Thursday, October 22, 2009

ಕತ್ತೆ ಕಳೆದುಕೊಂಡ ಸಿದ್ದಯ್ಯನ ನೆನಪಾದದ್ದು ಹೀಗೆ....

ದಲಿತ ಕವಿ ಸಿದ್ದಲಿಂಗಯ್ಯ ಬರೆದ ಕತ್ತೆ ಮತ್ತು ಧರ್ಮ ಕವನ ಎಲ್ಲರಿಗೂ ನೆನಪಿದೆ ಎಂದು ಭಾವಿಸಿದ್ದೇನೆ...ತನ್ನ ಸತ್ತ ಕತ್ತೆಯ ಹೂತ ಜಾಗವನ್ನು ನೋಡಲು ಹೋದ ಸಿದ್ದಯ್ಯನಿಗೆ ಆಶ್ಚರ್ಯದ ಜೊತೆಗೆ ಆಘಾತವು ಆಗುತ್ತದೆ..ಅವನನ್ನು ಗೋರಿ ದೇವರ ಹತ್ತಿರ ಸಹ ಬಿಡುವುದಿಲ್ಲ...ಸತ್ತ ಕತ್ತೆಗೆ ದೊರೆಯುತ್ತಿರುವ ಮಾನ ಮರ್ಯಾದೆಯ ಜೊತೆಗೆ ತನಗೆ ಅವಮಾನವಾಗುತಿರುವುದನ್ನು ಕಂಡು ಕ್ಷಣ ಕಾಲ ಆಘಾತವಾಗುತ್ತದೆ ಸಿದ್ದಯ್ಯನಿಗೆ...
ಕೆಲ ದಿನಗಳ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ನಾನು ಹೊಸಪೇಟೆಯಲ್ಲಿ ರಾತ್ರಿ ಹೊತ್ತು ತೋರಣಗಲ್ಲಿಗೆ ಹೋಗಲು ಸಾಧ್ಯವಾಗದೇ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ವಿಷಯ ಪ್ರಸ್ತಾಪಿಸಿದ್ದೆ..ಬಹುಶಃ ನಿಮಗೆ ಅದು ನೆನಪಿರಬೇಕೆಂದು ಕೊಂಡಿದ್ದೇನೆ...ಎರಡು ದಿನಗಳ ಹಿಂದೆ ನಾನು ಹೊಸಪೇಟೆಗೆ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲಿಂದ ವಾಪಸ್ ಬೆಂಗಳೂರಿಗೆ ಬರಲು ರಾತ್ರಿ ಹೊಸಪೇಟೆ ಬಸ್ ಸ್ಟ್ಯಾಂಡಿಗೆ ಬಂದೆ..ಬಸ್ ಬರಲು ಸ್ವಲ್ಪ ತಡವಿತ್ತಾದ್ದರಿಂದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತ ಅಲ್ಲಿಯೇ ಕಾಲ ಕಳೆಯುತ್ತಾ ನಿಂತೆ..ಬಸ್ ಸ್ಟ್ಯಾಂಡ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು..ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಈಗೋ ಇನ್ನೊಂದು ಕ್ಷಣಕ್ಕೋ ಕುಸಿದು ಬೀಳುವ ಹಂತಕ್ಕೆ ಅದು ಬಂದು ತಲುಪಿತ್ತು...ನನಗೆ ತಕ್ಷಣಕ್ಕೆ ಕುತೂಹಲ ತಡೆಯಲಾಗದೆ ಹತ್ತು ವರ್ಷಗಳ ಹಿಂದೆ ನನಗೆ ಆಶ್ರಯ ಕೊಟ್ಟ ಬೆಂಚ್ ಗತಿ ಏನಾಗಿದೆ ಎಂದು ನೋಡಲು ಹೋದಾಗ ಅಲ್ಲಿ ಯಾವ ಬೆಂಚು ಸಹ ಇರಲಿಲ್ಲ!!!
ಕೇವಲ ಭಿಕ್ಷುಕರು, ಜೋಳಿಗೆ ದಾಸಯ್ಯಗಳು...ನಾಯಿ, ಹಂದಿಗಳು ಆ ಸ್ಥಳವನ್ನು ಆವರಿಸಿಕೊಂಡಿದ್ದವು...ಬಸ್ ಸ್ಟ್ಯಾಂಡ್ ನಲ್ಲಿದ್ದ ಎಲ್ಲ ಬೆಂಚ್ ಗಳನ್ನೂ ನವೀಕರಣದ ಹೆಸರಿನಲ್ಲಿ ಎತ್ತಂಗಡಿ ಮಾಡಿದ್ದರು...
ಕ್ಷಣಕಾಲ ಏನನ್ನೋ ಕಳೆದುಕೊಂಡ ಅನುಭವವಾಗಿ..ಮನಸ್ಸಿಗೆ ಕಸಿವಿಸಿಯಾಯಿತು...ತಕ್ಷಣಕ್ಕೆ -
"ಮಧುಗಿರಿ ಪಟ್ಟಣಕೆ ಸಿದ್ದಯ್ಯನೆಂಬಗಸ
ಹೆಂಡಿರು ಮಕ್ಕಳಿಲ್ಲ ಏಕಾಕಿ
ಸಿದ್ದಯ್ಯನಿಗೆ ಕತ್ತೆಯು ಅವನ ಒಡನಾಡಿ..." ಹಾಡು ನೆನಪಾಗಿ..ಬೆಂಗಳೂರು ತಲುಪುವ ತನಕ ಅದರದೇ ಗುನುಗುವಿಕೆ.....

Tuesday, October 20, 2009

ಪತ್ರಕರ್ತರ ಹಪಾಪಿ ತನ!!!

ಈ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬರೆದಿದ್ದೆ...ಅದಕ್ಕೆ ಅನೇಕ ಸ್ನೇಹಿತರ ಮಿಶ್ರ ಪ್ರತಿಕ್ರಿಯೆ ಸಹ ಬಂದಿತ್ತು..ಗೆಳೆಯ ರವಿ ಹೆಗಡೆ ಅವರು ಇಂತಹ ವಿಷಯಗಳನ್ನು ನೇರವಾಗಿ ಸಂಪಾದಕರ ಗಮನಕ್ಕೆ ತರಬೇಕಿತ್ತು ಎಂಬ ಸಲಹೆಯನ್ನು ಸಹ ನೀಡಿದ್ದರು...

ಇದೆ ತರಹದ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ...ಕೊಪ್ಪಳದಲ್ಲಿ ನನ್ನ ಸ್ನೇಹಿತನೊಬ್ಬ ಏನ್.ಜಿ.ಓ ನಡೆಸುತ್ತಿದ್ದಾನೆ..ಅವನನ್ನು ಕೇಳಿಕೊಂಡು ಒಬ್ಬ ಪತ್ರಕರ್ತ ಬಂದು ದೀಪಾವಳಿಗಾಗಿ ಒಂದು ಜಾಹಿರಾತನ್ನು ನಮ್ಮ ಪತ್ರಿಕೆಗೆ ನೀಡುವಂತೆ ದುಂಬಾಲು ಬಿದ್ದಿದ್ದಾನೆ..ನನ್ನ ಸ್ನೇಹಿತ ಅದಕ್ಕೆ ತಮ್ಮದು ಏನ್.ಜಿ.ಓ ಆಗಿರುವುದರಿಂದ ಯಾವುದೇ ರೀತಿಯ ಜಾಹಿರಾತನ್ನು ನೀಡುವಂತಿಲ್ಲ ಎಂದು ತಿಳಿಸಿ ಹೇಳಿದ್ದಾನೆ..ಆಗ ಸುಮ್ಮನಾದ ಆ ಪತ್ರಕರ್ತ ಮಹಾಶಯ ನಾಲ್ಕು ದಿನಗಳ ನಂತರ ಪುನಃ ನನ್ನ ಗೆಳೆಯನಿಗೆ ಫೋನಾಯಿಸಿ ಜಾಹಿರಾತು ನೀಡಲು ಆಗದಿದ್ದರೆ..ನಮಗೆ ಏನಾದರು ವ್ಯವಸ್ಥೆಮಾಡಿ...ನಮ್ಮನ್ನು ನೋಡಿಕೊಳ್ಳಿ ಎಂದು ಕಾದಹತ್ತಿದಾನೆ..ಏನೇ ತಿಳಿ ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿಲ್ಲ...ಕೊನೆಗೆ ನನ್ನ ಗೆಳೆಯ ಇದನ್ನು ನನ್ನ ಮುಂದೆ ತೋಡಿಕೊಂಡಾಗ ನಾನು ನೇರವಾಗಿ ಬೆಂಗಳುರಿನಲ್ಲಿ ಆ ಪತ್ರಿಕೆಯ ಕಚೇರಿಗೆ ಫೋನಾಯಿಸಿ ಸಂಪಾದಕರ ಗಮನಕ್ಕೆ ಈ ವಿಷಯವನ್ನು ತಂದಾಗ ಅವರು ನೇರವಾಗಿ "ನಮ್ಮ ಪತ್ರ ಕರ್ತರು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ..ಅವರ ಮೇಲೆ ಅಲ್ಲ ಸಲ್ಲದ ಆರೋಪ ಮಾಡಬೇಡಿ ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ" ಎಂಬ ಉಪದೇಶವನ್ನು ನೀಡಿದರು...

ಈಗ ಹೇಳಿ ಇಂತಹ ಹಪಾಪಿ ಪತ್ರಕರ್ತರಿಗೆ ಹೇಗೆ ಪಾಠ ಕಲಿಸುವುದು?

Friday, October 16, 2009

ಹೊಸ ನಾಟಕಕ್ಕೆ ಕುಂ.ವೀ ಮುನ್ನುಡಿ!



ಮೊನ್ನೆ ದಿನಾಂಕ ೭ ರಂದು ಗೆಳೆಯ ಪ್ರಮೋದ್ ಬೆಳಿಗ್ಗೆ ೭ ಗಂಟೆಗೆ ಫೋನ್ ಮಾಡಿ "ಗೆಳೆಯ..ನಾನು ಬೆಂಗಳೂರಿಗೆ ಬಂದೇನಿ...ಕುಂ.ವೀ ಬಂದಾರ..ಸ್ವಲ್ಪ ಬಂದು ಹೋಗು" ಅಂದ...ನಾನು ಬಹುವಾಗಿ ಪ್ರೀತಿಸುವ ಸಾಹಿತಿ ಕುಂ.ವೀ...ಅವರ ಹೆಸರು ಕೇಳಿದ ತಕ್ಷಣವೇ ರೋಮಾಂಚನಗೊಂಡೆ...ಅವರನ್ನು ಹತ್ತಿರದಿಂದ ಕಾಣಬೇಕು..ಮಾತನಾಡ ಬೇಕು ಎಂಬ ಬಹುದಿನದ ತುಡಿತ ಇಂದು ನೆರವೇರಲಿದೆ ಎಂದು..ಅವರನ್ನು ಭೇಟಿ ಮಾಡಲು ಹೊರಟೆ.. ಎಂದಿನಂತೆಯೇ ಬೆಂಗಳೂರು ಅಂದು ಸಹ ಇಡೀ ಜಗತ್ತಿನ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ವರ್ತಿಸುತ್ತಿತ್ತು...ತುಂಬಿದ ಬಸುರಿಯರಂತೆ ತಿರುಗುತ್ತಿದ್ದ ಬಸ್ಸುಗಳ ಮಧ್ಯೆ ನಾನು ಹಾಗೋ....ಹೀಗೋ ನನ್ನ ಕಾರನ್ನು ಓದುಸುತ್ತ ಕುಂ.ವೀ. ಇದ್ದ ಆನಂದರಾವ್ ಸರ್ಕಲ್ಲಿನ ಹತ್ತಿರವಿದ್ದ ದ್ವಾರಕಾ ಲಾಡ್ಜ್ ಗೆ ಹೊರಟೆ...

ಲಾಡ್ಜ್ ಗೆ ಬಂದಾಗ ಕುಂ.ವೀ ತಮ್ಮ ಲ್ಯಾಪ್ ಟಾಪ್ ಮುಂದೆ ಅದೇನೋ ಬರೆಯುತ್ತಾ ಕುಳಿತಿದ್ದರು...ಪ್ರಮೋದ್ ನನ್ನನ್ನು ಅವರಿಗೆ ಪರಿಚಯಿಸಿದ ತಕ್ಷಣವೇ ಎದ್ದು ನಿಂತು..ಸ್ವಾಗತಿಸಿ...ತಮ್ಮ "ಆರೋಹಣ" ಕಾದಂಬರಿಯ ನಿದುಗದೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತು ಅದಕ್ಕೆ ಬರಲೇ ಬೇಕೆಂದು ಫರ್ಮಾನು ಹೊರಡಿಸಿಬಿಟ್ಟರು...ಅವರ ಮಾತು, ನಯ-ವಿನಯ, ಸರಳತೆ ಎಲ್ಲವು ನನಗೆ ಅಚ್ಚರಿಯ ವಿಷಯವಾಗಿದ್ದವು..ಕೇವಲ ಅರ್ಧಗಂಟೆಯಲ್ಲಿ ಕುಂ.ವೀ ತುಂಬಾ ಹತ್ತಿರದವರೆನಿಸಿಬಿಟ್ಟರು...ನನ್ನನ್ನು ಅವರಿಗೆ ಪರಿಚಯಿಸುವ ಮೊದಲೆ ಪ್ರಮೋದ್ ಅವರಿಗೆ ನನ್ನ ಬೆಗ್ಗೆ ಎಲ್ಲಾ ಹೇಳಿಬಿಟ್ಟಿದ್ದ...ಹೀಗಾಗಿ ನನ್ನ ಬಗ್ಗೆ ಮೊದಲೆ ತಿಳಿದುಕೊಂಡಿದ್ದ ಕುಂ.ವೀ..ನನ್ನ ಆಸಕ್ತಿಯ ವಿಷಯಗಳ ಕುರಿತು ಮಾತನಾಡಲಾರಂಭಿಸಿದರು..ಕತೆ, ಹಾಡು, ನಾಟಕ, ಹೀಗೆ ಎಲ್ಲಾ ವಿಷಯಗಳ ಕಡೆಗೆ ನಮ್ಮ ಚರ್ಚೆ ಮುಖ ಮಾಡಿತು..

ಅವರೊಂದಿಗೆ ಮಾತನಾಡುತ್ತಾ ನಾನು ಹೊಸ ನಾಟಕ ಬರೆಯುತ್ತಿರುವುದಾಗಿ ಹೇಳಿದೆ..ಅದರ ಸಂಕ್ಷಿಪ್ತ ರೂಪವನ್ನು ಅವರಲ್ಲಿ ಹೇಳಿಕೊಂಡೆ..ತುಂಬಾ ಖುಷಿಯಿಂದ ಕುಂ.ವೀ "ಬೇಗ ಬರೀರಿ..ನಮ್ಮ ಭಳಾರೆ ಪುಸ್ತಕಂ ನಿಂದನೆ ಅದನ್ನ ಪ್ರಕಾಶಿಸೋಣ" ಎಂದು ಬಿಟ್ಟರು...ನನಗೆ ಆಕಾಶಕ್ಕೆ ಮೂರೇ ಗೇಣು..ನನ್ನ ಮೊದಲ ನಾಟಕ ಕೃತಿ ಅದೂ ಹೆಸರಾಂತ ಸಾಹಿತಿಯೊಬ್ಬರ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಸಂಭ್ರಮವನ್ನು ನೆನೆದು ಪುಳಕಿತನಾದೆ...ಅವರೊಂದಿಗೆ ಇದ್ದ ಮೂರು ದಿನವು ಆ ಹೊಸ ನಾಟಕದ ಕುರಿತ ವಿಚಾರಗಳು ತಲೆಯಲ್ಲಿ...

ಅಂದ ಹಾಗೆ ಅದರ ಕೆಲವು ಟಿಪ್ಪಣಿಗಳನ್ನು ಇನ್ನು ಮುಂದೆ ನಿಯತವಾಗಿ ಇಲ್ಲಿ ಬರೆಯುವೆ...ಪ್ರತಿಕ್ರೀಯಿಸಿ ಪ್ಲೀಸ್!!