Wednesday, November 30, 2011

ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...


















ಮಾನ್ಯ ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೆ ಸಪ್ರೇಮ ವಂದನೆಗಳು...

ನಿಮ್ಮಗಳ ಕೃಪಾಶೀರ್ವಾದದಿಂದ ಕರ್ನಾಟಕದ ನಾವೆಲ್ಲ ಜನತೆ ಆರೋಗ್ಯದಿಂದಿದ್ದೇವೆ...ನೀವು ಸಹ ಆರೋಗ್ಯದಿಂದ ಇರುವುವಿರೆಂದು ಭಾವಿಸುತ್ತೇನೆ. ಈ ರೀತಿಯ ಪತ್ರಗಳು, ಸಾರ್ವಜನಿಕರಿಂದ ಬರುವ ಪತ್ರಗಳು ನಿಮಗೇನೂ ಹೊಸದಲ್ಲ ಮತ್ತು ಈ ನನ್ನ ಪತ್ರಕ್ಕೆ ತಮ್ಮಿಂದ ಯಾವುದೇ ಉತ್ತರ ದೊರೆಯುತ್ತದೆ ಎಂಬ ಆಶಾಭಾವನೆಯನ್ನು ಕೂಡ ನಾನು ಹೊಂದಿಲ್ಲ. ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಕಾಯಕದಲ್ಲಿ ನನ್ನದೂ ಒಂದು ಪಾಲಿರುವುದರಿಂದ ಈ ಪತ್ರವನ್ನು ನಿಮಗೆ ಬರೆಯುವ ಅನಿವಾರ್ಯತೆ ಇಂದು ನನ್ನ ಮುಂದಿದೆ. ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಇದನ್ನು ಓದುವ ಕೃಪೆತೋರಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ನನಗೆ ತಿಳುವಳಿಕೆ ಬಂದ ಮೇಲೆ, ಕರ್ನಾಟಕ ರಾಜ್ಯ ರಾಜಕಾರಣವನ್ನು ನೋಡುತ್ತ ಬಂದಿದ್ದೇನೆ. ಆದರೆ ರಾಜಕೀಯದ ನಿಜವಾದ ಖದರು ಏನು ಎಂದು ನಮಗೆಲ್ಲ ಅರ್ಥವಾಗಿದ್ದು, ಕರ್ನಾಟಕ ರಾಜ್ಯ ರಾಜಕಾರಣದ ಚುಕ್ಕಾಣಿಯನ್ನು ನಿಮ್ಮ ಪಕ್ಷ ಹಿಡಿದ ಮೇಲೆಯೇ. ಅಧಿಕಾರವನ್ನು ವಹಿಸಿಕೊಂಡ ನಂತರ ಮೊದಲ ಮೂರು ವರ್ಷಗಳ ಕಾಲ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು ರಾಜ್ಯಭಾರಮಾಡಿ ಅದೆಷ್ಟು ಸಲ ರೆಸಾರ್ಟ್ ರಾಜಕಾರಣಕ್ಕೆ ಮುನ್ನುಡಿಯನ್ನು ಬರೆದರೋ, ಅದೆಷ್ಟು ಸಲ ಮಾಧ್ಯಮದ ಮುಂದೆ ಕಣ್ಣೀರು ಹಾಕಿ ಇಂತಹ ತಪ್ಪನ್ನು ಇನ್ನು ಮುಂದೆ ಪುನರಾವರ್ತಿಸುವುದಿಲ್ಲ ಎಂದು ಹೇಳಿದರೋ, ಎಲ್ಲ ಅವಘಡಗಳಿಗೆ "ಇದು ಮಾಧ್ಯಮಗಳ" ಪಿತೂರಿ ಎಂಬ ಶೀರ್ಷಿಕೆಗಳನ್ನು ಕೊಟ್ಟರೋ...ಕ್ಷಮಿಸಿ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ.

ತಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಸಲೀಸಾಗಿ ಸಾಗಿಸಿ ಬಿಡಬಹುದು ಎಂಬುದನ್ನು ಅದ್ಭುತವಾಗಿ ಕರಗತ ಮಾಡಿಕೊಂಡಿರುವ ಯಡಿಯೂರಪ್ಪನವರು, ಮೊದಲಿನಿಂದಲೂ ಅಂದರೆ ಅಧಿಕಾರಕ್ಕೆ ಬಂದ ದಿನದಿಂದಲೂ ಸಾಬೀತು ಪಡಿಸುತ್ತ ಹೋದರು. ಅದನ್ನು ತಮ್ಮ ಅಧಿಕಾರ ಹೋದ ನಂತರವೂ ಸಾಧಿಸುತ್ತಿದ್ದಾರೆ. ಲೋಕಾಯುಕ್ತದ ವರದಿಯನ್ನು ನಮ್ಮ ಸರಕಾರ ಇನ್ನೂ ಅಂಗೀಕರಿಸಿಲ್ಲ ಹಾಗೆಯೇ ತಿರಸ್ಕರಿಸಿಯೂ ಇಲ್ಲ. ಹಾಗಿದ್ದ ಪಕ್ಷದಲ್ಲಿ ಅವರು ಜೈಲು ಸೇರಿರುವುದು ಲೋಕಾಯುಕ್ತ ವರದಿ ಆಧಾರಿತ ಎಂದು ಹೇಗೆ ಹೇಳುತ್ತೀರಿ? ಒಬ್ಬ ಸಾಮಾನ್ಯ ಪ್ರಜೆ ಕೂಡ ಅರ್ಥ ಮಾಡಿಕೊಳ್ಳ ಬಲ್ಲ ಈ ಪ್ರಕರಣ, ನೀವು ಜೈಲಿಗೆ ಹೋಗಿದ್ದು ಖಾಸಗೀ ದೂರಿನ ಕಾರಣದಿಂದಾಗಿಯೇ ಹೊರತು, ಲೋಕಾಯುಕ್ತ ವರಧಿಯ ಆಧಾರದ ಮೇಲೆ ಅಲ್ಲ. ಬಹುಷಃ ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗಬಹುದೆಂಬ ಸಿದ್ಧಾಂತಕ್ಕೆ ನೀವು ಜೋತು ಬಿದ್ದಿರಬಹುದು.

ಹಿಂದೆ ಅನೇಕ ಸಂದರ್ಭಗಳಲ್ಲಿ ವಿರೋಧ ಪಕ್ಷದವರು, ಮಾಧ್ಯಮದವರು, ಬಳ್ಳಾರಿಯಲ್ಲಿನ ಆಡಳಿತ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದಾಗ, ನೀವು ಹಾಗಾಗಲು ಸಾಧ್ಯವೇ ಇಲ್ಲ. ಅಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ನಮ್ಮ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಸಹಿಸದವರು ಹೀಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬ ಪುಕಾರುಗಳನ್ನು ತೇಲಿ ಬಿಟ್ಟಿರಿ. ಇದನ್ನು ನೀವೊಬ್ಬರೇ ಮಾಡಲಿಲ್ಲ, ಬದಲಿಗೆ ನಿಮ್ಮ ಎಲ್ಲ ಶಿಷ್ಯ ಬಳಗ ಕಂಡ ಕಂಡಲ್ಲೆಲ್ಲ ಗಂಟಲು ಹರಿಯುವಂತೆ ಕಿರುಚಾಡುತ್ತ ಹೇಳಿದರು. ಪರಿಸ್ಥಿತಿಗಳು ಬದಲಾದವು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಗಳು ಬಂದರು. ನಿಮ್ಮ ಸುಪರ್ದಿಯಲ್ಲೇ ಅವರು ಇನ್ನೂ ರಾಜ್ಯಭಾರ ಮಾಡುತ್ತಿದ್ದಾರೆ. ಅವರೂ ಸಹ ನಿಮ್ಮ ಮಾತುಗಳನ್ನೇ ಪುನರಾವರ್ತಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಗೂಂಡಾ ರಾಜ್ಯವಿದೆ ಎಂಬ ಮಾತುಗಳು ನಿಮ್ಮಿಂದ ಮಾತ್ರವಲ್ಲ, ಬಳ್ಳಾರಿಯಲ್ಲಿ ಉಪಚುನಾವಣೆ ಘೋಷಣೆಯಾದದ್ದೇ ತಡ, ನಿಮ್ಮ ಪಕ್ಷದ ಎಲ್ಲ ನಾಯಕರ ಬಾಯಿಂದ ಈ ಅಣಿಮುತ್ತುಗಳು ಉದುರಲಾರಂಭಿಸಿದವು. ರೆಡ್ಡಿಗಳನ್ನು ಬೆಳಸಿದವರು ನೀವೇ ಅಲ್ಲವೇ? ಅವರ ತಾಳಕ್ಕೆ ತಕ್ಕಂತೆ ನೀವು ಕುಣಿದಿರಿ. ಅವರನ್ನು ಬೇಕಾದಂತೆ ಬಳಸಿಕೊಂಡಿರೆ, ಅವರು ನಿಮ್ಮ ವಿರುದ್ಧ ತಿರುಗಿ ಬಿದ್ದಾಗ ಮಾಧ್ಯಮಗಳ ಮುಂದೆ ಬಂದು ಕಣ್ಣೀರುಹಾಕಿದಿರಿ... ಮರುದಿನವೇ ಅವರೊಂದಿಗೆ ಎಲ್ಲ ನಾಯಕರೂ ಸೇರಿ, ವಿಜಯದ ಸಂಕೇತದ ಚಿತ್ರವನ್ನು ಮಾಧ್ಯಮಗಳಿಗೆ ತೇಲಿ ಬಿಟ್ಟಿರಿ. ಒಟ್ಟಾರೆಯಾಗಿ ನೀವು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಏನು ಸಂದೇಶವನ್ನು ಕೊಡಲು ಹೊರಟಿದ್ದಿರಿ?

"ಆಪರೇಷನ್ ಕಮಲ" ಎಂಬ ಅಕ್ರಮಗಳಿಗೆ ಕೈಹಾಕಿ, ಮೂರುವರೆ ವರ್ಷಗಳಲ್ಲಿ ನಮ್ಮ ನಾಡಿನ ಜನ ಹಿಂದೆಂದೂ ಕಾಣದಷ್ಟು ಉಪಚುನಾವಣೆಗಳನ್ನ ಕಂಡರು. ರಾಜ್ಯಕ್ಕೆ ಸ್ಥಿರ ಸರ್ಕಾರವನ್ನ ನೀಡಬೇಕು ಅನ್ನುವ ಒಂದೇ ಉದ್ದೇಶದಿಂದ "ಆಪರೇಷನ್ ಕಮಲ" ನಡೆಸಿದ ನಿಮ್ಮ ಪಕ್ಷ, ಜನ ಸಾಮಾನ್ಯರು ಬೆವರು, ರಕ್ತ ಸುರಿಸಿ ಗಳಿಸಿ, ಕಟ್ಟಿದ ತೆರಿಗೆ ಹಣದಿಂದ ಮೋಜು ಮಸ್ತಿ ಉಡಾಯಿಸಿದ ಪರಿಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಇಂತಹ ಅಕ್ರಮ ಚಟುವಟಿಕೆಗಳಿಗೆ ನೀವೇ ಅಲ್ಲವೇ ರೆಡ್ಡಿಗಳ ಬೆಂಗಾವಲಾಗಿ ನಿಂತಿದ್ದು. ಅಂದೇಕೆ ಅವರನ್ನು ನಿಯಂತ್ರಿಸಲು ನಿಮ್ಮಿಂದ ಸಾಧ್ಯವಾಗಲಿಲ್ಲ? ಅದೂ ಸಾಲದೆಂಬಂತೆ ಬಳ್ಳಾರಿ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ, ಶ್ರೀರಾಮುಲು ಹಿಂದೆ ಬಿ-ಫಾರ್ಮ್ ಹಿಡಿದುಕೊಂಡು ನಿಮ್ಮ ಇಡೀ ಪಕ್ಷ ಅಲೆದಾಡಿತು. ಆಗಲೂ ಕೂಡ ನಿಮಗೆ ಅವರ ಅಕ್ರಮಗಳು, ಗೂಂಡಾಗಿರಿಯ ದರ್ಶನವಾಗಲೇ ಇಲ್ಲವೇ? ಹೇಗೆ ನಂಬೋದು? ಯಾವಾಗ ಶ್ರೀರಾಮುಲು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತಕರಾರು ತೆಗೆದರೋ, ಅವರ ಎಲ್ಲ ಗೂಂಡಾಗಿರಿಯ ದರ್ಶನ ನಿಮಗೆಲ್ಲ ಒಮ್ಮೆಲೇ ಅವಿರ್ಭವಿಸತೊಡಗಿದವು. ರಾಜಕಾರಣದಲ್ಲಿ ಯಾರೂ ಖಾಯಂ ಮಿತ್ರರೂ ಅಲ್ಲ ಶತ್ರುಗಳೂ ಅಲ್ಲ. ಗೊತ್ತು.. ಈ ಮಾತು ಚೆನ್ನಾಗಿ ಗೊತ್ತು... ಆದರೆ ಇಲ್ಲಿ ನಡೆಯುತ್ತಿರುವುದು ರಾಜಕೀಯ ಅಲ್ಲ. ಇದು ನಮ್ಮ ನಾಡಿನ ಸಮಸ್ತ ಜನತೆಯ ಕಿವಿಯ ಮೇಲೆ ಹೂವನ್ನಿಟ್ಟು, ಅವರನ್ನು ಮೂರ್ಖರನ್ನಾಗಿಸುತ್ತಿದ್ದೀರಿ.

ಬಳ್ಳಾರಿ ಉಪಚುನಾವಣೆಯ ನಂತರ ರಾಜ್ಯ ರಾಜಕೀಯ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ. ಮತ್ತೆ ಚುನಾವಣೆಯನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ಆಗೇನು ಕಾರಣ ಕೊಡುತ್ತೀರಿ ನಮಗೆ? ಮತ್ತೆ ನಿಮ್ಮನ್ನು ಕ್ಷಮಿಸುವಂತೆ ಗೋಗರೆಯುತ್ತೀರಾ? ಈ ತಪ್ಪು ಮತ್ತೊಮ್ಮೆ ಆಗಲಾರದು ಎಂದು ಅಂಗಲಾಚುತ್ತೀರಾ? ಒಂದು ಕೆಲಸ ಮಾಡಿ.... ನಿಮ್ಮ ಯಾವ ಯಾವ ಕೆಲಸಗಳಿಗೆ ಅಥವಾ ನೀವು ಮಾಡುವ ಯಾವ ಯಾವ ಕೆಲಸಗಳಿಗೆ ನಾವು ನಿಮ್ಮನ್ನು ಕ್ಷಮಿಸಬೇಕು ಎಂದು ಒಂದು ಪಟ್ಟಿ ಸಿದ್ಧ ಮಾಡಿ ಅದನ್ನ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಬಿಡಿ. ಅಂದರೆ ನಿಮ್ಮ ನಿಲುವು ನಮಗೆ ಸ್ಪಷ್ಟವಾಗುತ್ತದೆ.

ಈ ಎಲ್ಲ ಅವಘಡಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ವಿರೋಧ ಪಕ್ಷಗಳು. ಯಾವುದೇ ಸಿದ್ಧಾಂತಕ್ಕೆ ಬದ್ಧವಾಗಿರದೇ, ಅವೂ ಸಹ ತಮ್ಮ ಆಂತರಿಕ ಕಚ್ಚಾಟಗಳಿಂದ, ಗುಂಪುಗಾರಿಕೆಗಳಿಂದ ಸಮರ್ಥ ವಿಪಕ್ಷಗಳಾಗಲೇ ಇಲ್ಲ.

ನಮ್ಮಲ್ಲಿ ಅನೇಕ ಸಮಸ್ಯೆಗಳಿಗೆ... ನೆರೆ ಸಂತ್ರಸ್ತರಿಗೆ ಇನ್ನೂ ಸರಿಯಾಗಿ ಆಸರೆ ಮನೆಗಳು ಸಿಕ್ಕಿಲ್ಲ. ಶಾಲಾ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಒದ್ದಾಡುತ್ತಿವೆ.... ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.. ಇಂತಹ ಅನೇಕ ಸಮಸ್ಯೆಗಳು ನಮ್ಮ ತಲೆತಿನ್ನುತ್ತಿದ್ದಾಗ..ರಾಜ್ಯದ ಆಡಳಿತ ಯಂತ್ರವನ್ನು ಸಂಪೂರ್ಣ ಸ್ಥಗಿತಗೊಳಿಸಿ, ಒಂದು ಯಕಶ್ಚಿತ್ ಉಪ ಚುನಾವಣೆಗೆ ಎಲ್ಲ ಮಂತ್ರಿ ಮಹೋದಯರನ್ನ ಕರೆದುಕೊಂಡು ಬಳ್ಳಾರಿಯಲ್ಲಿ ಠಿಕಾಣಿ ಹೂಡಿದ ನಿಮ್ಮ ರಾಜ್ಯಭಾರದಲ್ಲಿ ಬದುಕುತ್ತಿರುವ ನಾವೇ ಧನ್ಯರು....

Friday, May 13, 2011

ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಸೇರಲು ಕೆಲವು ಮಾಹಿತಿಗಳು...

"ಪಿಯುಸಿ ಶಿಕ್ಷಣ ಮುಗಿಯಿತು..ಮುಂದೇನು ಓದುವುದು?...ಅರೇ ನನ್ನ ಡಿಗ್ರಿ ಕೂಡ ಮುಗಿಯಿತು....ನಾನು ಮುಂದೆ ಶಿಕ್ಷಣ ಮುಮ್ದುವರೆಸುವುದೇ ಅಥವಾ ಕೆಲಸಕ್ಕೆ ಸೇರುವುದೇ? ಕೆಲಸಕ್ಕೆ ಸೇರುವುದಾದರೆ ಮುಂದೆ ಯಾವ ಕ್ಷೇತ್ರ ನನ್ನ ಬದುಕಿಗೆ ಹೊಂದಬಲ್ಲದು? ನನಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಯಾರೂ ಇಲ್ಲ..." ಇದು ಇಂದಿನ ಬಹುತೇಕ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ. ಅದರಲ್ಲೂ ಗ್ರಾಮಾಂತರ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಂತಹ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದವರಂತೂ ಅವರ ಮುಂದಿರುವುದು ಎರಡೇ ದಾರಿ ಒಂದು ಎಂಜಿನೀಯರಿಂಗ್ ಶಿಕ್ಷಣಕ್ಕೆ ಸೇರಿಕೊಳ್ಳಬೇಕು ಅಥವಾ ವೈದ್ಯಕೀಯದಲ್ಲಿ ಪದವಿಯನ್ನು ಪಡೆಯಬೇಕು. ಆ ಕ್ಷಣದಲ್ಲಿ ವಾಸ್ತವ ಸಂಗತಿ ಅವರ ಅರಿವಿಗೆ ಬರುವುದೇ ಇಲ್ಲ. ಎಲ್ಲರಿಗೂ ತಮ್ಮ ಶಿಕ್ಷಣ ಮುಗಿದ ತಕ್ಷಣ ಕೈತುಮ್ಬ ಸಂಬಳವಿರುವ ಕೆಲಸ ಬೇಕು. ನೆಮ್ಮದಿಯ ಜೀವನ ನಡೆಸಬೇಕು. ಇದು ನಾವಿಂದು ಕಾಣುತ್ತಿರುವ ಸಾಮಾನ್ಯ ಸಂಗತಿ. ಬಹುತೇಕ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣ ಮುಗಿದ ನಂತರ ಸ್ನಾತಕೋತ್ತರ ಪದವಿಗೆಂದು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಇದು ಕೇವಲ ಔಪಚಾರಿಕವಾಗಿ ಕಾಣುತ್ತದೆ. ಇನ್ನೂ ಒಂದು ಸ್ವಲ್ಪ ದಿವಸ ವಿದ್ಯಾರ್ಥಿ ಜೀವನವನ್ನು ಅನುಭವಿಸಬೇಕೆಂದು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತುವವರು, ಮುಂದೆ ಏನೂ ಸಾಧಿಸಲಾಗದೇ ಜೀವನದಲ್ಲಿ ಹತಾಶರಾಗುವುದು ಇವೆಲ್ಲ ನಾವಿಂದು ಕಾಣುವ ಸಾಮಾನ್ಯ ಸಂಗತಿಗಳು.

ಸಮೂಹ ಸಂವಹನ ಕ್ಷೇತ್ರ ಇಂದು ಹಿಂದಿಗಿಂತಲೂ ವಿಶಾಲವಾಗಿ ಹರಡಿದೆ. ಅದರಲ್ಲೂ ಜಾಹಿರಾತು ಹಾಗೂ ಸಾರ್ವಜನಿಕ ಸಂಪರ್ಕ ಕ್ಷೇತ್ರಗಳಲ್ಲಿರುವ ಅವಕಾಶಗಳು ಬೇರೆ ಯಾವುದೇ ಮಾಧ್ಯಮ ಕ್ಷೇತ್ರಗಳಲ್ಲಿಲ್ಲ. ಪತ್ರಿಕೋದ್ಯಮ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳು ಅದನ್ನೊಂದು ವೃತ್ತಿಪರ ಕೋರ್ಸ್ ಎಂದು ಪರಿಗಣಿಸುವುದೇ ಇಲ್ಲ. ಮಾಧ್ಯಮ ಲೋಕ ಅವರಿಗೆ ಅತ್ಯಂತ ವರ್ಣರಂಜಿತವಾಗಿ ಕಾಣುತ್ತದೆ. ಹಗಲುಗನಸು ಕಾಣಲು ಆರಂಭಿಸುತ್ತಾರೆ. ಮುಂದೊಂದು ದಿನ ಅವರು ದೇಶದ ಪ್ರತಿಷ್ಠಿತ ದೃಶ್ಯಮಾದ್ಯಮದಲ್ಲಿ ರಾರಾಜಿಸುವ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. ಆದರೆ ಆ ಮೆಟ್ಟಿಲನ್ನು ಏರಲು ಬೇಕಾದ ಅರ್ಹತೆ ತಮ್ಮಲ್ಲಿದೆಯೇ, ಅದಕ್ಕ ತಕ್ಕ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆಯೇ ಎನ್ನುವುದರ ಕುರಿತು ಕಿಂಚಿತ್ತೂ ಕಾಳಜಿವಹಿಸುವುದಿಲ್ಲ. ಪತ್ರಿಕೋದ್ಯಮ ಶಿಕ್ಷಣಕ್ಕೆ ಸೇರಿದ ದಿನದಿಂದಲೇ ಅವರಲ್ಲಿ ಮಹತ್ತರವಾದ ಬದಲಾವಣೆಗಳು ಆರಂಭವಾಗಿಬಿಟ್ಟಿರುತ್ತವೆ. ಇತರೆ ಎಲ್ಲ ಜನಸಾಮಾನ್ಯರಿಗಿಂತ ಅವರು ತಮ್ಮನ್ನು ತಾವು ತುಂಬ ವಿಭಿನ್ನ ಎಂಬ ಮನೊಭಾವನೆ ಅವರಲ್ಲಿ ಬಂದು ಬಿಟ್ಟಿರುತ್ತದೆ. ಈ ಮನೋಭಾವನೆ ಅವರನ್ನು ಮುಂದೆ ಏನನ್ನೂ ಹೊಸತನ್ನು ಕಲಿಯಲು ಬಿಡುವುದಿಲ್ಲ. ಕಲಿಕೆ ಎನ್ನುವುದು ಅವರಲ್ಲಿ ನಿಧಾನವಾಗಿ ಕುಂಠಿತಗೊಳ್ಳತೊಡಗುತ್ತದೆ.

ಜಗತ್ತಿನ ಯಾವುದೇ ಮೂಲೆಯಲ್ಲಿ ನಾವಿಂದು ವಾಸಿಸುತ್ತಿದ್ದರೂ, ವಿಶ್ವದ ಎಲ್ಲ ಘಟನೆಗಳು ನಮ್ಮ ಬೆರಳ ತುದಿಗೆ ಬಂದು ಬೀಳುತ್ತಿವೆ. ನಾವೆಲ್ಲ ಇಂದು ಒಂದು ಪುಟ್ಟ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಜಗತ್ತು ಇಂದು ಬಹಳ ವೇಗವಾಗಿ ಓಡುತ್ತಿದೆ. ಆದರೆ ನಾವು ಅದರ ವೇಗಕ್ಕೆ ಹೊಂದಿಕೊಳ್ಳುತ್ತಿದ್ದೇವೆಯೇ? ಬಿನ್ ಲಾಡೆನ್‍ನನ್ನು ಅಟೋಟಾಬಾದ್ ನಲ್ಲಿ ಹೆಡೆಮುರಿಕಟ್ಟಿದ ಸುದ್ದಿ ನಮಗೆಲ್ಲ ಕ್ಷಣಮಾತ್ರದಲ್ಲಿ ತಿಳಿದುಹೋಯ್ತು. ಜಪಾನ್‍ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ಪರಿಣಾಮ ನಮ್ಮನ್ನೆಲ್ಲ ನಿಮಿಷಾರ್ಧದಲ್ಲಿ ಬೆಚ್ಚಿ ಬೀಳಿಸಿತು. ಇಂತಹ ಅನೇಕ ಸುದ್ದಿಗಳು ನಮ್ಮನ್ನಿಂದು ವಿಶ್ವದ ಮೂಲೆಮೂಲೆಗಳಿಂದ ಬಂದು ತಲುಪುತ್ತಿವೆ. ಇದು ಸಂವಹನ ಮಾಧ್ಯಮದಲ್ಲಿ ನಡೆಯುತ್ತಿರುವ ಕ್ರಾಂತಿ. ಆದರೆ ಇಂತಹ ಸುದ್ದಿಗಳನ್ನು ಬಿತ್ತರಿಸುತ್ತಿರುವ ಮಾಧ್ಯಮಗಳು ಯಾವ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತವೆ, ಅಂತಹ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಅರ್ಹತೆಗಳೇನು ಮುಂತಾದ ಮೂಲಭೂತ ಅಗತ್ಯಗಳ ಬಗ್ಗೆ ಇಂದಿನ ಯುವ ಜನಾಂಗ ಅದರಲ್ಲೂ ಆ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮೂಹ ಕೂಲಂಕುಷವಾಗಿ ಅಧ್ಯಯನ, ಸಂಶೋಧನೆಗಳನ್ನ ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ. ಬೆಳಗಾಗುವಷ್ಟರಲ್ಲಿ ಮಾಧ್ಯಮ ಲೋಕದ ಹಕ್ಕಿಗಳಾಗಬೇಕು, ಜನರು ನಮ್ಮನ್ನು ವಿಶೇಷ ವ್ಯಕ್ತಿಗಳೆಂದು ಗುರುತಿಸಬೇಕು, ಸಮಾಜದಲ್ಲಿ ತಮಗೊಂದು ವಿಶೇಷ ಸ್ಥಾನಮಾನ, ಗೌರವ ದೊರೆಯಬೇಕು ಎಂಬ ಹವಣಿಕೆ ಮಾತ್ರ ಅವರದ್ದಾಗಿರುತ್ತದೆ.

ಭಾರತದ ಮಟ್ಟಿಗೆ ಹೇಳುವುದಾದರೆ ಸಾರ್ವಜನಿಕ ಸಂಪರ್ಕ ಕ್ಷೇತ್ರ ತುಂಬ ಹೊಸತೇನಲ್ಲ. ಅದು ಭಾರತಕ್ಕೆ ಪುರ್ಣ ಪ್ರಮಾಣದಲ್ಲಿ ಪರಿಚಯವಾಗಿದ್ದು ಕೇವಲ ಇಪ್ಪತ್ತು ವರ್ಷಗಳ ಹಿಂದೆ ಮಾತ್ರ. ಆದರೆ ಅದು ಇಂದು ಹರಡಿಕೊಂಡಿರುವ ಕ್ಷೇತ್ರ ಮಾತ್ರ ತುಂಬ ವಿಶಾಲವಾದದ್ದು. ಪತ್ರಿಕೋದ್ಯಮವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾರ್ವಜನಿಕ ಸಂಪರ್ಕವನ್ನೂ ಸಹ ಅಧ್ಯಯನ ಮಾಡುತ್ತಾರೆ. ಆದರೆ ವಿಪರ್ಯಾಸವೆಂದರೆ ಅವರ ಅಧ್ಯಯನ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗುತ್ತಿದೆ. ಅದನ್ನು "ಕೆರಿಯರ್" ಮಾಡಿಕೊಳ್ಳುವ ಉದ್ದೇಶದಿಂದ ಯಾರೂ ಅಧ್ಯಯನ ಮಾಡುತ್ತಿಲ್ಲ. ತಮ್ಮ ರಜಾದಿನಗಳ ಇಂಟರ್ನ್‌ಶಿಪ್‍ಗೆಂದು ಬರುವ ಬಹುತೇಕ ವಿದ್ಯಾರ್ಥಿಗಳು ಮುದ್ರಣ ಮಾಧ್ಯಮ, ದೃಷ್ಯ ಮಾಧ್ಯಮದ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಾರೆ. ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತರಬೇತಿಗೆಂದು ಬರುವ ವಿದ್ಯಾರ್ಥಿಗಳ ಸಂಖೆ ತೀರ ಕಡಿಮೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕೂಡ ಜವಾಬ್ದಾರಿ. ಉದ್ಯಮದಲ್ಲಿ ನಡೆಯುತ್ತಿರುವ ಆಗು-ಹೋಗುಗಳನ್ನು, ಬೆಳವಣಿಗೆಗಳನ್ನು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಹಳೆಯ ಪಠ್ಯಗಳನ್ನು ಅವಲಂಭಿಸಿ, ಅದರಲ್ಲಿರುವ ವಿಷಯಗಳನ್ನು ಮಾತ್ರ ಅವರಿಗೆ ಕಲಿಸಲಾಗುತ್ತಿದೆ. ಹೀಗಾಗಿ ನಮ್ಮ ಇಂದಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಸಾರ್ವಜನಿಕ ಸಂಪರ್ಕ ಎನ್ನುವುದು ಕೇವಲ ಅಂಕ ಗಳಿಸುವ ವಿಷಯ ಮಾತ್ರವಾಗಿದೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳ ಬಯಸುವ ವಿದ್ಯಾರ್ಥಿಗಳು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರಚಲಿತ ವಿದ್ಯಮಾನಗಳ ಕುರಿತು ಉತ್ತಮ ಜ್ಞಾನ ಹೊಂದಿರಬೇಕು. ಮಾತನಾಡುವುದು, ಬರೆಯುವುದು, ಬೇರೆಯವರೊಂದಿಗೆ ಸಂವಹಕ್ರೀಯೆ ನಡೆಸುವುದರಲ್ಲಿ ನಿಪುಣರಾಗಿರಬೇಕು. ಇಂಗ್ಲೀಷ್ ಭಾಷೆಯ ಜ್ಞಾನ ಅಗತ್ಯ. ತಮ್ಮ ಇಡೀ ವಿದ್ಯಾಭ್ಯಾಸವನ್ನು ಮಾತೃಭಾಷೆಯಲ್ಲಿ ಮುಗಿಸಿದವರು ಇದಕ್ಕೆ ಅರ್ಹರಲ್ಲ ಎಂಬುದು ಇದರ ಅರ್ಥವಲ್ಲ. ತಮ್ಮ ವಿದ್ಯಾಭ್ಯಾಸದ ಜೊತೆಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು, ಬರೆಯಲು ರೂಢಿಮಾಡಿಕೊಳ್ಳಬೇಕು. ಇವೆಲ್ಲವುಗಳ ಜೊತೆಗೆ ಜಾಗತಿಕ ವಿದ್ಯಮಾನಗಳ ಬಗ್ಗೆ ಸದಾ ತಿಳಿದುಕೊಳ್ಳುತ್ತಿರಬೇಕು.

ಬಹುತೇಕ ಜನರಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿನ ಕೆಲಸವೆಂದರೆ ಕೇವಲ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಗಳನ್ನ ಕೊಡುವ, ಪತ್ರಿಕಾ ಪ್ರಕಟನೆಗಳನ್ನು ಹಂಚಿವ ಕೆಲಸ ಎಂದು ಮಾತ್ರ. ಆದರೆ ಅದೆಲ್ಲವನ್ನೂ ಮೀರಿ ಈ ಕ್ಷೇತ್ರ ಇಂದು ಬೆಳೆದು ನಿಂತಿದೆ. ರಾಜಕಾರಣಿಗಳು, ಕಾರ್ಪೋರೇಟ್ ಸಂಸ್ಥೆಗಳು, ಸೆಲೆಬ್ರಿಟಿಗಳು ಮುಮ್ತಾದವರೆಲ್ಲರೂ ಇಂದು ಖಾಸಗಿ ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ನೆರವನ್ನು ಪಡೆಯುತ್ತಿದ್ದಾರೆ. ಆಯಾ ಚಟುವಟಿಕೆಗಳಿಗನುಗುಣವಾಗಿ ಸರಿಯಾದ ಕಾರ್ಯತಂತ್ರ ರೂಪಿಸುವ ಪಡೆಯೇ ಇಂತಹ ಸಂಸ್ಥೆಯಲ್ಲಿರುತ್ತದೆ. ಅದಕ್ಕೆ ನಿರ್ಧಿಷ್ಟವಾದ ಯೋಜನೆಗಳ ರೂಪು-ರೇಷೆಗಳನ್ನು ನಿರ್ಧರಿಸಿ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಅನೇಕ ಜನ ಖ್ಯಾತನಾಮರಿಗೆ ಮಾಧ್ಯಮಗಳ ಎದುರು ಹೇಗೆ ಮಾತನಾಡಬೇಕು, ಏನು ಹೇಳಬೇಕು ಎಂದು ತಿಳಿದಿರುವುದಿಲ್ಲ. ಅಂತಹ ವ್ಯಕ್ತಿಗಳಿಗೆ, ಕಾರ್ಪೋರೇಟ್ ಸಂಸ್ಥೆಗಳಿಗೆ ಮಾಧ್ಯಮ ತರಗತಿಗಳನ್ನೂ ಸಹ ಇಲ್ಲಿ ನಡೆಸಲಾಗುತ್ತಿದೆ. ಹೀಗೆ ಹತ್ತು ಹಲವು ಬಗೆಯಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರ ವಿಸ್ತಾರಗೊಂಡಿದೆ. ಈ ಎಲ್ಲ ಅನುಭವಗಳನ್ನು ಪುಸ್ತಕ ಓದಿ ತಿಳಿದುಕೊಳ್ಳುವುದು ಅಸಾಧ್ಯ. ಅದನ್ನು ಪ್ರಾಯೋಗಿಕವಾಗಿ ಕಲಿಯಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬಯಸುವ ಯುವ ಜನಾಂಗ ಈ ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ತರಬೇತಿಯನ್ನು ಪಡೆದುಕೊಳ್ಳುವುದು ಉತ್ತಮ.

ಈ ಮೊದಲೇ ಹೇಳಿದಂತೆ ದಿನದಿಂದ ದಿನಕ್ಕೆ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವಿಗೆ, ಶಿಕ್ಷಕರೂ ಸಹ ಕನಿಷ್ಟ ಪಕ್ಷ ವರ್ಷಕ್ಕೊಂದು ಬಾರಿ ಹದಿನೈದು ದಿನಗಳ ಮಟ್ಟಿಗೆ ಇಂತಹ ತರಬೇತಿ ಪಡೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ಅಪವಾದವೆನ್ನುವಂತೆ ಅನೇಕ ಖಾಸಗಿ ಸಂಸ್ಥೆಗಳು ಪಕ್ಕಾ ವೃತ್ತಿಪರರಂತೆ ಶಿಕ್ಷಣವನ್ನು ನೀಡುತ್ತಿದ್ದು, ಅಲ್ಲಿನ ಶುಲ್ಕ ಸ್ವಲ್ಪ ದುಬಾರಿಯಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಅಲ್ಲಿನ ಶಿಕ್ಷಣ ಹುಳಿ ದ್ರಾಕ್ಷಿಯಾಗುತ್ತಿದೆ.

ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವವರಿಗೆ ಆರಂಭಿಕ ಹಂತದಲ್ಲಿ ೧೫ ರಿಂದ ೨೦ ಸಾವಿರದವರೆಗೂ ಸಂಬಳ ನೀಡಲಾಗುತ್ತದೆ. ಸ್ವಲ್ಪ ಕ್ರಿಯಾತ್ಮಕವಾಗಿ ಯೋಚಿಸುವಾರು ಇದಕ್ಕಿಂತಲೂ ಹೆಚ್ಚು ಪಡೆಯಬಹುದಾಗಿದೆ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದಿನಿಂದಲೇ ತಯಾರಿ ಶುರು ಮಾಡಿಕೊಳ್ಳಿರಿ.


Monday, May 2, 2011

ಯಾರ್ಯಾರೋ ಬಂದವರಾ......


"ಒಳಾಕ ಬರ್ರಿ..ಯಾರದು ಬಂದದ್ದು..." ಎಂದು ಇಳಿ ವಯಸ್ಸಿನ ಮುದುಕ ತನ್ನ ಹಣೆಗೆ ಕೈ ಹಚ್ಚಿ ಸುಡು ಬಿಸಿಲಿನಲ್ಲಿ ನಮ್ಮ ಕಡೆ ನೋಡಿದಾಗ, ನಮಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಇದು ಅದೇ ಮನೆನಾ? ಅವನು ನಮಗೆ ಹೇಳಿದ್ದು ಅವರ ಅಪ್ಪ ತನ್ನ ತಾಯಿಯನ್ನು ಇಟ್ಟುಕೊಂಡಿದ್ದರು....ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದವರು....ಅವರ ಅಕ್ರಮ ಸಂಬಂಧಕ್ಕೆ ನಾನು ಹುಟ್ಟಿದ್ದು....ಬದುಕು ನಿಜಕ್ಕೂ ಕಷ್ಟದ ದಾರಿಯಾದಾಗ ನಮ್ಮ ದೂರದ ಸಂಬಂಧಿಯೊಬ್ಬರು ನನ್ನ ಕೈಹಿಡಿದು ಓದಿಸುತ್ತಿದ್ದಾರೆ..ಮುಂತಾದ ವಿಷಯಗಳೆಲ್ಲ ನಮ್ಮ ತಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದವು...

ನಿಧಾನಕ್ಕೆ ಹೆಜ್ಜೆ ಹಾಕುತ್ತ ಬಂದ ಆ ವೃದ್ಧ ಜೀವ ನಮ್ಮನ್ನು ಮಾತನಾಡಿಸುತ್ತಲೇ, ನಮ್ಮನ್ನು ಅಲ್ಲಿ ಕೂರಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಪಕ್ಕದಲ್ಲಿ ಕಟ್ಟಿದ್ದ ಮೇಕೆ ಮರಿಯೊಂದು ಮ್ಯಾ...ಎಂದು ಕೂಗುತ್ತಿತ್ತು..ಅದರ ಮುಂದೆ ಒಂದೆರಡು ಒಣ ಸೊಪ್ಪನ್ನು ಬಿಟ್ಟರೆ ಬೇರೇನೂ ಇರಲಿಲ್ಲ ತಿನ್ನಲು...ಒಂದೆರಡು ಚಿಕ್ಕ ಚಿಕ್ಕ ಮಕ್ಕಳು ಸರಿಯಾಗಿ ಚಡ್ಡಿಯನ್ನು ಸಹ ಹಾಕದೇ, ಮೂಗಿನಲ್ಲಿ ಫೇವಿಕಾಲ್ ಸುರಿಸುತ್ತ ಅತ್ತಿಂದಿತ್ತ - ಇತ್ತಿಂದತ್ತ ಓಡಾಡುತ್ತಿದ್ದವು...ಅಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸಹ ಆ ಮುದುಕ ನಮ್ಮನ್ನು ಮರ್ಯಾದೆಯಿಂದ ನೋಡಿಕೊಳ್ಳಲು ಪಡುತ್ತಿದ ಪ್ರಯತ್ನ ಮಾತ್ರ ನಮ್ಮನ್ನು ಮುಜುಗರಕ್ಕೀಡುಮಾಡಿತ್ತು....ಸರಿ ನಾವೇ ಸುಧಾರಿಸಿಕೊಂಡು ಪಕ್ಕದಲ್ಲಿ ಇರಿಸಲಾಗಿದ್ದ ಮೂರುಕಾಲಿನ ಹೊರಸಿನ ಮೇಲೆ ಕೂತು ಆಗಸವನ್ನು ದಿಟ್ಟಿಸತೊಡಗಿದೆವು....

"ನಮ್ಮ ರಾಜನ್ ಗೆಳ್ಯಾರಾ ನೀವೆಲ್ಲ..ಹೆಂಗದಾನ ಅಂವಾ..." ಎಂದು ಕಂಕುಳಲ್ಲಿ ಸುಮಾರು ೫ ವರ್ಷದ ಮಗುವನ್ನು ಎತ್ತಿಕೊಂಡು ನಮ್ಮ ಕಡೆಗೆ ಬಂದ ಹೆಂಗಸಿನ ಮೈಮೇಲೆ ಮರ್ಯಾದೆ ಮುಚ್ಚಿಕೊಳ್ಳಲು ಬೇಕಾಗುವಷ್ಟು ಬಟ್ಟೆಗಳಿದ್ದವು..."ಇದು ನನ್ನ ಹಿರೇ ಮಗಳ ಕೂಸು...ಇದನ್ನ ನಮ್ಮ ಹತ್ಯಾಕ ಬಿಟ್ಟು ಕೂಲಿ ಮಾಡಾಕ ಹೋಗ್ಯಾಳಕಿ..." ಎಂದು ಇನ್ನೇನೋ ಮಾತುಗಳನ್ನು ಮುಂದುವರಿಸುತ್ತಿದ್ದಂತೆಯೇ ಅಲ್ಲಿನ ಪರಿಸ್ಥಿತಿಯ ನಿಜ ಸ್ವರೂಪ ನಮ್ಮ ಕಣ್ಣಮುಂದೆ ಬಂದಾಗಿತ್ತು.

ಹಾಗಾದರೆ ಅವನು ಹೇಳಿದ್ದ ಅವನ ಅಮ್ಮ ಯಾರು? ನಿಧಾನವಾಗಿ ನಮ್ಮ ಮಾತುಗಳು ಆ ವೃದ್ಧರನ್ನು ಆವರಿಸಿಕೊಂಡವು. ಕೂಲಿನಾಲಿ ಮಾಡಿಕೊಂಡು ಬದುಕುತ್ತಿದ್ದ ಮುದಿ ಜೀವಗಳಿಗೆ ಆಸರೆಯಾಗಿದ್ದವನೆಂದರೆ ಈ ಏಕೈಕ ಸುಪುತ್ರ. ತಾವು ಒಂದೊಪ್ಪತ್ತು ಗಂಜಿ ಊಟಮಾಡಿಯಾದರೂ ತಮ್ಮ ಮಗ ದೂರದೂರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಲಿ ಅಂತ ದಿನವೂ ಅವನಿಗೆ ತಪ್ಪದೇ ಸರ್ಕಾರಿ ಕೆಂಪು ಬಸ್ಸುಗಳ ಮೂಲಕ ಊಟವನ್ನು ಕಳಿಸಿಕೊಡುತ್ತಿದ್ದರು...ನಾವೆಷ್ಟು ಬಾರಿ ಅದು ನಮ್ಮದೇ ಊಟ ಎಂಬಂತೆ ಹಂಚಿಕೊಂಡು ತಿಂದಿಲ್ಲ? ನನ್ನನ್ನ "ಬೇರೆ ಯಾರೋ" ಓದಿಸುತ್ತಿದ್ದಾರೆ ಎಂದು ಇವನು ಹೇಳಿದ್ದರಲ್ಲಿ ಯಾವ ಪುರುಷಾರ್ಥ ಇದ್ದೀತು?

ಆ ದಿನ ನನಗಿನ್ನೂ ನೆನಪಿದೆ....ನಾವೆಲ್ಲ ಗೆಳೆಯರು ಸೇರಿ ಹರಟೆ ಹೊಡೆಯುತ್ತ ಬಸ್ ಸ್ಟ್ಯಾಂಡಿನಲ್ಲಿ ತಿರುಗಾಡುತ್ತಿದ್ದಾಗ ಈ ಹುಡುಗ ನಮ್ಮ ಕಣ್ಣಿಗೆ ಬಿದ್ದಿದ್ದ. ಖಾಲಿ ಕಾಗದಗಳ ಮೆಲೆ ಏನನ್ನೋ ಗೀಚುತ್ತ ಕುಳಿತಿದ್ದ. ಕುತೂಹಲ ತಡೆಯಲಾರದೇ ಅವನ ಪಕ್ಕದಲ್ಲಿ ಹೋಗಿ ನಿಂತು ಅವನು ಬರೆಯುತ್ತಿರುವುದನ್ನು ಗಮನಿಸತೊಡಗಿದೆ. ಆತನೊಬ್ಬ ಅದ್ಭುತ ಕಲಾವಿದ. ಅಲ್ಲಿ ಓಡಾಡುತ್ತಿದ್ದವರ ಚಿತ್ರಗಳನ್ನು ತನ್ನ ಕೈಯಲ್ಲಿರುವ ಕಾಗದಗಳ ಮೇಲೆ ಗೀಚುತ್ತ ಹೊರಟಿದ್ದ. ನನ್ನ ಕಡೆ ನೊಡಿದವನೇ ಮುಗುಳ್ನಕ್ಕ. ಪರಿಚಯವಾಗಲು ಬಹಳ ಹೊತ್ತು ಬೇಕಾಗಲೇ ಇಲ್ಲ. ಹೀಗೆ ಪರಿಚಯ ಸ್ನೇಹವಾಯ್ತು..ಮುಂದೆ ನಾವೆಲ್ಲ ಗೆಳೆಯರು ಸೇರಿ ಒಂದೇ ತಟ್ಟೆಯಲ್ಲಿ ಉಣ್ಣುವಷ್ಟು ಹತ್ತಿರದವರಾಗಿಬೆಟ್ಟೆವು.

ದಿನ ಕಳೆದಂತೆ ಇವನು ತನ್ನ ಕತೆಯನ್ನು ಹೇಳತೊಡಗಿದ...ಅವನ ತಂದೆ ಇವಳ ತಾಯಿಯನ್ನು ಇಟ್ಟುಕೊಂಡಿದ್ದನಂತೆ....ಆತನಿನ್ನೂ ಕೆಲಸದಲ್ಲಿರುವಾಗಲೇ ಅಕಾಲ ಮರಣಕ್ಕೀಡಾಗಿ, ಈತ ಮತ್ತು ಇವನ ತಾಯಿ ಬೀದಿಗೆ ಬರಬೇಕಾಯ್ತಂತೆ...ಇದೇ ಚಿಂತೆಯಲ್ಲಿ ಇವನ ತಾಯಿಯೂ ಸಹ ಒಂದು ದಿನ ತೀರಿ ಹೋದರಂತೆ...ಹೀಗಾಗಿ ಇವನನ್ನು ತಬ್ಬಲಿಯನ್ನಾಗಲು ಬಿಡದೇ ಬೇರೊಬ್ಬರು ಸಾಕುತ್ತಿದ್ದಾರೆ..ಹೀಗೆ ಮುಂದುವರೆಯುತ್ತಿತ್ತು ಇವನ ಕತೆ. ನಾವು ಇವನ ಪರಿಸ್ಥಿತಿಯ ಬಗ್ಗೆ ಕನಿಕರ ಪಟ್ಟುಕೊಳ್ಳುತ್ತಾ, ಇವನಿಗೆ ನಮ್ಮಿಂದ ಸಾಧ್ಯವಾದಷ್ಟೂ ಸಹಾಯ ಮಾಡುವುದರ ಜೊತೆಗೆ ಇವನಲ್ಲಿರುವ ಪ್ರತಿಭೆಯನ್ನು ಪೋಷಿಸಲು ಸಾಕಷ್ಟು ವೇದಿಕೆಯನ್ನು ಸಹ ಕಲ್ಪಿಸಿ, ಅವನನ್ನು ಬೆಳೆಸಿದೆವು. ಅವನ ಪರಿಸ್ಥಿತಿಯ ಬಗ್ಗೆ ನಾವೆಲ್ಲರೂ ತುಂಬ ಮರುಕ ಪಟ್ಟೆವು. ಅವನು ತಾನು ಪರದೇಸಿ ಅನ್ನುವ ಯಾವುದೇ ಭಾವನೆ ಬರಕೂಡದೆಂದು ವಿಶೇಷ ಮುತುವರ್ಜಿವಹಿಸತೊಡಗಿದೆವು..

ಅವನಲ್ಲಿ ಕ್ರಮೇಣ ಆತ್ಮವಿಶ್ವಾಸ ಬರತೊಡಗಿತು...ಜನರೊಂದಿಗೆ ಹೆಚ್ಚು ಹೆಚ್ಚು ಬೆರಯತೊಡಗಿದ...ಇಂತಹ ಸಮಯದಲ್ಲಿ ಅವನಿಗೆ ಒಂದು ಹುಡಗಿಯ ಪರಿಚಯವಾಯ್ತು..ಮುಂದಿನ ಒಂದು ವಾರದಲ್ಲಿ ಇವರಿಬ್ಬರ ಮದುವೆಯೂ ಆಯ್ತು!! ಗೆಳೆಯರೆಲ್ಲರೂ ನಿಂತು ಅವನ ಮದುವೆ ಮಾಡಿದ್ದಾಯ್ತು..ನಮ್ಮೆಲ್ಲರ ಸಂಭ್ರಮಕ್ಕೆ ಪಾರವೇ ಇರಲಿಲ್ಲ...

ಅವನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತ, ದಂಪತಿಯನ್ನು ಮಧುಚಂದ್ರಕ್ಕೆ ಕಳುಹಿಸಿದ್ದೂ ಆಯ್ತು...ಅಷ್ಟರಲ್ಲಿಯೇ ಅವನ ತಂದೆ ತಾಯಿಯ ಕುರಿತು ನಮಗೆ ಸುಳಿವುಗಳು ಸಿಗತೊಡಗಿದ್ದವು....ಅದನ್ನು ಹುಡುಕಿಕೊಂಡು ಹೋದಾಗ ಬದುಕನ್ನು ನಿಜವಾಗಿಯೂ ಪ್ರೀತಿಸುತ್ತಿರುವ, ತಮ್ಮ ಮಗನಿಗೆ ಯಾವುದೂ ಕಡಿಮೆಯಾಗಬಾರದೆಂದು ತಾವು ಒಂದೊಪ್ಪತ್ತು ಉಂಡು, ಮಗನಿಗೆ ಪ್ರತಿದಿನ ತಪ್ಪದೇ ಊಟ ಕಳಿಸಿಕೊಡುತ್ತಿರುವ, ನಮಗೆ ಚಹ ಮಾಡಿಕೊಡಲು ಚಹದ ಪುಡಿಯನ್ನು ತರಿಸಲು ತಮ್ಮ ಬಕ್ಕಣದಿಂದ ಚಿಲ್ಲರೆ ಹುಡುಕುತ್ತಿದ್ದ ಈ ವೃದ್ಧ ಜೀವಗಳು ನಮ್ಮ ಕಣ್ಣಿಗೆ ಬಿದ್ದದ್ದು...

ಈ ಬದುಕಿನ ಚಕ್ರದಲ್ಲಿ ಯಾರ್ಯಾರು ಬಂದರು..ಎಲ್ಲಿಗೆ ತಮ್ಮ ಪಯಣವನ್ನು ಬೆಳೆಸಿದರು...ವಿಚಿತ್ರವಾಗಿ ನಮ್ಮ ಮುಂದೆ ಪ್ರಶ್ನೆಗಳಾಗಿ ಕಾಡತೊಡಗಿದವು....

Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ: ಫೇಸ್‌ಬುಕ್‌ನಲ್ಲೊಂದು ಗುಂಪು

ಸಂಪಾದಕೀಯ ಬ್ಲಾಗ್ ಪ್ರಕಟಿಸಿದ ಲೇಖನವನ್ನು ಇಲ್ಲಿ ಮರು ಪ್ರಕಟಿಸುತ್ತಿರುವೆ...


ಕಪಟ ಜ್ಯೋತಿಷಿಗಳ ವಿರುದ್ಧ ನಾವು ನೀವೆಲ್ಲ ಸೇರಿ ಹೂಡಿರುವ ಸಮರಕ್ಕೆ ಸಾವಿರಾರು ಮಂದಿ ಸ್ಪಂದಿಸುತ್ತಿದ್ದಾರೆ. ಬೃಹತ್ ಬ್ರಹ್ಮಾಂಡ ವಿರುದ್ಧದ ಆಂದೋಲನದ ನೀಲನಕ್ಷೆ ಎಂಬ ಪೋಸ್ಟ್‌ನ ಲಿಂಕ್ ಅನ್ನು ಎರಡು ದಿನಗಳ ಅವಧಿಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದವರ ಸಂಖ್ಯೆ ೬೦೦ಕ್ಕೂ ಹೆಚ್ಚು.ದಟ್ಸ್ ಕನ್ನಡ, ವಿಶ್ವ ಕನ್ನಡಿಗ ವೆಬ್ ಸೈಟುಗಳು ಈ ಆಂದೋಲನದ ಕುರಿತು ಸುದ್ದಿಯನ್ನು ಮಾಡಿವೆ. ನಿಲುಮೆ ಸೇರಿದಂತೆ ಹಲವು ಬ್ಲಾಗ್‌ಗಳಲ್ಲಿ ಈ ಕುರಿತು ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ.

ಈಗಾಗಲೇ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಒಂದಷ್ಟು ಗೆಳೆಯ-ಗೆಳತಿಯರನ್ನು ಈ ಗುಂಪಿಗೆ ಈಗಾಗಲೇ ಸೇರಿಸಿದ್ದೇವೆ. ಫೇಸ್‌ಬುಕ್ ಬಳಸುವ ಎಲ್ಲ ಓದುಗರೂ ಈ ಕೆಳಗಿನ ಲಿಂಕ್ ಬಳಸಿ, ಈ ಗುಂಪನ್ನು ಸೇರಿಕೊಳ್ಳಬೇಕೆಂದು ವಿನಂತಿಸುತ್ತೇವೆ. ಹಾಗೆಯೇ ಇದು ಓಪನ್ ಗುಂಪು ಆಗಿರುವುದರಿಂದ ಸಾಧ್ಯವಾದಷ್ಟು ಸ್ನೇಹಿತರನ್ನು ಸೇರಿಸಬೇಕೆಂದು ಮನವಿ ಮಾಡುತ್ತೇವೆ. ಈ ಗುಂಪನ್ನು ಸೇರಲು ಇಲ್ಲಿ ಕ್ಲಿಕ್ಕಿಸಿ.ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ.

ಮೌಢ್ಯವನ್ನು ಹೇರುವ ಕಪಟ ಜ್ಯೋತಿಷಿಗಳ ಕುರಿತು ಈ ಹಿಂದೆ ಬ್ಲಾಗರ್‌ಗಳು ಬರೆದ ಲೇಖನಗಳ ಲಿಂಕ್‌ಗಳನ್ನು ಈ ಗುಂಪಿನಲ್ಲಿ ಒದಗಿಸಬೇಕೆಂದು ಕೋರುತ್ತೇವೆ.

ಜನವಿರೋಧಿಯಾಗಿರುವ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಜೀ ಟಿವಿಯ ಮುಖ್ಯಸ್ಥರಿಗೆ ಒಂದು ಆಗ್ರಹ ಪತ್ರವನ್ನು ಬರೆದಿದ್ದೇವೆ. ಅದನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ. ಸಾಧ್ಯವಾಗುವುದಾದರೆ ಈ ಆಂದೋಲನವನ್ನು ಬೆಂಬಲಿಸುವ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಈ ಬಹಿರಂಗ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇವೆ. ಇದೇ ಮಾದರಿಯ ಪತ್ರಗಳನ್ನು ಎಲ್ಲರೂ ಬರೆದು ಜೀ ಟಿವಿಯ ಮೇಲ್ ಐಡಿಗೆ ಕಳುಹಿಸೋಣ. ಒಂದು ವೇಳೆ ಕಾಲಾವಕಾಶವಾಗದೇ ಹೋದರೆ ಸಂಪಾದಕೀಯದ ಪತ್ರವನ್ನೇ ಫಾರ್ವರ್ಡ್ ಮಾಡಿದರೂ ಆಗುತ್ತದೆ. ಕನಿಷ್ಠ ಒಂದು ಸಾವಿರ ಪತ್ರಗಳನ್ನಾದರೂ ಬರೆದರೆ ಜೀ ಟಿವಿಯವರು ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಮರುಚಿಂತನೆ ನಡೆಸಬಹುದೇನೋ? ಈ ಪತ್ರ ಚಳವಳಿಯಿಂದಲೇ ಕಾರ್ಯಕ್ರಮ ನಿಂತರೆ ಒಳ್ಳೆಯದು, ಇಲ್ಲವಾದಲ್ಲಿ ಇನ್ನಷ್ಟು ಪ್ರಜಾಸತ್ತಾತ್ಮಕವಾದ ಹೋರಾಟಗಳಿಗೆ ನಾವು ಅಣಿಯಾಗಬೇಕಾಗುತ್ತದೆ.

ಟಿವಿಗಳಲ್ಲಿ ಜ್ಯೋತಿಷಿಗಳು ನಡೆಸುತ್ತಿರುವ ಅವಾಂತರಗಳ ಕುರಿತು, ಮಾಧ್ಯಮಗಳು ಮೌಢ್ಯವನ್ನು ಹರಡುತ್ತಿರುವ ಕುರಿತು ಸಾಕಷ್ಟು ಸಂಘಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ವಿವರಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಈ ಸಂಬಂಧ ಒಂದಷ್ಟು ವಿಚಾರ ಸಂಕಿರಣಗಳು, ಪ್ರತಿಭಟನೆಗಳು ಆರಂಭವಾಗಬೇಕಿದೆ. ಆ ಕುರಿತ ಬೆಳವಣಿಗೆಗಳ ಬಗ್ಗೆ ನಿಮಗೆ ಆಗಾಗ ಮಾಹಿತಿ ನೀಡುತ್ತಿರುತ್ತೇವೆ.

ಮೌಢ್ಯ ಕಂದಾಚಾರಗಳಿಲ್ಲದ ಒಂದು ಸ್ವಸ್ಥ ಸಮಾಜ ಮತ್ತು ಅನೈತಿಕ ಮಾರ್ಗದ ಟಿಆರ್‌ಪಿ ಈ ಎರಡರ ನಡುವೆ ಒಂದನ್ನು ಜೀ ಟಿವಿಯವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅವರ ಆಯ್ಕೆ ಟಿಆರ್‌ಪಿ ಆಗದಿರಲಿ ಎಂದು ಆಶಿಸೋಣ.

Saturday, January 8, 2011

ಹೀಗೊಂದು ಹೊಸ ಪ್ರಯತ್ನ...




ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ, ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಪ್ರದರ್ಶಿಸುತ್ತಿದೆ. ಇದನ್ನ ರಂಗರೂಪಕ್ಕಿಳಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ಪತ್ರಕರ್ತ, ನಾಟಕಕಾರ ಜಿ.ಎಚ್. ರಾಘವೇಂದ್ರ ಅವರು.

ನಾವೆಲ್ಲ ಕನ್ನಡ ಕಲಾ ಸಂಘದ ಕಲಾವಿದರು ಇದಕ್ಕಿಂತಲೂ ಸ್ವಲ್ಪ ಮುಂದುವರಿದು ಬೇಲಿ ಮತ್ತು ಹೊಲ ಕಾದಂಬರಿ ಹಾಗೂ ನಾಟಕ ಎರಡನ್ನೂ ಒಂದೇ ಗುಟುಕಿನಲ್ಲಿ ನಮ್ಮೆಲ್ಲ ರಂಗಾಸಕ್ತರಿಗೆ ಮತ್ತು ಓದುಗರಿಗೆ ಕೊಡುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಕುಂ.ವೀ ಅವರು ಈ ಪ್ರಯತ್ನವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಸಾಗಿದಲ್ಲಿ, ಇನ್ನು ಕೆಲವೇ ದಿನಗಳಲ್ಲಿ "ಬೇಲಿ ಮತ್ತು ಹೊಲ" ಕಾದಂಬರಿ ಹಾಗೂ ನಾಟಕ ಎರಡೂ ನಿಮ್ಮ ಕೈಸೇರಲಿದೆ.....

Saturday, January 1, 2011

ಯಾರಿಗೂ ಮುಖ ತೊರಿಸದೇ ಊರು ಬಿಟ್ಟಿದ್ದಾಯ್ತು...

ನನ್ನ ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿ ಮಹಾರಾಷ್ಟ್ರದ ಗಡಿಂಗ್ಲಜ್ ಎಂಬ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿದ್ದೆ. ನನ್ನ ಮಾವನವರು ಆರ್.ಎಮ್.ಎಸ್ (ರೈಲ್ವೆ ಮೇಲ್ ಸರ್ವಿಸ್) ನಲ್ಲಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ತೀರ ಅವಸರ ಪ್ರವೃತ್ತಿಯ ಮನುಷ್ಯ ಅವರು. ನನ್ನ ಸ್ನೇಹಿತರೆಲ್ಲ ಸೇರಿ ನನ್ನ ಕೆಲಸದ ಸ್ಪೀಡ್ ನೋಡಿ ನನಗೆ ಅವಸರ ಎನ್ನುವ ಹೆಸರನ್ನಿಟ್ಟಿದ್ದರು. ಆದರೆ ಇವರು ನನಗಿಂತಲೂ ಅವಸರ...

ನಾನು ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಅಲ್ಲಿನ ಗೆಸ್ಟ್ ಹೌಸ್ ನಲ್ಲಿರುತ್ತಿದ್ದೆ. ತದನಂತರ ನನ್ನ ರಂಗಚಟುವಟಿಕೆಗಳ ಕಾರಣದಿಂದ ಹೊಸಪೇಟೆಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರಿಸಿದೆ. ಬೆಳಿಗ್ಗೆ ೬.೩೦ ಕ್ಕೆ ಮನೆ ಬಿಟ್ಟು ಕೆಲಸಕ್ಕೆ ಹೋದರೆ, ಬರುವುದು ಸಾಯಂಕಾಲ ೭ ಗಂಟೆಗೆ. ಬಂದವನೇ ನೇರವಾಗಿ ನಾಟಕದ ತಾಲೀಮು, ಚರ್ಚೆ ಹೀಗೆ ಹಲವು ಕಾರಣಗಳಿಂದ ನಮ್ಮ ತಂಡವನ್ನು ಸೇರಿಕೊಂಡು ಬಿಟ್ಟಿರುತ್ತಿದ್ದೆ. ಹೀಗಾಗಿ ನಾನಿರುವ ಮನೆಯ ಆಜೂ ಬಾಜೂ ಯಾರಿದ್ದಾರೆ, ಅವರೇನು ಮಾಡುತ್ತಿದ್ದಾರೆ...ಊಹುಂ..ನನಗೆ ಅದ್ಯಾವುದರ ಮಾಹಿತಿಯೇ ಇರಲಿಲ್ಲ..ನಾನೂ ಸಹ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಮನೆಯ ಎಡಕ್ಕೆ ಹಾಗೂ ಬಲಕ್ಕೆ ಯಾರಿರುತ್ತಾರೆ ಎಂಬುದೂ ಸಹ ನನಗೆ ಗೊತ್ತಿರಲಿಲ್ಲ.

ಹೀಗಿಂತಿರ್ಪ ನನ್ನ ಮಾವನವರು ಕೆಲವುದಿನಗಳ ಮಟ್ಟಿಗೆ ಹೊಸಪೇಟೆಗೆ ಬರುವುದಾಗಿ ತಿಳಿಸಿದರು. ಸರಿ ನನ್ನ ಹೆಂಡತಿ, ಅತ್ತೆ, ಮಾವ ಹಾಗೂ ನನ್ನ ಮಗ (ಆಗಿನ್ನೂ ಅದು ೫ ತಿಂಗಳ ಕೂಸು) ಹೊಸಪೇಟೆಗೆ ಬಂದೇ ಬಿಟ್ಟರು. ನಾನು ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೆನಾದ್ದರಿಂದ, ಯಾವುದೇ ರೀತಿಯ ಕೊರತೆ ಇರಲಿಲ್ಲ. ಅವರಿಗೆ ಬೇಕಾಗುವ ಎಲ್ಲ ದಿನಸಿ ಪದಾರ್ಥ, ತರಕಾರಿ, ಹಾಲು-ಹಣ್ಣಿನ ವ್ಯವಸ್ಥೆಯನ್ನು ಸರಿಯಾಗಿಯೇ ಮಾಡಿಟ್ಟಿದ್ದೆ. ನಾನು ಎಂದಿನಂತೆ ಬೆಳಿಗ್ಗೆ ೬.೩೦ ಕ್ಕೆ ಕೆಲಸಕ್ಕೆ ಹೊರಟೆ. ಅಂದು ಸಂಜೆ ಸ್ವಲ್ಪ ಬೇಗನೇ ಮನೆಗೆ ಬಂದೆ. ಮನೆಯ ಹೊರಗಡೆ ೧೦ ರಿಂದ ೧೨ ಜೊತೆ ಚಪ್ಪಲಿಗಳು..ನನ್ನ ಮನೆಯಿಂದ ಜೋರಾಗಿ ಮಾತುಗಳು ಕೇಳಿಬರುತ್ತಿವೆ. ನನಗೆ ಆಶ್ಚರ್ಯವಾಯಿತು. ನಾನು ಹೊಸಪೇಟೆಗೆ ಬಂದು ೩ ವರ್ಷಗಳ ಅವಧಿಯಲ್ಲಿ ನನ್ನ ಮನೆಗೆ ಎಂದೂ ಇಷ್ಟು ಜನ ಒಂದೇ ಬಾರಿಗೆ ಬಂದವರಲ್ಲ. ಬಂದರೂ ಅವರು ನಾನಿದ್ದಾಗಲೇ ಬರಬೇಕು, ಅದೂ ನಮ್ಮ ತಂಡದ ಕಲಾವಿದರು. ಅವರನ್ನು ಬಿಟ್ಟರೆ ನಾನು ಇಲ್ಲಿ ಯಾರಿಗೂ ಪರಿಚಯವಿರಲಿಲ್ಲ. ಸಂಶಯಗೊಳ್ಳುತ್ತಲೇ ಮನೆಯಲ್ಲಿ ಕಾಲಿರಿಸಿದೆ. ನನ್ನ ಮಾವನವರು ಆ ಮನೆಗೆ ನಾನೇ ಅಪರಿಚಿತ ಎನ್ನುವಂತೆ ಬರಮಾಡಿಕೊಂಡರು. ಅಲ್ಲಿ ಸೇರಿದ್ದ ಎಲ್ಲರಿಗೂ ನನ್ನ ಪರಿಚಯವನ್ನೂ ಮಾಡಿಸಿದ್ದಾಯ್ತು. ನಂತರ ನನಗೆ ತಿಳಿದಿದ್ದು, ಅಲ್ಲಿ ಸೇರಿದ್ದವರೆಲ್ಲ ನನ್ನ ಮಾವನವರ ಗೆಳೆಯರು. ಎಲ್ಲರಿಗೂ ಅಲ್ಪೋಪಹಾರ, ಚಹ ಎಲ್ಲವೂ ನೀಡಿದ್ದಾಯಿತು...ಎಲ್ಲರೂ ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನ ಕೊಡುವವರೆ..ನನಗೋ ಎನೋ ಒಂದು ಮುಜುಗರ.....ಎಲ್ಲರೂ ಹೊರಟು ಹೋದ ಮೇಲೆ ಎನೊ ಒಂದು ದೊಡ್ಡ ಬಿರುಗಾಳಿ ಬೀಸಿ ಹೋದ ಅನುಭವ.

ನಂತರದ ದಿನಗಳಲ್ಲಿ ಇವರೆಲ್ಲರಿಂದ ತಪ್ಪಿಸಿ ಒಡಾಡುವುದೇ ನನಗೊಮ್ದು ಸವಾಲಾಯಿತು. ಎಲ್ಲಿ ಭೇಟಿಯಾದರೂ "ಯಾಕ ಮನೀಗೆ ಬಂದೇ ಇಲ್ಲ", "ನಿಮ್ಮ ಕೆಲಸ ಏನು", "ನೀವು ಖರೇವಂದ್ರೂ ಜಿಂದಲ್ ಕಂಪನಿಯೊಲಗ ಕೆಲಸ ಮಾಡ್ತೀರಾ" ಮುಂತಾದ ಅಸಂಬದ್ಧ ಪ್ರಶ್ನೆಗಳು ನನ್ನನ್ನು ಮುಜುಗರಕ್ಕೊಳಪಡಿಸಿದ್ದವು. ಮುಂದೆ ಕೆಲವು ದಿನಗಳ ನಂತರ ನಾನು ಜಿಂದಲ್ ಕೆಲಸ ಬಿಟ್ಟು ಬೆಂಗಳೂರಿಗೆ ಹೊರದಬೇಕಾಯ್ತು. ನಮ್ಮ ಮಾವನವರು ಅಷ್ಟೇ ಜತನದಿಂದ ನಾನು ಬೆಂಗಳೂರಿಗೆ ಹೊರಡುತ್ತಿರುವ ವಿಷಯವನ್ನು ತಮ್ಮ ಎಲ್ಲ ಗೆಳೆಯರ ಬಳಗಕ್ಕೆ ರವಾನಿಸಿಬಿಟ್ಟಿದ್ದರು. ಕೇವಲ ರಸ್ತೆ ಭೇಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಮತ್ತು ಅವರ ಮಾತು ಕತೆ ಮನೆಗೋ ಬಂತು. ಅವರನ್ನು ತಪ್ಪಿಸಲು ನಾನು ಮನೆಯನ್ನು ಖಾಯಂ ಆಗಿ ಬೀಗ ಹಾಕತೊಡಗಿದೆ. ಕೊನೆಗೆ ಬೆಂಗಳೂರಿಗೆ ಹೊರಡುವ ದಿನ ಯಾರಿಗೂ ಹೇಳದೇ ಕೇಳದೇ, ಯಾರಿಗೂ ಮುಖವನ್ನು ಸಹ ತೋರಿಸದೇ ಹೊಸಪೇಟೆಯನ್ನು ತೊರೆಯಬೇಕಾಯ್ತು....

ಥಾರ್ ಮರಭೂಮಿಯಲ್ಲಿ ಒಯ್ದು ನನ್ನ ಮಾವನವರನ್ನು ಬಿಟ್ಟರೂ ಸಹ ಅಲ್ಲಿಯೂ ಯಾರಾದರೂ ಪರಿಚಯದವರನ್ನು ಹೆಕ್ಕಿ ತರುವ ಜಾಯಮಾನದವರು ಇವರು......