗೆಗೆ ಮತ್ತು ಅವನ ಹುಚ್ಚು ಪ್ರೀತಿಗೆ....ಸಾವಿರ ಸಾವಿರ ಸಲಾಮ್!!!


ಅದೇಕೋ ಗೊತ್ತಿಲ್ಲ....ನಾನು ಗೂಗಲ್ ಚಾಟ್‍ನಲ್ಲಿ ಬಂದಾಗ ಮಣಿ ಬಂದು ಹೆಲ್ಲೋ ಸಾರ್ ಎಂದು ಮಾತನಾಡಲು ಶುರುವಿಟ್ಟುಕೊಂಡರೆ ನನಗಂತೂ ಇಲ್ಲ ಎನ್ನಲು ಸಾಧ್ಯವೇ ಇಲ್ಲ...ಬೇರೆ ಯಾವುದೇ ಟೈಮ್‍ಪಾಸ್ ಗೆಳೆಯರಾದರೆ ಅವರನ್ನು ನಾನು ಸಾಗಹಾಕಬಹುದು..ಆದರೆ ಮಣಿಯ ದೈತ್ಯ ಬರವಣಿಗೆ ಹಾಗೂ ಆತನ ಹುಚ್ಚು ಪ್ರೀತಿಗೆ ಕೆಲವೊಂದು ಬಾರಿ ನನ್ನಲ್ಲಿ ಮಾತೇ ಹೊರಡುವುದಿಲ್ಲ....

ನನ್ನ ಬಹುತೇಕ ಗೆಳೆಯರ ಬಳಗಕ್ಕೆ ಮಣಿಯ ಪರಿಚಯವಿದೆ. ನನಗೆ ಈತನ ಬಗ್ಗೆ ಹೆಚ್ಚು ಹೆಚ್ಚು ಸುದ್ದಿಗಳು ಗೊತ್ತಾಗಿದ್ದು ಮತ್ತು ಇವನ ಒಡನಾಟಕ್ಕೆ ಕಾರಣವಾದದ್ದು ಒಂದು ರೀತಿಯಲ್ಲಿ ಜಿ.ಎಚ್. ಯಾರಿಗೋ ತಮಾಷೆ ಮಾಡಲು ಹೋಗಿ ಒಂದಿಲ್ಲೊಂದು ಅವಘಡಗಳಲ್ಲಿ ಬೀಳುವುದು..ಮತ್ತು ತನ್ನ ಅವಘಡಗಳನ್ನು ತಾನೇ ಬೇರೆಯವರ ಮುಂದೆ ಹೇಳಿಕೊಂಡು ಗೇಲಿಗೊಳಗಾವುವುದು...ಇವೆಲ್ಲವುಗಳನ್ನು ಜಿ.ಎಚ್ ನಮ್ಮ ಮುಂದೆ ರಸವತ್ತಾಗಿ ವರ್ಣನೆ ಮಾಡುತ್ತಿದ್ದರು. ಆ ಹಟಕ್ಕಾಗಿಯಾದರೂ ನಾನು ಮಣಿಯನ್ನು ಪರಿಚಯ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದೆ ಮತ್ತು ಮುಂದೆ ಅಂತಹ ಒಂದು ಸಂದರ್ಭ ಒದಗಿ ಬಂದಾಗ ಮಣಿಯನ್ನು ಪರಿಚಯ ಮಾಡಿಕೊಂಡೆ...ಜಿ.ಎಚ್ ಅವರ ಸಾಂಗತ್ಯದಿಂದ ನಾವು ಬಹಳ ಬೇಗ ತೀರ ಹತ್ತಿರದವರಾಗಿ ಬಿಟ್ಟೆವು....ಸಾಹಿತ್ಯದ ಕುರಿತು, ಬರವಣಿಗೆಯ ಕುರಿತು, ನಮ್ಮ ಗೆಳೆಯರ ಕುರಿತು ಹೀಗೆ ನಮ್ಮ ಚರ್ಚೆಗಳು ಆರಂಭವಾದವು...ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹ ಚರ್ಚಿಸುವಷ್ಟು ನಾವು ಹತ್ತಿರದವರಾದೆವು...ಅದೊಂದು ತರಹದ ವಿಚಿತ್ರ ಹುಚ್ಚು ಪ್ರೀತಿಯೆಂದೆ ಹೇಳಬೇಕು...ರಾತ್ರಿ ೧೨ ಆಗಿದ್ದರೂ ಯಾವುದೇ ಆತಂಕವಿಲ್ಲದೇ ನನ್ನ ಮೊಬೈಲಿಗೆ ಸಂದೇಶ ರವಾನಿಸಿ ನನ್ನನ್ನು ಡಿಸ್ಟರ್ಬ್ ಮಾಡಬಲ್ಲ ಏಕೈಕ ವ್ಯಕ್ತಿ ಈ ಮಣಿ...ಅವನ ಬರವಣಿಗೆಯಂತೂ....ಅಬ್ಬ...ಈಗ ಅವನು ಬರೆದ "ಅಮ್ಮ ಹೇಳಿದ...." ಪುಸ್ತಕ ಪುಸ್ತಕದ ಅಂಗಡಿಗಳಲ್ಲಿ ಒಳ್ಳೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳಂತೆ ಖರ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ...ಹಿಂದೊಮ್ಮೆ ಮಣಿನೇ ಹೇಳಿದ್ದ..ಪತ್ರಕರ್ತರ ಜೀವನದಲ್ಲಿಯೂ ಸಹ ಹೀಗೆ ಉತ್ತಮ ಮೊತ್ತದ ಹಣವನ್ನು ನೋಡಬಹುದೆಂದು ನಾನು ನನ್ನ ಈ ಪುಸ್ತಕ ಮಾರಾಟವಾಗುತ್ತಿರುವ ಸಂದರ್ಭದಲ್ಲಿ ಕಾಣುತ್ತಿದ್ದೇನೆ ಸಾರ್ ಎಂದು...

ಅವನ ಹಾಡು ಹುಟ್ಟಿದ ಸಮಯ ಅಂಕಣವಂತೂ ತುಂಬಾ ಜನಪ್ರೀಯತೆಯನ್ನು ಗಳಿಸಿದೆ. ಆ ಅಂಕಣದಲ್ಲಿ ಅವನು ಇಟಗಿ ಈರಣ್ಣ ಅವರು ಬರೆದ "ಚಂದಕಿಂತ ಚಂದ ನೀನೆ ಸುಂದರ..." ಹಾಡಿನ ಕುರಿತು ಬರೆಯಲು ತನ್ನ ಆಸೆ ವ್ಯಕ್ತ ಪಡಿಸಿ, ಆ ಹಾಡು ಹುಟ್ಟಿದ ಸಮಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡಲು ನನಗೆ ಬರೊಬ್ಬರಿ ಮೂರು ತಿಂಗಳುಗಳ ಕಾಲು ದುಂಬಾಲು ಬಿದ್ದ. ಆಗ ನನ್ನ ಪರಿಸ್ಥಿತಿ ಹೇಗಾಗಿತ್ತೆಂದರೆ ಅಕ್ಷರ ಶಹ: ನಾನು ಮಣಿಯನ್ನು ತಪ್ಪಿಸಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.......ಒಂದು ದಿನ ಇಟಗಿ ಈರಣ್ಣ ಸಿಕ್ಕರು, ಅವರಿಂದ ಮಾಹಿತಿ ಕಲೆಹಾಕಿ ಅದನ್ನು ಮಣಿಗೆ ತಲುಪಿಸಿದಾಗ ಅವನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ..ಮಾರನೇ ದಿನವೇ ಅದು ಅವನ ಅಂಕಣದಲ್ಲಿ ಪ್ರತ್ಯಕ್ಷವಾಯಿತು...ಆ ವಿಷಯವನ್ನು ಅವನಿಗೆ ನಾನೇ ತಂದು ಕೊಟ್ಟಿದ್ದೆಂಬ ಶರಾ ಬೇರೆ ಇತ್ತು...ನನಗೆ ಹಾಗೂ ಇಟಗಿ ಈರಣ್ಣ ಅವರಿಗೆ ಬಿಡುವಿಲ್ಲದಷ್ಟು ಫೋನ್ ಕರೆಗಳು...

ಅಂದು ಇಟಗಿ ಈರಣ್ಣ ನನಗೆ ನೇರವಾಗಿ ಫೋನಾಯಿಸಿ.."ಧನಂಜಯ ಅವರ ನಿಮ್ಮ ಲೇಖನ ಎಷ್ಟು ಚೆಂದಾಗಿ ಬಂದೈತಂದರ..ನನ್ನ ಇಪ್ಪತ್ತು ವರ್ಷದ ಹಿಂದಿನ ಗೆಳೆಯರು, ಗೆಳತ್ಯಾರು ಎಲ್ಲರು ನನ್ನನ್ನ ನೆನಪಿಸಿಕೊಂಡು ಫೋನ್ ಮಾಡಾಕತ್ಯಾರ..." ಇದನ್ನು ಮಣಿಗೆ ತಿಳಿಸಿದಾಗ ತಕ್ಷಣಕ್ಕೆ "ಸಾರ್ ನಾನು ಪೆನ್ನು ಹಿಡಿದದ್ದು ಸಾರ್ಥಕ ಆಯ್ತು ಇವತ್ತಿಗೆ" ಎಂದು ಬಿಟ್ಟ...ತುಂಬ ಭಾವುಕ ಜೀವಿ ಅದು...

ಅಂದ ಹಾಗೆ ಅವನ ಹಾಡು ಹುಟ್ಟಿದ ಸಮಯ ಪುಸ್ತಕದ ಬಿಡುಗಡೆ ಜನೆವರಿ ಹತ್ತರಂದು ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದಾನೆ ಮಣಿ..ಪುಸ್ತಕ ಬಿಡುಗಡೆಯ ನೆಪದಲ್ಲಿ ಹಳೆಯ ಹಾಡುಗಳನ್ನು ಕೇಳೋಣ ಬನ್ನಿ ಎಂದು ಎಲ್ಲರನ್ನು ದುಂಬಾಲು ಬೀಳುತ್ತಿದ್ದಾನೆ...ನೀವು ಸಹ...ದಯವಿಟ್ಟು ಅಂದು ಬಿಡುವು ಮಾಡಿಕೊಳ್ಳಿ...ಹಳೆಯ ಹಾಡುಗಳನ್ನು ಕೇಳೋಣ...ಬನ್ನಿ ಪ್ಲೀಸ್....

Monday, December 14, 2009

ಪಾಪ ಮುಗ್ಧರು..ಬರೆಯಲಿ ಬಿಡಿ.....!!!



ಇತ್ತೀಚೆಗೆ ರಂಗಾಯಣ ಕುರಿತಾಗಿ ಸರಣಿ ಲೇಖನಗಳು ಬರಲಾರಂಭಿಸಿದ ಮೇಲೆ ಮೈಸೂರಿನಲ್ಲಿ ರಂಗ ಕಲಾವಿದರು, ಸಾಹಿತಿಗಳು, ರಂಗಾಯಣದ ಫಲಾನುಭವಿಗಳಲ್ಲಿ ರಂಗಾಯಣದ ಕಲಾವಿದರ ಬಗ್ಗೆ ಅನುಕಂಪದ ಅಲೆಗಳು ಏಳಲಾರಂಭಿಸಿವೆ.




"ರಂಗಾಯಣದ ಕಲಾವಿದರ ಬಗ್ಗೆ ಈ ರೀತಿಯಾಗಿ ಬರೆಯಬಾರದಾಗಿತ್ತು. ಅವರಿಗೆ ಸರಕಾರಿ ಗುಮಾಸ್ತರಿಗೆ ಸಿಗುವ ಸಂಬಳಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತಿದೆ. ಅವರ ಬದುಕು ತುಂಬಾ ಕಷ್ಟದಲ್ಲಿದೆ"...ಹೀಗೆ ಹತ್ತು ಹಲವು ಮಾತುಗಳು ಮೈಸೂರಿನಿಂದ ಕೇಳಿ ಬರುತ್ತಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ರಂಗಾಯಣದ ರಗಲೆಗಳ ಕುರಿತು ಸರಣಿಯಾಗಿ ಲೇಖನಗಳು ಬಂದ ನಂತರ, ಇದನ್ನು ಖಂಡಿಸಲೆಂದೇ ಮೈಸೂರಿನಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ದುರಂತವೆಂದರೆ ಇದೇ ರಂಗಕರ್ಮಿಗಳು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚೆನಡೆಸಲು ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಇದುವರೆಗೆ ಮಾಡದೇ ಇರುವುದು.



ರಂಗಾಯಣದ ಕಲಾವಿದರೊಬ್ಬರು ಇತ್ತೆಚೆಗೆ ಬೆಂಗಳೂರಿಗೆ ಬಂದು, ನನ್ನ ಕೆಲ ರಂಗ ಮಿತ್ರರೊಂದಿಗೆ ಚರ್ಚೆ ನಡೆಸಿದರೆಂಬ ಸುದ್ದಿಯೂ ಬಂತು. ಅವರ ಪ್ರಕಾರ ಪತ್ರಿಕೆಗಳಲ್ಲಿ ರಂಗಾಯಣದ ಕುರಿತು (ವಿರುದ್ಧವಾಗಿ) ಬರೆಯುತ್ತಿರುವವರೆಲ್ಲ ಪಾಪ ಮುಗ್ಧರು, ಅವರಿಗೆ ರಂಗಾಯಣ ಹೇಗೆ ಕಾರ್ಯನಿರ್ವಹಿಸುತ್ತದೆ ಎಬ ಅರಿವಿಲ್ಲ. ಆ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವಂತೆ. ಹಾಗಿದ್ದರೆ ಮೈಸೂರಿನಲ್ಲಿ ಕೆಲ ರಂಗಕರ್ಮಿಗಳು ನಡೆಸಿದ ಸಂವಾದ ಕಾರ್ಯಕ್ರಮ ಏತಕ್ಕೆ? ಇದೊಂದು ವ್ಯವಸ್ಥಿತವಾದ ಸಾಂಸ್ಕೃತಿಕ ಗುತ್ತಿಗೆದಾರರ ವ್ಯವಸ್ಥಿತ ಹುನ್ನಾರ. ಸ್ವಾಮಿ ರಂಗಚಟುವಟಿಕೆಗಳು ಕೇವಲ ರಂಗಾಯಣದಲ್ಲಿ ಮಾತ್ರ ನಡೆಯುತ್ತಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಹ ನಡೆಯುತ್ತಿವೆ. ಅವನ್ನು ನಿಮ್ಮ ತೆರೆದು ಕಣ್ಣುಗಳಿಂದ ನೋಡುವ ಮನಸ್ಸಿರಬೇಕಷ್ಟೇ.




ಒಂದು ಕಡೆಯಿಂದ ಪ್ರಗತಿಪರರು, ಜನಪರ ಹೋರಾಟಗಾರರು, ಅನ್ಯಾಯದ ವಿರುದ್ಧ ದನಿ ಎತ್ತುವವರು ಎಂದೆಲ್ಲಾ ಬೊಗಳೆ ಬಿಡುವ ದಾಸಯ್ಯಗಳೆ, ಮಠಗಳ ಬಾಗಿಲು ಬಡಿದು, ಸ್ವಾಮಿಗಳ ಕಾಲು ಹಿಡಿದು, ತಮ್ಮನ್ನು ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ದುಂಬಾಲು ಬೀಳುತ್ತಾರೆ. ಇನೊಂದೆಡೆ, ಶ್ರೀ. ಲಿಂಗದೇವರು ಹಳೆಮನೆಯವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಿಸಿದ ನಂತರ ಎದ್ದ ಅನೇಕ ವಿವಾದಗಳಿಗೆ ಪತಿಕ್ರೀಯೆಯಾಗಿ ಬೆಂಗಳೂರಿನ ಕೆಲವು ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಅವರ ಬಾಲಬಡುಕರು ಸರಕಾರದಿಂದ ಆದೇಶ ಬರುವವರೆಗೆ ಹಳೆಮನೆಯವರು ಪತ್ರಿಕೆಗಳಿಗೆ ಹೇಳಿಕೆ ನೀಡಬಾರದಿತ್ತು. ಅವರ್ಉ ತುಬಾ ಅವಸರ ಮಾಡಿದರು ಎಂದೆಲ್ಲ ಮಾತನಾಡಿಕೊಂಡು ತಿರುಗುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ ಪತ್ರಿಕೆಯವರು ಏನು ಬೇಕದರೂ ಬರೆದುಕೊಳ್ಳಿ, ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂಬ ದಾರ್ಷ್ಟ್ಯತನದ ಪರಮಾವಧಿ.



ಇನ್ನು ಇದಕ್ಕೆ ಸರಕಾರದಿಂದ ಪರಿಹಾರ ಬಯಸ ಹೋದರೆ ಅದೊಂದು ಮೂರ್ಖತನದ ಪರಮಾವಧಿಯಾದೀತು. ಗಣಿ, ಧಣಿ, ರೆಸಾರ್ಟ್ ರಾಜಕೀಯಗಳಲ್ಲಿ ಮುಳುಗಿಹೋಗಿರುವ ನಮ್ಮ ಮುಖ್ಯ ಮಂತ್ರಿ ಹಾಗೂ ಅವರ ಸಹೋದ್ಯೋಗಿಗಳಿಗೆ ಇದು ಅರ್ಥವಾಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆ. ಮತ್ತು ನಾವೆಲ್ಲ ನಮ್ಮು ಮುಂದೆ ನಡೆಯುತ್ತಿರುವ ಸಾಂಸ್ಕೃತಿಕ ಹಗಲು ದರೋಡೆಗೆ ಮೂಕ ಸಾಕ್ಷಿಗಳಾಗುತ್ತಿದೇವೆ.

Thursday, December 10, 2009

ಸಮಸ್ಯೆಗಳ ಬಗ್ಗೆ ಕಾಳಜಿ ತೋರದಿರುವವರಿಗೆ ಅಧಿಕಾರ ಬೇಕಾಗಿದೆ....

ರಂಗಾಯಣದ ಕುರಿತು ಪ್ರಸ್ತುತ ಸ್ಥಿತಿಗತಿ ಹಾಗೂ ಅದಕ್ಕೆ ನಿರ್ದೇಶಕರ ನೇಮಕ ಕುರಿತಾದ ಆಯ್ಕೆ, ನಿರ್ಧಾರ ಮುಂತಾದವುಗಳು ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ. ಇದು ಒಂದಿಲ್ಲ ಒಂದು ದಿನ ಹೀಗೆ ಬಹಿರಂಗವಾಗಿ ಚರ್ಚೆಯಾಗಲೇ ಬೇಕಿತ್ತು. ಏಕೆಂದರೆ ನಾನು ಈ ಹಿಂದೆ ಹೇಳಿದಂತೆ ರಂಗಾಯಣಕ್ಕೆ ಈಗ ಬೇಕಾಗಿರುವುದು ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆ. ತನ್ಮೂಲಕ ಕನ್ನಡ ರಂಗಭೂಮಿಗೆ ಒಂದು ಹೊಸ ದಿಕ್ಕು ಕಾಣುವಂತಾದರೆ ಅದು ಉತ್ತಮ ಬೆಳವಣಿಗೆ.

ಇತ್ತೀಚೆಗೆ ಶ್ರೀ. ಲಿಂಗದೇವರು ಹಳೆಮನೆಯವರನ್ನು ತರಾತುರಿಯಲ್ಲಿ ರಂಗಾಯಣದ ನಿರ್ದೇಶಕರೆಂದು ಸರಕಾರ ಹೆಸರಿಸಿ, ಅದನ್ನು ಪುಷ್ಠೀಕರಿಸುವಂತೆ ಕನಡ ಮತ್ತು ಸಂಸೃತಿ ಇಲಾಖೆ ಪತ್ರಿಕೆಗಳಿಗೆ ಹೇಳಿಕೆಯನ್ನು ಸಹ ನೀಡಿತ್ತು. ತದ ನಂತರ ಅವರ ಆಯ್ಕೆಯನ್ನು ಪ್ರಶ್ನಿಸಿ, ಅವರಿಗೆ ನಕ್ಸಲರ ಜೊತೆ ನಂಟಿರುವುದನ್ನು ಶಂಕಿಸಿ ಪೊಲೀಸ್ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿದ್ದರ ಕುರಿತು ವರದಿಗಳು ದಾಖಲೆ ಸಮೇತ ಪ್ರಕಟಗೊಂಡವು. ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಹಾಗೂ ಪ್ರಯೋಗಾತ್ಮಕ ಸಂಸ್ಥೆಯಾದ ರಂಗಾಯಣಕ್ಕೆ ಶ್ರೀ. ಹಳೆಮನೆಯವರ ಅನುಭವದ ಹಿನ್ನಲೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಲೇಖನ ಸಹ ಪ್ರಕಟಗೊಂಡಿತು. ಇವೆಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಎಲ್ಲರನ್ನೂ ಗೊಂದಲದಲ್ಲಿ ನೂಕುವಂತೆ ಅದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿ "ಶ್ರೀ. ಹಳೆಮನೆ ಅವರ ಆಯ್ಕೆಯ ಕುರಿತು ಅಧೀಕೃತವಾಗಿ ಆದೇಶ ಹೊರಡಿಸುವುದು, ಅವರನ್ನು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನಿರ್ದೇಶಕರೆಂದು ಅಧಿಕಾರ ಸ್ವೀಕರಿಸುವಂತೆ ಆಹ್ವಾನಿಸುವುದು ಎಲ್ಲ ಸರಕಾರದ ಕೈಯಲ್ಲಿದೆ. ಈಗ ನಾವು ಕೇವಲ ಸರಕಾರದ ನಿರ್ಧಾರವನ್ನು ಕಾಯ್ದು ನೋಡಬೇಕಷ್ಟೇ" ಎಂಬಂತಹ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡತೊಡಗಿದರು.

ಇದಕ್ಕೆ ತದ್ವಿರುದ್ಧವಾಗಿ ಕೆಲವು ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ಸರಕಾರದ ಈ ರೀತಿಯ ನಿರ್ಧಾರ ರಾಜಕೀಯ ಕುತಂತ್ರದಿಂದ ಕೂಡಿದ್ದು. ಪ್ರಗತಿಪರ ಚಿಂತಕರೆಲ್ಲ ನಕ್ಸಲರೊಂದಿಗೆ ನಂಟನ್ನು ಹೊಂದಿದವರೆಂದು ಸರಕಾರ ಯಾವತ್ತೂ ಬಿಂಬಿಸುತ್ತ ಬಂದಿದೆ. ಇದು ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮುಂತಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡತೊಡಗಿದರು. ಇದೂ ಸಹ ಒಂದು ರೀತಿಯಲ್ಲಿ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನವೇ. ಏಕೆಂದರೆ ಯಾರೂ ಸಹ ರಂಗಾಯಣದ ಮೂಲ ಸಮಸ್ಯೆಗಳ ಕುರಿತು ಮಾತನಾಡಲು ತಯಾರಿಲ್ಲ. ರಂಗಾಯಣವನ್ನು ಆಡಳಿತಾತ್ಮಕವಾಗಿ ನೋಡಿಕೊಳ್ಳಲು ಒಬ್ಬ ಶಕ್ತ ಅನುಭವಿ ನಿರ್ದೇಶಕರ ಅಗತ್ಯವಿರುವಂತೆಯೇ, ಅದನ್ನು ಕ್ರಿಯಾತ್ಮಕವಾಗಿ ಮುನ್ನಡೆಸುವ ನಾಯಕನ ಅವಶ್ಯಕತೆ ಕೂಡ ಖಂಡಿತವಾಗಿ ಇದೆ. ಇದೆಲ್ಲವನ್ನು ಬಿಟ್ಟು, ಈಗ ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂಬಂತಹ ಹೇಳಿಕೆಗಳು ಎಷ್ಟರ ಮಟ್ಟಿಗೆ ಸೂಕ್ತ?

ರಂಗಾಯಣ ಆರಂಭವಾದಾಗಿನಿಂದ ಇಂದಿನ ವರೆಗೆ ೨೧ ವರ್ಷಗಳ ಕಾಲ ಅಲ್ಲಿನ ಕಲಾವಿದರು ಯಾವುದೇ ರಾಜಕಾರಣಿಗಳಿಗೆ ಕಡಿಮೆ ಇಲ್ಲದಂತೆ ರಾಜಕೀಯ ಮಾಡುತ್ತ, ನಿರ್ದೇಶಕರ ಆಯ್ಕೆಯಲ್ಲಿ ತಮ್ಮ ಪಾತ್ರವೂ ಸಹ ಅತೀ ಮುಖ್ಯವೆಂದು ಬಿಂಬಿಸುವ ಕಾರ್ಯ, ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ಹಾಕಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕರಂತೆ ವರ್ತಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಲೋಕದ ವಿಪರ್ಯಾಸಗಳಲ್ಲೊಂದು. ನಿರ್ದೇಶಕರ ಆಯ್ಕೆ ಪ್ರಕ್ರೀಯೆಯಲ್ಲಿ ಆದ ಗೊಂದಲಗಳಿಗೆ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಅನೇಕ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರು ಹೇಗೆ ವರ್ತಿಸಬೇಕು, ಅವರು ಮಾಡಬೇಕಾದ ಕೆಲಸ ಕಾರ್ಯಗಳೇನು ಎಂಬ ಕುರಿತು ಏನಾದರೂ ಚೌಕಟ್ಟುಗಳನ್ನು ಹಾಕಿ ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುವಂತೆ ಆದೇಶಿಸಿದ್ದಾರೆಯೇ? ಅಥವಾ ಅದನ್ನು ನೇರವಾಗಿ ಸರಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆಯೇ? ಒಂದು ವೇಳೆ ಆ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದರೂ ಅದು ಕಾರ್ಯ ರೂಪಕ್ಕೆ ಯಾಕೆ ಬರುತ್ತಿಲ್ಲ ಎಂದು ಸಂಬಂಧಪಟ್ಟವರ ಕೊರಳ ಪಟ್ಟಿಹಿಡಿದು ಕೇಳಲು ಹಿಂಜರಿಕೆ ಏಕೆ? ಈ ರೀತಿಯ ಹೇಳಿಕೆಗಳನ್ನು ನೀಡಿ ತಮ್ಮ ಹೆಸರು ಚಾಲ್ತಿಯಲ್ಲಿರಬೇಕೆಂಬ ಬಯಕೆಯೇ ಅಥವಾ ಇಚ್ಛಾ ಶಕ್ತಿಯ ಕೊರತೆಯೇ?

ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮತ್ತು ಅದನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ನಮ್ಮ ಕಾಳಜಿ ಕೇವಲ ಯಾವುದೇ ವಿಚಾರ ಸಂಕಿರಣಗಳಿಗೆ, ವೇದಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ. ಈಗ ರಂಗಾಯಣದ ಪರಿಸ್ಥಿತಿಯನ್ನು ಕುರಿತು ಎಲ್ಲ ಸಾಂಸ್ಕೃತಿಕ ಕಾಳಜಿಯುಳ್ಳ ಜನ ಸಾಮಾನ್ಯರು ಬೀದಿಗಿಳಿಯುವ ಮೊದಲೇ ಅದಕ್ಕೊಂದು ಸರಿಯಾದ ಮಾರ್ಗವನ್ನು ತೋರುವ ಅನಿವಾರ್ಯತೆ ಇದೆ. ಸರಕಾರ ರಂಗಾಯಣಕ್ಕೆ ಪ್ರತಿ ವರ್ಷ ವ್ಯಯಿಸುತ್ತಿರುವ ಹಣ ಬಿಳಿ ಆನೆಯನ್ನು ಸಾಕದಂತಾಗದೇ, ಆ ಹಣದ ಸಾರ್ಥಕ ಉಪಯೋಗವಾಗಿ ಇಡೀ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ನಾಂದಿಯಾಗಲಿ.

Friday, December 4, 2009

ರಂಗಾಯಣ.....ಸಾಕುಮಾಡಿ ರಾಮಾಯಣ!

(ಪ್ರಸ್ತುತ ಲೇಖನವು ದಿನಾಂಕ ೦೯-೧೧-೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿ ವಾಚಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ದಾಖಲಿಸಿ.)

ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.

ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು...... ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.

ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.

ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.

ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.

ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು...ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.

ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.

ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.

ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.

ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.

ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.

Thursday, November 26, 2009

ಕನ್ನಡ ರಂಗಭೂಮಿಗೆ ರಂಗಾಯಣ ಅನಿವಾರ್ಯವೇ?

ಇತ್ತೀಚೆಗೆ ನಾನು ರಂಗಾಯಣದಲ್ಲಿ ನಡೆಯುತ್ತಿರುವ ರಗಳೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಈಗ ಸಧ್ಯಕ್ಕೆ ಇದನ್ನು ಬರೆಯಲು ಮುಖ್ಯವಾದ ಕಾರಣವೆಂದರೆ ಸರ್ಕಾರ ಶ್ರೀ. ಲಿಂಗದೇವರು ಹಳೆಮನೆಯವರನ್ನು ರಂಗಾಯಣದ ನಿರ್ದೇಶಕರನ್ನಾಗಿ ನೇಮಕಮಾಡಿ ಧಿಡೀರನೆ ಆದೇಶ ಹೊರಡಿಸಿ ತನ್ನ "ಜವಾಬ್ದಾರಿಯನ್ನು" ಕಳೆದುಕೊಂಡಂತೆ ಪತ್ರಿಕೆಗಳಿಗೆ ಹೇಳಿಕೆಯನ್ನು ನೀಡಿರುವುದು.

ಇಲ್ಲಿ ಮುಖ್ಯವಾಗಿ ಸೈದ್ಧಾಂತಿಕವಾದ ಪ್ರಶ್ನೆ ನಮ್ಮನ್ನು ಕಾಡುತ್ತಿರುವುದೇನೆಂದರೆ ಸರಕಾರ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡುತ್ತಿರುವುದಕ್ಕೆ ಅನುಸರಿಸುತ್ತಿರುವ ಮಾನದಂಡ ಯಾವುದು? ಆ ಹುದ್ದೆಯ ಹಿಂದೆ ಆಕಾಂಕ್ಷಿಗಳು ನಡೆಸುತ್ತಿರುವ ಲಾಬಿಯ ಪ್ರಭಾವವೇ? ಒಟ್ಟಿನಲ್ಲಿ ರಂಗಾಯಣಕ್ಕೆ ಒಬ್ಬ ನಿರ್ದೇಶಕರನ್ನು ನೇಮಿಸಿ ತನ್ನ ಕೈ ತೊಳೆದುಕೊಂಡರೆ ಸಾಕೆನ್ನುವ ಮನೋಭಾವವಿರಬಹುದೇ? ಸರಕಾರದ ಯಾವ ನಿಲುವುಗಳೂ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತಿಲ್ಲ.

ಇಲ್ಲಿ ಒಂದು ಮಾತನ್ನು ಸ್ಪಷ್ಟಪದಿಸಲು ಇಚ್ಛಿಸುತ್ತೇನೆ. ಒಬ್ಬ ಸಾಹಿತಿಯಾಗಿ, ಭಾಷಾ ವಿಜ್ಜಾನಿಯಾಗಿ, ನಾಟಕ ರಚನಾಕಾರರಾಗಿ ಶ್ರೀ. ಲಿಂಗ ದೇವರು ಹಳೆಮನೆ ಅವರನ್ನು ಖಂಡಿತವಾಗಿಯೂ ಗೌರವಿಸೋಣ. ಆದರೆ ರಂಗಾಯಣಕ್ಕೆ ಬೇಕಾಗಿರುವುದು ಇವರಂಥವರಲ್ಲ. ಸರ್ಕಾರಕ್ಕೆ ರಂಗಾಯಣದ ರೂಪರೇಷೆಗಳು ಹಾಗೂ ಕಾರ್ಯವೈಖರಿಗಳ ಬಗ್ಗೆಯೇ ಸರಿಯಾದ ಅರಿವಿಲ್ಲವೆಂದು ಇಲ್ಲಿ ಸ್ಪಷ್ಠವಾಗುತ್ತದೆ. ರಂಗಾಯಣ ಒಂದು ಪ್ರಾಯೋಗಿಕ ಸಂಸ್ಥೆ. ಅದನ್ನು ಮುನ್ನಡೆಸಲು ಬೇಕಾಗಿರುವವರು ರಂಗಭೂಮಿಯಲ್ಲಿ ಪ್ರಾಯೋಗಿಕ ಅನುಭವವಿರುವಂಥವರು. ಪುಸ್ತಕಗಳನ್ನು ಬರೆದು, ತುಂಬಿದ ಸಭೆಯಲ್ಲಿ ಭಾಷಣಮಾಡಿ ತಮ್ಮ ಪಾಂಡಿತ್ಯವನ್ನು ತೋರಿಸುವವರಿಗೆ ರಂಗಾಯಣದ ನಿರ್ದೇಶಕ ಹುದ್ದೆ ಅಲ್ಲ. ಒಂದು ವೇಳೆ ರಂಗಾಯಣದಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳಲು ಆ ಅನುಭವವಿರುವವರೇ ಬೇಕು ಎಂದಾದರೆ, ಈಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿದೆ. ರಂಗಾಯಣದ ಆಡಳಿತಾತ್ಮಕ ವಿಷಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೋಡಿಕೊಳ್ಳಬಹುದು. ರಂಗಭೂಮಿಯ ಕುರಿತು ಅಧ್ಯಯನ ಮಾಡಿರುವವರು, ಸಂಶೋಧನೆ ಮಾಡಿರುವವರು ಕರ್ನಾಟಕದಲ್ಲಿ ಇನ್ನೂ ಅನೇಕ ಜನ ಸಿಗುತ್ತಾರೆ. ಹಾಗಾದರೆ ಅವರನ್ನೇಕೆ ಈ ಹುದ್ದೆಗೆ ಪರಿಗಣಿಸಲಿಲ್ಲ? ರಂಗಾಯಣ ಮೈಸೂರಿನಲ್ಲಿರುವ ಮಾತ್ರಕ್ಕೆ ಆ ಹುದ್ದೆಗೆ ಆ ಭಾಗದವರು ಮಾತ್ರ ಲಾಯಕ್ಕು ಎಂಬ ಸರಕಾರದ ಮನೋಭಾವವೇ?

ನಾನು ಈ ಹಿಂದೆ ಕೂಡ ಪ್ರಸ್ತಾಪಿಸಿದ್ದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಇಂದು ಸಾಂಸ್ಕೃತಿಕ ವೇದಿಕೆ. ಅಲ್ಲಿನ ಕಲಾವಿದರೂ ಸಹ ಕೇವಲ ಮೈಸೂರಿನಲ್ಲಿ ಕುಳಿತು ರಾಜಕೀಯ ಮಾಡುವ ಬದಲು ರಾಜ್ಯದ ವಿವಿಧ ಜಿಲ್ಲೆಗಳನ್ನು ನೋಡಲಿ. ಅಲ್ಲಿನ ರಂಗಭೂಮಿಯ ಅಭಿವೃದ್ಧಿಗೆ ದುಡಿಯಲಿ. ತನ್ಮೂಲಕ ಅವರು ಸರಕಾರದಿಂದ ಪಡೆಯುತ್ತಿರುವ ಸಂಬಳಕ್ಕೆ ಒಂದು ನ್ಯಾಯವನ್ನು ಒದಗಿಸಲಿ. ಅದು ಬಿಟ್ಟು, ಇಡೀ ವರ್ಷ ಕಚ್ಚಾಡಿ, ಕಿತ್ತಾಡಿ, ಡಿಸೆಂಬರ್ ತಿಂಗಳಹೊತ್ತಿಗೆ "ಅಯ್ಯೋ ರಂಗಾಯಣಕ್ಕೆ ನಿರ್ದೇಶಕರು ಯಾರೂ ಇಲ್ಲ. ಈ ಬಾರಿಯ ಬಹುರೂಪಿ ನಾಟಕೋತ್ಸವ ನಡೆಯುವುದು ಹೇಗೆ" ಎಂದು ಗೋಲಾಡುವುದು ಯಾವ ನ್ಯಾಯ? ರಂಗಾಯಣ ಕೇವಲ ವರ್ಷಕ್ಕೊಂದು ಬಹುರೂಪಿಯಂತಹ ರಾಷ್ಟ್ರೀಯ ನಾಟಕೋತ್ಸವವನ್ನು ನಡೆಸಿದರೆ ಸಾಕಾ? ಅಲ್ಲಿಗೆ ಅದರ ಕಾರ್ಯವ್ಯಾಪ್ತಿ ಮುಗಿದು ಹೋಯ್ತಾ? ಹಾಗದರೆ ಈ ಕೆಲಸವನ್ನು ಕೇವಲ ರಂಗಾಯಣವೇ ಏಕೆ ಮಾಡಬೇಕು? ಬಹುರೂಪಿಯಂತಹ ನಾಟಕೋತ್ಸವಗಳನ್ನು ಕರ್ನಾಟಕ ನಾಟಕ ಅಕಾಡಮಿಯಾಗಲಿ ಅಥವಾ ಯಾವುದೇ ಕ್ರಿಯಾಶೀಲ ರಂಗತಂಡವಾಗಲೀ ಸಂಘಟಿಸಬಹುದು.

ಶ್ರೀ. ಲಿಂಗದೇವರು ಹಳೆಮನೆಯವರು ರಂಗಭೂಮಿಯ ಕುರಿತು ಸಾಕಷ್ಟು ಓದಿಕೊಂಡವರು, ಅನೇಕ ವಿಚಾರಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿದವರು ಮತ್ತು ನಾಲ್ಕಾರು ನಾಟಕಗಳನ್ನು ರಚಿಸಿದವರು. ಅವರು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿದ್ದರೆ ಯಾವ ಅಭ್ಯಂತರವಿರಲಿಲ್ಲ. ಆದರೆ ರಂಗಾಯಣದಂತಹ ಪ್ರಾಯೋಗಿಕ ಸಂಸ್ಥೆಗೆ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿರುವುದು ಖಂಡಿತವಾಗಿಯೂ ಸ್ವಾಗಾತರ್ಹವಲ್ಲ. ರಂಗಾಯಣಕ್ಕೆ ನಿರ್ದೇಶಕರು ಬೇಕೆ ಬೇಕು ಎಂದಾದರೆ, ನಮ್ಮ ರಾಜ್ಯದಲ್ಲಿ ಕ್ರಿಯಾಶೀಲರಾಗಿರುವ ಅನೇಕ ಜನ ರಂಗ ಕರ್ಮಿಗಳಿದ್ದಾರೆ. ಅಪಾರವಾದ ಪ್ರಾಯೋಗಿಕವಾದ ಅನುಭವದ ಹಿನ್ನಲೆಗಳನ್ನು ಹೊಂದಿದವರಿದ್ದಾರೆ. ಅಂಥವರನ್ನು ಸರಕಾರ ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ ರಂಗಾಯಣದಲ್ಲಿರುವ ಎಲ್ಲ ಕಲಾವಿದರನ್ನು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಿ, ಆಯಾ ಪ್ರದೇಶಗಳ ರಂಗಭೂಮಿಯ ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತಾಗಲಿ. ಈ ಕುರಿತು ಧಾರವಾಡದಲ್ಲಿ ದಿನಾಂಕ ೧೨-೧೧-೨೦೦೯ ರಂದು ನಡೆದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ಯದರ್ಶಿಗಳು ಎಲ್ಲ ಹಿರಿಯ ರಂಗಕರ್ಮಿಗಳು, ಸಾಹಿತಿಗಳ ಎದುರಿನಲ್ಲಿಯೇ ಆಶ್ವಾಸನೆ ನೀಡಿ ಆಗಿಹೋದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಭರವಸೆ ನೀಡಿದ್ದರು. ಆದರೆ, ಅಂದಿನ ದಿನ ಅಲ್ಲಿ ನಡೆದ ಎಲ್ಲ ಚರ್ಚೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿ ಹೋಯ್ತು.

ಕೊನೆಯಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಕರ್ನಾಟಕ ರಂಗಭೂಮಿಗೆ ರಂಗಾಯಣ ಅನಿವಾರ್ಯವಲ್ಲ. ಅದಿಲ್ಲದೆಯೂ ಇಲ್ಲಿ ಅನೇಕ ರಂಗ ಚಟುವಟಿಕೆಗಳು ನಡೆದಿವೆ. ರಂಗಾಯಣ ನಿಜಕ್ಕೂ ಉಳಿಯಬೇಕೆಂದರೆ ಅದಕ್ಕೆ ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದಾಗದೇ ಹೋದಲ್ಲಿ ಮತ್ತೆ ಸಾರ್ವಜನಿಕರ ಹಣ ಪೋಲಾಗುತ್ತಲೇ ಹೋಗುತ್ತದೆ. ಮೈಸೂರಿನಲ್ಲಿ ನಡೆಯುತ್ತಿರುವ ಮತ್ತು ಮುಂದೆ ನಡೆಯುವ ಸಾಂಸ್ಕೃತಿಕ ರಾಜಕೀಯ ಕಚ್ಚಾಟವನ್ನು ಮತ್ತೆ ನಾವೆಲ್ಲ ಬೆರಗುಗಣ್ಣುಗಳಿಂದ ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ. ಮತ್ತು ಇದು ನಮ್ಮ ಕರ್ನಾಟಕ ರಂಗಭೂಮಿಯ ವಿಪರ್ಯಾಸಗಳಲ್ಲೊಂದು.

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ದಿನಾಂಕ ೦೯-೧೧-೨೦೦೯ ರಂದು ಪ್ರಕಟವಾದ "ರಂಗಾಯಣ... ಸಾಕು ಮಾಡಿ ರಾಮಾಯಣ" ಲೇಖನದ ಮುಂದುವರಿದ ಭಾಗವೆಂದು ಪರಿಗಣಿಸಬಹುದು..

Thursday, October 22, 2009

ಕತ್ತೆ ಕಳೆದುಕೊಂಡ ಸಿದ್ದಯ್ಯನ ನೆನಪಾದದ್ದು ಹೀಗೆ....

ದಲಿತ ಕವಿ ಸಿದ್ದಲಿಂಗಯ್ಯ ಬರೆದ ಕತ್ತೆ ಮತ್ತು ಧರ್ಮ ಕವನ ಎಲ್ಲರಿಗೂ ನೆನಪಿದೆ ಎಂದು ಭಾವಿಸಿದ್ದೇನೆ...ತನ್ನ ಸತ್ತ ಕತ್ತೆಯ ಹೂತ ಜಾಗವನ್ನು ನೋಡಲು ಹೋದ ಸಿದ್ದಯ್ಯನಿಗೆ ಆಶ್ಚರ್ಯದ ಜೊತೆಗೆ ಆಘಾತವು ಆಗುತ್ತದೆ..ಅವನನ್ನು ಗೋರಿ ದೇವರ ಹತ್ತಿರ ಸಹ ಬಿಡುವುದಿಲ್ಲ...ಸತ್ತ ಕತ್ತೆಗೆ ದೊರೆಯುತ್ತಿರುವ ಮಾನ ಮರ್ಯಾದೆಯ ಜೊತೆಗೆ ತನಗೆ ಅವಮಾನವಾಗುತಿರುವುದನ್ನು ಕಂಡು ಕ್ಷಣ ಕಾಲ ಆಘಾತವಾಗುತ್ತದೆ ಸಿದ್ದಯ್ಯನಿಗೆ...
ಕೆಲ ದಿನಗಳ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ನಾನು ಹೊಸಪೇಟೆಯಲ್ಲಿ ರಾತ್ರಿ ಹೊತ್ತು ತೋರಣಗಲ್ಲಿಗೆ ಹೋಗಲು ಸಾಧ್ಯವಾಗದೇ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ವಿಷಯ ಪ್ರಸ್ತಾಪಿಸಿದ್ದೆ..ಬಹುಶಃ ನಿಮಗೆ ಅದು ನೆನಪಿರಬೇಕೆಂದು ಕೊಂಡಿದ್ದೇನೆ...ಎರಡು ದಿನಗಳ ಹಿಂದೆ ನಾನು ಹೊಸಪೇಟೆಗೆ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲಿಂದ ವಾಪಸ್ ಬೆಂಗಳೂರಿಗೆ ಬರಲು ರಾತ್ರಿ ಹೊಸಪೇಟೆ ಬಸ್ ಸ್ಟ್ಯಾಂಡಿಗೆ ಬಂದೆ..ಬಸ್ ಬರಲು ಸ್ವಲ್ಪ ತಡವಿತ್ತಾದ್ದರಿಂದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತ ಅಲ್ಲಿಯೇ ಕಾಲ ಕಳೆಯುತ್ತಾ ನಿಂತೆ..ಬಸ್ ಸ್ಟ್ಯಾಂಡ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು..ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಈಗೋ ಇನ್ನೊಂದು ಕ್ಷಣಕ್ಕೋ ಕುಸಿದು ಬೀಳುವ ಹಂತಕ್ಕೆ ಅದು ಬಂದು ತಲುಪಿತ್ತು...ನನಗೆ ತಕ್ಷಣಕ್ಕೆ ಕುತೂಹಲ ತಡೆಯಲಾಗದೆ ಹತ್ತು ವರ್ಷಗಳ ಹಿಂದೆ ನನಗೆ ಆಶ್ರಯ ಕೊಟ್ಟ ಬೆಂಚ್ ಗತಿ ಏನಾಗಿದೆ ಎಂದು ನೋಡಲು ಹೋದಾಗ ಅಲ್ಲಿ ಯಾವ ಬೆಂಚು ಸಹ ಇರಲಿಲ್ಲ!!!
ಕೇವಲ ಭಿಕ್ಷುಕರು, ಜೋಳಿಗೆ ದಾಸಯ್ಯಗಳು...ನಾಯಿ, ಹಂದಿಗಳು ಆ ಸ್ಥಳವನ್ನು ಆವರಿಸಿಕೊಂಡಿದ್ದವು...ಬಸ್ ಸ್ಟ್ಯಾಂಡ್ ನಲ್ಲಿದ್ದ ಎಲ್ಲ ಬೆಂಚ್ ಗಳನ್ನೂ ನವೀಕರಣದ ಹೆಸರಿನಲ್ಲಿ ಎತ್ತಂಗಡಿ ಮಾಡಿದ್ದರು...
ಕ್ಷಣಕಾಲ ಏನನ್ನೋ ಕಳೆದುಕೊಂಡ ಅನುಭವವಾಗಿ..ಮನಸ್ಸಿಗೆ ಕಸಿವಿಸಿಯಾಯಿತು...ತಕ್ಷಣಕ್ಕೆ -
"ಮಧುಗಿರಿ ಪಟ್ಟಣಕೆ ಸಿದ್ದಯ್ಯನೆಂಬಗಸ
ಹೆಂಡಿರು ಮಕ್ಕಳಿಲ್ಲ ಏಕಾಕಿ
ಸಿದ್ದಯ್ಯನಿಗೆ ಕತ್ತೆಯು ಅವನ ಒಡನಾಡಿ..." ಹಾಡು ನೆನಪಾಗಿ..ಬೆಂಗಳೂರು ತಲುಪುವ ತನಕ ಅದರದೇ ಗುನುಗುವಿಕೆ.....

Tuesday, October 20, 2009

ಪತ್ರಕರ್ತರ ಹಪಾಪಿ ತನ!!!

ಈ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬರೆದಿದ್ದೆ...ಅದಕ್ಕೆ ಅನೇಕ ಸ್ನೇಹಿತರ ಮಿಶ್ರ ಪ್ರತಿಕ್ರಿಯೆ ಸಹ ಬಂದಿತ್ತು..ಗೆಳೆಯ ರವಿ ಹೆಗಡೆ ಅವರು ಇಂತಹ ವಿಷಯಗಳನ್ನು ನೇರವಾಗಿ ಸಂಪಾದಕರ ಗಮನಕ್ಕೆ ತರಬೇಕಿತ್ತು ಎಂಬ ಸಲಹೆಯನ್ನು ಸಹ ನೀಡಿದ್ದರು...

ಇದೆ ತರಹದ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ...ಕೊಪ್ಪಳದಲ್ಲಿ ನನ್ನ ಸ್ನೇಹಿತನೊಬ್ಬ ಏನ್.ಜಿ.ಓ ನಡೆಸುತ್ತಿದ್ದಾನೆ..ಅವನನ್ನು ಕೇಳಿಕೊಂಡು ಒಬ್ಬ ಪತ್ರಕರ್ತ ಬಂದು ದೀಪಾವಳಿಗಾಗಿ ಒಂದು ಜಾಹಿರಾತನ್ನು ನಮ್ಮ ಪತ್ರಿಕೆಗೆ ನೀಡುವಂತೆ ದುಂಬಾಲು ಬಿದ್ದಿದ್ದಾನೆ..ನನ್ನ ಸ್ನೇಹಿತ ಅದಕ್ಕೆ ತಮ್ಮದು ಏನ್.ಜಿ.ಓ ಆಗಿರುವುದರಿಂದ ಯಾವುದೇ ರೀತಿಯ ಜಾಹಿರಾತನ್ನು ನೀಡುವಂತಿಲ್ಲ ಎಂದು ತಿಳಿಸಿ ಹೇಳಿದ್ದಾನೆ..ಆಗ ಸುಮ್ಮನಾದ ಆ ಪತ್ರಕರ್ತ ಮಹಾಶಯ ನಾಲ್ಕು ದಿನಗಳ ನಂತರ ಪುನಃ ನನ್ನ ಗೆಳೆಯನಿಗೆ ಫೋನಾಯಿಸಿ ಜಾಹಿರಾತು ನೀಡಲು ಆಗದಿದ್ದರೆ..ನಮಗೆ ಏನಾದರು ವ್ಯವಸ್ಥೆಮಾಡಿ...ನಮ್ಮನ್ನು ನೋಡಿಕೊಳ್ಳಿ ಎಂದು ಕಾದಹತ್ತಿದಾನೆ..ಏನೇ ತಿಳಿ ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿಲ್ಲ...ಕೊನೆಗೆ ನನ್ನ ಗೆಳೆಯ ಇದನ್ನು ನನ್ನ ಮುಂದೆ ತೋಡಿಕೊಂಡಾಗ ನಾನು ನೇರವಾಗಿ ಬೆಂಗಳುರಿನಲ್ಲಿ ಆ ಪತ್ರಿಕೆಯ ಕಚೇರಿಗೆ ಫೋನಾಯಿಸಿ ಸಂಪಾದಕರ ಗಮನಕ್ಕೆ ಈ ವಿಷಯವನ್ನು ತಂದಾಗ ಅವರು ನೇರವಾಗಿ "ನಮ್ಮ ಪತ್ರ ಕರ್ತರು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ..ಅವರ ಮೇಲೆ ಅಲ್ಲ ಸಲ್ಲದ ಆರೋಪ ಮಾಡಬೇಡಿ ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ" ಎಂಬ ಉಪದೇಶವನ್ನು ನೀಡಿದರು...

ಈಗ ಹೇಳಿ ಇಂತಹ ಹಪಾಪಿ ಪತ್ರಕರ್ತರಿಗೆ ಹೇಗೆ ಪಾಠ ಕಲಿಸುವುದು?

Friday, October 16, 2009

ಹೊಸ ನಾಟಕಕ್ಕೆ ಕುಂ.ವೀ ಮುನ್ನುಡಿ!



ಮೊನ್ನೆ ದಿನಾಂಕ ೭ ರಂದು ಗೆಳೆಯ ಪ್ರಮೋದ್ ಬೆಳಿಗ್ಗೆ ೭ ಗಂಟೆಗೆ ಫೋನ್ ಮಾಡಿ "ಗೆಳೆಯ..ನಾನು ಬೆಂಗಳೂರಿಗೆ ಬಂದೇನಿ...ಕುಂ.ವೀ ಬಂದಾರ..ಸ್ವಲ್ಪ ಬಂದು ಹೋಗು" ಅಂದ...ನಾನು ಬಹುವಾಗಿ ಪ್ರೀತಿಸುವ ಸಾಹಿತಿ ಕುಂ.ವೀ...ಅವರ ಹೆಸರು ಕೇಳಿದ ತಕ್ಷಣವೇ ರೋಮಾಂಚನಗೊಂಡೆ...ಅವರನ್ನು ಹತ್ತಿರದಿಂದ ಕಾಣಬೇಕು..ಮಾತನಾಡ ಬೇಕು ಎಂಬ ಬಹುದಿನದ ತುಡಿತ ಇಂದು ನೆರವೇರಲಿದೆ ಎಂದು..ಅವರನ್ನು ಭೇಟಿ ಮಾಡಲು ಹೊರಟೆ.. ಎಂದಿನಂತೆಯೇ ಬೆಂಗಳೂರು ಅಂದು ಸಹ ಇಡೀ ಜಗತ್ತಿನ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ವರ್ತಿಸುತ್ತಿತ್ತು...ತುಂಬಿದ ಬಸುರಿಯರಂತೆ ತಿರುಗುತ್ತಿದ್ದ ಬಸ್ಸುಗಳ ಮಧ್ಯೆ ನಾನು ಹಾಗೋ....ಹೀಗೋ ನನ್ನ ಕಾರನ್ನು ಓದುಸುತ್ತ ಕುಂ.ವೀ. ಇದ್ದ ಆನಂದರಾವ್ ಸರ್ಕಲ್ಲಿನ ಹತ್ತಿರವಿದ್ದ ದ್ವಾರಕಾ ಲಾಡ್ಜ್ ಗೆ ಹೊರಟೆ...

ಲಾಡ್ಜ್ ಗೆ ಬಂದಾಗ ಕುಂ.ವೀ ತಮ್ಮ ಲ್ಯಾಪ್ ಟಾಪ್ ಮುಂದೆ ಅದೇನೋ ಬರೆಯುತ್ತಾ ಕುಳಿತಿದ್ದರು...ಪ್ರಮೋದ್ ನನ್ನನ್ನು ಅವರಿಗೆ ಪರಿಚಯಿಸಿದ ತಕ್ಷಣವೇ ಎದ್ದು ನಿಂತು..ಸ್ವಾಗತಿಸಿ...ತಮ್ಮ "ಆರೋಹಣ" ಕಾದಂಬರಿಯ ನಿದುಗದೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತು ಅದಕ್ಕೆ ಬರಲೇ ಬೇಕೆಂದು ಫರ್ಮಾನು ಹೊರಡಿಸಿಬಿಟ್ಟರು...ಅವರ ಮಾತು, ನಯ-ವಿನಯ, ಸರಳತೆ ಎಲ್ಲವು ನನಗೆ ಅಚ್ಚರಿಯ ವಿಷಯವಾಗಿದ್ದವು..ಕೇವಲ ಅರ್ಧಗಂಟೆಯಲ್ಲಿ ಕುಂ.ವೀ ತುಂಬಾ ಹತ್ತಿರದವರೆನಿಸಿಬಿಟ್ಟರು...ನನ್ನನ್ನು ಅವರಿಗೆ ಪರಿಚಯಿಸುವ ಮೊದಲೆ ಪ್ರಮೋದ್ ಅವರಿಗೆ ನನ್ನ ಬೆಗ್ಗೆ ಎಲ್ಲಾ ಹೇಳಿಬಿಟ್ಟಿದ್ದ...ಹೀಗಾಗಿ ನನ್ನ ಬಗ್ಗೆ ಮೊದಲೆ ತಿಳಿದುಕೊಂಡಿದ್ದ ಕುಂ.ವೀ..ನನ್ನ ಆಸಕ್ತಿಯ ವಿಷಯಗಳ ಕುರಿತು ಮಾತನಾಡಲಾರಂಭಿಸಿದರು..ಕತೆ, ಹಾಡು, ನಾಟಕ, ಹೀಗೆ ಎಲ್ಲಾ ವಿಷಯಗಳ ಕಡೆಗೆ ನಮ್ಮ ಚರ್ಚೆ ಮುಖ ಮಾಡಿತು..

ಅವರೊಂದಿಗೆ ಮಾತನಾಡುತ್ತಾ ನಾನು ಹೊಸ ನಾಟಕ ಬರೆಯುತ್ತಿರುವುದಾಗಿ ಹೇಳಿದೆ..ಅದರ ಸಂಕ್ಷಿಪ್ತ ರೂಪವನ್ನು ಅವರಲ್ಲಿ ಹೇಳಿಕೊಂಡೆ..ತುಂಬಾ ಖುಷಿಯಿಂದ ಕುಂ.ವೀ "ಬೇಗ ಬರೀರಿ..ನಮ್ಮ ಭಳಾರೆ ಪುಸ್ತಕಂ ನಿಂದನೆ ಅದನ್ನ ಪ್ರಕಾಶಿಸೋಣ" ಎಂದು ಬಿಟ್ಟರು...ನನಗೆ ಆಕಾಶಕ್ಕೆ ಮೂರೇ ಗೇಣು..ನನ್ನ ಮೊದಲ ನಾಟಕ ಕೃತಿ ಅದೂ ಹೆಸರಾಂತ ಸಾಹಿತಿಯೊಬ್ಬರ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಸಂಭ್ರಮವನ್ನು ನೆನೆದು ಪುಳಕಿತನಾದೆ...ಅವರೊಂದಿಗೆ ಇದ್ದ ಮೂರು ದಿನವು ಆ ಹೊಸ ನಾಟಕದ ಕುರಿತ ವಿಚಾರಗಳು ತಲೆಯಲ್ಲಿ...

ಅಂದ ಹಾಗೆ ಅದರ ಕೆಲವು ಟಿಪ್ಪಣಿಗಳನ್ನು ಇನ್ನು ಮುಂದೆ ನಿಯತವಾಗಿ ಇಲ್ಲಿ ಬರೆಯುವೆ...ಪ್ರತಿಕ್ರೀಯಿಸಿ ಪ್ಲೀಸ್!!

Saturday, September 5, 2009

ಶಾಂತಿ, ಪ್ರೇಮ ಸಂದೇಶವ ಹೊತ್ತು ತರುವ ದೂತನ ಸಂಸಾರ ಪಯಣದ ಸುತ್ತ......




ನಾನು ಇತ್ತೀಚಿಗೆ ಬರೆದಿದ್ದೆ..ನನ್ನ ಮನೆಯ ಬಾಲ್ಕನಿಯಲ್ಲಿ ನಾನೇ ನಿರ್ಮಿಸಿಕೊಂಡ ಕೈತೋಟದಲ್ಲಿ ಪಾರಿವಾಳ ದಂಪತಿ ಸಂಸಾರ ಹೂಡಿವೆ ಎಂದು...ಮರಿಗಳು ದೊಡ್ಡದಾಗುತ್ತಿವೆ...ಮೊದ ಮೊದಲು ನಮಗೆ ಹೆದರುತ್ತಿದ ಆ ಪುಟ್ಟ ಮರಿಗಳು ಈಗ ನಮ್ಮನ್ನೇ ಹೆದರಿಸುತ್ತಿವೆ...ಅದ್ಭುತ ಲೋಕ ಅದರದ್ದು....ಕಣ್ಣು ಬಿಟ್ಟು ತೆರೆಯುವುದರೊಳಗೆ ದೊಡ್ಡದಾಗಿ ಬಿಟ್ಟಿವೆ...ಅವುಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದಂತೆಯೇ ಅವುಗಳ ಜೀವನ ಚಕ್ರ ಹೇಗಿರ ಬಹುದೆಂಬ ಸಹಜವಾದ ಕುತೂಹಲ ನನ್ನಲ್ಲಿ ಮನೆಮಾಡಿತು...ಸರಿ ಅದರ ಕುರಿತು ಅಧ್ಯಯನದಲ್ಲಿ ತೊಡಗಿಯೇ ಬಿಟ್ಟೆ....




ಪಾರಿವಾಳ ಸಾಮಾನ್ಯವಾಗಿ ಗರ್ಭಧರಿಸಿದ ೩೦ ರಿಂದ ೩೫ ದಿನಗಳಲ್ಲಿ ಮೊಟ್ಟೆ ಇಡುತ್ತದೆ...ಮೊದಲು ಒಂದೆ ಮೊಟ್ಟೆ ಇಡುತ್ತದೆ..ಮುಂದೆ ಎರಡು ದಿನಗಳಲ್ಲಿ ಮತ್ತೊಂದು ಮೊಟ್ಟೆ ಇಡುತ್ತದೆ...ಮೊಟ್ಟೆ ಇಡುವ ಸಂದರ್ಭದಲ್ಲಿ ಮಾತ್ರ ಇದು ಗೂಡು ಕಟ್ಟುವ ಕಾರ್ಯದಲ್ಲಿ ತೊಡಗುತ್ತದೆ...ಇದನ್ನು ಗೂಡು ಎನ್ನಲು ಸಾಧ್ಯವಿಲ್ಲ..ಇದನ್ನು ನಾವು ಮನೆ ಅಂತಲೇ ಕರೆಯಬೇಕು...ಹಾಳು ಬಿದ್ದ ಮನೆಯ ಸಂದಿ-ಗೊಂದಿಗಳು ಪಾರಿವಾಳಗಳಿಗೆ ತಮ್ಮ ಸಂತಾನಾಭಿವೃದ್ಧಿಯ ತಾಣಗಳಾಗುತ್ತವೆ...




ಸಾಮಾನ್ಯವಾಗಿ ಮೊಟ್ಟೆ ಇಟ್ಟ ೧೫ ರಿಂದ ೧೭ ದಿನಗಳ ವರೆಗೆ ಗಂಡು ಹಾಗೂ ಹೆಣ್ಣು ಪಾರಿವಾಳಗಳು ಸರತಿಯ ಮೇಲೆ ಕಾವು ಕೊಡುತ್ತವೆ...ರಾತಿಯೆಲ್ಲ ಹೆಣ್ಣು ಪಾರಿವಾಳ ಮೊಟ್ಟೆಗೆ ಕಾವು ಕೊಟ್ಟರೆ..ಬೆಳಗಿನ ಜಾವ ಗಂಡು ಪಾರಿವಾಳ ಆ ಕಾಯಕವನ್ನು ಮುಂದುವರೆಸುತ್ತದೆ...ಮರಿಗಳಾದ ಮೇಲೆ ಹೆಣ್ಣು ಪಾರಿವಾಳಕ್ಕಿಂತ ಗಂಡು ಪಾರಿವಾಲವೇ ಜವಾಬ್ದಾರಿಯುತವಾಗಿರುತ್ತದೆ...ಅದೇ ಮರಿಗಳಿಗೆ ಆಹಾರ ಪೂರೈಕೆ ಮಾಡುತ್ತದೆ..ಮೊದಲಿನ ಒಂದು ವಾರ ಅಥವಾ ಹತ್ತು ದಿನಗಳವರೆಗೆ ಪಾರಿವಾಳ ದಂಪತಿ ತಮ್ಮ ಮರಿಗಳಿಗೆ ಕಾಳಿನ ಹಾಲು ಅಥವಾ ತಾವು ತಿಂದ ಕಾಳುಗಳಿಂದ ಉತ್ಪನ್ನವಾದ ಗಿಣ್ಣದಂತಹ ಪದಾರ್ಥವನ್ನು ತಿನ್ನಿಸುತ್ತವೆ...ನಂತರ ಕ್ರಮೇಣ ನುರಿಸಿದ ಕಾಳು ಕಡಿಗಳನ್ನು ಗುಟುಕು ಕೊಡಲು ಆರಂಭಿಸುತ್ತವೆ...




ಸಾಮಾನ್ಯವಾಗಿ ಮರಿಗಳು ದೊಡ್ಡವಾಗಿ ಹಾರಲು ಒಂದು ತಿಂಗಳಾದರೂ ಬೇಕು...ಹಾರಲು ಆರಂಭಿಸಿದ ಮೇಲೂ ಸಹ ಸ್ವಲ್ಪ ಪಾರಿವಾಳ ದಂಪತಿ ಅವುಗಳಿಗೆ ಗುಟುಕು ಕೊಡುತ್ತವೆ...




ಅದ್ಭುತ ಜಗತ್ತಲ್ಲವೇ ಪಾರಿವಾಳಗಳದ್ದು....




ಅವುಗಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ನಾನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ...ಅವುಗಳನ್ನು ನೋಡಲು ದಯವಿಟ್ಟು ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ....








ನಿಮ್ಮ ಅಭಿಪ್ರಾಯವನ್ನು ಮರೆಯದೆ ದಾಖಲಿಸಿ....




Thursday, September 3, 2009

ಈ ನೆನಪುಗಳೇ ಹಾಗೆ....ನಮ್ಮೀ ನಿವಾಸದಲ್ಲೇ ಅಡಗಿವೆ....

ಇಟಗಿ ಈರಣ್ಣ ಅವರ "ಚಂದಕಿಂತ ಚಂದ..." ಹಾಡು ಹುಟ್ಟಿದ ಕುರಿತು ಮಣಿಕಾಂತ್ ವಿಜಯಕರ್ನಾಟಕದಲ್ಲಿ ಬರೆದ ಮೇಲೆ ನನ್ನ ಫೋನು ಒಂದು ಕ್ಷಣವೂ ಸುಮ್ಮನಿಲ್ಲ..ಪ್ರತಿ ಕ್ಷಣಕ್ಕೆ ಸುಮ್ಮನೆ ತಕರಾರು ಮಾಡುತ್ತಿದೆ...ಪುಟ್ಟ ಮಕ್ಕಳು ರಚ್ಚೆ ಹಿಡಿಯುವ ಹಾಗೆ...ಅದು ಕೂಗುವ ಕ್ಷಣಕ್ಕೆ ಎತ್ತಿಕೊಂಡು...ಮಾತನಾಡಿ...ಕೆಳಕ್ಕಿಡುವ ಮರುಕ್ಷಣವೇ ಮತ್ತೆ ಕೂಗಲು ಆರಂಭಿಸಿ ಬಿಟ್ಟಿದೆ... ಎದುರು ಮಾತನಾಡುವಂತಿಲ್ಲ..ಏಕೆಂದರೆ ಅತ್ತ ಕಡೆಯಿಂದ ಬರುತ್ತಿರುವ ಫೋನುಗಳೆಲ್ಲವೂ ಅಕ್ಕರೆಯಿಂದ ತಮ್ಮ ಅಭಿಮಾನವನ್ನು ಹೇಳುವ ಕರೆಗಳೇ...
ಇದೆಲ್ಲದರ ನಡುವೆ ಇಟಗಿ ಈರಣ್ಣ ಸಹ ಬೆಳಿಗ್ಗೆ ಫೋನಾಯಿಸಿ...ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು..."ಹತ್ತು ವರ್ಷಗಳ ನಂತರ ನನ್ನನ್ನು ಈ ರೀತಿಯಲ್ಲಿ ನೆನಪಿಸಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್...ನಾನು ಕ್ಲಾಸನ್ನು ಸಹ ನಡೆಸಲು ಸಾಧ್ಯವಾಗದಷ್ಟು ನನ್ನ ಮೊಬೈಲ್ ರಿಂಗಣಿಸುತ್ತಿದೆ... ಮೈಸೂರಿನಿಂದ ರಮೇಶ್, ಶಿವಾಜಿರಾವ್ ಜಾಧವ್..ಮುಂತಾದವರೆಲ್ಲ ಕರೆಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ..ತುಂಬ ಚನ್ನಾಗಿ ಬರೆದಿದ್ದೀರಿ...ಅಂದ ಹಾಗೆ ರಮೇಶ್ ಮೈಸೂರಿನಲ್ಲಿ ಮತ್ತೆ ರಾವಿ ನದಿಯ ದಂಡೆಯ ಮೇಲೆ ಮಾಡಿಸುವ ತಯಾರಿಯಲ್ಲಿದ್ದಾರೆ..ಭಾಳ ಖುಷಿ ಆತು" ಎಂದು ಫೋನಿಟ್ಟರು...
ರಾವಿ ನದಿಯ ಹೆಸರನ್ನು ಕೇಳಿದ ತಕ್ಷಣ ನಾನು ಮೈ ಕೊಡವಿಕೊಂಡು ಮೇಲೆದ್ದೆ...ಅದನ್ನು ಈಗ ಮತ್ತೆ ಮಾಡಿಸಲು ಸಾಧ್ಯವಿದೆಯೇ? ಮಾಡಿಸಿದರೆ ಯಾವ ತಂಡಕ್ಕೆ ಮಾಡಿಸುವುದು ಮುಂತಾದವುಗಳನ್ನು ಚಿಂತಿಸುತ್ತಿರುವಾಗ...ನೆನಪಾಗಿದ್ದು..."ಈ ನೆನಪುಗಳೇ ಹಾಗೆ...ನಮ್ಮೀ ನಿವಾಸದಲ್ಲೇ ಅಡಗಿವೆ...."

Wednesday, September 2, 2009

ಹಾಡು ಹುಟ್ಟಿದ ಸಮಯ....

ಮೂರು ವಾರಗಳ ಸತತ ಪ್ರಯತ್ನದ ಫಲವಾಗಿ ಇಟಗಿ ಈರಣ್ಣ ನೆನ್ನೆ ರಾತ್ರಿ ಮಾತಿಗೆ ಸಿಕ್ಕರು....ಮನೆಯಲ್ಲಿ ತಾಯಿ, ಮಡದಿ ಹುಷಾರಿಲ್ಲದೆ ಅವರ ಆರೈಕೆಯಲ್ಲಿ ದಿನದ ಬಹುಕಾಲವನ್ನು ಕಳೆದರೆ ಇನ್ನು ಉಳಿದ ಸಮಯ ಕಾಲೇಜಿನಲ್ಲಿ ಉಪನ್ಯಾಸ ನೀಡುವುದರಲ್ಲಿ ಹೋಗಿಬಿಡುತ್ತದೆ.."ನನ್ನ ಬದುಕನ್ನೋದು ಅರವೀನ ನೀರಿನ್ಯಾಗ ಹಾಕಿ ಹಿಂಡಿ ತಗಧಂಗ ಆಗೈತಿ ಧನಂಜಯ ಅವರ..." ಎಂದೇ ಮಾತಿಗೆ ಶುರುವಿಟ್ಟುಕೊಂಡ ಈರಣ್ಣ ಬದುಕನ್ನ ವಿಭಿನ್ನವಾಗಿ ನೋಡಬಯಸಿದವರು...ಬಾಲ್ಯದಲ್ಲಿಯೇ ಅನಿವಾರ್ಯ ಕಾರಣಗಳಿಂದ ಮುಂಬೈಗೆ ಬಂದುತಲುಪಿ ಅಲ್ಲಿನ ರೈಲು ನಿಲ್ದಾಣಗಳಲ್ಲಿ ಅಕ್ಷರಶಃ ಷೂ ಪಾಲಿಶ್ ಮಾಡಿ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹಿಂದಿ, ಉರ್ದು, ಮರಾಥಿ, ಬಂಗಾಳಿ, ಕನ್ನಡ, ಇಂಗ್ಲೀಶ್, ಭೋಜಪುರಿ, ಬಿಹಾರಿ, ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದರು...ಮುಂದೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದಾಗ ಅವರ ಬದುಕಿನ ದಿಕ್ಕು ಬದಲಾಯಿತು...ಸಾಹಿತಿಗಳ ತವರೂರು ಧಾರವಾಡದಲ್ಲಿ ಅವರಿಗೆ ಅನೇಕ ಹಿರಿಯ ಸಾಹಿತಿಗಳ ಸಂಪರ್ಕದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಯಿತು... ಇವರು ಬರೆದ ಶಾಯರಿಗಳು ಇಂದಿಗೂ ಕೂಡ ಜನಪದ ಸಾಹಿತ್ಯದಂತೆ ಜನರ ಬಾಯಲ್ಲಿ ಹರಿದಾಡುತ್ತಿವೆ...ಅನೇಕ ಜನ ಅವುಗಳನ್ನು ತಾವೇ ರಚಿಸಿದ್ದು ಎಂದು ಅನೇಕ ಕವಿಗೊಶ್ಥಿಗಳಲ್ಲಿ ವಾಚನ ಮಾಡಿದ್ದು ಉಂಟು...
ಪತ್ರಕರ್ತ ಗೆಳೆಯ ಮಣಿಕಾಂತನ ಒತ್ತಾಸೆಗೆ ಬಿದ್ದು ಅವರನ್ನು "ಚಂದಕ್ಕಿಂತ ಚಂದ ನೀನೆ ಸುಂದರ.." ಹಾಡು ಬರೆದ ಬಗೆ, ಅದರ ಹಿಂದಿನ ಉದ್ದೇಶ, ಮುಂತಾದವುಗಳನ್ನು ಕುರಿತು ಮಾತಿಗೆ ಎಳೆದಾಗ ನಿಜಕ್ಕೂ ಅಚ್ಚರಿಯಾಗುವಂತಹ ಕೆಲವು ಸಂಗತಿಗಳನ್ನು ಅವರು ಬಿಚ್ಚಿಟ್ಟರು....
"ನಾನು ಸ್ಪರ್ಶ ಚಿತ್ರದ ಹಾಡಿಗೆ ಸಾಹಿತ್ಯ ಬರದದ್ದು ಎಷ್ಟು ಖರೆನೋ ಅಷ್ಟ ಅದು ಆಕಸ್ಮಿಕನೂ ಹೌದು...ನಾನು ಪಿಕ್ಚರ್ ನೋಡುದು ಬಿಟ್ಟು ೨೫ ವರ್ಷ ಆತು..ಇನ್ನ ಫಿಲ್ಮ ಗೆ ಹಾಡನ್ನ ಬರಿಯೋದು ದೂರದ ಮಾತು...ಸುನೀಲ್ ಕುಮಾರ್ ದೇಸಾಯಿ ಅವರು ಶಾಯರಿಗಳನ್ನ ಇಟಗೊಂಡು ಒಂದು ಫಿಲಂ ಮಾಡಬೇಕಂತ ನಿರ್ಧಾರ ಮಾಡಿ ಕನ್ನಡದೊಳಗ ಅಷ್ಟು ಚಂದಾಗಿ ಶಾಯರಿ ಬರಿಯೋರು ಯಾರದಾರ ಅಂತ ಹುಡಕಾಕ ಶುರು ಮಾಡಿದ್ರು...ಆಗ ಯಾರೋ ಪುಣ್ಯಾತ್ಮರು ನನ್ನ ಹೆಸರನ್ನು ಅವರಿಗೆ ಹೇಳಿದ್ರಂತ..ಆಗ ನನ್ನನ್ನ ಹುಡುಕೋ ಕೆಲಸ ಶುರು ಮಾಡಿದ್ರು ದೇಸಾಯರು..ಯುನಿವರ್ಸಿಟಿ, ಬಳ್ಳಾರಿ, ಹೊಸಪೇಟೆ, ವಿಜಯನಗರ ಕಾಲೇಜು..ಹೀಂಗ ಎಲ್ಲಾ ಕಡೆ ಹುಡುಕಿದ ಮ್ಯಾಲ ನನ್ನ ಪತ್ತಾ ಅವ್ರಿಗೆ ಸಿಕ್ತು...ಇದೆಲ್ಲ ಆಗಿದ್ದು ೧೯೯೯ರಾಗ ಆಗಿನ್ನ ಈಗಿನಗತೇ ಮೊಬೈಲ್ ಫೋನಿನ ಹಾವಳಿ ಇರಲಿಲ್ಲ..ಹಿಂಗಾಗಿ ಮನಿ ಅಡ್ರೆಸ್ ಹುಡಕಿಕೊಂಡ ಬರಬೇಕು ಇಲ್ಲಂದ್ರ ಲ್ಯಾಂಡ್ ಲೈನ್ಗೆ ಫೋನ್ ಮಾಡಿ ಕೆಲಸ ಮಾಡ್ಕೋಬೇಕು...ಇಂಥ ಪರಿಸ್ಥಿತಿಯೋಳಗ ಅಂತು ದೇಸಾಯರು ನನ್ನನ್ನ ಹಿಡದ ಬಿಟ್ರು..ಮತ್ತ ತಮ್ಮ ಸಿನೆಮಾಕ್ಕ ಶಾಯರಿ ಬರಿಯಾಕ್ಕಂತ ನನ್ನನ್ನ ಒಪ್ಪಿಸಿದರು....ಹೀಂಗ ನಾನು ಗಾಂಧೀ ನಗರದ ಕೆಡೆ ಬಸ್ ಹತ್ತಿದೆ.... ಸಿನೆಮಾದ ಕೆಲಸ ಶುರು ಆತು...ದೇಸಾಯರು ಎಲ್ಲಿ ಬೇಕಂತಾರ ಅಲ್ಲಿ ಶಾಯರಿ ಬರದು ಕೊಡ್ತಿದ್ದೆ...ಟೈಮು ಸಿಕ್ಕಾಗ ನಾನು ಅವರು ಅದು-ಇದು ಅಂತ ಹರಟಿ ಹೊಡೀತಾ ಕುಡತಿದ್ವಿ... ನನ್ನನ್ನ ಬೆಂಗಳುರಿನ್ಯಾಗ ಸುದೀಪ್ ಅವರು ತಮ್ಮ ಮನೀ ಬಾಜುಕಿನ ಮನಿಯೊಳಗ ಇಳಕೊಳ್ಳಲಿಕ್ಕೆ ವ್ಯವಸ್ಥಾ ಮಾಡಿದ್ರು...ಅದೊಂದ ದಿನ ನಾನು ದೇಸಾಯರು ಹಂಗ ಮಾತಾಡಕೊಂತ ಕುಂತಾಗ ಈ ಸಿನೀಮಾಕ್ಕ ನೀವೊಂದು ಹಾಡನ್ನ ಯಾಕ ಬರೀಬಾರ್ದು? ಅಂದು ಬಿಟ್ರು ದೇಸಾಯರು...
ನಾನು ಸಹ ಒಪ್ಪಿಕೊಂಡು ಹಾಡು ಹೇಗಿರಬೇಕು ಎಂದು ಚರ್ಚೆಗೆ ಕೂತೆವು....ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಹಾಡಿನಲ್ಲಿರಬೇಕು ಎಂದು ನಿರ್ದೇಶಕರು ಹೇಳಿದ ಮೇಲೆ ಅದರ ಕಾಯ್ರಕ್ಕೆ ಅಣಿಯಾಗಬೇಕಾಯ್ತು.... ಕಣ್ಣಿಗೆ ಕಾಣದ ವಸ್ತುಗಳ ವರ್ಣನೆ ಹಾಡಿನಲ್ಲಿರಬೇಕೆಂದ ಮೇಲೆ ಅದು ಗಜಲ್ ರೂಪದಲ್ಲಿದ್ದರೆ ಒಳ್ಳೆಯದು ಎಂದು ನಿರ್ಧಾರಕ್ಕೆ ಬಂದೆವು..ಅಲ್ಲದೆ ಆ ಹಾಡನ್ನು ಹಾಡಲು ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಬರುತ್ತಿರುವ ವಿಷಯ ತಿಳಿದ ಮೇಲೆ ಅವರ ಧ್ವನಿ, ಅವರ ಸ್ವಭಾವಕ್ಕೆ ಹೊಂದಿಕೆಯಾಗಬಲ್ಲ ಗಜಲ್ ರೂಪದ ಹಾಡನ್ನು ಬರೆಯುವುದಾಗಿ ನಿರ್ಧರಿಸಿದೆ...ಎಷ್ಟು ತಲೆ ಕೆಡಿಸಿಕೊಂಡರು ಹಾಡು ಹುಟ್ಟುತ್ತಲೇ ಇಲ್ಲ...ಅದೊಂದು ದಿನ ರಾತ್ರಿ ಬೆಂಗಳೂರಿನಲ್ಲಿ ಮನೆಯ ಮಹಡಿಯ ಮೇಲೆ ಬಂದು ಈ ಹಾಡಿನ ಬಗ್ಗೆ ಚಿಂತಿಸುತ್ತಿರುವಾಗ ಪ್ರಶಾಂತವಾದ ವಾತಾವರಣದಲ್ಲಿ ಪಕ್ಕದ ಮನೆಯ ಹೆಣ್ಣು ಮಗಳು ತನ್ನ ಮುದ್ದಾದ ಮಗುವನ್ನ ಎತ್ತಿಕೊಂಡು ಅದನ್ನು ಸಮಾಧಾನ ಮಾಡುತ್ತ ಆಗಸದಲ್ಲಿನ ಚಂದ್ರನನ್ನು ತೋರಿಸಿ..ಅದರ ವರ್ಣನೆಯಲ್ಲಿ ತೊಡಗಿದಳು....ಇದೆ ತರಹದ ಸಂದರ್ಭ ನನ್ನ ಹಿರಿಯ ಮಗ ಸಣ್ಣವನಿದ್ದಾಗ ನನ್ನ ಹೆಂಡತಿ ಅವನನ್ನು ಸಮಾಧಾನ ಪಡಿಸುತ್ತಿದ್ದಳು...ಆಗ ರಾತ್ರಿ ಚಂದ್ರನ ಬೆಳಕು ಹಂಚಿನ ಮನೆಯ ಕಿಂಡಿಯ ಮೂಲಕ ನನ್ನ ಮಗನ ಮುಖದ ಮೇಲೆ ಬಿದ್ದಾಗ ಅವಳ ಆಶ್ಚರ್ಯ ಭರಿತವಾದ ಉದ್ಘಾರ ನೆನಪಿಗೆ ಬಂತು....ಆ ಕ್ಷಣದಲ್ಲಿ ನಾನು ನಿರ್ಧರಿಸಿ ಬಿಟ್ಟೆ ನನಗೆ ಬೇಕಾದ ಹಾಡು ಸಿಕ್ಕಿತು ಅಂತ.... ಅಂತಹ ಪ್ರಶಾಂತವಾದ ರಾತ್ರಿಯ ಚಂದ್ರನ ಬೆಳಕಿನಲ್ಲಿ ನಡೆದ ಘಟನಾವಳಿಗಳ ಸಾಕ್ಷಿಯಾಗಿ ನಿಂತ ಮೊದಲ ಸಾಲೇ "ಚಂದಕಿಂತ ಚಂದ ನೀನೆ ಸುಂದರ...ನಿನ್ನ ನೋಡ ಬಂದ ಬಾನ ಚಂದಿರ...."
ನೀವು ಈ ಹಾಡನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ.....ಈ ಹಾಡಿನಲ್ಲಿ ಮುಗ್ಧತೆಗೆ, ಪ್ರಶಾಂತತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ....ಮತ್ತು ಈ ಹಾಡನ್ನು ಯಾವುದೇ ಹುಡುಗಿಯನ್ನು ಅಥವಾ ಪ್ರೇಯಸಿಯನ್ನು ಗಮನದಲ್ಲಿರಿಸಿಕೊಂಡು ಬರೆದದ್ದಲ್ಲ...ಇದು ಮಗುವಿನ ಮೇಲೆ ಬರೆದ ಹಾಡು...ಈ ಹಾಡಿನಲ್ಲಿನ ಒಂದು ಸಾಲು ಮಾತ್ರ ಪ್ರಿಯತಮೆಯನ್ನು ಕುರಿತಾಗಿದೆ....ಅದು ಚಂದುಳ್ಳಿ ಚಲುವೆ - ಚಂದ + ಉಳ್ಳ = ಚಂದುಳ್ಳ ....ಈ ಸಾಲನ್ನು ಹೊರಗಿಟ್ಟು ಹಾಡನ್ನು ಗಮನಿಸಿದರೆ ಇದನ್ನು ಪೂರ್ತಿಯಾಗಿ ಮಗುವನ್ನು ಗಮನದಲ್ಲಿಟ್ಟು ಬರದಂತಹ ಹಾಡು...ಉದಾಹರಣೆಗೆ ಹೇಳಬೇಕೆಂದರೆ ಈ ಹಾಡಿನಲ್ಲಿ ಬಳಸಿದ "ಹೂನಗೆ" ಎಂಬ ಪದ....ಇದು ಕೇವಲ ಮಗುವಿಗೆ ಅನ್ವಯವಾಗಲು ಸಾಧ್ಯ..ಏಕೆಂದರೆ ಹೂನಗೆ ಕೇವಲ ಮಗುವಿಗಿರುತ್ತದೆ....ಮತ್ತೊಂದು ಕಡೆ ಬಳಸಿದ "ಪ್ರೇಮದ ಅರ್ಥವ ಹುಡುಕುತ ನಿಂತೆನು.....ನಿನ್ನಿ ಸ್ಪರ್ಶದಿ ಅರ್ಥವ ಕಂಡೆನು...." ಇದನ್ನು ಕೂಡ ಸೂಕ್ಷ್ಮವಾಗಿ ಗಮನಿಸಿದಾಗ ಮಗುವಿನ ಸ್ಪರ್ಶದಿಂದ ಪ್ರೇಮದ ಅರ್ಥವನ್ನು ಕಂಡ ಧನ್ಯತಾ ಭಾವ ಕಾಣಬಹುದಾಗಿದೆ...ಆದರೆ ಕವಿಯ ಆಶಯಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಇದನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಾಗೂ ಕ್ಯಾಮರಾಮ್ಯಾನ್ ವೇಣು ಇದನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ... "ನಾನು ಧಾರವಾಡದಲ್ಲಿದ್ದ ನಾಲ್ಕು ವರ್ಷಗಳ ಕಾಲ ಬೇಂದ್ರೆ ಅಜ್ಜನ ಒಡನಾಟ ಈ ಹಾಡಿನಲ್ಲಿ ಬಹಳಷ್ಟು ಕೆಲಸ ಮಾಡಿದೆ...ಶಬ್ದ ಗಾರುಡಿಗ ಎಂದೇ ಹೆಸರಾದ ಬೇಂದ್ರೆ, ತಮ್ಮ ಹಾಡುಗಳಲ್ಲಿ ಶಬ್ದಗಳ ಜೊತೆಗೆ ಬಹಳ ಅದ್ಭುತವಾಗಿ ಆಟವಾಡುತ್ತಿದ್ದರು....ಅವರೊಂದಿಗಿನ ಒಡನಾಟ ನನಗು ಸಹ ಈ ಹಾಡಿನಲ್ಲಿ ಶಬ್ದಗಳ ಜೊತೆ ಆಟವಾಡಿಸಿದೆ....ಈ ಹಾಡನ್ನು ನಾನೇ ಬರೆದರು ಇದರಲ್ಲಿ ಶೇಖಡಾ ೫೦ ರಷ್ಟು ಕೆಲಸ ಮಾಡಿದ್ದು ಬೇಂದ್ರೆ ಅವರ ಪ್ರಭಾವ...
ಸ್ಪರ್ಶ ಚಿತ್ರಕ್ಕೆ ಹಾಡನ್ನು ಬರೆಯುತ್ತಿದ್ದೇನೆ ಎಂದು ನನ್ನ ಮಕ್ಕಳಿಗೆ ನಾನು ತಿಳಿಸಿದಾಗ ಅವರು ಹೇಳಿದ್ದು ಒಂದೇ ಮಾತು..ಅಪ್ಪ ದಯಮಾಡಿ ಶುದ್ಧ ಕನ್ನಡದಾಗ ಹಾಡು ಬರೀ...ಯಾಕಂದ್ರ ಎಲ್ಲಾರು ಕನ್ನಡ ಅಂತ ಹೇಳಕೊಂತ ಬ್ಯಾರೆ ಭಾಷಾದಾಗ ಹಾಡು ಬರಿಯಾಕತ್ತಾರ...ನನಗೆ ಆ ಕ್ಷಣದಲ್ಲಿ ಇದು ನಿಜ ಎನಿಸಿತು...ಅಂತೆಯೇ ನಾನು ಈ ಹಾಡಿನಲ್ಲಿ ಕೇವಲ ಐದು ಪದಗಳನ್ನು ಮಾತ್ರ ಸಂಸ್ಕೃತ ಶಬ್ದ ಬಳಸಿ ಬರೆದಿದ್ದೇನೆ...ಅವು ಸುಂದರ, ಪ್ರೇಮ, ಅರ್ಥ, ಸ್ಪರ್ಶ, ಹೃದಯ..ಇವುಗಳಿಗೆ ಪರ್ಯಾಯವಾಗಿ ಬೇರೆ ಯಾವುದೇ ಕನ್ನಡ ಪದಗಳಿಲ್ಲದ ಕಾರಣ ಮೂಲ ಸಂಸ್ಕೃತ ಪದಗಳನ್ನೇ ಬಳಸಬೇಕಾಯಿತು...." ಈ ಹಾಡಿಗೆ ಹಂಸಲೇಖಾ ಅವರು ಮೊದಲೆ ಸಂಗೀತ ಸಂಯೋಜನೆ ಮಾಡಿದ್ದರು....ಆ ರಾಗಕ್ಕೆ ನಾನು ಹಾಡನ್ನು ಬರೆಯಬೇಕಾಗಿತ್ತು....ಪಂಕಜ್ ಉದಾಸ್ ಅವರು ಬರುವ ದಿನ ನಿಗದಿಯಾಗಿ ಹೋಗಿತ್ತು ಮತ್ತು ಅವರು ಬಂದಾಗ ಈ ಹಾಡಿನ ಧ್ವನಿ ಮುದ್ರಣ ಕಾರ್ಯವು ಮುಗಿಸಲೇ ಬೇಕಿತ್ತು...
ಈ ಹಾಡನ್ನು ಬರೆದ ದಿನ ೮-೮-೯೯ ಮತ್ತು ಈ ಹಾಡಿನ ಧ್ವನಿ ಮುದ್ರಣ ನಡೆದದ್ದು ೯-೮-೯೯....ಪಂಕಜ್ ಉದಾಸ್ ಅವರಂತಹ ಮಹಾನ್ ಗಾಯಕರಿಗೆ ಕನ್ನಡದ ಈ ಹಾಡಿನ ಅರ್ಥವನ್ನು ಹೇಳಿಕೊಡುವುದು...ಅದರ ಉಚ್ಚಾರಣೆಯನ್ನು ಹೇಳಿಕೊಡುವುದು ಎಲ್ಲವು ರೋಮಾಂಚನದ ಕ್ಷಣಗಳು...ನಾನು ನನ್ನ ವೃತ್ತಿಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಪಾಠ ಮಾಡುವುದು ಬೇರೆ ಆದರೆ ಪಂಕಜ್ ಉದಾಸ್ ಅವರಂಥ ಮಹಾನ್ ಗಾಯಕರಿಗೆ ಹೇಳುವುದು ಬೇರೆ...ಅವರಿಗೆ ಹೇಳಿಕೊಡುತ್ತಿದ್ದಾಗ ನಾನು ಅನೇಕ ಬಾರಿ ಪುಳಕಿತನಾಗಿದ್ದೇನೆ..ಅವರ ಮುಗ್ಧತೆಯನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೇನೆ....ಅವರಿಗೆ ಈ ಹಾಡನ್ನು ಹೇಳಿ ಕೊಡುವಾಗ ಒಂದು ಕಡೆ "ಎಲ್ಲೆಲ್ಲೂ ನೀನೆ" ಎಂಬ ಪದ ಪ್ರಯೋಗ ಬರುತ್ತದೆ....ಪಾಪ ಅವರಿಗೆ ಎಷ್ಟು ಸಲ ಹೇಳಿದರು ಸರಿಯಾಗಿ ಹೇಳಲು ಬರುತ್ತಿರಲಿಲ್ಲ..ಆದರು ಸಹ ಬೇಜಾರಿಲ್ಲದೆ ಪ್ರಯತ್ನವನ್ನು ಮುಂದುವರೆಸಿದ್ದರು...ನಾನು ಅವರಿಗೆ ಇಂಗ್ಲೀಶ್ ನ LLU ಅಕ್ಷರಗಳನ್ನು ವೇಗವಾಗಿ ಹೇಳುವಂತೆ ತಿಳಿಸಿದೆ..ಹೇಳುತ್ತಾ ಹೇಳುತ್ತಾ ತಾನೆ ತಾನಾಗಿ ಪದ ಪ್ರಯೋಗ ಸುಲಭವಾಗಿ ಬಂತು.... ಮುಂದೆ ಈ ಹಾಡಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಸಹ ಬಂತು...ಪ್ರಶಸ್ತಿ ಬಂದ ತಕ್ಷಣ ಈರಣ್ಣ ಅವರು ಮೊದಲು ಹುಡುಕಿದ್ದು ಕ್ಯಾಮರಾಮನ್ ವೇಣು ಅವರನ್ನು...ಅದ್ಭುತವಾಗಿ ಈ ಹಾಡನ್ನು ಚಿತ್ರೆಕರಿಸಿದ ವೇಣು ಅವರಿಗೆ ಈ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ಅವರು ತಮ್ಮ ಅಳಲನ್ನು ಸುನೀಲ್ ಕುಮಾರ್ ದೇಸಾಯಿ ಅವರ ಹತ್ತಿರ ತೋಡಿಕೊಂಡಾಗ..ದೇಸಾಯಿ ಅವರು...ನಿಮ್ಮ ಶ್ರಮಕ್ಕೆ ನಿಮಗೆ ಪ್ರಶಸ್ತಿ ಬಂದಿರುವುದು ಸೂಕ್ತವಾಗಿದೆ...ಅದು ನಿಮಗೆ ಸಲ್ಲಬೇಕು ಎಂದು ಹೇಳಿದರು...ಮಗುವಿನ ಮುಗ್ಧತೆ ಕೇವಲ ಈರಣ್ಣ ಅವರ ಹಾಡಿನಲ್ಲಿಲ್ಲ..ಸ್ವತಃ ಅವರಲ್ಲಿಯೇ ಇದೆ....

Tuesday, August 25, 2009

ಹಿರಿಯ ಮನಸ್ಸು ನೊಂದಿದೆ...ಹಾಗೇ ಓದಿಕೊಳ್ಳಿ ಸುಮ್ಮನೆ...

ಅದೇಕೋ ಗೊತ್ತಿಲ್ಲ...ಕಳೆದ ಹದಿನೈದು ದಿನಗಳಿಂದ ಹಿರಿಯರಾದ ಇಟಗಿ ಈರಣ್ಣ ಅವರು ಮುನಿಸಿಕೊಂಡಿದ್ದಾರೆ...ಮನಸ್ಸಿಗೆ ತುಂಬಾ ನೋವಾಗಿದೆಯಂತೆ......ನಾನು ಫೋನ್ ಮಾಡಿದ ತಕ್ಷಣ ಎರಡನೇ ಬಾರಿ ಅದು ಕೂಗುವುದಕ್ಕೂ ಮೊದಲೆ ಅದನ್ನು ಎತ್ತಿಕೊಳ್ಳುವ ಸ್ನೇಹಜೀವಿ, ಅಷ್ಟು ಸುಲಭವಾಗಿ ತಮ್ಮ ಮನಸ್ಸನ್ನು ನೋಯಿಸಿಕೊಳ್ಳುವುದಿಲ್ಲ ಎಂದು ನನಗೆ ಅವರು ಕಳೆದ ಹತ್ತು ವರ್ಷಗಳ ಪರಿಚಯದಲ್ಲಿ ಮನವರಿಕೆಯಾಗಿದೆ..ಇದು ಬಹುಶಃ ಗಂಭೀರವಾದ ವಿಷಯವೇ ಇರಬೇಕು...ನಾನು ಖುದ್ದಾಗಿ ಹೊಸಪೇಟೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬರಲು ನಿರ್ಧರಿಸಿದ್ದೇನೆ...ಅವರ ಧ್ವನಿ, ಹಿತನುಡಿ, ಶಾಯರಿ, ಗಜಲ್ ಕೇಳುತ್ತಿದ್ದರೆ, "ರಾವೀ ನದಿಯ ದಂಡೆಯ ಮೇಲೆ" ನಾಟಕಕ್ಕೆ ಅವರು ಬರೆದ ಈ ಕೆಳಗಿನ ಗಜಲ್ ನೆನಪಿಗೆ ಬರುತ್ತದೆ... ಹಾಗೆ ಓದಿಕೊಳ್ಳಿ ಸುಮ್ಮನೆ...

ನಮ್ಮ ಸುತ್ತಿನ ಸಂಬಂಧಗಳನು, ಸ್ವಲ್ಪ, ಕಿವಿಗೊಟ್ಟು ಕೇಳು!
ಏಕೆ ತುಂಬಿದೆ, ಗದ್ದಲವೂ ಇಲ್ಲಿ? ಸ್ವಲ್ಪ, ಕಿವಿಗೊಟ್ಟು ಕೇಳು!!

ಉದಯಿಸುವ ಸೂರ್ಯನ, ಹಾವ-ಭಾವಗಳ, ಕಣ್ಣಿಟ್ಟು ನೋಡು!
ಮುಳುಗುತಿಹ ಸೂರ್ಯನ-ನಿಂದೆಗಳ, ಸ್ವಲ್ಪ, ಕಿವಿಗೊಟ್ಟು ಕೇಳು!!

ನಮ್ಮೀ ನಿವಾಸದಲ್ಲೇ ಇವೆ, ವಿಶಾಲ-ಋತು-ಸಂವತ್ಸರಾದಿಗಳು!
ನೀರಗುಳ್ಳೆಗಳಂತೆ, ಒಡೆದು ಹೋಗುತಿವೆ, ಸ್ವಲ್ಪ, ಕಿವಿಗೊಟ್ಟು ಕೇಳು!!

ಏಕಿಂತು ಹಾಳು ಬಿದ್ದಿದೆ ಹೇಳು? ಈ ನಮ್ಮ ಪುಣ್ಯ - ಕಾಬಾ?!
ತೆಗೆಯಾ ಕೈಗಳನು ಕೈಯಿಂದ! ಸ್ವಲ್ಪ ಕಿವಿಗೊಟ್ಟು ಕೇಳು!!

"ನಿನ್ನ ಬಿಟ್ಟು ನಾನಿಲ್ಲ" - ಎಂಬ ನುಡಿ ಬರುತಲಿದೆ - ಒಳಗಿಂದಲೇ!
ಯಾರವರು ನುಡಿವವರು ನಮ್ಮೊಳಗೆ? ಸ್ವಲ್ಪ ಕಿವಿಗೊಟ್ಟು ಕೇಳು!!

ನಾವು ಅಡಿಯಿಡುವ ದಾರಿಯಲಿ, ಹೆಜ್ಜೆ-ಹೆಜ್ಜೆಗೂ "ನಾಸಿರ್"!
ಮಿಡಿವ ಹೃದಯವದೇನೋ, ನುಡಿಯುತಿದೆ! ಸ್ವಲ್ಪ ಕಿವಿಗೊಟ್ಟು ಕೇಳು!

Saturday, August 22, 2009

ಪಾರಿವಾಳದ ಆಟ ಛಂದ....


ಕನ್ನಡದ ಕಬೀರರೆಂದೆ ಖ್ಯಾತರಾಗಿರುವ ಶರೀಫರ "ಪಾರಿವಾಳದ ಆಟ ಛಂದ...ಅದ ನೋಡುತ ಕುಂತರೆ ಮನಸಿಗಾನಂದ......" ಈ ಹಾಡನ್ನು ಕೇಳುತ್ತಿದ್ದರೆ ನಿಜಕ್ಕೂ ಮನಸಿಗಾನಂದವಾಗುತ್ತದೆ...ಹಿರಿಯ ಗಾಯಕ ಸಿ.ಅಶ್ವಥ್ ಇದನ್ನು ಬಹಳ ಸೊಗಸಾಗಿ ಸಂಯೋಜಿಸಿದ್ದಾರೆ...ಈಗ ನಾನು ಶರೀಫರು, ಪಾರಿವಾಳ ಮತ್ತು ಅಶ್ವಥ್ ಅವರ ನೆನಪನ್ನು ತೆಗೆಯಲು ಕಾರಣವಿಷ್ಟೇ...ನನ್ನ ಮನೆಯ ಬಾಲ್ಕನಿಯಲ್ಲಿ ನಾನೇ ನಿರ್ಮಿಸಿಕೊಂಡ ಒಂದು ಪುಟ್ಟ ಕೈತೋಟದಲ್ಲಿ ಪಾರಿವಾಳ ದಂಪತಿ ಈಗ ೨೦-೨೫ ದಿನಗಳ ಹಿಂದೆ ತಮ್ಮ ಸಂಸಾರ ಹೂಡಲು ಆರಂಭಿಸಿವೆ...ಬೆಳಗಾಗೆದ್ದು ನೋಡಿದರೆ ಒಂದು ಖಾಲಿ ಹೂವಿನ ಕುಂಡದಲ್ಲಿ ಒಂದು ಪುಟ್ಟ ಮೊಟ್ಟೆ ಕಾಣಿಸಿತು.ಮಾರನೆ ದಿನ ಮತ್ತೊಂದು ಮೊಟ್ಟೆ...ಸುತ್ತ ಸಿಗುವ ಒಣ ಹುಲ್ಲು ಗರಿಕೆ, ಒಣಗಿದ ಎಲೆಗಳನ್ನು ತಂದು ಸಂಸಾರವನ್ನು ಹೂಡುವ ತಯಾರಿ ನಡೆಸಿಯೇ ಬಿಟ್ಟವು ಆ ಪಾರಿವಾಳ ದಂಪತಿ...ಬಹಳ ಜತನದಿಂದ ಮೊಟ್ಟೆಯನ್ನು ನೋಡಿಕೊಳ್ಳ ತೊಡಗಿದವು...


ಮೊದ ಮೊದಲು ನನ್ನನ್ನ ಹಾಗು ನನ್ನ ಮಗ ಸುಮೇಧನನ್ನು ನೋಡಿದರೆ ಪುರ್ರನೆ ಹಾರಿ ಹೋಗುತ್ತಿದ್ದ ಪಾರಿವಾಳಗಳು ಕ್ರಮೇಣ ನಮಗೆ ಈಲಾದವು...ಬರೋಬ್ಬರಿ ಮೊಟ್ಟೆ ಇಟ್ಟ ಹದಿನೆಂಟನೇ ದಿನಕ್ಕೆ ನಾನು ಬೆಳಿಗ್ಗೆ ಎದ್ದು ಗಿಡಗಳಿಗೆ ನೀರುಣಿಸಲು ಬಾಲ್ಕನಿಗೆ ಬಂದಾಗ ಮೊಟ್ಟೆಯೊಡೆದು ಎರಡು ಪುಟ್ಟ ಪಾರಿವಾಳಗಳು ಜಗತ್ತಿಗೆ ಕಣ್ಣು ಬಿಡುತ್ತಿದ್ದವು... ನನ್ನ ಮಗನಿಗೆ ಅವುಗಳ ಮೇಲಿನ ಕಾಳಜಿ ಇನ್ನೂ ಹೆಚ್ಚಾಯಿತು... ಮೊಟ್ಟೆ ಇಟ್ಟಾಗಿನಿಂದ ಹಿಡಿದು ಪ್ರತಿದಿನ ಅವುಗಳ ವಿವಿಧ ಭಂಗಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದೇನೆ....ನಿಜಕ್ಕೂ ಇದೊಂದು ಅದ್ಭುತ ಅನುಭವ...ಹುಟ್ಟಿದ ದಿನವೇ ತೆಗೆದ ಈ ಫೋಟೋ ನನಗೆ ಮತ್ತೆ ಮತ್ತೆ ಗೆಳೆಯ ಪ್ರಮೋದನ ಕವನದ ಸಾಲುಗಳನ್ನು ನೆನಪಿಗೆ ತರುತ್ತಿವೆ...


ಮಗಿವಿನ
ಭಾಷೆ
ತಾಯಿಗೆ ಮಾತ್ರ
ಅರ್ಥವಾಗುತ್ತೆ
ಯಾಕಂದರೆ
ತಾಯಿ-ಮಗುವಿನ
ಭಾಷೆ
ಪ್ರೀತಿಯಾಗಿರುತ್ತದೆ....


Saturday, August 15, 2009

ನಗೆ ಹಂಚಿ ನೋವು ನುಂಗಿದ ಹಿರಿಯಣ್ಣ....


ಅವು ೧೯೮೯ ರ ವಿಜಯದಶಮಿಯ ದಿನ . ಜಿ ಎಚ್ ಪರಿಚಯವಾಗಿ ಕೇವಲ ಒಂದು ವರ್ಷವಾಗಿತ್ತಷ್ಟೆ. ನನ್ನನ್ನು ಹುಬ್ಬಳ್ಳಿಯ ಕೆ .ಎಂ .ಸಿ ಆಸ್ಪತ್ರೆಗೆ ಸಂಜೆ ೫ ಗಂಟೆಗೆ ಬರಲು ಹೇಳಿದ್ದರು. ಕಾರಣ ಕೇಳಿದ್ದಕ್ಕೆ "ಸ್ವಲ್ಪ ಕೆಲಸ ಅದ..... ಬರ್ರಿ" ಎಂದಷ್ಟೇ ಹೇಳಿದ್ದರು. ಸರಿಯಾಗಿ ೫ ಗಂಟೆಗೆ ಅಲ್ಲಿಗೆ ಹೋದಾಗ ಜಿ .ಎಚ್ ತಮ್ಮ ಎಂದಿನ ಶೈಲಿಯಲ್ಲಿ ಬೀಡಿ ಸೇದುತ್ತ ನನಗಾಗಿ ಕಾಯುತ್ತ ನಿಂತಿದ್ದರು . ಇಬ್ಬರು ಸೇರಿ ಅದು...ಇದು ಅಂತ ಮಾತನಾಡುತ್ತಾ ಕೆ .ಎಂ .ಸಿ ಸಭಾಂಗಣದ ಕಡೆಗೆ ಹೆಜ್ಜೆ ಹಾಕಿದೆವು. ನಮಗಾಗಿ ಸುಮಾರು ೨೦ ಜನರು ಕಾಯುತ್ತಿದ್ದರು. ಅವರಿಗೆಲ್ಲ ಜಿ .ಎಚ್ ನನ್ನನ್ನು ಪರಿಚಯ ಮಾಡಿಸಿದ ರೀತಿ ಸ್ವಲ್ಪ ಮುಜುಗರವನ್ನುಂಟು ಮಾಡಿಟ್ಟು. ನಂತರ ಗೊತ್ತಾದ ವಿಷಯವೆಂದರೆ ಕೆ .ಎಂ .ಸಿ ತಂಡಕ್ಕೆ ಜಿ .ಎಚ್ "ಬೇಲಿ ಮತ್ತು ಹೊಲ" ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಮತ್ತು ಅದರ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಲು ಅಲ್ಲಿಗೆ ಕರೆಸಿದ್ದರು ಎಂದು. ನಾಟಕ ವಾಚನ ಮುಗಿದು , ಕಲಾವಿದರೊಂದಿಗೆ ಹರಟೆ ಹೊಡೆದು ಅಲ್ಲಿಂದ ಹೊರಟಾಗ ಸಂಜೆ ೮ ಗಂಟೆಯ ಸಮಯ. ಜಿ .ಎಚ್ ನನ್ನನ್ನು ನೇರವಾಗಿ ತಮ್ಮ ಕಾಯಂ ಜಾಗಕ್ಕೆ ಕರೆದುಕೊಂಡು ಹೋಗಿ , ಶೇಂಗಾ ಹಾಗೂ ರಂ ತರಲು ಆದೇಶಿಸಿದರು. ಮತ್ತೆ ನಮ್ಮ ಮಾತು ನಾಟಕ ತಯಾರಿಯ ಕಡೆಗೆ ವಾಲಿತು. ನಾವು ಹಿಂದೆ ಜಿ .ಎಚ್ ನಿರ್ದೇಶನದಲ್ಲಿ ಪ್ರದರ್ಶಿಸಿದ "ಒಂದು ಬೀದಿಯ ಕಥೆ" ಅದರ ಹಿಂದಿನ ಅನುಭವಗಳು...ಹೀಗೆ ಒಂದರ ಹಿಂದೆ ಒಂದರಂತೆ ಹಳೆಯ ನೆನಪಿನ ಬುತ್ತಿಯನ್ನು ಜಿ .ಎಚ್ ಬಿಚ್ಚುತ್ತಾ ಹೋದಂತೆ, ನಾನು ಒಬ್ಬ ವಿಧೇಯ ವಿದ್ಯಾರ್ಥಿಯಮ್ತೆ ಅದನ್ನು ಕೇಳುತ್ತಾ, ಅವರು ಸಿಡಿಸುತ್ತಿದ್ದ ಜೋಕುಗಳಿಗೆ ಹೊಟ್ಟೆತುಂಬ ನಗುತ್ತ ಕುಳಿತಿದ್ದಾಗ ಜಿ .ಎಚ್ ಇದ್ದಕ್ಕಿದ್ದಂತೆ ಭಾವುಕರಾದರು. ನನಗೆ ಏನು ಮಾತನಾಡಬೇಕೆಂದು ತೋಚುವ ಮೊದಲೇ, ಜಿ .ಎಚ್ ಎದ್ದು ಬಂಡು ನನ್ನ ಪಕ್ಕ ಕುಳಿತು ನನ್ನ ಕೈ ಹಿಡಿದುಕೊಂಡಿದ್ದರು ಮತ್ತು ನಿಜಕ್ಕೂ ಅಳುತ್ತಿದ್ದರು. ಅವರಾಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿವೆ "ಧನಂಜಯ ...ನನ್ನ ತಮ್ಮ ವಸಂತ ಸತ್ತು ಇವತ್ತಿಗೆ ಒಂದು ವರ್ಷ ಆತು ....ನಿಮ್ಮನ್ನ ನೋಡಿದ್ರ ವಸಂತನ್ನ ನೋಡಿಧಂಗ ಆಗ್ತದ...."


ಅಂದಿನಿಂದ ಜಿ .ಎಚ್ ನನ್ನನ್ನು ತಮ್ಮ ಸ್ವಂತ ತಮ್ಮನಂತೆಯೇ ನೋಡಿಕೊಂಡರು. ಮನೆಗೆ ಹೋದಾಗಲೂ ಸಹ ವೈನಿ ನನ್ನನ್ನು ತಮ್ಮ ಸ್ವಂತ ಮೈದುನನಂತೆ ಬರಮಾದಿಕೊಳ್ಳುತ್ತಿದ್ದರು.


ಒಂದು ಅರ್ಥದಲ್ಲಿ ಜಿ .ಎಚ್ ಅವರಿಂದ ನನ್ನ ರಂಗಭೂಮಿಯ ಅರಗೇಟ್ರಮ ಆರಂಭವಾಯಿತು ಎಂದು ಹೇಳಿದರೆ ತಪ್ಪಾಗಲಾರದು . ೧೯೮೨ ರಿಂದ ಶಾಲೆಗಳಲ್ಲಿ ಸಣ್ಣ ಪುಟ್ಟ ನಾಟಕಗಳಲ್ಲಿ ಅಭಿನಯಿಸುತ್ತಾ , ಬೇರೆಯವರ ನಾಟಕಗಳನ್ನು ನೋಡುತ್ತಾ ನನ್ನ ಆಸಕ್ತಿಯನ್ನು ತನಿಸಿಕೊಳ್ಳುತ್ತಿದ್ದ ನನಗೆ ಜಿ .ಎಚ್ ಅವರ ನಾಟಕದಲ್ಲಿ ಅಭಿನಯಿಸಲು ಅನುವು ಮಾಡಿಕೊಟ್ಟಿದ್ದು ಸಮುದಾಯ. ೧೯೮೯ರ ಮೊದಲ ದಿನ ಉತ್ತರ ಪ್ರದೇಶದ ಸಾಯಿಬಾಬಾದ್ ನಗರದಲ್ಲಿ "ಹಲ್ಲಾ ಬೋಲ್" ಎಂಬ ಕಾರ್ಮಿಕರ ಸಮಸ್ಯೆಯನ್ನು ಕುರಿತಾದ ಬೀದಿ ನಾಟಕವನ್ನು ಅಭಿನಯಿಸುತ್ತಿದ್ದಾಗ ಅತ್ಯಂತ ಕ್ರೂರವಾಗಿ ಹಲ್ಲೆಯಾದ ರಂಗಕರ್ಮಿ ಸಫ್ದರ್ ಹಶ್ಮಿ ಸ್ಮರಣಾರ್ಥ ಬೆಂಗಳುರಿನಲ್ಲಿ ೧೯೮೯, ಎಪ್ರಿಲ್ ೧೨ ರಿಂದ ೧೯ ರವರೆಗೆ ಒಂದು ವಾರದ ಬೀದಿನಾಟಕ, ವಿಚಾರಸಂಕಿರಣ , ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಮುದಾಯ ರಾಜ್ಯ ಸಂಗತನೆ ಹಮ್ಮಿ ಕೊಂಡಿತ್ತು . ಇದಕ್ಕಾಗಿ ಜಿ .ಎಚ್ ಧಾರವಾಡ ಸಮುದಾಯಕ್ಕಾಗಿ ಒಂದು ಬೀದಿ ನಾಟಕವನ್ನು ಬರೆದು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಸಮುದಾಯದೊಂದಿಗೆ ಮೊದಲಿನಿಂದ ನನಗೆ ಒಡನಾಟವಿದ್ದ ಕಾರಣ, ಈ ನಾಟಕದಲ್ಲಿ ಅಭಿನಯಿಸಲು ನನಗೆ ಅವಕಾಶ ಸಿಕ್ಕಿತು. ಇದಕ್ಕೂ ಮೊದಲು ಜಿ .ಎಚ್ ಅವರು ಬರೆದ ಅನೇಕ ರೇಡಿಯೋ ನಾಟಕ , ಪ್ರಹಸನಗಳಲ್ಲಿ ನಾನು ಅಭಿನಯಿಸಿದ್ದೆ . ಆದರೆ ಜಿ .ಎಚ್ ಅವರೊಂದಿಗೆ ಕುಡಿ ಕೆಲಸ ಮಾಡುವ ಅವಕಾಶ ದೊರೆತದ್ದು ಇದೆ ಮೊದಲು.


"ಹಲ್ಲಾ ಬೋಲ್" ಎಂಬ ನಾಟಕವನ್ನು ಅಭಿನಯಿಸುತ್ತಿರುವಾಗ ಹಲ್ಲೆ ಗೊಳಗಾಗಿ ಮರಣ ಹೊಂದಿದ ನಂತರ ಸಫ್ದರ್ ಹಶ್ಮಿ ಅವರ ಬಗ್ಗೆ ಹಾಗೂ ಹಲ್ಲಾ ಬೋಲ್ ನಾಟಕದ ಬಗ್ಗೆ ಅನೇಕ ಪತ್ರಿಕೆಗಳು ಪುಟಗಟ್ಟಲೆ ವರದಿಗಳನ್ನು ಬರೆದವು....ಅನೇಕ ಪತ್ರಿಕೆಗಳು ಸಂಪಾದಕೀಯವನ್ನು ಬರೆದವು. ಇದನ್ನು ಆಧರಿಸಿ ಜಿ .ಎಚ್ ಧಾರವಾಡ ಸಮುದಾಯ ತಂಡಕ್ಕೆ "ಒಂದು ಬೀದಿಯ ಕಥೆ" ಎಂಬ ಬೀದಿ ನಾಟಕವನ್ನು ಬರೆದರು. ಅತ್ಯಂತ ಸೂಕ್ಷ್ಮ ಹಾಗೂ ವಿಡಂಬನಾತ್ಮಕ ವಿಷಯಗಳನ್ನು ನವಿರಾದ ಹಾಸ್ಯ ಬಳಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳುವ ಕಲೆ ಜಿ .ಎಚ್ ಅವರಿಗೆ ಸಿದ್ಧಿಸಿತ್ತು. ಎಪ್ರಿಲ್ ೧೩, ೧೯೮೯ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ರಂಗಮಂದಿರದಲ್ಲಿ ನಾವು "ಒಂದು ಬೀದಿಯ ಕಥೆ"ಯನ್ನು ಅಭಿನಯಿಸುತ್ತಿದ್ದಾಗ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಇದಕ್ಕೆ ಒಂದು ಜೀವಂತ ನಿದರ್ಶನ. ಸಫ್ದರ್ ಹಶ್ಮಿ ಅವರ ಮೂಲ ಹಲ್ಲಾ ಬೋಲ್ ನಾಟಕವನ್ನು ನೋಡಿದ ಅನೇಕ ಜನರಿಂದ ಬಂದ ಒಂದೆ ಪ್ರತಿಕ್ರೀಯೆ ಎಂದರೆ "ಜಿ .ಎಚ್ ಅವರ ಈ ನಾಟಕ ಹಿಂದಿಯ ಹಲ್ಲಾ ಬೋಲ್ ನಾಟಕವನ್ನು ನೆನಪಿಗೆ ತರುತ್ತದೆ" ಇದು ಜಿ .ಎಚ್ ಅವರ ಕ್ರಿಯಾಶೀಲತೆಗೆ ಸಾಕ್ಷಿ.


ಜಿ .ಎಚ್ ಅವರು ಬರೆದದ್ದು ಕೆಲವೇ ಕೆಲವು ನಾತಕಗಲಾದರು ಅವು ಗಳಿಸಿದ ಜನಮನ್ನಣೆ ಅಪಾರ. "ಬೇಲಿ ಮತ್ತು ಹೊಲ", "ಬಂಗಾರದ ಕೊಡ", "ಬಾಗಿಲಾ ತೆಗೀರಪ್ಪೋ ಬಾಗಲಾ", "ಸುದ್ದಿ ಸುದ್ದಿ ಸುದ್ದಿ", "ಭಾರತ ಸುಂದರಿ" ಹೀಗೆ ಕೆಲವೇ ನಾಟಕಗಳನ್ನು ಅವರು ಬರೆದರು ನಾಡಿನ ಬಹುತೇಕ ನಿರ್ದೇಶಕರು ಅವುಗಳನ್ನು ನಿರ್ದೇಶಿಸಿದರು . ಮುಖ್ಯವಾಗಿ ಜಿ .ಎಚ್ ಅವರ ನಾಟಕಗಳಲ್ಲಿ ನಾನು ಗುರುತಿಸಿದ ಪ್ರಮುಖ ಅಂಶವೆಂದರೆ ನಮ್ಮ ನಡುವೆ ನಡೆಯುವ ಘಟನೆಗಳಿಗೆ ಹಾಸ್ಯದ ಲೇಪನವನ್ನು ನೀಡಿ ಅವುಗಳನ್ನು ಜನರ ಮುಂದೆ ಬಿಚ್ಚಿಡುತಿದ್ದ ರೀತಿ . ಹೆಚ್ಚಿನ ತಂತ್ರಗಾರಿಕೆಯನ್ನು ಬಳಸದೆ ಅತ್ಯಂತ ಕಡಿಮೆ ಕರ್ಚಿನಲ್ಲಿ ಉತ್ತಮ ನಾಟಕವನ್ನು ಹೇಗೆ ಮಾಡಬಹುದು ಎಂದು ಅವರು ತೋರಿಸಿಕೊಟ್ಟರು. ಇದೆ ಕಾರಣಕ್ಕಾಗಿ ಅವರ ನಾಟಕಗಳು ವಿದ್ಯಾರ್ಥಿ ಸಮುದಾಯದಲ್ಲಿ ಹೆಚ್ಚು ಪ್ರೀತಿಗೆ ಪಾತ್ರವಾಗಿದ್ದವು . ೮೦ ಹಾಗೂ ೯೦ರ ದಶಕದ ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಪ್ರತೀ ವರ್ಷ ಜಿ .ಎಚ್ ಅವರ ನಾಟಕ ಹಾಗೂ ಪ್ರಹಸನಗಳು ಸತತವಾಗಿ ಪ್ರಶಸ್ತಿಯನ್ನು ಗಳಿಸಿದವು. ಅದರಲ್ಲಿ ಭಾರತ ಸುಂದರಿ ನಾಟಕವಂತು ೧೯೯೧, ೯೨ ಹಾಗೂ ೯೩ ಹೀಗೆ ಮೂರು ವರ್ಷ ಸತತವಾಗಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಹ್ಯಾಟ್ರಿಕ್ ಗಳಿಸಿದ್ದು ಈಗ ಇತಿಹಾಸ.


ಒಂದು ಬೀದಿಯ ಕಥೆ ನಾಟಕ ಅನೇಕ ಕಡೆ ಪ್ರದರ್ಶನ ಕಂಡು ಅನೇಕ ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿತು . ಈ ಮಧ್ಯೆ ಜಿ .ಎಚ್ ಕೆಲಸ ಮಾಡುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲವು ತೊಂದರೆಗಳಿಂದ ಅನೇಕ ಕೆಲಸಗಾರರನ್ನು ಕೆಲಸದಿಂದ ಹೊರಹಾಕಲಾಯಿತು. ಅದರಲ್ಲಿ ಜಿ .ಎಚ್ ಕೂಡ ಒಬ್ಬರು. ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದರು ಜಿ .ಎಚ್ ಆಗ. ಮನೆಯಲ್ಲಿ ಚಿಕ್ಕ ಮಕ್ಕಳು, ಓದುತ್ತಿದ್ದ ತಮ್ಮ ಹೀಗೆ ಹತ್ತು ಹಲವು ಸಮಸ್ಯೆಗಲಿದ್ದರು , ಜಿ .ಎಚ್ ಅವರಲ್ಲಿ ಹಾಸ್ಯಕ್ಕೆ ಬಡತನವಿರಲಿಲ್ಲ. ಮನೆಯಲ್ಲಿ ತಮ್ಮ ತಂದೆಯವರನ್ನು ಇದೆ ಸಮಯದಲ್ಲಿ ಕಳೆದುಕೊಂಡರು , ಅನೇಕ ಸಾವು ನೋವುಗಳು ಮನೆಯಲ್ಲಿ ಬಂದರು ನಗುವೇ ನನ್ನ ಬದುಕು ಎನ್ನುವಂತೆ ಬದುಕಿದರು.


ನಂತರ ೧೯೯೩ ರಲ್ಲಿ ನಾನು ಬಿ .ಎಸ್ಸಿ ಮುಗಿಸಿ ರಾಷ್ಟೀಯ ನಾಟಕ ಶಾಲೆಯನ್ನು ಸೇರಬೇಕು , ರಂಗಭೂಮಿಯಲ್ಲಿ ಹೆಚ್ಚಿನ ಅಧ್ಯಯನ ಮಾಡಬೇಕೆಂಬ ಆಸೆಯಿಂದ ಜಿ .ಎಚ್ ಹತ್ತಿರ ಹೋದೆ. ಅವರಲ್ಲಿ ನಾನು ಏನ್ .ಎಸ್ .ಡಿ ಸೇರುವ ಆಸೆಯನ್ನು ವ್ಯಕ್ತಪಡಿಸಿದಾಗ "ಧನಂಜಯ ಸುಮ್ಮನ ನಾಟಕಾ ...ಪಾತಕಾ ಅಂತ ತಲೀಗೆ ಹಚ್ಚಿಕೊಂಡು ನಿಮ್ಮ ಭವಿಷ್ಯ ಹಾಲು ಮಾಡ್ಕ ಬ್ಯಾಡ್ರಿ ....ಏನಾರ ಮುಂದ ಓದ್ರಿ ...ಇಲ್ಲಾ ಅಂದ್ರ ಏನಾರ ಕೆಲಸಾ ಮಾಡ್ರಿ" ಎಂದು ಬಿಟ್ಟರು ....ಮೊದಲ ನಿರಾಶೆ ನನಗೆ ಕಾದಿತ್ತು. ಮುಂದೆ ಕೆಲವು ತಾಂತ್ರಿಕ ಕಾರಣಗಳಿಂದ ನಾನು ರಾಷ್ಟೀಯ ನಾಟಕ ಶಾಲೆಯನ್ನು ಸೇರಲು ಸಾಧ್ಯವಾಗಲಿಲ್ಲ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡಾಗ ಅದಕ್ಕೂ ಸಹ ಜಿ .ಎಚ್ "ಧನಂಜಯ ಪತ್ರಿಕೋದ್ಯಮ ಹೊಟ್ಟಿ ತುಂಬ್ಸುದುಲ್ಲ ...ಬ್ಯಾರೆ ಏನಾರ ಮಾಡಬೇಕಿತ್ತು ನೀವು" ಎಂದರು. ಅಂದಿನ ದಿನಗಳೇ ಹಾಗಿದ್ದವು . ಜಿ .ಎಚ್ ನಮಗೆ ಹೇಳುತ್ತಿದ್ದರು. ನಾವು ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರೆ ನಮ್ಮೆದುರಿಗಿರುವವರು ಅದು ಸರಿ ...ಆದ್ರ ಹೊತ್ತಿಗೆ ಏನು ಮಾಡ್ತೀರಿ ಎಂದು ಕೇಳುತ್ತಿದ್ದರು . ಹೀಗಾಗಿ ಕೆಲವೊಂದು ಬಾರಿ ಜಿ .ಎಚ್ ಅವರಿಗೆ ಪತ್ರಿಕೋದ್ಯಮದ ಬಗ್ಗೆಯೂ ಕೂಡ ಆಸಕ್ತಿ ಕಳೆದು ಕೊಂಡಿದ್ದರು. ಆದರೆ ಬರವಣಿಗೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.


ಮುಂದೆ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಸಿಕ್ಕಿತು . ನಾಟಕದ ವಿಷಯದಲ್ಲಿ ಜಿ .ಎಚ್ ಅವರೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ನಂತರ ಈಗ ಪತ್ರಿಕೋದ್ಯಮದಲ್ಲಿ ಅವರ ಸಹೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ಆಗ ನಾನು ಧಾರವಾಡದಲ್ಲಿ ಒಂದು ಸಣ್ಣ ರೂಂ ಮಾಡಿಕೊಂಡಿದ್ದೆ. ನನ್ನ ತಂದೆಯವರಿಗೆ ರಾಣೆಬೆನ್ನೂರಿಗೆ ವರ್ಗವಾಗಿದ್ದರಿಂದ ನನ್ನ ತಂದೆ - ತಾಯಿ ರಾಣೆಬೆನ್ನೂರಿನಲ್ಲಿ ಇರುತ್ತಿದ್ದರು. ೧೯೯೪ ಡಿಸೆಂಬರ್ ೩೧ ರಂದು ನಾನು ಸಂಯುಕ್ತ ಕರ್ನಾಟಕದಲ್ಲಿ ನನ್ನ ಕಾಯಕವನ್ನು ಆರಂಭಿಸಿದೆ. ಬೆಳಿಗ್ಗೆ ೧೧ ಗಂಟೆಗೆ ಸಂಯುಕ್ತ ಕರ್ಣಾಟಕದ ಕಚೇರಿಗೆ ಹೋದಾಗ ಅಂದಿನ ಸಂಪಾದಕರಾದ ಏನ್ .ವಿ .ಜೋಶಿ ಅವರು ನನ್ನನ್ನು ಉಳಿದ ಸಹೋದ್ಯೋಗಿಗಳಿಗೆ ಪರಿಚಯ ಮಾಡಿಸುತ್ತಿದ್ದರು. ಜಿ .ಎಚ್ ಅವರನ್ನು ಪರಿಚಯ ಮಾಡಿಸುವಾಗ, ಏನ್ .ವಿ .ಜೋಷಿ ಅವರನ್ನು ತಡೆದು ಜಿ .ಎಚ್ ತಿರುಗಿ ನನ್ನನ್ನೇ ಅವರಿಗೆ ಪರಿಚಯ ಮಾಡಿಸಿದ ರೀತಿಯಿಂದ ಕಛೇರಿಯ ಎಲ್ಲಾ ಸಿಬ್ಬಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಇಂದಿಗೂ ನನಗೆ ನೆನಪಿದೆ. ಮಧ್ಯಾಹ್ನ ಉಟಕ್ಕೆ ಕರೆದುಕೊಂಡು ಹೋದಾಗ ತಾವು ಮನೆಯಿಂದ ತಂದ ಊಟದಲ್ಲಿ ನನಗು ಪಾಲು ಕೊಟ್ಟು ತಿನ್ನುತ್ತಿದ್ದುದು, ಕೆಲಸದ ಮಧ್ಯೆ ಚಹಾ ಕುಡಿಯಲು ನನ್ನನ್ನು ಮರೆಯದೆ ಕರೆದುಕೊಂಡು ಹೋಗುತ್ತಿದ್ದುದು ಗತಿಸಿ ಹೋದ ಸುಂದರ ನೆನಪುಗಳು.


ಹೀಗೆ ಸಂಯುಕ್ತ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ನಾನು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದೆ. ನನಗೆ ಕೆಲಸವೂ ಅತ್ಯಂತ ಅಗತ್ಯವಾಗಿತ್ತು ಅಂತೆಯೇ ವಿದ್ಯಾಭ್ಯಾಸವು ಕೂಡ. ಸಂಯುಕ್ತ ಕರ್ನಾಟಕದಲ್ಲಿ ನಾನು ಮೊದಲನೇ ಅಥವಾ ಎರಡನೇ ಪಾಳಿಯಲ್ಲಿ ಕೆಲಸ ಮಾಡಿದರೆ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಈ ಸಮಸ್ಯೆಯನ್ನು ಜಿ .ಎಚ್ ಹಾಗೂ ಗುರುರಾಜ ಜೋಶಿ ಅವರಲ್ಲಿ ತೋಡಿಕೊಂಡಾಗ ಅವರು ನನಗೆ ರಾತ್ರಿ ಪಾಳಿ ಕೆಲಸ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಯುತ್ತದೆ ಎಂದು, ತಾವೇ ಸ್ವತಃ ಸಂಪಾದಕರ ಹತ್ತಿರ ಈ ಕುರಿತು ಮಾತನಾಡುವುದಾಗಿ ಹೇಳಿದರು. ಅದರಂತೆ ನನಗೆ ರಾತ್ರಿ ಪಾಳಿ ಕೆಲಸ ಮಾಡುವ ಅವಕಾಶ ದೊರೆಯಿತು, ಅಂತೆಯೇ ಬೆಳಿಗ್ಗೆ ತರಗತಿಗಳನ್ನು ಹಾಜರಾಗಲು ಸಾಧ್ಯವಾಯಿತು. ನಾನು ಮೊತ್ತ ಮೊದಲದಿನ ರಾತ್ರಿ ಪಾಳಿ ಮುಗಿಸಿಕೊಂಡು ಎರಡನೇ ದಿನದ ಕೆಲಸಕ್ಕೆ ಬಂದಾಗ ಜಿ .ಎಚ್ ತಮ್ಮ ಎರಡನೇ ಪಾಳಿ ಮುಗಿಸಿಕೊಂಡು ಹೊರಡಲು ತಯಾರಾಗುತ್ತಿದ್ದರು. ನನ್ನನ್ನು ನೋಡಿದವರೇ "ಧನಂಜಯ ಹೆಂಗಿತ್ತ್ ನಿನ್ನೆ ಫಸ್ಟ ನೈಟ್?" ಎಂದಾಗ ಇಡೀ ಕಚೇರಿಯೇ ನಗುವಿನ ಕಡಲಲ್ಲಿ ತೇಲಿತ್ತು. ಇದು ಜಿ .ಎಚ್ ಅವರ ಹಾಸ್ಯ ಮನೋಭಾವಕ್ಕೆ ಒಂದು ಸಾಕ್ಷಿ.


ಮುಂದೆ ನಾನು ಸಂಯುಕ್ತ ಕರ್ನಾಟಕ ಬಿಟ್ಟು , ಪ್ರಜಾವಾಣಿ ಸೇರಿಕೊಂಡೆ . ಅಲ್ಲಿ ಕೆಲ ಕಾಲ ಕೆಲಸ ಮಾಡಿ ಪತ್ರಿಕೋದ್ಯಮ ತೊರೆದು ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಧುಮುಕಿದೆ. ಜಿ .ಎಚ್ . ತುಂಬಾ ಕುಷಿ ಪಟ್ಟರು . ಬರ ಬರುತ್ತಾ ಅವರ ಆರೋಗ್ಯವು ಕ್ಷೀಣಿಸುತ್ತಿತ್ತು . ಅವರ ಆರೋಗ್ಯ ಮೊದಲಿನಂತೆ ಉಳಿದಿಲ್ಲ ಎಂದು ಅವರ ತಮ್ಮ ನರಸಿಂಹ ಆಗಾಗ ಹೇಳುತ್ತಲೇ ಇದ್ದ. ನಾನು ಧಾರವಾಡಕ್ಕೆ ಹೋದಾಗೊಮ್ಮೆ ಅವರನ್ನು ಭೇಟಿಯಾಗಿ ಬರುತ್ತಿದ್ದೆ. ಅವರ ಆರೋಗ್ಯ ಕ್ಷೀನಿಸುತ್ತಿದ್ದುದು ನನ್ನ ಗಮನಕ್ಕೆ ಬಂದಿದ್ದರು ಅವರಲ್ಲಿ ಹಾಸ್ಯ ಪ್ರಜ್ಞೆ ಹಾಗೆಯೇ ಉಳಿದಿತ್ತು. ಬದುಕನ್ನು ಅಷ್ಟೇ ಗಾಢವಾಗಿ ಅವರು ಪ್ರೀತಿಸುತ್ತಿದ್ದರು. ಅದೊಂದು ದಿನ ನಾನು ಮತ್ತು ಯಶವಂತ ನನ್ನ ಬೆಂಗಳೂರಿನ ಮನೆಯಲ್ಲಿ ಕುಳಿತು ಉಭಯ ಕುಶಲೋಪರಿ ಮಾತನಾಡುತ್ತಿದ್ದಾಗ ಒಂದು ಆಘಾತಕಾರಿ ವಿಷಯವನ್ನು ಹೇಳಿದ "ಧನ್ಯಾ ಜಿ .ಎಚ್ ಕ್ಯಾನ್ಸರಿನ ಲಾಸ್ಟ್ ಸ್ಟೇಜಿನ್ಯಾಗಿದ್ದಾರ ....ಆಪರೆಶನ್ನಿಗಂತ ಬೆಂಗಳೂರಿಗೆ ಬರ್ಲಿಕತ್ಯಾರ..." ಈ ವಿಷಯವನ್ನು ಕೇಳಲು ನಾನು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ . ತೀರ ಖಿನ್ನನಾದೆ....


ಮುಂದೆ ಜಿ .ಎಚ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದರು . ನರಸಿಂಹನನ್ನು ಎರಡು ದಿನಗಳಿಗೊಮ್ಮೆ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದೆ . ಸ್ವಲ್ಪ ಮಟ್ಟಿನ ಗುಣಮುಕರಾದಮೇಲೆ ಜಿ .ಎಚ್ ತಿರುಗಿ ಹುಬ್ಬಳ್ಳಿಗೆ ಬಂದರು . ಅವರು ತೀರಿಕೊಳ್ಳುವುದಕ್ಕೆ ಎರಡು ತಿಂಗಳ ಮುಂಚೆ ನಾನು ನನ್ನ ಕಾರನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗಿದ್ದೆ . ಜಿ .ಎಚ್ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ ನನ್ನನ್ನು ಕಂಡು ಅವರಿಗಾದ ಆನಂದ ಅಷ್ಟಿಷ್ಟಲ್ಲ. ಅವರ ದೇಹ ಸ್ವಲ್ಪ ಕ್ಷೀಣಿಸಿತ್ತು ... ಅದರ ಹೊರತಾಗಿ ಅವರಲ್ಲಿ ಮೊದಲಿದ್ದ ಹಾಸ್ಯದ ಹೊನಲಿಗೆ ಯಾವುದೇ ಬರ ಬಂದಿರಲಿಲ್ಲ . ಸುಮಾರು ಮೂರು ಗಂಟೆಗಳ ಕಾಲ ನಮ್ಮನ್ನು ಬಿಟ್ಟು ಬಿಡದೆ ನಗಿಸಿದರು . ನನ್ನ ಕಾರನ್ನು ಪದೇ ಪದೇ ಮುಟ್ಟಿನೋಡಿ ಬಹಳ ಆನಂದ ಪಟ್ಟರು . ಆದರೆ ಇದು ನನ್ನ ಹಾಗೂ ಜಿ .ಎಚ್ ಅವರ ಕೊನೆಯ ಭೇಟಿಯಾಗಲಿದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.


ಅವರು ತೀರಿಕೊಂಡ ದಿನ ನಾನು ಮಿರಜನಲ್ಲಿ ನನ್ನ ಸೋದರನ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದೆ . ನರಸಿಂಹ ನನ್ನನ್ನು ಸಂಪರ್ಕಿಸಲು ಬಹಳ ಪ್ರಯತ್ನಿಸಿದ ...ಆದರೆ ಸಾಧ್ಯವಾಗಲಿಲ್ಲಿ ...ಜಿ .ಎಚ್ ನಮ್ಮನ್ನು ಹಾಸ್ಯದ ಕಡಲಲ್ಲಿ ತೇಲಿಸಿ ...ತಾವು ಮಾತ್ರ ತಿರುಗಿ ಬರದ ದಾರಿಯಲ್ಲಿ ಸಾಗಿದ್ದರು ....


ಇಂದಿಗೂ ಕೂಡ ವಿದ್ಯಾರ್ಥಿ ಸಮುದಾಯದಲ್ಲಿ ಜಿ .ಎಚ್ ಅವರ ನಾಟಕಗಳಿಗೆ ವಿಶೇಷವಾದ ಸ್ಥಾನವಿದೆ . ಹುಬ್ಬಳ್ಳಿ -ಧಾರವಾಡದಲ್ಲಿ ೯೦ರ ದಶಕದಲ್ಲಿದ್ದ ರಂಗ ಚಟುವಟಿಕೆಯ ಹುರುಪು ಈಗ ಉಳಿದಿಲ್ಲ . ಈ ಕುರಿತು ನಾನು ನನ್ನ ಅನೇಕ ರಂಗ ಸಂಗಾತಿಗಲೋಮ್ದಿಗೆ ಚರ್ಚಿಸಿದ್ದೇನೆ ಕೂಡ . ನಾನು , ನರಸಿಂಹ , ಜಗುಚಂದ್ರ , ರವಿ , ಯಶವಂತ ಮುಂತಾದವರೆಲ್ಲ ಸೇರಿ ಜಿ .ಎಚ್ ಹೆಸರಿನಲ್ಲಿ ಪ್ರತಿ ವರ್ಷ ವಿಶಿಷ್ಟವಾದ ರೀತಿಯಲ್ಲಿ ನಾಟಕೋತ್ಸವವನ್ನು ನಡೆಸಬೇಕೆಂಬ ಮಹದಾಸೆ ...ತನ್ಮೂಲಕ ಧಾರವಾಡದಲ್ಲಿ ಮತ್ತೆ ಹಳೆಯ ರಂಗ ವೈಭವ ಮರುಕಳಿಸಲು ಸಾಧ್ಯವಾದೀತೆಂಬ ಒಂದು ಸಣ್ಣ ಕನಸಷ್ಟೇ.....

Wednesday, August 12, 2009

ನೀವು ಭಾಳ ಚಂದ ಹಾಡ್ತೀರಂತ??


ನಾನು ನಿನಗೆ ಹಾಗೇಕೆ ಕರೆಯುತ್ತಿದ್ದೆ?? ಗೊತ್ತಿಲ್ಲ...ಅದು ಪ್ರೀತಿನಾ....ಪ್ರೇಮಾನಾ...ಸ್ನೇಹಾನಾ...ಇದನ್ನ ನಾನು ನಿನ್ನ ಹತ್ತಿಯ ಸಾವಿರ ಬಾರಿ ಕೇಳಿದ್ದೇನೆ...ನೀನು ಮತ್ತೆ ಮತ್ತೆ ಅದೇ ಉತ್ತರ ಕೊಟ್ಟಿದ್ದೀಯ..ನಿನ್ನ ಮೌನ ನನ್ನನ್ನು ಬಹಳ ಕಾಡಿಸಿದೆ...ಆ ಮೌನವನ್ನೇ ನಾನು ಸಮ್ಮತಿ ಲಕ್ಷಣಂ ಅಂತ ತಿಳಿಯುವ ಹೊತ್ತಿಗೆ ನಿನ್ನ ಬಾಯಿಂದ ಮತ್ತೆ ಥಟ್ಟನೆ ಮಾತೊಂದು ಉದುರುತ್ತಿತ್ತು...ಹೀಗಾಗಿ ಆ ಸಮ್ಮತಿಯು ಸಹ ಅಸಮ್ಮತಿಯ ದಾರಿ ಹಿಡಿಯುತ್ತಿತ್ತು... ಮತ್ತೆ ನನ್ನ ಮನಸ್ಸಿನ ಹುಚ್ಚು ಕುದುರೆ ಲಂಗು ಲಗಾಮಿಲ್ಲದೆ ನಿನ್ನ ಹಿಂದೆ ಬೀಳುತ್ತಿತ್ತು...ಮತ್ತೆ ನಿನಗೆ ಮೌನವೇ ಆಸರೆ ಆಗ...


ಅದೇಕೆ ಹೀಗಾಗುತ್ತಿತ್ತೋ ಗೊತ್ತಿಲ್ಲ...ನನ್ನು ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್ ಆಡಲು ಇಳಿದಾಗ ನೀನು ನಿನ್ನ ಗೆಳತಿಯರೊಂದಿಗೆ ಬಂದು ನನ್ನ ಕಡೆ ಕೈ ಬೀಸುತ್ತಿದ್ದೆ...ನನಗೂ ಖುಷಿಯಾಗಿ ನಿನ್ನತ್ತ ನೋಡುತ್ತಾ...ಜೋರಾಗಿ ಬ್ಯಾಟ್ ಬೀಸುವ ಬದಲು ಔಟಾಗಿ ಬಂದು ನಿನ್ನ ಪಕ್ಕ ಕುಳಿತುಬಿಡುತ್ತಿದ್ದೆ... ನೀನು ಮಾತನಾಡಲೆಂದು ಹಲಬುತ್ತಿದ್ದೆ...ನಾನು ಮೈದಾನದಲ್ಲಿದ್ದಾಗ ನಿನ್ನಲ್ಲಿದ್ದ ಸಂಭ್ರಮ ಎಲ್ಲಿ ಹೋಯಿತು ಎಂದು ನಿನ್ನನ್ನು ಪ್ರಶ್ನಾರ್ಥಕವಾಗಿ ನೋಡುವ ಹೊತ್ತಿಗೆ ನೀನು ಮತ್ತೆ ಮೌನಕ್ಕೆ ಶರಣಾಗಿ ಬಿಡುತ್ತಿದ್ದೆ....ನಾನು ಮತ್ತೆ ಹತಾಶನಾಗಿ...."ಮತ್ತದೇ ಸಂಜೆ.... ಅದೇ ಮೌನ..ಅದೇ ಏಕಾಂತ..." ಹಾಡಿನ ಮೊರೆ ಹೋಗುತ್ತಿದ್ದೆ...


ನಿನ್ನ ಆ ಬೊಗಸೆ ಕಣ್ಣುಗಳನ್ನು ನೋಡುತ್ತಿದ್ದಂತೆಯೇ...ಅಲ್ಲಿ ನನಗೆ ಭರವಸೆಗಳು ಕಾಣುತ್ತಿದ್ದವು...ಆಸೆಗಳಲ್ಲಿದ್ದವು...ಕನಸುಗಳಿದ್ದವು...ಅಷ್ಟೆ ಅಲ್ಲ...ಆ ಭರವಸೆ..ಆಸೆ..ಕನಸುಗಳಲ್ಲಿ ನನ್ನನ್ನು ನಾನು ಕಾಣ ಬಯಸಿದ್ದೆ...ಅದರಲ್ಲಿ ತಪ್ಪಿತ್ತೆ? ಗೊತ್ತಿಲ್ಲ...ನಿನ್ನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗ ನನಗೆ ಬೇರೆ ಏನು ಕಾನಿಸುತ್ತಿದ್ದಿಲ್ಲ..ನಿನ್ನ ಕಣ್ಣುಗಳ ಹೊರತಾಗಿ...ನನ್ನ ಕ್ಯಾಮರಾದ ಲೆನ್ಸ್ ತುಂಬ ನಿನ್ನ ಕಣ್ಣುಗಳನ್ನೇ ತುಂಬಿಕೊಳ್ಳುವ ಆಸೆ ನನಗಾಗ...ಅವುಗಳಲ್ಲಿ ನಗುವಿತ್ತು...ಸಿಟ್ಟು..ಕೋಪ..ತಾಪ..ಎಲ್ಲವಿತ್ತು...ಒಬ್ಬ ಅದ್ಭುತ ನಟಿಗಿರಬೇಕಾದ ಎಲ್ಲ ಲಕ್ಷಣಗಳು ಸಹ ನಿನ್ನ ಕಣ್ಣಿಗಿದ್ದವು... ಆದರೆ ಅದಾವುದು ಸಹ ನನಗೆ ಸಿಗದೇ ಹೋಯಿತು...."ಸಾಗುತ ದೂರ ದೂರ...ಮೇಲೇರುವ ಬಾರಾ ಬಾರಾ..ನಾವಗುವ ಚಂದಿರ ತಾರ..."ಎನ್ನುವಂತೆ ನಾವು ದೂರ ದೂರವೆ ಉಳಿದು ಬಿಟ್ಟೆವು...


ಇದು ಪ್ರೀತಿನಾ...ಪ್ರೇಮಾನಾ..ಸ್ನೇಹಾನಾ...ಇದೇನಿದು ಹೊಸ ಚಲನ ಚಿತ್ರಗಳಿಗೆ ಸಾಲು ಸಾಲಾಗಿ ಹೆಸರುಗಳನ್ನೂ ಸಜೆಸ್ಟ್ ಮಾಡುತ್ತಿದ್ದೀಯ ಎನ್ನಬೇಡ...ಏಕೋ ಗೊತ್ತಿಲ್ಲ...ಸುಮಾರು ಹದಿನಾರು ವರ್ಷಗಳ ನಂತರ ಮತ್ತೆ ಇಂದು ಬೆಳಿಗ್ಗೆಯಿಂದ ನೀನು ನನ್ನೊಂದಿಗಾಡಿದ ಮೊದಲ ಮಾತು ತಲೆ ಕೆಡಿಸುತ್ತಿದೆ...

"ನೀವು ಭಾಳ ಚಂದ ಹಾಡ್ತೀರಂತ...."


ಬಿಡುವು ಸಿಕ್ಕರೆ ಓದು...




Saturday, August 8, 2009

ಮಗುವಿನ ಪ್ರೀತಿ...ಆಟ...ಚಿನ್ನಾಟ...


ಗೆಳೆಯ ಪ್ರಮೋದ್ ನಿನ್ನೆ ಮತ್ತೆ ಫೋನಾಯಿಸಿ, ಕೆಲವು ಅಪರೂಪದ ಪದ್ಯಗಳನ್ನು ಓದಿದ....ಇಗೋ ಇಲ್ಲಿವೆ...


೧. ಮಗುವಿನೊಡಲಲ್ಲಿ
ಮಮತೆ ಮಾತಿನ
ಒರತೆಗಳಿವೆ
ದೊಡ್ದವರೂಡಲಲ್ಲಿ
ಕಲಹದ ಕಡಲುಗಳೇ
ತುಂಬಿವೆ...


೨. ಮಗುವಿನ
ಭಾಷೆ
ತಾಯಿಗೆ ಮಾತ್ರ
ತಿಳಿಯುತ್ತೆ
ಯಾಕೆಂದರೆ
ತಾಯಿ ಮಗುವಿನ
ಭಾಷೆ
ಪ್ರೀತಿಯಾಗಿರುತ್ತೆ..


೩. ಮಗು
ಮುತ್ತು ಕೊಟ್ಟವರೊಂದಿಗೆ
ಪ್ರೀತಿಯಿಂದ
ಚಿನ್ನಾಟವಾಡುತ್ತದೆ
ನಾವೋ
ಕೆಲವರ ಬದುಕಿನೊಂದಿಗೆ
ಚಲ್ಲಾಟವಾಡುತ್ತೇವೆ...


೪. ಮಗು
ಆಟ ಮಾತ್ರ ಆಡುತ್ತದೆ
ನಾವು
ನಾಟಕವನ್ನೂ ಆಡುತ್ತೇವೆ...


ನನ್ನ ಬ್ಲಾಗ್ನಲ್ಲಿ ಈ ಪದ್ಯಗಳನ್ನು ಹಾಕಿರುವುದಾಗಿ ಪ್ರಮೋದನಿಗೆ ತಿಳಿಸಿದಾಗ..ಅವನು ಒಂದು ಚುಟುಕಾದ ಸಂದೇಶವನ್ನು ತನ್ನ ಮೊಬೈಲ್ ಮೂಲಕ ಕಳುಹಿಸಿದ....


"ಗೆಳೆಯ ನಿನ್ನ ಪ್ರೀತಿಗೆ ಅಭಿನಂದನೆ...ನಿನ್ನ ಒಡನಾಟ ಹೀಗೆ ಇರಲಿ..ಕವಿತೆ ಕಥೆಗಳ ಬರೆಸಲಿ..."


ನಾನದಕ್ಕೆ ತಕ್ಷಣ ಪ್ರತಿಕ್ರಿಯಿಸಿದೆ...


"ಅದಕ್ಕೆ ಇರಬೇಕು ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದದ್ದು...ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ...." ಎಂದು...


Friday, August 7, 2009

ಮಗುವೆ ನಿನ್ನ ಹೂನಗೆ.......




ನನ್ನ ಬಹಳ ಅಪರೂಪದ ಗೆಳೆಯ ಪ್ರಮೋದ್ ತುರ್ವಿಹಾಳ್ ನೆನ್ನೆ ಹೊಸಪೇಟೆಯಲ್ಲಿ ಸಿಕ್ಕಿದ್ದ...ಸಂಜೆ ೪ ಗಂಟೆಗೆ ಆರಂಭವಾದ ನಮ್ಮ ಹರಟೆ ಒತ್ತಾಯಪೂರ್ವಕವಾಗಿ ಮುಗಿಸಿದಾಗ ಬರೋಬ್ಬರಿ ರಾತ್ರಿ ೧೦ ಗಂಟೆ..ಯಾಕಾದರೂ ಹತ್ತು ಗಂಟೆ ಆಯಿತೋ ಎಂದು ಪರಿತಪಿಸುತ್ತಿದ್ದೆ..ಆದರೆ ಬೇರೆ ವಿಧಿಯಿರಲಿಲ್ಲ...ನಾನು ಬೆಂಗಳೂರಿಗೆ ಬರಲೇ ಬೇಕಾಗಿತ್ತು.....ಮತ್ತು ನನ್ನ ಬಸ್ ೧೦.೧೫ ಕ್ಕೆ ಹೊರದುವುದಿತ್ತು...ಹೀಗಾಗಿ ಅನಿವಾರ್ಯವಾಗಿ ನಮ್ಮ ಹರಟೆಯನ್ನು ಮುಗಿಸಲೇ ಬೇಕಾಯ್ತು...

ಹಿಂದೆ ಪ್ರಮೋದ್ ಕಾಗೆಗಳ ಹಿಂದೆ ಬಿದ್ದು..ಅವುಗಳ ಕುರಿತು ಆಳವಾದ ಅಧ್ಯಯನ ನಡೆಸಿ....ಅವುಗಳ ಮೇಲೆ ಸಾಲು ಸಾಲಾಗಿ ಕವನಗಳನ್ನು ಬರೆದ...ಗುಲ್ಬರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕಾಗೆಯ ಕುರಿತಾಗಿ ಒಂದು ಕವನ ವನ್ನು ಓದಿ ಜಿ.ಎಸ.ಶಿವರುದ್ರಪ್ಪ, ಎಚ್ ಎಸ ರಾಘವೇಂದ್ರ ಮುಂತಾದ ಹಿರಿಯ ಕವಿಗಳನ್ನು ಬೆಚ್ಚಿ ಬೀಳಿಸಿದ ಪುಣ್ಯಾತ್ಮ ಈತ...

ಈಗ ಮಕ್ಕಳ ಕುರಿತಾಗಿ ಅಧ್ಯಯನ ನಡೆಸಿದ್ದಾನೆ ಮತ್ತು ಮಕ್ಕಳ ಮನಸ್ಸು, ಭಾವನೆಗಳ ಕುರಿತಾಗಿ ಅವನ ಕವನ ರಚನೆ ಸಹ ನಡೆದಿದೆ...ಅವುಗಳಲ್ಲಿ ಕೆಲವನ್ನು ನೆನ್ನೆ ನನ್ನ ಮುಂದೆ ಓದಿದಾಗ ನಾನು ನಿಜಕ್ಕೂ ವಿಸ್ಮಯ ಗೊಂಡೆ..ಅವುಗಳಲ್ಲಿ ಒಂದೆರಡನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವೆ...

೧. ಮಗುವಿನಂಬೆಗಾಲಿಗೆ
ವಿಶ್ವ
ಯಾವ ಲೆಕ್ಕ...

೨. ಮಗುವ ನಗುವಿಂದ
ಬೆಳಕು
ಕಡ ತೆಗೆದುಕೊಂಡಿದೆ...

೩. ಮಗುವಾಗಿಯೇ
ದೊಡ್ದವರಾದವರ ನಡುವೆ
ಮಗು ಮನುಷ್ಯರನ್ನು ಹುಡುಕುತ್ತಿದೆ....


ಎಂಥ ಅದ್ಭುತ ಕಲ್ಪನೆಯಿದೆ ಇಲ್ಲಿ...ಮಗುವಿನ ನಗುವಿಗೆ.... ಕೋಪಕ್ಕೆ...ತಾಪಕ್ಕೆ...ಎಲ್ಲದಕ್ಕೂ ಒಂದೊಂದು ಅರ್ಥವನ್ನು ಕಲ್ಪಿಸುವ ಪ್ರಯತ್ನ ನಡೆದಿದೆ...ಅವನ ಇನ್ನೊಂದು ಪದ್ಯದಲ್ಲಿ ಒಂದು ಸಾಲನ್ನು ಬಳಸುತ್ತಾನೆ..."ಮಗುವಿನ ಉಸುರಿನ ಶಾಪದಿಂದ..." ಎಂದು...ಅನೇಕ ಜನ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ....ಮಗು ಎಂದಾದರೂ ಶಾಪ ಹಾಕುವುದೇ ಎಂದು...ನಮ್ಮ ಚರ್ಚೆಗಳು ಹೀಗೆಯೇ ಸಾಗುತ್ತಿರುವಾಗ ನನಗೆ ಥಟ್ಟನೆ ನೆನಪಾಗಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಗೆಜ್ಜೆ ಪೂಜೆ" ಚಿತ್ರದ

"ಮಗುವೆ ನಿನ್ನ ಹೂನಗೆ
ಒಡವೆ ನನ್ನ ಬಾಳಿಗೆ
ತುಂಬು ನನ್ನ ಜೋಳಿಗೆ..."

ಅದಕ್ಕೆ ಇರಬೇಕು ನಾವೆಲ್ಲಾ ಯಾವತ್ತು ಮಗುವಾಗಿಯೇ ಇರಲು ಬಯಸುವುದು.....

Wednesday, August 5, 2009

ಕನಸು ಕುತೂಹಲಗಳ ಮಧ್ಯೆ....



ಈ ಕನಸುಗಳ ಬಗ್ಗೆ ನನಗೆ ವಿಚಿತ್ರ ಕುತೂಹಲ...ಅವು ಹೇಗೆ ಬೀಳುತ್ತವೆ, ಏಕೆ ಬೀಳುತ್ತವೆ...ಮುಂತಾದವುಗಳ ಬಗ್ಗೆ ನಾನು ಆಗಾಗ ಚಿಂತಿಸುತ್ತಿರುತ್ತೇನೆ...



ನನ್ನ ಗೆಳೆಯನೊಬ್ಬನಿದ್ದಾನೆ... ಶಾಂತರಾಜು ಪೋಲಿಸ್ ಪಾಟಿಲ್ ಎಂದು ಜಿಂದಾಲ್ ನಲ್ಲಿ ನಾನಿರುವಾಗ ನನ್ನೊಂದಿಗಿದ್ದ...ಅವನು ಮೂಲತಃ ಇಂಜಿನೀಯರ್...ಆದರು ಸಹ ಅದು ಹೇಗೋ ಗೊತ್ತಿಲ್ಲ ನನ್ನ ಮತ್ತು ಅವನ ಗೆಳೆತನ ಬಹು ಬೇಗ ಗಟ್ಟಿಯಾಯ್ತು ಮತ್ತು ಅವನು ತನ್ನ ಜೀವನದ ಪ್ರತಿಯೊಂದು ಘಳಿಗೆಗಳನ್ನು ನನ್ನೊಂದಿಗೆ ಯಾವಾಗಲು ಚರ್ಚಿಸುತ್ತಿರುತ್ತಾನೆ...ಅವನೀಗ ತನ್ನ ಕುಟುಂಬ ಸಮೇತನಾಗಿ ಅಮೆರಿಕದಲ್ಲಿದ್ದಾನೆ...ಅವನೀಗ ಅಮೆರಿಕಕ್ಕೆ ಹೋಗಿ ೯ ವರ್ಷಗಳೇ ಕಳೆದಿವೆ...ಆದರು ನಿರಂತರ ಸಂಪರ್ಕದಲ್ಲಿದ್ದಾರೆ....ಈಗ ಇವನ ಪ್ರಸ್ತಾಪ ಏಕೆ ಬಂದಿತೆಂದರೆ...ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅವನೊಂದು ಮನೆ ಕಟ್ಟಿಸಿದ....ಅದರ ಗೃಹ ಪ್ರವೇಶಕ್ಕೆ ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವುದಿತ್ತು..ತಕ್ಷಣ ನನ್ನ ಮನೆಗೆ ದೌಡಾಯಿಸಿದವನೇ..."ಧನು ನನ್ನ ಮನಿಗೆ ಕನಸು ಅಂತ ಹೆಸರಿಡಬೇಕು ಅಂತ ಮಾಡೆನಿ..ನಿನಗ ಎನನಸ್ತೈತಿ?" ಎಂದ...ನಾನು ತಕ್ಷಣ ಏನನ್ನು ಚಿಂತಿಸದೆ ಒಳ್ಳೆಯ ಹೆಸರು ಇದು ಎಂದು ಬಿಟ್ಟೆ....ನೋಡಿ ಕನಸುಗಳಿಗೆ ಎಷ್ಟೊಂದು ಕಲ್ಪನೆಗಳಿವೆ....



ಕನಸುಗಳಿಗೆ ಸಂಬಂಧಪಟ್ಟಂತೆ ನನ್ನ ಎರಡು ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ....ಈ ಎರಡು ಘಟನೆಗಳು ತೀರ ಭಿನ್ನ ವಾಗಿದ್ದು..ಎರಡರಲ್ಲಿಯೂ ಸಹ ನೀವು ವೈರುಧ್ಯಗಳನ್ನು ಕಾಣಬಹುದಾಗಿದೆ....



ಮೊದಲನೆಯದು...



ನಾನು ಹತ್ತನೇ ತರಗತಿಯ ಅಂತಿಮ ಪರೀಕ್ಷೆ ಬರೆಯುತ್ತಿದ್ದೆ...ಆವತ್ತು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯಿತ್ತು...ಮೊದಲಿನಿಂದಲೂ ಇತಿಹಾಸ ಓದುವುದೆಂದರೆ ನನಗೆ ಒಂದು ತರಹದ ಅಲರ್ಜಿ...ಅಕ್ಷರಶಃ ನಾನು ಏನನ್ನು ಓದಿರಲಿಲ್ಲ...ಹಾಗೆಯೆ ಪರೀಕ್ಷೆ ಬರೆಯಲು ಹೋದೆ..ಅಂದು ಪರೀಕ್ಷೆಗೆ ಎಕ್ಸಾಮಿನರ್ ಆಗಿ ಕಾತೋಟಿ ಎಂಬ ತಿಚರ್ ಬಂದಿದ್ದರು.ಅವರು ಧಾರವಾಡದಲ್ಲಿ ನಮ್ಮ ಮನೆಯ ಹತ್ತಿರವೇ ಇರುತ್ತಿದ್ದರು ಮತ್ತು ನನ್ನ ತಾಯಿಯ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು....ಪರೀಕ್ಷೆ ಆರಂಭವಾಯಿತು..ಪ್ರಶ್ನೆ ಪತ್ರಿಕೆ ನೋಡಿದರೆ ಅದರಲಿ ನನಗೇನು ಅರ್ಥವಾಗುತ್ತಿಲ್ಲ...ಏನು ಬರೆಯಬೇಕೆಂದು ತಿಳಿಯುತ್ತಿಲ್ಲ....ಸುಮ್ಮನೆ ಬರೆಯುವವನಂತೆ ನಟಿಸಿ..ಕುಳಿತುಕೊಂಡೆ...ಕಾತೋಟಿ ಮೇಡಂ ನನ್ನ ಹತ್ತಿರ ಬಂದವರೇ ಪರಿಸ್ಥಿತಿಯನ್ನು ತಿಳಿದುಕೊಂಡವರೇ.. ನನ್ನ ಮಗ್ಗುಲಲ್ಲಿ ಬಂದು ನಿಂತು ಇಡೀ ಪತ್ರಿಕೆಯ ಉತ್ತರವನ್ನು ಹೇಳಿದರು....ಮುಂದೆ ನಾನು ಆ ವಿಷಯದಲ್ಲಿ ಪಾಸಾದೆ..ಆ ವಿಚಾರ ಬೇರೆ...ಈಗ ನಾನು ಎಸ್.ಎಸ್.ಎಲ್.ಸಿ ಮುಗಿಸಿ ೨೩ ವರ್ಷಗಳೇ ಕಳೆದಿವೆ...ನನಗೆ ಈಗಲೂ ಆಗಾಗ ಕನಸು ಬೀಳುತ್ತಿರುತ್ತದೆ....ನಾಳೆ ಪರೀಕ್ಷೆ ಇದೆ...ಸಮಾಜ ವಿಜ್ಞಾನ ವಿಷಯ.ಅದನ್ನು ಓದಬೇಕು...ಮುಂತಾದ ವಿಚಿತ್ರ ಕನಸುಗಳು....ತಕ್ಷಣ ನನಗೆ ಏನೋ ಒಂದು ತರಹದ ಕಸಿವಿಸಿ....ಹಾಸಿಗೆಯಿಂದ ಎದ್ದು ಕುದುತ್ತೇನೆ....ನಂತರ ಅದು ಕನಸು ಎಂದು ತಿಳಿದು ವಿಚಿತ್ರ ರೀತಿಯ ಚಡಪಡಿಕೆ ಶುರುವಾಗುತ್ತದೆ....ಹೀಗೇಕೆ ಕನಸುಗಳು ನನಗೆ ಬೀಳುತ್ತಿವೆ ತಿಳಿಯುತ್ತಿಲ್ಲ....

ಎರಡನೆಯದು:

ನನ್ನಜ್ಜಿ ನನ್ನನ್ನು ತುಂಬಾ ಪ್ರೀತಿಸುತಿದ್ದರು...ಅವರು ಬೆಳಗಾವಿ ಜಿಲ್ಲೆಯ ಇಟಗಿ ಗ್ರಾಮದಲ್ಲಿ ವಾಸಿಸುತ್ತಿದರು...೮೪ ವರ್ಷ ವಯಸ್ಸಾದರೂ ಅತ್ಯಂತ ಘಾಟಿ ಮುದುಕಿ ಅದು...ಯಾರನ್ನು ತನ್ನ ಸಹಾಯಕ್ಕೆ ಕರೆಯದೆ ಊರಿಂದ ಊರಿಗೆ ಒಬ್ಬರೇ ಓಡಾಡುತ್ತಿದರು....ಅದು ೧೯೯೪ ಆಗಸ್ಟ್ ೧೪ ರ ಬೆಳಗಿನ ಜಾವ ೫.೩೦...ನನಗೆ ವಿಚಿತ್ರ ಕನಸು ಬಿಟ್ಟು...ನನ್ನ ಪ್ರೀತಿಯ ಅಜ್ಜಿ ಸತ್ತು ಹೋದ ಸುದ್ದಿ ಅದು..ನಾನಾಗ ನನ್ನ ಅಂತಿಮ ವರ್ಷದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೆ..ಧಾರವಾಡದಲ್ಲಿ ಚಿಕ್ಕ ರೂಂ ಮಾಡಿಕೊಂಡು ಇರುತ್ತಿದ್ದೆ...ಈ ಕನಸು ಬಿದ್ದ ತಕ್ಷಣ ಅಕ್ಷರಶಃ ನಾನು ಅಳುತ್ತ ಹಾಸಿಗೆ ಮೇಲೆ ಎದ್ದು ಕೂತೆ...ನಂತರ ಅದು ಕನಸು ಎಂದು ತೀಡು ಸುಧಾರಿಸಿಕೊಳ್ಳಲು ಸುಮಾರು ಅರ್ಧಗಂಟೆ ಬೇಕಾಯ್ತು...ನನ್ನ ಮುಂಜಾನೆಯ ಎಲ ಕೆಲಸಗಳನ್ನು ಮುಗಿಸಿಕೊಂಡು, ನನ್ನ ರೂಮಿನಲ್ಲಿ ಪೇಪರ್ ಓದುತ್ತ ಕುಳಿತಿದ್ದೆ..ನಾನಿದ್ದ ರೂಮಿನ ಮಾಲಿಕರಾದ ದೇಶಪಾಂಡೆ ಮಾಮಿ ಮನೆಗೆ ನನ್ನ ತಮ್ಮ ಫೋನ್ ಮಾಡಿದ್ದ..ಮತ್ತು ನನ್ನ ಅಜ್ಜಿ ಅಂದು ಮುಂಜಾನೆ ತಿರಿಹೊಗಿದಾರೆ..ತಕ್ಷಣ ಬೆಳಗಾವಿಗೆ ಬರಬೇಕು ಎಂಬ ಸಂದೇಶವನ್ನು ಕೊಟ್ಟಿದ್ದ...ನನಗೆ ಕನಸು ಬಿದ್ದ ಸಮಯದಲಿಯೇ ನನ್ನ ಅಜ್ಜಿಗೆ ಹೃದಯಾಘಾತವಾಗಿದೆ ಮತ್ತು ಅದೇ ಸಮಯಕ್ಕೆ ಅವರು ತೀರಿ ಹೋಗಿದ್ದಾರೆ...

ಈ ಎರಡು ವೈರುಧ್ಯದ ಕನಸುಗಳ ಬಗ್ಗೆ ನಾನು ಯಾವಾಗಲು ಚಿಂತಿಸುತ್ತಿರುತ್ತೇನೆ...ಉತ್ತರ ಇನ್ನು ಸಿಕ್ಕಿಲ್ಲ....



Tuesday, August 4, 2009

ಹೋರಾಟದ ಸಾಗರಕೆ ಸಾವಿರಾರು ನದಿಗಳು...


ರಂಗಭೂಮಿ ಒಂದು ಹೋರಾಟ...ಅದೊಂದು ತಪಸ್ಸು...ಯೋಗ....ಹಠ....ಸಾಧನೆ...ಎಷ್ಟೆಲ್ಲ ವ್ಯಾಖ್ಯಾನಗಳು...ಅದಕ್ಕೆ ರಂಗಭೂಮಿ ಒಂದು ತಂಡ ಕ್ರೀಯೆಯಾಗಲು ಸಾಧ್ಯವಾದದ್ದು ಮತ್ತು ದೃಶ್ಯ ಮಾಧ್ಯಮದಲ್ಲಿ ತನ್ನದೇ ಆದಂತಹ ಒಂದು ಛಾಪನ್ನು ಮೂಡಿಸಲು ಸಾಧ್ಯವಾದದ್ದು.....


ನಾಟಕ ಕಟ್ಟುವ ಕ್ರೀಯೆ...ಅದೆಂದಿಗೂ ನಿಂತ ನೀರಾಗಬಾರದು..ಅದಕ್ಕೆಂದೇ ನಾನು ಅದನ್ನು ಜಂಗಮ ಎಂದು ನಂಬಿರುವುದು...ಅದೆಂದಿಗೂ ಒಂದು ಸ್ಥಾವರವಾಗಲೇ ಬಾರದು...


ನಾನು ೧೯೯೭ ರಲ್ಲಿ ಪ್ರಜಾವಾಣಿ ಬಿಟ್ಟು ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಂದ ನಂತರ ಸುಮಾರು ಒಂದು ವರ್ಷಗಳ ಕಾಲ ನನ್ನ ಎಲ್ಲ ನಾಟಕ ಚಟುವಟಿಕೆಗಳು ನಿಂತೇ ಹೋಗಿದ್ದವು..ಆಕಸ್ಮಿಕವಾಗಿ ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಾಗ ಅದನ್ನು ಒಲ್ಲದ ಮನಸ್ಸಿನಿಂದಲೇ ಅಪ್ಪಿಕೊಂಡಿದ್ದೆ...ನಂತರ ಮುಂಬೈನಲ್ಲಿ ಪ್ರತಿ ವರ್ಷ ನಡೆಯುವ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ನಾಟಕ ಸ್ಪರ್ಧೆಯಲ್ಲಿ ದಫನ, ನಾಯೀಕತೆ, ರಾಕ್ಷಸ ಎಂಬ ಮೂರೂ ನಾಟಕಗಳನ್ನು ನಿರ್ದೇಶಿಸಿ, ಅವುಗಳಿಗೆ ವಿನ್ಯಾಸ ಹಾಗು ಸಂಗೀತ ಸಂಯೋಜನೆ ಮಾಡಿ ಮೂರೂ ವರ್ಷವೂ ಅನಾಮತ್ತಾಗಿ ಪ್ರಥಮ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಪಡೆದದ್ದು ಈಗ ಇತಿಹಾಸ...ವಿಶೇಷವೆಂದರೆ ನಮ್ಮ ತಂಡ ಹ್ಯಾಟ್ರಿಕ್ ಪ್ರಶಸ್ತಿಯನು ಗಳಿಸಿದ ಹತ್ತು ವರ್ಷಗಳ ನಂತರವೂ ಆ ಸಾಧನೆಯನ್ನು ಇದುವರೆಗೆ ಯಾರು ಮುರಿದಿಲ್ಲ..ಅದಿನ್ನೂ ಕನ್ನಡ ಕಲಾ ಸಂಘದ ಹೆಸರಿನಲ್ಲಿಯೇ ಇದೆ...


ಈ ಎಲ್ಲ ಸಾಧನೆಗಳ ಹಿಂದೆ ಅನೇಕ ಕಲಾವಿದರ ತ್ಯಾಗ ಸಾಕಷ್ಟಿದೆ...ರಾಕ್ಷಸ ನಾಟಕ ಮಾಡುವಾಗ ಅದರಲ್ಲಿನ ಮುಖ್ಯ ಪಾತ್ರಧಾರಿ ಚಂದ್ರಶೇಖರ್ ತನ್ನ ಮನೆಯಲಿ ಒಡಹುಟ್ಟಿದ ತಂಗಿಯ ಮದುವೆಯನ್ನು ಸಹ ಲೆಕಿಸದೆ ನಾಟಕದಲ್ಲಿ ಭಾಗವಹಿಸಿ ಉತ್ತಮ ನಟ ಪ್ರಶಸ್ತಿಯನು ಪಡೆದದ್ದು.ಅವರು ಈ ನಾಟಕಕ್ಕೆ ಬರಬೇಕೆಂದರೆ ರಾಜಗೋಪಾಲ್ ಅವರು ಸ್ವಾಮಿಜಿಯ ಪೋಷಾಕಿನಲ್ಲಿ ಚಂದ್ರು ಮನೆಗೆ ತೆರಳಿ ಅವರ ತಂದೆಗೆ ಸುಳ್ಳು ಹೇಳಿ...ಮುಂಬೈನಲ್ಲಿ ಒಂದು ಕಂಪನಿಯಲ್ಲಿ ನಿಮ್ಮ ಮಗನಿಗೆ ಸಂದರ್ಶನಕ್ಕೆ ಕರೆ ಬಂದಿದೆ...ಅದರಲ್ಲಿ ಆಯ್ಕೆಯಾದರೆ ಕೈತುಂಬ ಸಂಬಳ ಸಿಗುತ್ತದೆ...ನಿಮ್ಮ ಮಗನ ಭಾವಿಸ್ಯ ಉಜ್ವಲವಾಗುತ್ತದೆ ಎಂದೆಲ್ಲ ಓಳು ಬಿಟ್ಟು ಅವರನ್ನು ಮುಂಬೈಗೆ ಕರೆದುಕೊಂಡು ಹೋದದ್ದಾಯ್ತು....ನಾಟಕದ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು....ನಾಟಕ ಮುಗಿದ ನಂತರ ಚಂದ್ರು ತನ್ನ ಬಾಲ್ಯ ಸ್ನೇಹಿತ ಗಿರಿಶನನ್ನು ಟೆರೇಸಿನ ಮೇಲೆ ಕರೆದುಕೊಂಡು ಹೋಗಿ..ಅವನ ತೊಡೆಯಮೇಲೆ ಅರ್ಧ ಗಂಟೆಯ ಕಾಲ ಅತ್ತಿದ್ದಾರೆ....ನಂತರ ಪ್ರಶಸ್ತಿ ಬಂದ ನಂತರ ಅವನ ತ್ಯಾಗಕ್ಕೆ ಒಂದು ನ್ಯಾಯ ಸಿಕ್ಕಂತಾಗಿ ಅಷ್ಟೆ ಸಂಭ್ರಮ ಪಟ್ಟಿದ್ದಾರೆ....


ಅದೇ ರೀತಿ ಅನೇಕ ಕಲಾವಿದರು ಈ ತಂಡದ ಮುನ್ನಡೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಅವರಿನ್ನು ತಂಡದಲ್ಲಿ ಅಷ್ಟೆ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ..


ಹತ್ತು ವರ್ಷದ ಹಿಂದೆ ಕನ್ನಡ ಕಲಾ ಸಂಘ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಮತ್ತೊಂದು ಮಾಮೂಲಿ ತಂಡವಾಗಿತ್ತು...ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಇದರ ಸಾಧನೆಯನ್ನು ನೋಡಿದವರಿಗೆ ಕನಿಷ್ಠ ಮಟ್ಟದ ಅಸುಯೇಯಾದರು ಆಗಲೇ ಬೇಕು..ತಮ್ಮದೇ ಆದ ಒಂದು ಸುಸಜ್ಜಿತವಾದ ಗ್ರಂಥಾಲಯ, ರಂಗಮಂದಿರ, ನಾಟಕಕ್ಕೆ ಬೇಕಾಗುವ ಎಲ್ಲ ರೀತಿಯ ಪರಿಕರಗಳು, ಬೆಳಕಿನ ವ್ಯವಸ್ಥೆ, ಧ್ವನಿ ವರ್ಧಕ ವ್ಯವಸ್ಥೆ ಎಲ್ಲವನ್ನು ತಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡಿದ್ದಾರೆ....ಅಕಾಡಮಿಯ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿಗೆ ಬಂದಿದ್ದಾರೆ..ಇವರಿಂದ ಸಾಕಷ್ಟು ಆದರಾತಿಥ್ಯ ಸ್ವೀಕರಿಸಿ....ಬೆಟ್ಟದಂತಹ ಆಶ್ವಾಸನೆಗಳನ್ನು ನೀಡಿ ಹೋಗಿದ್ದಾರೆ...ಆದರೆ ಅವರು ಏನು ಮಾಡಿಲ್ಲ...."ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲಾರದು" ಎಂಬ ಮಾತಿನಂತೆ ತಂಡ ಕಳೆದ ೩೦ ವರ್ಷಗಳಿಂದ ಬಿ.ಚಿ ಜನ್ಮ ದಿನಾಚರಣೆಯನ್ನು, ಕಳೆದ ಹತ್ತು ವರ್ಷಗಳಿಂದ ಕೈಲಾಸಂ ದಿನಾಚರಣೆಯನ್ನು, ಪ್ರತಿವರ್ಷ ಮಕ್ಕಳಿಗಾಗಿ ಚಿನಾರ ಎಂಬ ನಾಟಕ ಸ್ಪರ್ಧೆಯನ್ನು ಮತ್ತು ವರ್ಷಕ್ಕೊಂದು ಪೂರ್ಣಪ್ರಮಾಣದ ನಾಟಕವನ್ನು ತಪ್ಪದೆ ಮಾಡುತ್ತಾ ಬಂದಿದೆ...


ಇದರ ಹಿಂದಿನ ಪ್ರೇರಕ ಶಕ್ತಿಗಳು ಅನೇಕ...ಯಾರ ಹೆಸರನ್ನು ಬಿಡುವಂತಿಲ್ಲ...ಆದರೆ ಕೆಲವನ್ನಿಲ್ಲಿ ನೆನಪಿಸಿ ಕೊಳ್ಳಲೆ ಬೇಕು...ರಾಮಪುರ ಬದರಿ ನಾರಾಯಣ, ರಾ.ಸಿ. ಕುಲಕರ್ಣಿ, ಸದಾನಂದ್, ಮುಂತಾದವರು ತಮ್ಮ ಜೀವವನ್ನೇ ತೆಯ್ದಿದ್ದಾರೆ....


ಇಂತಹ ಹೋರಾಟದ ಸಾಗರಕೆ ಸಾವಿರಾರು ನದಿಗಳು ಬಂದು ಸೇರಿವೆ...ಅವುಗಳಲ್ಲಿ ಕೆಲವರನ್ನು ಭೇಟಿಯಾಗಲು ಈ ಕೆಳಗಿರುವ ಲಿಂಕ್ ಕ್ಲಿಕ್ಕಿಸಿ....



Sunday, August 2, 2009

ಹಳ್ಳಕ ಬಿದ್ರೆ ಆಳಿಗೊಂದ್ ಕಲ್ಲು...


ಗೆಳೆಯ ಯಶವಂತ ನಿರ್ದೇಶನದ "ಸಹಿ ರೀ ಸಹಿ" ನಾಟಕದಲ್ಲಿ ಒಂದು ಪಾತ್ರ ಬರುತ್ತದೆ..ಅದರ ಹೆಸರು ಗಲಗಲಿ ಎಂದು...ಅವನು ಮೂಲತಃ ಇನ್ಸುರನ್ಸ್ ಮಾರಾಟ ಮಾಡಿ ತನ್ನ ಉಪಜೀವನವನ್ನು ನಡೆಸುವವನು...ಆ ಪಾತ್ರದಲ್ಲಿ ಯಶವಂತ ಬಹಳ ಚನ್ನಾಗಿ ಅಭಿನಯಿಸುತ್ತಾನೆ... ಒಂದು ದೃಶ್ಯದಲ್ಲಿ ಅವನು ಮದನ್ ಸುಖಾತ್ಮೆಯ ಪಾತ್ರದ ಅನುಕರಣೆ ಮಾಡಬೇಕಾಗಿರುತ್ತದೆ....ಅದಕ್ಕಾಗಿ ಅವನ ಇಡೀ ಜನ್ಮ ವೃತ್ತಾಂತವನ್ನು ತಿಳಿದುಕೊಳ್ಳುವ ಕರ್ಮಕ್ಕೆ ಈ ಗಲಗಲಿ ಬಲಿಯಾಗಬೇಕಾಗುತ್ತದೆ...ಸುಖಾತ್ಮೆಯ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆ ಅವನಿಗೆ ಮೈಸೂರು ಬಳಿ ದೊಡ್ಡದಾದ ಪಿತ್ರಾರ್ಜಿತ ಆಸ್ತಿ ಇರುತ್ತದೆ..ದೊಡ್ಡ ಕುಟುಂಬ ಅದು...ಸುಖಾತ್ಮೆಯ ಹಂಡತಿ ಗಲಗಲಿಗೆ ಇದನ್ನೆಲ್ಲಾ ಹೇಳುತ್ತಾ ಹೋದಂತೆ ಗಲಗಲಿಯ ಕುತೂಹಲಕ್ಕೆ ಪಾರವೇ ಇರುವುದಿಲ್ಲ...ತಕ್ಷಣವೇ ಅವನ ಬಾಯಿಂದ ಒಂದು ಪ್ರಶ್ನೆ ಬರುತ್ತದೆ....."ಆ ಮನ್ಯಾಗ ಇಷ್ಟೆಲ್ಲಾ ಜನ ಇರತಾರಂತ ಹೇಳತೀರಿ..ಹಂಗಾರ ಅವರೆಲ್ಲ ಪಾಲಿಸಿ ಮಾಡಸ್ಯಾರೆನು?"....ಇಡೀ ಪ್ರೇಕ್ಷಕ ಸಮೂಹ ಹೊಟ್ಟೆ ಹುಣ್ಣಾಗುವಷ್ಟು ನಗುತ್ತದೆ...ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಗಲಗಲಿ ಎನ್ನುವ ಪಾತ್ರಧಾರಿಗೆ ತನ್ನ ಕೆಲಸದ ಬಗ್ಗೆ ಇರುವ ಕಾರ್ಯನಿಷ್ಥೆ ಮತ್ತು ಆ ಕ್ಷಣದ ಸಮಯ ಪ್ರಜ್ಞೆ...

ಬಿಡಿ ಇದು ನಾಟಕದಲ್ಲಿ ಬರುವ ಪಾತ್ರದ ಬಗ್ಗೆ ಆಯ್ತು..ಇಂತಹುದೇ ಒಂದು ಪಾತ್ರ ನಿಜಜೀವನದಲ್ಲಿ ನಿಮಗೆ ಎದುರಾದರೆ ನಿಮ್ಮ ಪ್ರತಿಕ್ರೀಯೆ ಹೇಗಿರುತ್ತದೆ? ನೀವು ಹೊಸಪೇಟೆಗೆ ಬಂದರೆ ಸಾಕು ನಿಮಗೆ ಇಂತಹ ಒಂದು ಕ್ಯಾರೆಕ್ಟರ್ ಪರಿಚಯವಾಗುತ್ತದೆ...ಓರಿಯಂಟಲ್ ಇಸ್ನುರನ್ಸ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಚ್. ರಾಜಗೋಪಾಲ್ ಎಂಬ ವ್ಯಕ್ತಿಯೇ ಈ ಕ್ಯಾರೆಕ್ಟರ್....ರಂಗಭೂಮಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ನನ್ನ ನಿರ್ದೇಶನದ ದಫನ ನಾಟಕದಲ್ಲಿ ನಾನೇ ವಿಶೇಷವಾಗಿ ಸೃಷ್ಟಿಸಿದ ದೋಳಕನ ಪಾತ್ರವನ್ನು ಅತ್ಯಂತ ಅಚ್ಚುಕಟ್ಟಾಗಿ, ಅದ್ಭುತವಾಗಿ ಅಭಿನಯಿಸಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದುಕೊಂಡವರು...ಅವರು ನಾಟಕದಲ್ಲಿ ಭಾಗವಹಿಸಿರಲಿ ಬಿಡಲಿ....ಅವರಿಗೆ ಅಲ್ಲಿ ಪಾತ್ರವಿರಲಿ ಬಿಡಲಿ..ಸುಮ್ಮನೆ ಅಲ್ಲಿ ಅಂದರೆ ನಾಟಕದ ತಾಲೀಮು ನಡೆಯುವಲ್ಲಿ ತಪ್ಪದೆ ಹಾಜರಾಗುತ್ತಾರೆ ಮತ್ತು ಇತರೆ ಪಾತ್ರಧಾರಿಗಳ ಮೇಲೆ ನಿರರ್ಗಳವಾಗಿ ತಮ್ಮ "ವರ್ಕ್" ಶುರುವಿಟ್ಟುಕೊಳ್ಳುತ್ತಾರೆ...

ಚಂದ್ರು ಇವರನ್ನು ಅತ್ಯಂತ ಪ್ರೀತಿಯಿಂದ ಮತ್ತು ಶೃದ್ಧೆಯಿಂದ ಅಣ್ಣ ಅಂತಲೇ ಕರೆಯುವುದು...ಮತ್ತು ಚಂದ್ರು ಹೇಳುವುದನ್ನೆಲ್ಲ ಇವರು ನಂಬುತ್ತಾರೆ...ರಾತ್ರಿ ೧೨ ಗಂಟೆಯನಂತರ ಇವರಿಗೆ ಫೋನಾಯಿಸಿ "ನಮ್ಮ ಎಮ್ಮೆ ಸತ್ತಿದೆ..ಅದರ ಇನ್ಸುರನ್ಸ್ ಕ್ಲೆಂ ಮಾಡುವುದಿತ್ತು..ಬೇಗನೆ ಬನ್ನಿ" ಎಂದು ಪೀಡಿಸುವುದರಿಂದ ಹಿಡಿದು...ನನ್ನ ಹೀರೋ ಹೊಂಡಾ ಕಳೆದು ಹೋಗಿದೆ...ನನಗೆ ಅರ್ಜೆಂಟಾಗಿ ಅದರ ಇನ್ಸುರನ್ಸ್ ಹಣ ಬೇಕು..ವ್ಯವಸ್ಥೆ ಮಾಡಿ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಅವರಿಗೆ ಫೋನ್ ಮಾಡಿ ಕಾಡುವುದು...ಯಾವನೇ ಆದರು ಒಂದು ಸಲ ಬೇಡ ಎರಡು ಸಲ ಪರಿಪಾಟಲು ಬೀಳಬಹುದು...ಆದರೆ ಪದೇ ಪದೇ ಬೀಳುವ ಈ ಆಸಾಮಿಯ ಕೆಲವು ವಿಶೇಷ ಪ್ರಸಂಗಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲೇ ಬೇಕು...

೧೯೯೯ ರಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗೆ ದಫನ ನಾಟಕ ಭಾಗವಹಿಸಿತ್ತು...ಅದರಲ್ಲಿ ರಾಜಗೋಪಾಲ್ ಅವರಿಗೆ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು...ಅವರಿಗೋ ತಡೆಯಲಾರದಷ್ಟು ಆನಂದ....ಅದನ್ನು ಯಾರೊಂದಿಗೆ ಹೇಗೆ ಹಂಚಿಕೊಂಡರು ಅವರಿಗೆ ಸಮಾಧಾನವಿಲ್ಲ...ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ...ಇವರಿಗಾಗಲೇ ಪ್ರಶಸ್ತಿ ಬಂದಾಗಿತ್ತು...ಎಲ್ಲರು ಇವರನ್ನು ಅಭಿನಂದಿಸುತ್ತಿದ್ದರೆ...ಇವರ ಹಿಂದಿನ ಸೀಟಿನಲ್ಲಿ ಕುಳಿತ ಆಸಾಮಿಯೊಬ್ಬ ಜುಬ್ಬಾ, ಪೈಜಾಮ ಹಾಕಿಕೊಂಡು ಮೇಲ್ಗಡೆ ಒಂದು ಜಾಕೀಟನ್ನು ಸಹ ಹಾಕಿದ್ದ... ಅವನು ಇವರೊಂದಿಗೆ ಮಾತಿಗಿಳಿದ..ಇವರನ್ನು ಹೊಗಳಿದ..ತಬ್ಬಿಕೊಂಡ...ಅಭಿನಂದಿಸಿದ..ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು...ಆ ವ್ಯಕ್ತಿಯನ್ನು ನೋಡಿದ ತಕ್ಷಣ ಇವರಿಗೆ ಇವರ್ಯಾರೋ ಪತ್ರಕರ್ತರಿರಬೇಕು...ಇವರನ್ನು ಸರಿಯಾಗಿ ನೋಡಿಕೊಂಡರೆ ನಾಳೆಯದಿನ ಪತ್ರಿಕೆಯಲ್ಲಿ ತಮ ಬಗ್ಗೆ ಉತ್ತಮ ಲೇಖನ ಬರಬಹುದು...ಎಂದೆಲ್ಲ ಕನಸುಕಂಡ ರಾಜಗೋಪಾಲ್, ಆತನನ್ನು ಕರೆದುಕೊಂಡು ತಿಂಡಿ ತಿನಿಸಿದ್ದಾಯಿತು.ಚಹಾ ಕುಡಿಸಿದ್ದಾಯಿತು...ಅಷ್ಟೇ ಅಲ್ಲ ರಾತ್ರಿ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಅವನಿಗೆ ತೀರ್ಥ ಪ್ರಸಾದವನ್ನು ಮಾಡಿಸಿದ್ದು ಆಯಿತು...ಕೊನೆಗೆ ಗೊತ್ತಾದ ವಿಷಯವೆಂದರೆ ಆ ವ್ಯಕಿತ್ ಗದಗ್ ಊರಿನವನು...ಅವನ ತಂಡ ಸಹ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಬರಬೇಕಾಗಿತ್ತು...ಆದರೆ ಅನಿವಾರ್ಯ ಕಾರಣದಿಂದ ಅವರು ಬಂದಿರಲಿಲ್ಲ...ಇವನೊಬ್ಬನೇ ಬಂದಿದ್ದಾನೆ..ರಾತ್ರಿ ಅವ್ನಿಗೆ ಮಲಗಲು ಒಂದು ನೆಲೆ ಬೇಕಾಗಿದೆ ಅದಕ್ಕಾಗಿ ಅವನು ರಾಜಗೋಪಾಲ್ ಅವರನ್ನು ಬೆನ್ನು ಬಿದ್ದಿದ್ದಾನೆ...ಇದನ್ನು ನೆನಸಿಕೊಂಡು ನಾವೆಲ್ಲಾ ಈಗಲೂ ಎಂಜಾಯ್ ಮಾಡುತ್ತವೆ...

ನಮ್ಮ ಹೊಸಪೇಟೆಯ ತಂಡದಲ್ಲಿ ತಾಯಪ ಕಲಾಲ್ ಎಂಬ ಇನ್ನೊಬ್ಬ ಕಲಾವಿದರಿದ್ದಾರೆ....ಅವರು ನಾಟಕ ಮಾಡುತ್ತಿದ್ದಾರೆ ಎನ್ನುವುದೇ ಹೊಸಪೇಟೆಯಲ್ಲಿ ಒಂದು ಸುದ್ದಿಯಾಗಿರುತ್ತದೆ..ಆದರೆ ಈ ಮನುಷ್ಯ ನಾಟಕದ ಹೆಸರಿನಲ್ಲಿ ತಮ್ಮ ಉಳಿದೆಲ್ಲ ವೈಯಕ್ತಿಕ ಕೆಲಸಗಳನ್ನು ಮಾಡಿಕೊಂಡಿರುತ್ತಾರೆ....ಅವರಿಗೆ ಈಗ ೪೫ + ವಯಸ್ಸು..ಮದುವೆಯಾಗಿಲ್ಲ...ಅವರದು ಜಾಯಿಂಟ್ ಫ್ಯಾಮಿಲಿ....ಅವರ ಅಣ್ಣನ ಮಕ್ಕಳನ್ನು ನಾಟಕದ ತಾಲೀಮಿಗೆ ಕರೆದು ಕೊಂದು ಬಂದಿರುತ್ತಾರೆ...ನಾವೆಲ್ಲಾ ಸೇರಿ ರಾಜಗೋಪಾಲ್ ಅವರನ್ನು ಎಷ್ಟರ ಮಟ್ಟಿಗೆ ನಂಬಿಸಿಬಿತ್ತಿದ್ದೆವೆಂದರೆ ..ತಾಯಪ್ಪ ಕಲಾಲನಿಗೆ ಮದುವೆ ಆಗಿದೆ ೮ ಮಕ್ಕಳಿವೆ ಅದರಲ್ಲಿ ೭ ಹೆಣ್ಣು ಮತ್ತು ಒಂದು ಗಂಡು ಎಂದೆಲ್ಲ ಹೇಳಿದ್ದೇವೆ...ಅದನ್ನವರು ಅಷ್ಟೇ ಭಕ್ತಿಯಿಂದ ನಂಬಿದ್ದಾರೆ...ಇಂದಿಗೂ ಕೂಡ....ನೀವು ಅವರಿಗೆ ಹೋಗಿ ಸತ್ಯ ಸಂಗತಿಯನ್ನು ಹೇಳಿದರು ಸಹ ಅವರ ಅದನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ....


ಗಿರೀಶ್ ದೇಸಾಯಿ ಎಂಬ ಇನ್ನೊಬ್ಬ ಗೆಳೆಯರು ನಮ್ಮ ಹೊಸಪೇಟೆಯ ತಂಡದಲ್ಲಿದ್ದಾರೆ..ಅವರು ವಿಶೇಷವಾಗಿ ನಾಟಕದ ಸಂಗೀತ ವಿಭಾಗದಲ್ಲಿ ಕಾರ್ಯ್ನಿರ್ವಹಿಸುವವರು..ಚಂದ್ರುನ ಬಾಲ್ಯ ಸ್ನೇಹಿತ...ಅವರು ಸಂಡೂರಿನ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ...ಒಂದು ದಿನ ಅವರು ಕೆಲಸ ಮುಗಿಸಿಕೊಂಡು ಹೊಸಪೇಟೆಗೆ ಬರುವಾಗ ಅವರಿದ್ದ ಬಸ್ ಅಪಘಾತಕ್ಕೀಡಾಗಿ ಅವರ ಬೆನ್ನಿಗೆ ತೀರ ನೋವಾಗಿದೆ...ಆಪತ್ರೆಗೆ ಸೇರಿಸಿ, ಅಲ್ಲಿ ಚಿಕಿತ್ಸೆ ಕೊಡಿಸಲಾಯ್ತು...ನಂತರ ಅವರಿಗಾದ ಬೆನ್ನಿನ ಗಾಯ ಸ್ವಲ್ಪ ಗಂಭೀರ ಪ್ರಮಾನದ್ದೆಂದು ತಿಳಿದು ಬಂತು...ಎಲ್ಲಾ ಗೆಳೆಯರು ಅವರನ್ನು ನೋಡಿಕೊಂಡು ಬಂದು, ಮಾತನಾಡಿಸಿ...ಬೇಗ ಗುಣಮುಖವಾಗಲೆಂದು ಹಾರೈಸಿ ಹೋದರೆ..ರಾಜಗೋಪಾಲ್ ಬಂದವರೇ..."ಗಿರಿ ನಿನ್ನ ಇನ್ಸುರನ್ಸ್ ಪಾಲಿಸಿ ಎಲ್ಲಿದೆ..ಅದನ್ನ ಈಗ ನಾವು ಕ್ಲೇಮ್ ಮಾಡಬಹುದು...ಲಗು ತಾ..." ಗಿರಿಯ ಆರೋಗ್ಯ ಹೇಗಿದೆ..ಅವನಿಗೆನಾಗಿದೆ...ಯಾವ ಪರಿಸ್ಥಿತಿಯಲ್ಲಿ ಅವನಿದ್ದಾನೆ...ಉಹಂ ಯಾವುದನ್ನು ಲೆಕ್ಕಿಸಿಲ್ಲ...ತಾವು ...ತಮ್ಮ ಕೆಲಸ ಮತ್ತು ಅದರಿಂದ ಇತರರಿಗೆ ಆಗುವ ಪ್ರಯೋಜನ ಇವಿಷ್ಟರಬಗ್ಗೆ ಮಾತ್ರ ಯೋಚನೆ.... ಇಂತಹ ವಿಚಿತ್ರ ಕ್ಯಾರೆಕ್ಟರ್ ಅದು....

ನಮ್ಮ ಪರಿಚಯವಾಗಿ ೧೦ ವರ್ಷಗಳೇ ಕಳೆದಿವೆ.,...ಈಗಲೂ ಸಹ ನಾನು ನಾನಾ ಫೋನ್ನಿಂದ ಅವರಿಗೆ ಫೋನ್ ಮಾಡಿದರೆ, ಬೇರೆ ಧನಿಯಲ್ಲಿ ಮಾತನಾಡಿದರೆ ಅವರಿಗೆ ಗುರುತು ಹಿಡಿಯಲು ಆಗುವುದಿಲ್ಲ...ಬಕರಾ ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತದೆ...ನಾವು ಬೀಳುವುದನ್ನು ಅಷ್ಟೇ ಭಕ್ತಿಯಿಂದ ಆನಂದಿಸುತ್ತಿರುತ್ತೇವೆ....

Friday, July 31, 2009

ಬರಿಯಾಕಂತನ ಬದಕೇನಿ ಇನ್ನೂ ನಾನು....




"ನಿನ್ನ ಮುಂಗುರುಳು ನೋಡು
ಹ್ಯಾಂಗ ಬಾಗಿ ಬಾಗಿ ನಿನ್ನ
ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು...
ನೀ ಅವಕ್ಕ ಭಾಳ ಸಲಗೀ ಕೊಟ್ಟೀ
ಅಂತ ಕಾಣಸ್ತೈತಿ..
ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು..."

ಕನ್ನಡದಲ್ಲಿ ಯಾವ ಕಾಲಕ್ಕೂ ಚಾಲ್ತಿಯಲ್ಲಿರುವ ಅತ್ಯಂತ ಪ್ರಸಿದ್ಧ ಶಾಯಿರಿ ಇದು...ಇದರಲ್ಲಿ ಶೃಂಗಾರ, ಲಾಲಿತ್ಯ, ಸೊಗಸು, ಪ್ರೀತಿ ಎಲ್ಲವು ಇದೆ...ಆದರೆ ಯಾವ ಹಂತದಲ್ಲಿಯೂ ಅದು ನಿಮಗೆ ಅಶ್ಲೀಲ ಎಂದೆನಿಸುವುದಿಲ್ಲ....ಅದು ಬಿಡಿ...ಸ್ಪರ್ಶ ಚಿತ್ರದ ಈ ಹಾಡನ್ನೇ ಗಮನಿಸಿ...

"ಚಂದಕಿಂತ ಚಂದ ನೀನೆ ಸುಂದರ...
ನಿನ್ನ ನೋಡ ಬಂದ ಬಾನ ಚಂದಿರ..."

ಶಬ್ದಗಳ ಜೊತೆ...ಭಾಷೆಯ ಜೊತೆ ಅತ್ಯಂತ ಸರಳವಾಗಿ ಆಟವಾಡುವುದೆಂದರೆ ಇದು...ನಾನೀಗ ಇದನ್ನೆಲ್ಲಾ ಏಕೆ ಪ್ರಸ್ತಾಪಿಸಲು ಕಾರಣ ಇಷ್ಟೇ...ಅದೇಕೋ ಗೊತ್ತಿಲ್ಲ ಹಿರಿಯ ಮಾರ್ಗದರ್ಶಕರಾದ ಶ್ರೀ. ಇಟಗಿ ಈರಣ್ಣ ಇಂದು ಬೆಳಿಗ್ಗೆಯಿಂದ ತಮ್ಮ ಶಾಯಿರಿ ಗಜಲ್ ಗಳ ಮೂಲಕ ಬಹಳ ಕಾಡುತ್ತಿದ್ದಾರೆ..ಹೀಗಾಗಿ ಅವರ ಜೊತೆಗೆ ಕಳೆದ ಕೆಲವು ಮಧುರ ನೆನಪುಗಳನ್ನು..ಮಧುರ ಪಿಸುಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಆಸೆ...

೧೯೯೮ ರಲ್ಲಿ ನಾನು ನಿರ್ದೇಶಿಸಿದ ದಫನ ನಾಟಕ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ನಂತರ ಅದರ ಸಂತೋಷವನ್ನು ಆಚರಿಸಲು ಎಲ್ಲ ಗೆಳೆಯರು ಸೇರಿ ಹೊಸಪೇಟೆಯ ಹತ್ತಿರದ ಗುಂಡ್ಲುಪೇಟೆ ಪ್ರವಾಸಿಧಾಮಕ್ಕೆ ಹೋಗಿದ್ದೆವು...ಅದೇನೋ ಗೊತ್ತಿಲ್ಲ..ಬಹುಶಃ ನನ್ನ ಬಹುತೇಕ ಯೋಜನೆಗಳು, ಸಂಗೀತ ಸಂಯೋಜನೆ, ನಾಟಕದ ಪರಿಕಲ್ಪನೆ ಮುಂತಾದವುಗಳು ಕೈಗುಡಿದ್ದು "ಗುಂಡು" ಬಿದ್ದ ನಂತರವೇ...ಅಂದು ಕೂಡ ಹೀಗೆಯೇ ಆಯಿತು...ನನ್ನ ಬಹುದಿನದ ಕನಸಿನ ನಾಟಕವಾದ "ರಾವಿ ನದಿಯ ದಂಡೆಯ ಮೇಲೆ" ನಾಟಕವನ್ನು ನಾನು ಮಾಡಿಸುವ ಕನಸು ಕಾಣುತ್ತಿದ್ದೆ...ಅದನ್ನು ತಮ್ಮ ತಂಡಕ್ಕೆ ಮಾಡಿಸಬೇಕೆಂದು ಕನ್ನಡ ಕಲಾ ಸಂಘದ ಗೆಳೆಯರು ಬಯಸುತ್ತಿದರು....ಇವೆಲ್ಲ ಅಂತೆ ಕಂತೆಗಳ ಸುತ್ತ ಮುತ್ತ ನಡೆದಿತ್ತು...ಏಕೆಂದರೆ ಯಾರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಸರಿ ಇಟಗಿ ಈರಣ್ಣ ಅವರನ್ನು ಕೇಳಬೇಕೆಂದು ನಿರ್ಧರಿಸಿ ಅವರಿಗೆ ಗೆಳೆಯರು ಕೂಡಲೇ ಫೋನಾಯಿಸಿದರೆ...ಅವರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಕೊನೆಗೆ ನಾನೇ ದಾರಿ ತೋರಿಸಿಕೊಟ್ಟೆ ...ಮೈಸೂರಿನಲ್ಲಿ ನನ್ನ ಗೆಳೆಯರೋಬ್ಬರನ್ನು ಸಂಪರ್ಕಿಸಲು ತಿಳಿಸಿ ಅವರು ಅದರ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ...ಇದೆಲ್ಲ ಮಾತು ನಡೆಯುತ್ತಿರುವಾಗ ಎಲ್ಲರ ಗ್ಲಾಸುಗಳು ಬಹುತೇಕ ಮೂರನೆ ಬಾರಿ ತುಂಬಿದ್ದವು...ಗೆಳೆಯ ಬದರಿ ನಾರಾಯಣ "ಸರ್ ಇನ್ನ ನಾಕು ದಿನದಾಗ ಆ ಸ್ಕ್ರಿಪ್ಟ್ ನಿಮ್ಮ ಕೈಯಾಗ ಇರತದ....ನೀವು ನಾಟಕದ ತಯಾರಿ ಶುರು ಮಾಡ್ರಿ.." ಎಂದರು...ನಾನು ನಿಷೆದಾಗಿನ ಮಾತು ಕಿಷೆದಾಗ ಎನ್ನುವಂತೆ ತಲೆಯಲ್ಲಾಡಿಸಿ ನನ್ನ ಖಾಲಿಯಾದ ಗ್ಲಾಸಿಗೆ ಮತ್ತೆ ವಿಸ್ಕಿ ತುಂಬಿಸಿಕೊಂಡೆ...

ಮಾತಿಗೆ ಸರಿಯಾಗಿ ಮುಂದೆ ನಾಲ್ಕನೆ ದಿನಕ್ಕೆ ಬದರಿ ರಾವಿ ನದಿಯ ದಂಡೆಯ ಮೇಲೆ ನಾಟಕದ ಪ್ರತಿಯೊಂದಿಗೆ ನನ್ನ ಮುಂದಿದ್ದರು..ನಾಟಕದ ತಯಾರಿ ಶುರುವಾಯ್ತು...ಇಟಗಿ ಈರಣ್ಣ ಅವರು ನಾಟಕ ತಯಾರಿಯ ಆರಂಭದಿಂದಲೂ ನನ್ನ ಜೊತೆಗಿದ್ದರು...ಅವಶ್ಯಕತೆ ಇದ್ದಲ್ಲೆಲ್ಲ ಅನುವಾದದ ಕೆಲಸವನ್ನು ತಕ್ಷಣದಲ್ಲಿಯೇ ಮಾಡಿಕೊಡುತ್ತಿದ್ದರು...೧೯೯೯ ಆಗಸ್ಟ್ ೨ ರಿಂದ ಶುರುವಾದ ನಾಟಕದ ತಯಾರಿ ಬರೋಬ್ಬರಿ ಅಕ್ತುಬರ್ ೨, ಗಾಂಧೀ ಜಯಂತಿಯಂದು ಮೊದಲ ಪ್ರದರ್ಶನ ನೀಡುವುದರೊಂದಿಗೆ ಮುಗಿಯಿತು..ಹೊಸಪೇಟೆಯ ಜನ ಪ್ರದರ್ಶನಕ್ಕೆ ತೋರಿದ ಪ್ರತಿಕ್ರೀಯೆ ಅದ್ಭುತ....ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ...ಇದು ಹೊಸಪೇಟೆಯ ಮಟ್ಟಿಗೆ ದಾಖಲೆ....

ಅದರಲ್ಲಿ ಒಂದು ದೃಶ್ಯ ಬರುತ್ತದೆ...ರತನ್ ತಾಯಿ ತನ್ನಿಂದ ಬೇರೆ ಯಾರಿಗೂ ತೊಂದರೆ ಯಾಗದಿರಲೆಂದು ಯಾರಿಗೂ ಹೇಳದೆ ಕೇಳದೆ ಲಾಹೋರ್ ಬಿಟ್ಟು ಹೊರಟುಬಿಡುತ್ತಾಳೆ....ಈ ವಿಷಯ ಸಿಕಂದರ್ ಮಿರ್ಜಾ ಕುಟುಂಬಕ್ಕೆ ತಿಳಿದು...ಅವಳನ್ನು ಹುಡುಕಿಸಿ ತಂದು..ಅವಳಿಂದ ಭಾಷೆಯನ್ನೂ ಪಡೆಯುತ್ತಾರೆ....ಈ ದೃಶ್ಯವನ್ನು ನಾನು ಸಂಯೋಜಿಸುವಾಗ ಹಾಗೂ ಅದರ ತಾಲೀಮನ್ನು ಮಾಡುವ ಪ್ರತಿದಿನ ನಮಗೆಲ್ಲ ತಿಳಿಯದಂತೆ ಇಟಗಿ ಈರಣ್ಣ ಅವರು ಕನ್ನೀರಿತ್ತಿದ್ದರು.. ..ಅಂತಹ ಭಾವುಕ ಜೀವಿ ಅವರು....

ಇದರಲ್ಲಿ ಇನ್ನೊದು ಪ್ರಮುಖ ಪಾತ್ರ ಬರುತ್ತದೆ...ನಾಸಿರ್ ಕಾಜ್ಮಿ ಎಂದು..ಅವನೊಬ್ಬ ಕವಿ...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸಹ ತನ ಅಧ್ಯಯನ..ಕವನಗಳ ಮೂಲಕ ಸದಾ ಎಲ್ಲರೊಂದಿಗೆ ಬೆರೆಯುವ ಜೀವಿ ಮತ್ತು ಯಾವಾಗಲು ಸಮಾಜದ ಒಳಿತಿಗಾಗಿ ಚಿಂತಿಸುವವ...ಯಾರಿಗಾದರು ಸವಾಲಾಗಿ ನಿಲ್ಲಬಲ್ಲಂತಹ ಪಾತ್ರವದು...ಈ ಪಾತ್ರವನ್ನು ಅಭಿನಯಿಸಲು ನಾನು ಚಂದ್ರಶೇಖರ್ ಅವರಿಗೆ ಹೇಳಿದ್ದೆ..ಇದು ಅವರ ಮೊದಲ ಅಭಿನಯದ ನಾಟಕ...ತಂಡದಲ್ಲಿ ಅವರು ಹಿಮ್ಮೇಳ ಗಾಯಕರಾಗಿ ಸೇರಿಕೊಂಡವರು...ಅವರು ನಾಟಕದುದ್ದಕ್ಕೂ ಶಾಯರಿ, ಗಝಲ್ ಗಳನ್ನೂ ಹೇಳಬೇಕಾಗಿರುವುದರಿಂದ ಈ ಪಾತ್ರಕ್ಕೆ ಅವರೇ ಸರಿ ಎಂದು ಅವರಿಗೆ ಈ ಜವಾಬ್ದಾರಿಯನು ವಹಿಸಿದ್ದೆ..ಅವರಿಗೆ ಶಾಯರಿ, ಗಝಲ್ ಗಳನು ಕಲಿಸುವ ಜವಾಬ್ದಾರಿಯನ್ನು ಸ್ವತಃ ಇಟಗಿ ಈರಣ್ಣ ಅವರು ವಹಿಸಿಕೊಂಡಿದ್ದರು...ಒಂದು ದಿನ ಮದ್ಯಾಹ್ನ ನೇರವಾಗಿ ಚಂದ್ರು ಅವರ ಆಫೀಸಿಗೆ ಹೋಗಿ ಅವರನ್ನು ಕರೆದುಕೊಂಡು ಹೊಸಮೆತೆಯ ನೈವೆದ್ಯಂ ಹೋಟೆಲ ನಲ್ಲಿ ಸತತವಾಗಿ ಮೂರು ಗಂಟೆಗಳ ಕಾಲ ಅವರಿಗೆ ಶಾಯರಿ, ಗಝಲ್ ಹೇಳುವ ರೀತಿಯ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ...ಒಂದು ಸಲವಂತೂ ಇಷ್ಟೆಲ್ಲಾ ಹೇಳಿದ ಮೇಲೆಯೂ ಚಂದ್ರು ಸರಿಯಾಗಿ ಹೆಲಿಲ್ಲವೆಂದು ಅವರ ಕಪಾಳ ಮೋಕ್ಷಕ್ಕೂ ಇಟಗಿ ಈರಣ್ಣ ಅವರು ಮುಂದಾಗಿದ್ದರು....

ಇದರಲ್ಲಿ ಬರುವ ಶಾಯರಿ, ಗಝಲ್ ಗಳನ್ನೂ ಅದೆಷ್ಟು ಪರಿಣಾಮಕಾರಿಯಾಗಿ ಅನುವಾದಿಸಿ ಕೊಟ್ಟಿದರೆಂದರೆ...ಅವುಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...ಓದಿಕೊಳ್ಳಿ...

೧. "ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು
ಸಂತಸದ ಹಬ್ಬವಿದು, ತಾನಿಂತು ಉಕ್ಕಿ, ಭೋರ್ಗರೆವ ಕಡಲಾಯಿತು

ಒಂದೆಡೆಗೆ ತೂಗಿ ತೊನೆಯುತ್ತಾ ಬಂತು ಋತು ವಸಂತದ ಉಲ್ಲಾಸ
ಒಂದೆಡೆಗೆ ಕಂಡ ಕನಸುಗಳ ಗೂಡಿಗೆ ಉರಿವ ಕೊಳ್ಲಿಗಳ ಇಡಲಾಯಿತು

'ಶೀಲ-ದೀಪ' ವ ಹೊತ್ತ ಹಣತೆಗಳ ಕಥೆಯನೆಂತು ಬಣ್ಣಿಸಲಿ ನಾನು?
ನಡುಬೀದಿಯಲ್ಲೇ ಎನ್ನೆಯನು ಚೆಲ್ಲಿ, ಕುಡಿಚಿವುಟಿ ಹೊಸಕಿ ಬಿಡಲಾಯಿತು

ಸಣ್ಣ ಮಕ್ಕಳ ಕಣ್ಣುಗಳು ನೋಡಲಾಗದೆ ನಾಚಿ ಮುಚ್ಚಿಕೊಂಡವು ಗೆಳೆಯ
ಅವರ ಆನಂದಗಳ 'ಹಗಲು ದರೋಡೆಯೇ ನಡೆದು ಕೊಳ್ಲಿಗಳ ರಾಶಿ ಇಡಲಾಯಿತು

ಇಂದಿನ ಈ ಸಮಯದೊಂದಿಗೆ, ಈ ನನ್ನ ಹೆಸರನು ಹೇ ನಾಸಿರ್
ಕಸ ಕಡ್ಡಿ ಕೊಳೆ ಮಾಡಿ, ಕೆಸರಲ್ಲಿ ಹೊಸಕಿ, ಕಾಲುವೆಗೆ ತಳ್ಳಿ ಬಿಡಲಾಯಿತು..."

೨. ನಂಬಿಕಿ ಅಂದ್ರ ಏನದು? ಯಾರ ಮನಸ್ಸಿಗೂ ನವ್ವಾಗಬಾರದು
ನಮಗ ಚೊಲೋ ಆಗಬೇಕು ಅಂದ್ರ, ಯಾರಿಗೂ ಕೆಡಕು ಆಗಬಾರದು..

೩. ಯಾ ಮಂದಿ ಹತ್ರ ನಂಬಿಕೀ ಗಂಧ ಅನ್ನುದ ಇಲ್ಲ
ಆ ಮಂದಿಗೂ ನಮಗೂ ಯಾ ಸಂಬಂಧಾನು ಇಲ್ಲ..

೪. ದುಡಿದದ್ದಕ್ಕ ದುಃಖಾನ ಯಾರಿಗೆ ಕೂಲಿ ಆಗಿ ಸಿಗತೈತಿ
ತಡಿಯುದಿಲ್ಲ ಆ ಗ್ವಾಡಿ, ಭಾಳ ಜಲ್ದೀನೇ ಬೀಳತೈತಿ...


ಈ ಮೇಲೆ ನಮೂದಿಸಿದ ಎಲ್ಲಾ ಶಾಯಿರಿಗಳಲ್ಲಿ ನಮ್ಮ ಇಡೀ ಜೀವನವೇ ಅಡಗಿದೆ...ಅಲ್ಲಿ ಆದರ್ಶವಿದೆ, ತತ್ವವಿದೆ...ಬದುಕಿನ ಸತ್ವ ಸಹ ಅಲ್ಲಿ ಅಡಗಿದೆ....ಅದಕ್ಕೆಂದೇ ಇಟಗಿ ಈರಣ್ಣ ಅವರನ್ನು ನಾನು ಯಾವಾಗಲು ಅವರ ಮತ್ತೊಂದು ಮಹತ್ತರವಾದ ಶಾಯಿರಿ ಮೂಲಕ ನೋಡ ಬಯಸುವುದು...

ಬರಿಯಾಕಂತನ ಬದಕೆನಿ ಇನ್ನು ನಾನು..

ಇಲ್ಲಂದ್ರ ಸಾವು ಅನ್ನೋದು ತಿರಾ ಅಷ್ಟ ಕೆಟ್ಟ ಐತೇನು??

Saturday, July 25, 2009

ಗಿನ್ನಿಸ್ ದಾಖಲೆ ಪೋರನ ತುಂಟಾಟಗಳು....



೧೯೮೩-೮೪ ರ ಮಾತುಗಳಿವು...ನಾನಾಗ ೮ ನೆ ವರ್ಗದಲ್ಲಿ ಓದುತ್ತಿದ್ದೆ..ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ನನ್ನ ಶಾಲಾದಿನಗಳನ್ನು ಕಳೆದೆ...ಆ ದಿನಗಳಲ್ಲಿ ನಾವು ಧಾರವಾಡದ ಹೊಸಯೇಲ್ಲಾಪುರ್ ಏರಿಯಾದಲ್ಲಿ ವಾಸವಾಗಿದ್ದೆವು...ಹೊಸಯೇಲ್ಲಾಪುರದ ವೆಂಕಟೇಶ್ವರ ದೇವಸ್ತಾನದ ಎದುರಿನ ಒಂದು ಮನೆಯಲ್ಲಿ ನಾವು ಬಾಡಿಗೆಗಿದ್ದೆವು... ಆ ವೆಂಕಟೇಶ್ವರ ದೇವಸ್ತಾನದ ಪಕ್ಕದಲ್ಲಿಯೇ ಮಾಧವ ಗುಡಿ ಅವರ ಮನೆ...ನಮ್ಮ ಮನೆಯಿಂದ ಅವರ ಮನೆಗೆ ನಡೆದು ಕೊಂಡು ಹೋದರೆ ೧೦ ಸೆಕೆಂಡುಗಳ ಅಂತರ... ಅವರ ಮನೆಯಲ್ಲಿ ಯಾವಾಗಲು ಸಂಗೀತದ ವಾತಾವರಣ ಇರುತ್ತಿತ್ತಾದ್ದರಿಂದ ನಾನು ಮೇಲಿಂದ ಮೇಲೆ ಅವರ ಮನೆಗೆ ಹೋಗಿ ಅವರ ರಿಯಾಜ್ ಗಳನ್ನು ಕೇಳುತ್ತಾ ಕುಳಿತುಬಿಡುತ್ತಿದ್ದೆ..


ಶ್ರೀ. ಮಾಧವ ಗುಡಿ ಅವರ ಮಗ ಪ್ರಸನ್ನ ಗುಡಿ ಆಗ ಬಹುಶಃ ೪-೫ ವರ್ಷದವನಿರಬೇಕು....ಇಂದು ಅವನು ಗಿನ್ನಿಸ್ ದಾಖಲೆ ಮಾಡಿದ್ದಾನೆಂದರೆ ಅದನ್ನು ನಂಬಲು ಸಾಧ್ಯವೇ ಇಲ್ಲ...ಅವನಿಗೆ ಸಂಗೀತ ಒಲಿಯುತ್ತದೆ ಎಂಬ ವಿಷಯವೇ ಒಂದು ಹಂತದಲ್ಲಿ ಅಪಥ್ಯವಾಗುತ್ತದೆ...ಅಂತಹ ತುಂಟ ಅವನು...ಕಿಲಾಡಿತನ , ಕಿಡಿಗೆಡಿತನಕ್ಕೆ ಇನ್ನೊಂದು ಹೆಸರೇ ಪ್ರಸನ್ನ..ಅವನನ್ನು ನಾವೆಲ್ಲ ಪ್ರೀತಿಯಿಂದ "ಪರಶ್ಯಾ" ಎಂದು ಕರೆಯುತ್ತಿದ್ದೆವು...
ಧಾರವಾಡದ ಹೊಸಯೇಲಾಪುರದಲ್ಲಿ ನಿಮಗೆ ಅನೇಕ ಪುರಾತನ ಕೆರೆ ಬಾವಿಗಳು ಸಿಗುತ್ತವೆ....ಅಂತಹುದರಲ್ಲಿ "ನುಚ್ಚಂಬಲಿ ಬಾವಿ" ಎನ್ನುವುದೊಂದಿದೆ... ದಿನಾಲು ಬೆಳಿಗ್ಗೆ ನಾವಲ್ಲಿಗೆ ಈಜಲು ಹೋಗುತ್ತಿದ್ದೆವು...ಈ ಪ್ರಸನ್ನ ಆಗ ಪ್ರಾಯಶಃ ೪-೫ ವರ್ಷ ವಯಸಿನವನಾಗಿರಬೇಕು...ಬೆಳಿಗ್ಗೆ ನಮಗಿಂತಲೂ ಮುಂಚೆ ಆ ಬಾವಿಗೆ ಹೋಗಿ...ಮೇಲಿನಿಂದ ನೀರಿನಲ್ಲಿ ಜಿಗಿದು...ನನ್ನನ್ನು ಉಳಸ್ರಿ..ಅಂತ ಬೊಬ್ಬೆ ಹಾಕಿ...ದೊಡ್ಡ ರಂಪ ಮಾಡಿಬಿಟ್ಟಿದ್ದ... ತಿಳಿದದ್ದೇ ತಡ ಮಾಧವ ಗುಡಿ ಅವರು ಬಾವಿಯ ವರೆಗೆ ಬಂದು ಪರಶ್ಯಾನನ್ನು ರಸ್ತೆ ಗುಂಟ ಹೊಡೆಯುತ ಮನೆಗೆ ಕರೆದುಕೊಂಡು ಹೋಗಿದ್ದರು....

ಮತ್ತೊಂದು ಸಾರಿ ಹೀಗೆಯೇ ಆಗಿತ್ತು....ಅವರ ಮನೆಯ ಪಕ್ಕದಲ್ಲಿ ಒಂದು ಬೀದಿ ನಾಯಿ ಮಲಗಿತ್ತು...ಮದ್ಯಾನ್ಹದ ಸಮಯ...ಪರಶ್ಯಾ ಮನೆಯಲ್ಲಿ ಹೊಟ್ಟೆತುಂಬ ಊಟ ಮಾಡಿ ಹೊರಗೆ ಬಂದು ನೋಡಿದ್ದಾನೆ... ಅಲ್ಲಿ ನಾಯಿ ಮಲಗಿದೆ..ತಕ್ಷಣ ಮನೆಯ ಒಳಕ್ಕೆ ಹೊಕ್ಕು ಒಂದು ರೊಟ್ತಿಯನು ತಂದು ಅದರ ಮುಂದೆ ಹಾಕಿದ್ದಾನೆ....ನಾಯಿ ಗಾಢವಾದ ನಿದ್ರೆಯಲ್ಲಿದೆ...ರೊಟ್ಟಿಯ ಹತ್ತಿರ ಅದು ನೋಡಿಲ್ಲ...ಪರಶ್ಯಾನಿಗೆ ಸಿಟ್ಟು ಬಂದಿದೆ...ಮಲಗಿದ ನಾಯಿಯ ಬಾಯಿಯನ್ನು ತೆರೆದು ಅದರ ಬಾಯಲ್ಲಿ ರೊಟ್ಟಿಯನ್ನು ಇಡುವ ಪ್ರಯತ್ನ ಮಾಡಿದ್ದಾನೆ...ಸಿಟ್ಟಿಗೆದ್ದ ನಾಯಿ ಇವನನ್ನು ಕಂಡ ಕಂಡಲ್ಲಿ ಕಚ್ಚಿದೆ...ಇವನ ಪರಿಸ್ಥಿತಿ ಹೇಳತೀರದು...ತಕ್ಷಣ ಅವನಿಗೆ ಚಿಕಿತ್ಸೆ ಕೊಡಿಸಲೆಂದು ನಾವೆಲ್ಲ ಅವರ ತಂದೆಗೆ ಈ ವಿಷಯ ತಿಳಿಸಿದರೆ..ಅವರು ಬಂದವರೇ ತತ್ಕ್ಷಣಕ್ಕೆ ಏನನ್ನು ಯೋಚಿಸದೆ ಪರಶ್ಯಾನನ್ನು ಮನಸ್ಸಿಗೆ ಬಂದಂತೆ ಥಳಸಿದ್ದಾರೆ....ನಂತರ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಹೊಕ್ಕಳಿನ ಸುತ್ತ ೧೨ ಇಂಜಕ್ಷನ್ ಕೊಡಿಸಿದ್ದಾಯಿತು ....

ಹೀಗೆ ಅನೇಕ ತರಹದ ತುಂಟಾಟ...ತರಲೆ ಕೆಲಸಗಳಿಗೆ ಹೆಸರುವಾಸಿಯಾಗಿದ್ದ ಪ್ರಸನ್ನನಿಗೆ ಸಂಗೀತ ಒಲಿದಿದೆ ಎಂದು ನಂಬಲು ನನಗೆ ಸಾಧ್ಯವೇ ಆಗಲಿಲ್ಲ....ಅವನು ಗಿನ್ನಿಸ್ ದಾಖಲೆಗಾಗಿ ಹಾಡುವ ದಿನ ನಾನು ಧಾರವಾಡದಲ್ಲಿದ್ದೆ...ರಾತ್ರಿ ಎರಡು ಗಂಟೆಯ ತನಕ ಕುಳಿತು ಅವನ ಹಾಡುಗಳನ್ನು ಕೇಳಿದೆ...ನಿಜಕ್ಕೂ ಅದ್ಭುತವಾಗಿ ಹಾಡಬಲ್ಲ ಗಾಯಕ ಆತ...ಪರಿಶ್ರಮ ಪಟ್ಟರೆ ಇನ್ನು ಮೇಲಕ್ಕೆ ಏರುವ ಸಾಮರ್ಥ್ಯವಿರುವ ಪ್ರತಿಭಾವಂತ...ಅವನ ನಮ್ಮ ಸಂಪರ್ಕ ತಪ್ಪಿ ಈಗ ಏನಿಲ್ಲವೆಂದರೂ ೨೦ ವರ್ಷಗಳೇ ಕಳೆದಿವೆ... ಹಳೆಯ ನೆನಪುಗಳೇ ಹಾಗೆ...ಮಾಯವಾಗುವ ಗಾಯಕ್ಕೆ ಮತ್ತೆ ತುರಿಕೆ ಬಿಟ್ಟಂತೆ..... All the best Prasanna...Keep up the good work....