Friday, May 21, 2010

ತಪ್ಪು ಗ್ರಹಿಕೆ ಮತ್ತು ಅದಕ್ಕೆ ಸ್ಪಷ್ಟನೆ........

ಕಳೆದ ವಾರ ಪ್ರಜಾವಾಣಿಯ ವಾಚಕರ ವಾಣಿ ಅಂಕಣದಲ್ಲಿ "ರಂಗಾಯಣದಲ್ಲಿ ದೊಂಬರಾಟ" ಎಂಬ ಪತ್ರವನ್ನು ಬರೆದಿದ್ದೆ. ಅದಕ್ಕೆ ಇಂದು ಬೆಂಗಳೂರಿನಿಂದ ಜಿ.ಎನ್. ನಿಶಾಂತ್ ಅವರು ಪ್ರತಿಕ್ರೀಯಿಸಿ "ಕುವೆಂಪು ಬಗ್ಗೆ ಅಸಹನೆ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವೊಂದು ಸಲ ಪತ್ರದ ಒಳ ನೋಟ ಏನಿದೆ ಮತ್ತು ಅದರ ಹಿಂದಿನ ಕಾಳಜಿ ಎಂತಹುದು ಎಂದು ಅರ್ಥೈಸಿ ಕೊಳ್ಳದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ.

ನಾನು ನನ್ನ ಪತ್ರದಲ್ಲಿ ಎಲ್ಲಿಯೂ ಕುವೆಂಪು ಅವರ ಬಗ್ಗೆ ಅಸಹನೆಯನ್ನು ವ್ಯಕ್ತ ಪಡಿಸಿಲ್ಲ ಮತ್ತು ಆ ಯೋಗ್ಯತೆಯೂ ನನಗಿಲ್ಲ. ಸಿ.ಬಸವಲಿಂಗಯ್ಯ ಅವರ ಪ್ರತಿಭೆಯ ಬಗ್ಗೆ ಆಗಲೀ ಅವರ ಕೆಲಸದ ಬಗ್ಗೆಯಾಗಲೀ ಯಾರು ಕೂಡ ಅಪಸ್ವರ ಎತ್ತುವ ಹಾಗೆ ಇಲ್ಲ. ನಾನೂ ಸಹ ಬಸೂ ಅವರ ಹತ್ತಿರ ಕೆಲಸಮಾಡಿದ್ದೇನೆ, ಮತ್ತು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರಲು ಅವರು ನನಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವೇ ಕಾರಣ.

ರಂಗಾಯಣದ ಕುರಿತು ನಾನು ಮಾತನಾದುತ್ತಿರುವುದು ಇದೇ ಮೊದಲ ಸಲವೇನಲ್ಲ. ರಂಗಾಯಣದ ಬಗ್ಗೆ ಅಪಾರ ಪ್ರೀತಿ ವಿಶ್ವಾಸಗಳಿರುವುದರಿಂದಲೇ ಅದರ ಬಗ್ಗೆ ನಾನು ಕಾಳಜಿ ಪೂರ್ವಕವಾಗಿ ಲೇಖನಗಳನ್ನು ಬರೆದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿ, ನಾನು ರಂಗಾಯಣದ ವಿರೋಧಿ ಎಂಬರ್ಥದಲ್ಲಿ ಪ್ರತಿಕ್ರೀಯೆಗಳು ಬರಲಾರಂಭಿಸಿರುವುದು ದುರಂತ.

ನಾನಿಲ್ಲಿ ಪ್ರಶ್ನಿಸುತ್ತಿರುವುದು ವ್ಯವಸ್ಥೆಯನ್ನು ಹಾಗೂ ಸರಕಾರದ ಮಲತಾಯಿ ಧೋರಣೆಯನ್ನು. ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆಯೇ ಎಂಬ ನನ್ನ ಪ್ರಶ್ನೆಗೆ ನಿಶಾಂತ್ ಅವರು ಹಾಗಿದ್ದರೆ ಎಲ್ಲರೂ ಸೇರಿ ಪ್ರತಿಭಟಿಸೋಣ ಎಂದಿದ್ದಾರೆ. ಹಾಗಿದ್ದರೆ ಇಷ್ಟು ದಿನಗಳ ವರೆಗೆ ಈ ವಿಷಯ ನಿಮಗೆ ತಿಳಿದಿರಲಿಲ್ಲವೇ? ಧಾರವಾಡದಲ್ಲಿ ರಂಗಾಯಣ ಘಟಕ ಆರಂಭವಾದಾಗಿನಿಂದ ಅದು ಗೊಂದಲದ ಗೂಡಾಗಿಯೇ ಪರಿಣಮಿಸಿದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದು, ಅದು ಧಾರವಾಡದಲ್ಲಿಯೂ ಸಹ ಮುಂದುವರೆದು ರಂಗಭೂಮಿಯ ಎಲ್ಲ ರೀತಿಯ ಕೆಲಸಗಳಿಗೆ ಮೈಸೂರಿನಿಂದ ಜನರನ್ನು ಕರೆಯಿಸಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಕಡೆಗಣಿಸಿದ್ದೇಕೆ? ಹೋಗಲಿ ಇದುವರೆಗೆ ಧಾರವಾಡದ ರಂಗಾಯಣ ಸಾಧಿಸಿದ್ದಾದರೂ ಏನು? ಸರಕಾರದ ಎಲ್ಲ ಹಿರಿಯ ಅಧಿಕಾರಿಗಳು ರಜಾದಿನದ ಸವಿಯನ್ನು ಸವಿಯುವ ಹಾಗೆ ಬಂದು ಭರಪೂರ ಆಶ್ವಾಸನೆಗಳನ್ನು ಕೊಟ್ಟು ಮತ್ತೆ ರಾಜಧಾನಿಯ ಕಡೆಗೆ ತಮ್ಮ ಗಾಡಿಯನ್ನು ಬಿಡುತ್ತಾರೆ. ರಾಜಧಾನಿ ತಲುಪಿದ ನಂತರ ಅವರಿಗೆ ಇದಾವುದೂ ನೆನಪಿರುವುದಿಲ್ಲ.

ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಸರಕಾರ ಯಥೇಚ್ಛವಾಗಿ ರಂಗಚಟುವಟಿಕೆಗೆ ಹಣ ನೀಡುವುದಾದರೆ, ಉತ್ತರ ಕರ್ನಾಟಕದ ರಂಗಚಟುವಟಿಕೆಗೂ ಸಹ ಯಾಕೆ ನೀಡಬಾರದು? ನಾವು ಅನೇಕ ಸಲ ರಂಗಚಟುವಟಿಕೆಗಳಿಗಾಗಿ ಸರಕಾರಕ್ಕೆ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅವರಿಂದ ಇಂತಹ ಮನವಿಗಳಿಗೆ ಯಾವುದೇ ಉತ್ತರವಿರುವುದಿಲ್ಲ. ಇದ್ದರೂ ಸಹ ಅದು ನಕಾರಾತ್ಮಕವಾಗಿರುತ್ತದೆ. ಬಹುಶಃ ನಮ್ಮ ಜನರಿಗೆ ಇಲ್ಲಿನ ಜನರ ತರಹ ಲಾಬಿ ಮಾಡಲು ಬರುವುದಿಲ್ಲ ಎನಿಸುತ್ತದೆ. ಅಥವಾ ಅಂತಹ ಲಾಬಿಗೆ ನಾವು ಯೋಗ್ಯರಲ್ಲ ಎಂದು ಸುಮ್ಮನಾಗುತ್ತಾರೆ.


Tuesday, May 11, 2010

ರಂಗಾಯಣದಲ್ಲಿ ಮತ್ತೊಂದು ದೊಂಬರಾಟ...

ರಂಗಾಯಣ ಮತ್ತೆ ಈಗ ಸುದ್ದಿಯಲ್ಲಿದೆ. ನಮ್ಮ ನಾಡಿನ ಖ್ಯಾತ ರಂಗ ನಿರ್ದೇಶಕರಾದ ಶ್ರೀ. ಬಸವಲಿಂಗಯ್ಯ ಅವರು ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ರಂಗಕ್ಕೆ ತಂದು, ಅದನ್ನು ಬರೊಬ್ಬರಿ ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರ ಎದುರು ಬಿಡಿಸಿಟ್ಟಿದ್ದರಿಂದ ರಂಗಾಯಣ ಮತ್ತೆ ಸುದ್ದಿ ಮಾಡುತ್ತಿದೆ. ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಎಲ್ಲ ರಂಗಕರ್ಮಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಆದರೆ ಅದರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನೂ ಸಹ ಎತ್ತುತ್ತಿದ್ದೇನೆ. ನನಗೆ ಗೊತ್ತು ಇವುಗಳಿಗೆ ನನಗೆ ಉತ್ತರ ದೊರೆಯುವುದಿಲ್ಲ ಎಂದು. ಆದರೂ ರಂಗಭೂಮಿಯ ಒಬ್ಬ ಕಾರ್ಯಕರ್ತನಾಗಿ ಇವುಗಳನ್ನು ಎತ್ತುವ ಅನಿವಾರ್ಯತೆ ಇದೆ ಎಂದು ಭಾವಿಸಿ, ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಈ ಹಿಂದೆ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದಂತೆ ಈ ನಾಟಕವನ್ನು ಮೈಸೂರಿಗೆ ಸೀಮಿತಗೊಳಿಸಿ, ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳಿಗೇನು ಬರ ಬಿದ್ದಿತ್ತೇ? ಇಂತಹ ಪ್ರಯತ್ನ, ಪ್ರಯೋಗಗಳನ್ನು ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ನಡೆಸಿದ್ದರೆ ಅಲ್ಲಿನ ರಂಗಚಟುವಟಿಕೆಗಳಿಗೆ ಜೀವ ತುಂಬಿದಂತಾಗುತ್ತಿತ್ತಲ್ಲವೇ? ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೊಳಗಾಗಿರುವ ಉತ್ತರ ಕರ್ನಾಟಕ, ಸಾಂಸ್ಕೃತಿಕವಾಗಿಯೂ ನಿರ್ಲಕ್ಷಕ್ಕೊಳಗಾಗುತ್ತಿರುವುದಕ್ಕೆ ಇದೊಂದು ಜೀವಂತ ಸಾಕ್ಷಿ.

ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಇಂತಹ ಅದ್ದೂರಿ ನಾಟಕದ ತಯಾರಿ ಎಷ್ಟರ ಮಟ್ಟಿಗೆ ಸೂಕ್ತ? ಯಾವ ಉದ್ದೇಶಕ್ಕಾಗಿ ಈ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು? ಹಿಂದೆ ಪತ್ರಿಕೆಯಲ್ಲಿ ಸಂದರ್ಶನವೊಂದರಲ್ಲಿ ಬಸವಲಿಂಗಯ್ಯನವರು ಉಲ್ಲೇಖಿಸಿದಂತೆ ಈ ನಾಟಕ ನೋಡಿದ ಪ್ರತಿಯೊಬ್ಬರು ಮತ್ತೆ ಮತ್ತೆ ಕಾದಂಬರಿಯನ್ನು ಓದುವಂತೆ ಮಾಡುವುದೆ ಇದರ ಹಿಂದಿನ ಉದ್ದೇಶ. ಇದು ನಿಜವೇ ಆಗಿದ್ದರೆ ಅದು ಒಬ್ಬ ನಿಜವಾದ ರಂಗಕರ್ಮಿಯ ಕಾಳಜಿ ಅಲ್ಲವೇ ಅಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ವ್ಯರ್ಥ. ಇದರಲ್ಲಿರುವ ಸಾಮಾಜಿಕ ಕಳಕಳಿಯಾದರೂ ಏನು?

ಉತ್ತರ ಕರ್ನಾಟಕದ ಜನರ ಒತ್ತಾಸೆಯಂತೆ ಧಾರವಾಡದಲ್ಲಿ ರಂಗಾಯಣದ ಘಟಕವನ್ನು ತೆರೆಯಲಾಯಿತು. ಆದರೆ ಅದು ಏನನ್ನೂ ಸಾಧಿಸಲಿಲ್ಲ. ಅಲ್ಲಿಗೆ ಬಂದ ನಿರ್ದೇಶಕರೆಲ್ಲರೂ ಕೇವಲ ರಾಜಕೀಯ ಮಾಡುತ್ತ ಕಾಲಹರಣ ಮಾಡಿದರೇ ಹೊರತು, ಒಂದೇ ಒಂದು ಮಹಾತ್ವಾಕಾಂಕ್ಷೆಯ ಪ್ರಯೋಗವಾಗಲೀ ನಡೆಯಲಿಲ್ಲ. ಬದಲಾಗಿ ಧಾರವಾಡದಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲ ಎಂದು ಹಾರಿಕೆಯ, ಧಿಮಾಕಿನ ಮಾತುಗಳನ್ನಾಡುತ್ತ ಮತ್ತೆ ಮೈಸೂರಿನ ಕಡೆಗೆ ಹೊರಟುಹೊದರು.

ಬಸವಲಿಂಗಯ್ಯ ನಮ್ಮ ನಾಡು ಕಂಡ ಒಬ್ಬ ಉತ್ತಮ ರಂಗಕರ್ಮಿ, ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಇಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಭಿನ್ನವಾದ ರಂಗಚಳುವಳಿಯನ್ನು ರೂಪಿಸಿದ್ದರೆ ಅದಕ್ಕೊಂದು ಹೊಸ ಅರ್ಥ ಬರುತ್ತಿತ್ತು ಮತ್ತು ಕನ್ನಡ ರಂಗಭೂಮಿಗೆ ಒಮ್ದು ಹೊಸ ದಿಕ್ಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು. ನಮ್ಮ ರಂಗಭೂಮಿ ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ನಿಜ ಆದರೆ ಆರ್ಥಿಕವಾಗಿ ನಾವು ತುಂಬಾ ಬಡವರು. ಸಾರ್ವಜನಿಕರ ಹಣ ಈ ರೀತಿಯಾಗಿ ಅನವಶ್ಯಕವಾಗಿ ಪೋಲಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ.

ಅದೇ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಿ, ಅಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದರೆ, ಸ್ಥಳೀಯ ತಂಡಗಳಿಗೆ ಹೆಚ್ಚಿನ ಸ್ಪೂರ್ತಿ ನೀಡಿದಂತಾಗುತ್ತಿತ್ತು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗುತ್ತಿತ್ತು. ಸರಕಾರ ಏಕೆ ಈ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ? ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆ ಎಂಬ ನೀತಿಯೇನಾದರೂ ಇದೆಯೇ? ಅಥವಾ ಇದರ ಹಿಂದೆ ಬೇರೆ ಬೇರೆ ಒತ್ತಾಸೆಗಳಿರುವ ಪ್ರಬಲ ಲಾಬಿಯೊಂದು ಕಾರ್ಯನಿರ್ವಹಿಸುತ್ತಿದೆಯೇ? ಸಂಬಂಧಪಟ್ಟವರು ಉತ್ತರಿಸಿಯಾರೇ??

Saturday, May 8, 2010

ಇಂಗ್ಲೀಷ್ ಕವಿಗಳ ನೆನೆದದ್ದು ಹೀಗೆ....



ಈ ಹಿಂದೆ ನಾನು ಇಲ್ಲಿ ಬರೆದಿದ್ದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು ಸಂತಾನೋತ್ಪತ್ತಿ ಕ್ರೀಯೆಯಲ್ಲಿ ತುಂಬಾ ಬ್ಯೂಸಿ ಆಗಿವೆ ಅಂತ...ಅದರ ಫಲಿತಾಂಶವೇ ಈಗ ಮುರು ಪುಟ್ಟ ಪುಟ್ಟ ಪ್ರೇಮ ಪಕ್ಷಿಗಳ ಕಲರವ ಮನೆಯ ತುಂಬೆಲ್ಲ ಹಬ್ಬಿದೆ. ನಿನ್ನೆ ಆಕಸ್ಮಾತ್ ಆಗಿ ಒಂದು ಪುಟ್ಟ ಪಕ್ಷಿ ಗಡಿಗೆಯಿಂದ ತನ್ನ ಮುಖ ಹೊರಕ್ಕೆ ಮಾಡಿ ತಾಯಿಯನ್ನು ಪೀಡಿಸಿ ಗುಟುಕು ತೆಗೆದುಕೊಳ್ಳಲು ಹೋಗಿ ಪಂಜರದಲ್ಲಿ ಬಿದ್ದು ಬಿಟ್ಟಿದೆ. ತುಂಬ ಗಲಾಟೆ ಮಾಡುತ್ತಿತ್ತು. ಸರಿಯಾಗಿ ನಡೆದಾಡಲೂ ಬಾರದೆ, ಹಾರಲೂ ಬಾರದೇ ತುಂಬ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಆಫೀಸಿನಿಂದ ಬಂದವನೇ ಅದರ ಆವಾಂತರ ನೊಡಲಾರದೇ ಅದನ್ನು ಮತ್ತೆ ಅದರ ಗುಡಿಗೆ ಸೇರಿಸಲು ಹೋದಾಗ ದೊಡ್ಡದೊಂದು ಪಕ್ಷಿ ಪಂಜರದಿಂದ ಹೊರಕ್ಕೆ ಹಾರಿ ಮನೆಯ ತುಂಬೆಲ್ಲ ದೊಡ್ಡ ಗಲಾಟೆಯನ್ನೇ ಎಬ್ಬಿಸಿಬಿಟ್ಟಿತು. ಅದನ್ನು ರಮಿಸಿ, ಕರೆದು ಮತ್ತೆ ಅದನ್ನು ಪಂಜರದೊಳಕ್ಕೆ ಸೇರಿಸುವ ಹೊತ್ತಿಗೆ ನನ್ನ ಹೆಂಡತಿಗೆ ಹೋದ ಉಸಿರು ಮತ್ತೆ ವಾಪಸು ಬಂದತಾಗಿತ್ತು...ಈಗ ಮತ್ತೆ ಅವುಗಳ ಬದುಕು ಎಂದಿನಂತೆ ಸಾಗುತ್ತಿದೆ...ಅವುಗಳ ಸಂಸಾರ ದೊಡ್ಡದಾಗಿದೆ...ಅವುಗಳಿಗೊಂದು ಪುಟ್ಟ ಕಾಂಗ್ರ್ಯಾಟ್ಸ್!!!

ಇವಲ್ಲದೇ ನಾನು ನಾಲ್ಕು "ಪಿಂಚರ್ಸ್" ಸಾಕಿದ್ದೆ. ಪಿಂಚರ್ಸ್ ಗುಬ್ಬಚ್ಚಿಗಳಿಗಿಂತಲೂ ಅತ್ಯಂತ ಚಿಕ್ಕದಾದ, ತುಂಬ ಚುರುಕಾದ, ಪುಕ್ಕಲು ಪಕ್ಶಿಗಳು. ಕೇಸರಿ ಬಣ್ಣದ ಚುಂಚು ಹೊಂದಿರುವ ಇವು ಪ್ರೇಮ ಪಕ್ಷಿಗಳಿಗಿಂತಲೂ ಹೆಚ್ಚು ನೀರನ್ನು ಕುಡಿಯುತ್ತವೆ. ಯಾರೇ ಆಗಲಿ ನೋಡಿದ ಮೊದಲ ನೋಟಕ್ಕೆ ಮರುಳಾಗುವ ಆಕೃತಿ ಇವುಗಳದ್ದು.

ಅದೊಂದು ದಿನ ನಾನು ಹೀಗೆಯೇ ಗೆಳೆಯ ಮಣಿ ಜೊತೆ ಮಾತನಾಡುತ್ತಿದ್ದಾಗ ನಮ್ಮ ಮನೆಯಲ್ಲಿರುವ ಪಿಂಚರ್ಸ್ ಪಕ್ಷಿಗಳ ಬಗ್ಗೆ ಹೇಳಿದೆ. ಅವನ ಮಗಳು ನೀಲಿಗೆ ಪಕ್ಷಿಗಳೆಂದರೆ ಪಂಚಪ್ರಾಣ ಎಂದ. ಸರಿ ಬಂದು ಪಿಂಚರ್ಸ್ ತೆಗೆದುಕೊಂಡು ಹೋಗು ಎಂದೆ. ಆದರೆ ಒಂದು ಕರಾರು. ಒಬ್ಬನೇ ಬಂದರೆ ಕೊಡಲ್ಲ. ಜೊತೆಯಲ್ಲಿ ನೀಲಿ ಸಹ ಬರಲೇ ಬೇಕು ಅಂತ ಹೇಳಿದೆ. ಸರಿ ಇಬ್ಬರೂ ಸೇರಿ ಬಂದರು. ಮನೆಗೆ ಬಂದದ್ದೇ ತಡ ನೀಲಿ ನೇರವಾಗಿ ಪಿಂಚರ್ಸ್ ಇರುವ ಪಂಜರದ ಮುಂದೆ ಪ್ರತಿಷ್ಠಾಪನೆಗೊಂಡಳು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅವರಿಬ್ಬರನ್ನೂ ಪಕ್ಷಿಗಳ ಸಮೇತ ನನ್ನ ಕಾರಿನಲ್ಲಿ ಅವರ ಮನೆಯ ತನಕ ಬಿಟ್ಟು ಬಂದೆ.


ನಂತರದ ಕಥೆ ತುಂಬಾ ಕುತೂಹಲಕಾರಿಯಾಗಿತ್ತು. ಮಣಿಯ ಹೆಂಡತಿ ಪುಟ್ಟಿ ಹಾಗೂ ನೀಲಿ ಖಾಯಂ ಆಗಿ ಅವುಗಳ ಮುಂದೆ ಪ್ರತಿಷ್ಠಾಪನೆಗೊಳ್ಳತೊಡಗಿದರು. ನೀಲಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲ ಸಂಬಂಧಿಕರು, ಗೆಳೆಯ ಗೆಳತಿಯರಿಗೆ ತಮ್ಮ ಮನೆಗೆ ಆಗಮಿಸಿದ ನೂತನ ಅತಿಥಿಗಳ ಸುದ್ದಿ ಕೊಡುವುದೇ ಅವಳ ಪ್ರಥಮ ಆದ್ಯತೆಯಾಯ್ತು. ಹುಬ್ಬಳ್ಳಿಯಿಂದ ಜಿ.ಎಚ್ ಅವರ ಮಗ ಸಂದೇಶ್ ಫೋನಾಯಿಸಿ "ಪಕ್ಷಿ ನೋಡಲಿಕ್ಕೆ ಬೆಂಗಳೂರಿಗೆ ಬರಬೇಕಾ ಅಂಕಲ್" ಅಂತ ಕೇಳಿದ....


ಇದಕ್ಕೂ ಮುಂದು ವರೆದು ತಾಯಿ ಮಗಳಿಬ್ಬರೂ ಆ ನಾಲ್ಕು ಪಿಂಚರ್ಸ್ ಗಳಿಗೆ ನಾಮಕರಣ ಮಾಡಲು ಮುಂದಾದರು. ಅವುಗಳಿಗೆ ಸೂಕ್ತ ಹೆಸರನ್ನು ಹುಡುಕಲು ಶುರುಮಾಡಿದರು. ಪುಟ್ಟಿ ತನ್ನ ಬಿ.ಎ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ತಕ್ಷಣವೇ ಅವಳ ತಲೆಯಲ್ಲಿ ಹೊಳೆದ ಹೆಸರುಗಳು "ಶೆಕ್ಸ್ ಪೀಯರ್, ಎಮಿಲಿಯಾ, ಗ್ರೇಸಿ, ಮಿಲ್ಟನ್" ಎಂದು ಇಂಗ್ಲೀಷಿನ ಖ್ಯಾತ ಕವಿಗಳ ಹೆಸರುಗಳನ್ನಿಡಲಾಯಿತು. ಮಣಿ ಮಾರನೇ ದಿನ ಚಾಟ್ ನಲ್ಲಿ ಸಿಕ್ಕ ತಕ್ಷಣ ಈ ವಿಷಯವನ್ನು ತಿಳಿಸಿದ. ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ. ನಾನು ಮಣಿಗೆ ಹೇಳಿದೆ "ಅವು ನಮ್ಮ ಪಕ್ಷಿ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ...ನೀವ್ಯಾರು ಕೇಳೋದಿಕ್ಕೆ" ಅಂತ..ಅವನು ಅದಕ್ಕೆ ಆಯ್ತು ಸಾರ್ ಎಂದು ತಲೆ ದೂಗಿದ.

ಇಂದು ಮತ್ತೆ ಚಾಟ್ ನಲ್ಲಿ ಸಿಕ್ಕಾಗ ಮಣಿ ಹೇಳುತ್ತಿದ್ದ..."ಖ್ಯಾತ ಇಂಗ್ಲೀಷ್ ಕವಿಗಳ ಜೊತೆ ನಮ್ಮ ಬದುಕು ಸಾಗಿದೆ ಸಾರ್" ಎಂದು. ನಾನವನಿಗೆ ಹೇಳಿದೆ. "ಆ ಮಹಾಕವಿಗಳ ಬದುಕಿನ ಜೊತೆ ನಿಮ್ಮ ಬದುಕು ಬಂಗಾರವಾಗಲಿ ಎಂದು"...ತುಂಬ ಭಾವುಕನಾದ ಮಣಿ...

ಬದುಕಿನ ಬವಣೆಗಳೆಲ್ಲ ಮಾಯವಾಗಿ ಅಲ್ಲಿ ಬರೀ ಬೆಳದಿಂಗಳೇ ತುಂಬಿರಲಿ....ಎನ್ನುತ್ತಾ ನನ್ನ ಮಾತಿಗೆ ಪೂರ್ಣ ವಿರಾಮಹಾಕಿದೆ......