Friday, December 31, 2010

ಎತ್ತಣ ಮಾಮರ..ಎತ್ತಣ ಕೋಗಿಲೆ.....

ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕದಲ್ಲಿ ನಾನು ಬಹುವಾಗಿ ಮಾತನಾಡಿದ್ದು ಮನುಷ್ಯ ಸಂಬಂಧಗಳ ಕುರಿತು. ಈ ಸಂಬಂಧಗಳೇ ಹಾಗೆ..ನಮ್ಮೀ ನಿವಾಸದಲ್ಲೇ ಅಡಗಿವೆ..ಬರುವಾಗ ಬೆತ್ತಲೆ..ಹೋಗುವಾಗ ಬೆತ್ತಲೆ..ಬಂದು ಹೋಗುವ ನಡುವೆ ಬರೀ ಕತ್ತಲೆ....ಹೀಗೆ ಸಂಬಂಧಗಳ ಜಾಡು ಪಸರಿಸುತ್ತಲೇ ಹೋಗುತ್ತದೆ. ನಾವು ಈ ಭುವಿಯ ಮೇಲೆ ಕಣ್ತೆರೆದಾಗ ನಾವು ಅಳುತ್ತಿರುತ್ತೇವೆ..ಆದರೆ ನಮ್ಮನ್ನ ಹೆತ್ತ ಆ ಮಹಾತಾಯಿ ಹಸನ್ಮುಖಿಯಾಗಿರುತ್ತಾಳೆ. ತನ್ನ ಕರುಳ ಬಳ್ಳಿಯ ಮತ್ತೊಂದು ಸಂಬಂಧವನ್ನು ವ್ಯಾವಹಾರಿಕ ಲೋಕಕ್ಕೆ ಪರಿಚಯಿಸಿದ ಸಂಭ್ರಮ ಅಲ್ಲಿರುತ್ತದೆ..ಅಲ್ಲಿಂದ ವಿಭಿನ್ನ ರೀತಿಯ ಸಂಬಂಧಗಳು ಹೆಣೆದುಕೊಳ್ಳಲಾರಂಭಿಸುತ್ತವೆ.

ಬದುಕು ಮುಂದೆ ಸಾಗಿದಂತೆಲ್ಲ ನಮ್ಮ ಆಸೆ, ಆಶಯಗಳು ಹೊಸದಿಕ್ಕಿನತ್ತ ಮುಖ ಮಾಡುತ್ತವೆ. ಅನೇಕ ಗೆಳೆಯರ, ಗೆಳತಿಯರ ಸೇರ್ಪಡೆಯಾಗುತ್ತದೆ. ಪರಿಚಯವೇ ಇಲ್ಲದ ಒಂದು ಜೀವ ನಮ್ಮ ಬಾಳ ಬದುಕಿನ ಸಂಗಾತಿಯಾಗುತ್ತದೆ. ಅಲ್ಲಿಂದ ಮತ್ತೊಂದು ಅಧ್ಯಾಯಕ್ಕೆ ನಮ್ಮ ಜೀವನ ತೆರೆದುಕೊಳ್ಳುತ್ತದೆ. ಇದು ಒಂದು ಜೀವನ ಚಕ್ರ. ಬಹುತೇಕವಾಗಿ ಎಲ್ಲರ ಜೀವನದಲ್ಲಿ ಘಟಿಸುವ ಘಟನೆಗಳೇ ಇವು.

ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ..ನಮ್ಮ ಜೀವನ ಸಂಗಾತಿಗಿಂತಲೂ ನಮಗೆ ತುಂಬಾ ಇಂಟ್ರೆಸ್ಟಿಂಗ್ ಆಗಿ ಕಾಣುವ ಕ್ಯಾರೆಕ್ಟರ್ ಅಂದರೆ ಅವರ ಅಪ್ಪ. ಒಂದು ಸಣ್ಣ ಕಾರಣ ಸಿಕ್ಕರೆ ಸಾಕು, ನಾವು ಅದರ ಎಳೆಯನ್ನ ಹಿಡಿದುಕೊಂಡು ಅವಳ ಅಪ್ಪನನ್ನ ಗೇಲಿ ಮಾಡಲು ಆರಂಭಿಸಿಬಿಡುತ್ತೇವೆ. ಅದು ಖಂಡಿತವಾಗಿಯೂ ಯಾವುದೇ ದ್ವೇಷದಿಂದ ಕೂಡಿದ ಗೇಲಿಯಾಗಿರುವುದಿಲ್ಲ. ಅಲ್ಲಿ ಸಲುಗೆ ಇರುತ್ತದೆ, ಗೌರವವಿರುತ್ತದೆ. ಅದಕ್ಕೆ ಪೂರಕ ಎನ್ನುವಂತೆ ಅವರು ಸಹ ಕೆಲವು ಎಡವಟ್ಟುಗಳನ್ನ ಮಾಡಿ ನಮ್ಮ ಅಪಹಾಸ್ಯಕ್ಕೆ ಮೆಲಿಂದ ಮೇಲೆ ಗುರಿಯಾಗುತ್ತಿರುತ್ತಾರೆ. ನನ್ನ ಜೀವನದಲ್ಲಿಯೂ ಸಹ ಇಂತಹ ಅನೇಕ ಕುತೂಹಲಕಾರಿಯಾದ ಘಟನೆಗಳು ನಡೆದಿವೆ. ಅವುಗಳನ್ನು ನನ್ನ ಬ್ಲಾಗುಗಳಲ್ಲು ದಾಖಲಿಸುತ್ತಿದ್ದೇನೆ. ಅವುಗಳಿಗೆ ನೀವು ಕತೆಗಳೆನ್ನಬಹುದು, ಲಲಿತ ಪ್ರಬಂಧಗಳೆನ್ನಬಹುದು ಅಥವಾ ದಾರಿಯಲ್ಲಿ ಕಂಡ ಮುಖಗಳೆನ್ನಬಹುದು...ಅದು ನಿಮ್ಮ ಆಯ್ಕೆಗೆ ಬಿಟ್ಟಿದ್ದು...ಓದಿ...ನಿಮ್ಮ ಅಭಿಪ್ರಾಯ ತಿಳಿಸಿ...


Saturday, December 25, 2010

ಬೇಲಿ ಮತ್ತು ಹೊಲ




ಬೇಲಿ ಮತ್ತು ಹೊಲ ನಾಟಕದ ರಂಗಸಜ್ಜಿಕೆ ಕಾರ್ಯದಲ್ಲಿ ನಿರತರಾಗಿರುವ ಕಲಾವಿದರು

Saturday, December 11, 2010

ಹೀಗೊಂದು ಸಂವಾದ !!!!

ನೆನ್ನೆಯ ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಇನ್ನೊಬ್ಬರೊಂದಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತದ್ದ. ಅದೂ ಸ್ಪೀಕರ್ ಫೋನ್ ಆನ್ ಮಾಡಿ !!! ಅವರಿಬ್ಬರ ನಡುವೆ ನಡೆದ ಸಂಭಾಷಣೆ ತುಂಬಾ ಖುಷಿ ಕೊಟ್ಟಿತು.
ಇವನು: ಈರೇಷಿ ಎಲ್ಲದೀ?
ಈರೇಷಿ: ನಾನೆಲ್ಲೋಗ್ಲಣ್ಣ..ಇಲ್ಲೆ ಬೆಂಗಳೂರಿನ್ಯಾಗದೀನಿ..ದುಡಕಂಬ್ ತಿನ್ನೋ ಜೀವ..ನೀನೆಲ್ಲದೀ?
ಇವನು: ನಾನು ಬೆಂಗಳೂರಿಗೆ ಬಂದಿದ್ದೆ..ಈಗ ಮತ್ತ ಹೊಸಪೇಟಿಗೆ ಹೊಂಟೀನಿ...
ಈರೇಷಿ: ಏ..ಅದೇನಣ್ಣ ಹೀಂಗ..ಬಂದು ಒಂದು ಫೋನ್ ಹಾಕಬಾರ್ದೇನ್? ಹೆಂಗ ಬಂದಿ..ಬಸ್ಸಾ, ಟ್ರೇನಾ?
ಇವನು: ಐ..ಅದು ಬಿಡು ಈರೇಷಿ..ಆಲ್ ಆಫ್ ಎ ಸಡನ್..(ಇನ್ನೇನೋ ಹೇಳುವವನಿದ್ದ..ಅಷ್ಟರಲ್ಲಿ)
ಇರೇಷಿ: ಏ ಅದ್ಯಾವುದಣ್ಣ...ಆಲ್ ಆಫ್ ಎ ಸಡನ್.....ಹೊಸ ಬಸ್ಸಾ?????

Friday, December 10, 2010

ಹೊಸ ನಾಟಕದ ತಯಾರಿಯಲ್ಲಿ ಕನ್ನಡ ಕಲಾ ಸಂಘ...




ನಿಮಗೆಲ್ಲ ತಿಳಿಸಿದಂತೆ ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘ ತನ್ನ ಹೊಸ ನಾಟಕ ತಯಾರಿಯಲ್ಲಿ ತೊಡಗಿದೆ. ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಕಿರು ಕಾದಂಬರಿ "ಬೇಲಿ ಮತ್ತು ಹೊಲ" ನಾಟಕವನ್ನು ಕೈಗೆತ್ತಿಕೊಂಡಿದೆ. ನಾಟಕದ ವಿನ್ಯಾಸದ ಕೆಲವು ಚಿತ್ರಗಳು ಇಲ್ಲಿವೆ...

Sunday, December 5, 2010

ಬೇಲಿ ಮತ್ತು ಹೊಲ.....


ಕರ್ನಾಟಕ-ಆಂಧ್ರದ ಗಡಿಭಾಗದಲ್ಲಿ ನಡೆದ ಒಂದು ಘಟನೆಯನ್ನು ಆಧರಿಸಿ, ನಮ್ಮ ನಡುವಿನ ಅನನ್ಯ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ಕಿರುಕಾದಂಬರಿ ಬೇಲಿ ಮತ್ತು ಹೊಲ. ಇದರ ಹೆಸರೇ ಸೂಚಿಸುವಂತೆ "ಬೇಲಿ" ಆಳುವ ವ್ಯವಸ್ಥೆಯನ್ನು ಮತ್ತು "ಹೊಲ" ಸಾಮಾನ್ಯ ಪ್ರಜೆಯನ್ನು ಪ್ರತಿನಿಧಿಸುತ್ತದೆ.

ಕಾನೂನಿನಡಿ ನುಸುಳುವ ಹಾಗೂ ಭ್ರಷ್ಟತೆಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಂಡವನು ಹೇಗೆ ಆಳುವ ಪ್ರಕ್ರಿಯೆಯಲ್ಲಿ ಅಂತರ್ಗತನಾಗುತ್ತಾನೆ ಎಂಬುದು ಗಂಭೀರ ವಾಸ್ತವ. ಕಾನೂನು ಹಾಗೂ ವ್ಯವಸ್ಥೆಯ ಪ್ರತಿನಿಧಿಯಾಗಿ ಪೊಲೀಸ್ ಅಧಿಕಾರಿ ಪೋತುರಾಜು, ದಲ್ಲಾಳಿ ವ್ಯವಸ್ಥಯ ಹರಿಕಾರನಾಗಿ ವಿಠ್ಠೋಬ, ಮಾಧ್ಯಮ ಪ್ರವರ್ತಕನಾಗಿ ಪತ್ರಕರ್ತ ಕಹಳೆ ಪಾಟೀಲ್, ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಭೀಮಣ್ಣ, ಸಾಮಾನ್ಯ ಪ್ರಜೆಯ ಪ್ರತಿನಿಧಿಯಾಗಿ ಚಂಬಸ್ವ, ಮಲ್ಲಕ್ಕ, ಬಡಕೊಟ್ರಯ್ಯ ಹಾಗೂ ಹಳ್ಳಿಗರು ಪ್ರತಿನಿಧಿಸುತ್ತಾರೆ.

ಇಡೀ ಕಥಾವಸ್ತುವಿನ ಅಂತರಾಳ ಪ್ರಜಾಸಮೂಹ ಅಥವಾ ಒಬ್ಬ ಸಾಮಾನ್ಯನಿಗೆ ಅನ್ಯಾಯ, ಶೋಷಣೆ, ಹಿಂಸೆಗೆ ಗುರಿಯಾದಾಗ ಪ್ರಸ್ತುತ ಸುದ್ದಿಮಾಧ್ಯಮಗಳು ಅದನ್ನು ತಿದ್ದುವ ಕಾಯಕದಲ್ಲಿ ಮಾಡುವ ಸದ್ದಾಗಲೀ, ಪ್ರಬುದ್ಧರು ನಡೆಸುವ ಪ್ರತಿಭಟನೆ, ಮುಷ್ಕರ, ಚಳುವಳಿಗಳಾಗಲೀ ಬರಬರುತ್ತಾ ತೀರಾ ಮಾಮೂಲಿಯೂ, ಯಾಂತ್ರಿಕವೂ ಆಗಿ ನಮ್ಮನ್ನಾಳುವ ಪ್ರಭುಗಳನ್ನು ತಿದ್ದುವ, ಶಿಕ್ಷಿಸುವ ಪರಿಣಾಮದ ತೀವ್ರತೆ ಕಳೆದುಕೊಳ್ಳುತ್ತಿವೆ ಎನ್ನುವುದು ನಮ್ಮ ಮುಂದಿರುವ ದುರಂತ..

ಇಂತಹ ಸಂದರ್ಭದಲ್ಲಿ ನ್ಯಾಯದಾನದ ಪ್ರಕ್ರಿಯೆ ಜನಸಾಮಾನ್ಯನ ಹಿತಕಾಪಾಡುವ ದಿಶೆಯಲ್ಲಿ ಇರುವ ವ್ಯಕ್ತಿಗತ ದೋಷಗಳು ಮತ್ತು ವ್ಯವಸ್ಥೆಯ ದೋಷಗಳನ್ನು ನಿವಾರಿಸುವ ಪರಿಣಾಮಕಾರಿ ಮಾರ್ಗವನ್ನು ನಾವೆಲ್ಲ ಇಂದು ಹುಡುಕಲೇಬೇಕಾಗಿದೆ.. ಒಟ್ಟಿನಲ್ಲಿ "ಬೇಲಿ" ಇದ್ದಾಗ ಪ್ರಜಾಸಮೂಹವೆಂಬ "ಹೊಲ" ದಲ್ಲಿ ಬೆಳೆದಿರುವ ಬೆಳೆಯನ್ನು ಪ್ರಾಮಾಣಿಕವಾಗಿ ರಕ್ಷಿಸಿಕೊಳ್ಳುವ ಪ್ರಜಾತಂತ್ರದ ಅರ್ಥವನ್ನೂ, ಕಾನೂನು ವ್ಯವಸ್ಥೆಯ ಅಸ್ತಿತ್ವವನ್ನೂ ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ಸಮಾಜ ನಿರಂಕುಶವಾಗಿ ಅರಾಜಕತೆಯತ್ತ ಸಾಗುತ್ತದೆ ಎಂಬುದು ಒಟ್ಟೂ ಕಾದಂಬರಿಯ ಒಳದನಿ.

ಈ ಕಾದಂಬರಿಯನ್ನು ಶ್ರೀ. ಜಿ.ಎಚ್. ರಾಘವೇಂದ್ರ ಅವರು ತಮ್ಮ ಎಂದಿನ ಹರಿತ ವಿಡಂಬನೆಗಳ ಮೂಲಕ ರಂಗಕ್ಕೆ ಅಳವಡಿಸಿದ್ದಾರೆ. ಇಂದಿನ ಪ್ರಸ್ತುತ ರಾಜಕೀಯ ಸನ್ನಿವೇಷಗಳಿಗೆ ಸಮೀಕರಿಸಿ, ವಿನ್ಯಾಸಗೊಳಿಸಿ ಅದನ್ನು ಟಿ.ಬಿ.ಡ್ಯಾಂ ನ ಕನ್ನಡ ಕಲಾ ಸಂಘಕ್ಕೆ ನಿರ್ದೇಶಿಸುತ್ತಿದ್ದೇನೆ. ದಯವಿಟ್ಟು ಬನ್ನಿ...ನಾಟಕ ನೋಡಿ...


Thursday, November 18, 2010

ಮರ್ಯಾದೆಯಿಂದ ಖುರ್ಚಿಬಿಡಿ....

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ಹಗರಣಗಳಿಂದ ಜನ ಸಾಮಾನ್ಯರೆಲ್ಲ ಅಸಹ್ಯ ಪಟ್ಟುಕೊಳ್ಳುತ್ತಿದ್ದರೆ, ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮುಖ್ಯಮಂತ್ರಿಗಳು, ಅವರ ಸಂಪುಟದ ಸಹೋದ್ಯೋಗಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಇಂತಹ ತಪ್ಪನ್ನು ಮಾಡಿದ್ದಾರೆ..ಇದೇನೂ ಹೊಸದಲ್ಲ" ಎಂಬಂತಹ ಭಂಡತನದ ಹೇಳಿಕೆಗಳನ್ನು ಕೊಡುತ್ತ ಸಾಗಿರುವುದು ನಿಜಕ್ಕೂ ಹೇಸಿಗೆಯ ವಿಷಯ. ನಮಗೆಲ್ಲ ಗೊತ್ತಿದೆ ಹಿಂದಿನ ಸರ್ಕಾರಗಳ್ಯಾವವೂ ಸಂಪನ್ನವಾಗಿರಲಿಲ್ಲ ಎಂದು. ಒಂದು ಮಾದರಿ ಸರಕಾರ, ಉತ್ತಮ ಆಡಳಿತ ನಮಗೆ ದೊರೆಯಬಹುದೆಂಬ ಭರವಸೆಯ ಮೇರೆಗೆ ಬಿಜೆಪಿ ಪಕ್ಷವನ್ನು ಗದ್ದುಗೆಗೆ ಏರಿಸಿದ ಮತದಾರ ಇಂದು ಭ್ರಮನಿರಸನನಾಗಿರುವುದೂ ಸಹ ಅಷ್ಟೇ ಸತ್ಯ. ಇವೆಲ್ಲದಕ್ಕೆ ಕಳಶವಿಟ್ಟಂತೆ ನಗರಕ್ಕೆ ಆಗಮಿಸಿದ ಗುಜರಾತ್ ಮುಖ್ಯಮಂತ್ರಿ "ರಾಜೀವ್ ಗಾಂಧಿ ಬೃಷ್ಟಾಚಾರವನ್ನು ನಿಯಂತ್ರಿಸಲಿಲ್ಲ" ಎಂಬಂತಹ ಔಟ್ ಡೇಟೆಡ್ ಹೇಳಿಕೆಗಳನ್ನ ನೀಡಿ ತಮ್ಮ ಭಂಡತನವನ್ನು ಸಹ ಮೆರೆದರು. ಹೌದು ಹಿಂದಿನವರೆಲ್ಲರೂ ದುಷ್ಟರು, ಭೃಷ್ಟರು, ಲಂಚಕೋರರು. ನೀವು ಸಹ ಅದನ್ನೇ ಮಾಡುವುದಾದರೆ ನೀವೇಕೆ ಮಂತ್ರಿಗಿರಿಯ ಖುರ್ಚಿಯಮೇಲೆ ಕುಳಿತುಕೊಳ್ಳಬೇಕು. ಮರ್ಯಾದೆಯಿಂದ ಇಳಿದು ಹೋಗಿ. ಯಾರಿಗೆ ಯಾರೂ ಅನಿವಾರ್ಯವಲ್ಲ. ನೀವು ರಾಜ್ಯಭಾರ ಮಾಡದೇ ಹೋದರೂ ನಾವು ಇಲ್ಲಿ ಬದುಕುತ್ತೇವೆ..ಜೀವನ ನಡೆಸುತ್ತೇವೆ.

Friday, October 15, 2010

ಗಾಂಧೀ ಕ್ಲಾಸು ವಿಮಾನ ಏರಿದ್ದು...





ವಾಗಿಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ತೊಡಕುಗಳು, ಸಾಹಸಗಾಥೆಗಳು, ಅಲ್ಲಿನ ಜನರೊಂದಿಗಿನ ಒಡನಾಟ, ಮಲ್ಲೇಪುರಂ ಮಳೆಗಾಲದ ಹೊತ್ತಿನಲ್ಲಿ ತಮ್ಮ ಚಪ್ಪಲಿಯನ್ನು ಕಳೆದುಕೊಂಡು, ಇದ್ದೊಂದೇ ಚಪ್ಪಲಿಯನ್ನು ಶುಭ್ರವಾಗಿ ತೊಳೆದುಕೊಂಡು ಕುಂವೀ ಮನೆಗೆ ಬಂದು, ಅಲ್ಲಿರುವ ಚೋಳುಗಳ ಪರಿವಾರದ ಪರಿಚಯ ಮಾಡಿಕೊಂಡದ್ದು..ಹೀಗೆ ಮುಂತಾದ ರೋಚಕ ಅನುಭವಗಳನ್ನು ಓದುತ್ತ ಹೋದಂತೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತಿದ್ದವು..

ಬೆಳಗಿನ ಜಾವ ಆರು ಗಂಟೆಗೆ ಹೈದರಾಬಾದ್‍ಗೆ ಹೊರಡುವ ವಿಮಾನದಲ್ಲಿ ಕುಳಿತುಕೊಂಡು "ಗಾಂಧಿ ಕ್ಲಾಸು" ಓದುತ್ತಿರುವಾಗಿನ ಅನುಭವಗಳಿವು. ನಾಗರೀಕರಣದ ಗಂಧಗಾಳಿ ಗೊತ್ತಿಲ್ಲದ, ಮಾನವ ಸಂಬಂಧಗಳ ಅರ್ಥವಿಲ್ಲದ ಊರಿಗೆ ಚುನಾವಣಾ ಕೆಲಸಕ್ಕೆಂದು, ಅದೂ ಪಂಚಾಯ್ತಿ ಚುನಾವಣಾ ಕೆಲಸಕ್ಕೆಂದು ಹೋಗಿ, ಅಲ್ಲಿ ಪ್ರತಿಮನೆಯಲ್ಲಿ ತರಕಾರಿಗಳನ್ನಿಡುವ ರೀತಿಯಲ್ಲಿ ನಾಡಬಾಂಬ್ ಗಳನ್ನಿಟ್ಟುಕೊಂಡು, ಅದನ್ನೇ ಬದುಕು ಅಂತ ಅಪ್ಪಿಕೊಂಡು ಬದುಕುತ್ತಿರುವ ಜನರಮಧ್ಯೆ ಬದುಕಿ, ರಕ್ತಪಾತಗಳನ್ನು ಕಣ್ಣಾರೆಕಂಡು ಅದನ್ನು ಯಥಾವತ್ತಾಗಿ ವಿವರಿಸುವ ಕುಂವೀ..."ಹೀಗೂ ಉಂಟೇ" ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ....

ಇದೆಲ್ಲ ಓದುತ್ತಿದ್ದಂತೆ..."ಗಾಂಧಿ ಕ್ಲಾಸು" ಕುಂವೀ ಅವರ ಆತ್ಮಕಥೆಯೆಂಬ ಕಾದಂಬರಿಯನ್ನು ಇಡಿಯಾಗಿ ರಂಗದಮೇಲೆ ತರುವ ಯೋಚನೆಗಳು ತಲೆಯಲ್ಲಿ ತಹರೆವಾರಿಯಾಗಿ ಗಿರಕಿಹೊಡೆಯ ಹತ್ತಿದವು...ಅದೇ ಗುಂಗಿನಲ್ಲಿ "ಗಾಂಧಿ ಕ್ಲಾಸು" ಪುಸ್ತಕವನ್ನು ವಿಮಾನಿನಲ್ಲಿ ನನ್ನ ಮುಂದಿನ ಸೀಟಿನ ಹಿಂದೆ ಇರುವ ಸ್ಥಳದಲ್ಲಿ ಇಟ್ಟು ಯೋಚನೆಯಲ್ಲಿ ಮುಳುಗಿದೆ..ಮುಂದೆ ಹೈದರಾಬಾದ್ ನಿಲ್ದಾಣ ಬಂತು..ನನ್ನ ಲಗೇಜು ತೆಗೆದುಕೊಂಡು ವಿಮಾನದಿಂದ ಇಳಿದು ಹೊರನಡೆದೆ...ನಿಲಾಣದಿಂದ ಹೊರಬಂದ ನಂತರ "ಗಾಂಧಿ ಕ್ಲಾಸು" ವಿಮಾನು ಏರಿ ಅಲ್ಲಿಯೇ ಪವಡಿಸುತ್ತಿರುವುದು ಗಮನಕ್ಕೆ ಬಂತು..ತುಂಬ ಚಡಪಡಿಸಿದೆ...ಕೂಡಲೇ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಅಳಲನ್ನು ತೋಡಿಕೊಂಡು, ಪುಸ್ತಕವನ್ನು ಹಿಂತಿರುಗಿಸಲು ವಿನಂತಿಸಿದೆ...ಕೂಡಲೇ ಕಾರ್ಯತತ್ಪರರಾದ ಅಧಿಕಾರಿಗಳು ೨-೩ ಕಡೆ ಫೋನಾಯಿಸಿ, ಅರ್ಧಗಂಟೆಯ ನಂತರ ಅದನ್ನು ನನ್ನ ಕೈಗಿತ್ತು, ಒಂದು ಬಿಳಿ ಕಾಗದದ ಮೇಲೆ ನನ್ನಿಂದ ಪ್ರಾಮಿಸರಿ ನೋಟ್ ಬರೆಸಿಕೊಂಡರು.....

ಹೀಗೆ ಗಾಂಧಿ ಕ್ಲಾಸು ವಿಮಾನ ಏರಿದಂತೆಯೇ ರಂಗದ ಮೇಲೆಯೂ ಏರಲಿದೆ ಇಷ್ಟರಲ್ಲಿಯೇ !!!!!

Saturday, September 18, 2010

ಎನ್ನ ಕಾಯವ....



ಮಾನವತೆಯ ಹಿಮಾಲಯ ಪರ್ವತ ಅಸ್ತಂಗತವಾಗಿದೆ. ೯೭ ವರ್ಷಗಳ ಸಾರ್ಥಕ ಜೀವನಗಳನ್ನು ನಡೆಸಿ, ತಮ್ಮ ಅಂಧತೆಯ ಮೂಲಕ ಕಣ್ಣಿದ್ದವರಿಗೆ ಬಾಳಿನ ದಾರಿದೀಪವಾಗಿ ಬಾಳಿದ ಪುಟ್ಟಜ್ಜಯ್ಯ ತಮ್ಮ ಇಹಲೋಕದ ಎಲ್ಲ ವ್ಯವಹಾರಗಳನ್ನು ಮುಗಿಸಿ ಸಾಗಿಬಾರದ ದಾರಿಗೆ ನಡೆದು ಬಿಟ್ಟರು. ಅವರ ಅಂತ್ಯ ಸಂಸ್ಕಾರಕ್ಕೆ ಸೇರಿದ ಜನಸಾಗರವೇ ಅವರ ಮಾನವೀಯತೆಗೆ, ಸರಳತೆಗೆ ಸಾಕ್ಷಿಯಾಯಿತು.

ತಮ್ಮ ಜೀವನದುದ್ದಕ್ಕೂ ಸಂಗೀತದ ವಿವಿಧ ಮಜಲುಗಳಲ್ಲಿ ಅಗಾಧ ಪರಿಶ್ರಮ ಮತ್ತು ಶೃದ್ಧೆಗಳಿಂದ ಮೇರುಶಿಖರಕ್ಕೇರಿದ, ಮತ್ತು ಸಾವಿರಾರು ಜನರಿಗೆ ದಾರಿದೀಪವಾಗಿ, ಮಾರ್ಗದರ್ಶಕರಾಗಿ ಬದುಕಿ ಬಾಳಿದ ಹಿರಿಯ ಚೇತನಕ್ಕೆ ಅವರ ಅಂತಿಮ ಯಾತ್ರೆಗೆ ಲಕ್ಷಾಂತರ ಜನ ತೋರಿದ ಗಾನ ನಮನ ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ.

ಒಂದು ಕಡೆಯಿಂದ ಅವರ ಅಪಾರ ಸಂಖ್ಯೆಯ ಶಿಷ್ಯ ವೃಂದ, ಭಕ್ತರು, ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆಯಲು ಧಾವಿಸಿ ಬರುತ್ತಿದ್ದಂತೆಯೇ, ಮತ್ತೊಂದೆಡೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಮಂತ್ರಿ ಮಹೋದಯರು ತಮ್ಮ ಕೆಂಪು ಗೂಟದ ಕಾರುಗಳಲ್ಲಿ ಬಂದು ತಮ್ಮ "ಕರ್ತವ್ಯ" ವನ್ನು ಪೂರೈಸುತ್ತಿದ್ದರು. ಕೆಲವೊಂದು ಬಾರಿ ಅದೇಕೋ ಏನೊ ಈ ರಾಜಕೀಯ ಮಂದಿ ತಮ್ಮ ಬುದ್ಧಿಗೆ ಹೆಚ್ಚಿನ ಕೆಲಸವನ್ನು ಕೊಡುವುದೇ ಇಲ್ಲ. ಕೇವಲ ಸ್ವಾರ್ಥಕ್ಕಾಗಿ ಎಲ್ಲವನ್ನು ನೋಡುವ ಮನೋಭಾವ ಹೊಂದಿದವರಂತೆ ಕಂಡುಬಿಡುತ್ತಾರೆ. ಅದನ್ನು ನಮ್ಮ ನಡುವೆ ನಡೆಯುತ್ತಿರುವ ದುರಂತ ಎನ್ನಬೇಕೋ, ಪ್ರಮಾದ ಎನ್ನಬೇಕೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಅಚಾತುರ್ಯ ಎನ್ನಬೇಕೊ ಅರ್ಥವಾಗುತ್ತಿಲ್ಲ.

ನೆನ್ನೆ ಕೂಡ ಪುಟ್ಟಜ್ಜಯ್ಯನವರ ಅಂತ್ಯಕ್ರೀಯೆಯ ಸಂದರ್ಭದಲ್ಲಿ ನಡೆದದ್ದೂ ಅದೇ. ಶುಕ್ರವಾರ ಮಧ್ಯಾಹ್ನ ೧೨.೨೦ ಕ್ಕೆ ಹಿರಿಯ ಚೇತನ ಇಹಲೋಕದೊಂದಿಗೆ ತನ್ನ ಕೊಂಡಿಯನ್ನು ಕಳಚಿಕೊಂಡಿತು. ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಈ ಸುದ್ದಿ ಬಿತ್ತರವಾಗತೊಡಗಿತು. ಎಂದಿನಂತೆ ನಮ್ಮ ಮುಖ್ಯಮಂತ್ರಿಗಳದ್ದು, ಗೃಹ ಮಂತ್ರಿಗಳದ್ದು, ರಾಜ್ಯದ ಹಿರಿಯ ಅಧಿಕಾರಿಗಳದ್ದು ಘನ ಮೌನ. ಕಳೆದ ಒಂದು ವಾರದಿಂದ ಅವರ ಆರೋಗ್ಯ ತೀರ ಬಿಗಡಾಯಿಸಿ, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಪುಣ್ಯಾಶ್ರಮಕ್ಕೆ ಅವರನ್ನು ಕರೆತರುವ ವರೆಗೂ ನಮ್ಮ ಮುಖ್ಯ ಮಂತ್ರಿಗಳು ಸೌಜನ್ಯಕ್ಕಾಗಿಯಾದರೂ ಅವರನ್ನು ಕಂಡು, ಅವರ ಆರೋಗ್ಯ ವಿಚಾರಣೆ ಮಾಡುವ ಚಿಂತೆಯನ್ನು ಸಹ ಮಾಡಲಿಲ್ಲ. ಬದಲಿಗೆ ಅವರಿಗೆ ಮತ್ತು ಅವರು ಕೆಲವು ಸಹೋದ್ಯೋಗಿಗಳಿಗೆ ಪೂರ್ವ ನಿಗದಿತವಾದ ಚೀನಾ ಪ್ರವಾಸ ಅತ್ಯಂತ ಪ್ರಮುಖವಾಗಿ ಬಿಟ್ಟಿತು. ಅದು ಹೋಗಲಿ. ಶುಕ್ರವಾರ ಮಧ್ಯಾಹ್ನ ಶ್ರೀಗಳ ನಿಧನದ ವಾರ್ತೆ ತಿಳಿಯುತ್ತಿದ್ದರೂ, ಶನಿವಾರ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಹುಬ್ಬಳ್ಳಿಗೆ ಬಂದು ಸರಕಾರಿ ರಜೆ ಘೊಷಿಸುವ ಅಗತ್ಯವೇನಿತ್ತು? ಸಾಲದ್ದಕ್ಕೆ ಪುಟ್ಟಜ್ಜಯ್ಯನವರ ಸ್ಮಾರಕಕ್ಕೆ ಸರಕಾರದಿಂದ ಐದು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿ ತಮ್ಮ ಹೆಗಲ ಮೇಲಿನ ಜವಾಬ್ದಾರಿಯನ್ನು ತೊಳೆದುಕೊಂಡಂತೆ ಮುಖ್ಯಮಂತ್ರಿಗಳು ಮಾತನಾಡಿದರು. ಸಾಲದ್ದಕ್ಕೆ ಶ್ರೀಗಳಿಗೆ "ಕರ್ನಾಟಕ ರತ್ನ" ಪ್ರಶಸ್ತಿ ಕೊಡುವ ಯೋಚನೆ ಸರ್ಕಾರಕ್ಕೆ ಇತ್ತು ಎಂಬತಹ ಬೇಜವಾಬ್ದಾರಿಯ ಹೇಳಿಕೆಗಳು.

ಈ ಎಲ್ಲ ಘೋಷಣೆಗಳು, ಪರಾಕುಗಳು ಮುಗಿಯುತ್ತಿದ್ದಂತೆಯೇ, ಒಂದಿಬ್ಬರು ಮಂತ್ರಿಗಳನ್ನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಬಿಟ್ಟು, ತಮ್ಮ ಉಳಿದೆಲ್ಲ ಮಂತ್ರಿ ಮಹೋದಯರೊಂದಿಗೆ ರಾಜಧಾನಿಗೆ ದೌಡಾಯಿಸಿದರು. ಅಲ್ಲಿ ಅವರು ನಡೆಸಿದ ಅತ್ಯಂತ ತುರ್ತು ಕಾರ್ಯವೆಂದರೆ ಸಚಿವ ಸಂಪುಟ ವಿಸ್ತರಣೆಯ ಕುರಿತು ಚರ್ಚೆ, ಲಾಬಿ ಇತ್ಯಾದಿ ಇತ್ಯಾದಿ. ಸಂಪುಟ ವಿಸ್ತರಣೆ ಕುರಿತಾದ ಚರ್ಚೆ, ಲಾಬಿಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರೆ ಯಾವ ಸೀಮೆ ಹಾಳಾಗುತ್ತಿತ್ತು? ತಮ್ಮ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯನ್ನು ಮೆರೆದು, ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ತಮ್ಮ ಮೇಧಾವಿತನವನ್ನು ಪ್ರದರ್ಶಿಸಬೇಕಿದ್ದ ಮುಖ್ಯಮಂತ್ರಿಗಳು ಎಂದಿನಂತೆ ಮತ್ತೆ ಹಾದಿ ತಪ್ಪಿದರು.

ನಾರ್ಮನ್ ಕಸಿನ್ಸ್ ಹೇಳಿರುವಂತೆ "ಸಾವು ಬದುಕಿನ ದೊಡ್ಡ ನಷ್ಟವೇನೂ ಅಲ್ಲ. ನಾವು ಬದುಕಿದ್ದಾಗ ನಮ್ಮೊಳಗೆ ಏನೇನು ಸಾಯುತ್ತದೆಂಬುದೇ ದೊಡ್ಡ ನಷ್ಟ". ಮುಖ್ಯಮಂತ್ರಿಗಳೇ ಬಹುಶಃ ಈ ಮಾತು ನಿಮಗೆ ಹಾಗೂ ನಿಮ್ಮ ಸಂಪುಟದ ಪರಿವಾರಕ್ಕೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ...

Friday, September 17, 2010

ಹೊಸ ನಾಟಕ ಚಿಂಗಿಯ ಗುಂಗಿನಲ್ಲಿ....

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನತೆ ಎಮ್ಬುದು ನಿಜಕ್ಕೂ ಇದೆಯಾ? ಹಾಗಾದರೆ ಎಲ್ಲಿದೆ? ಜಾತಿಗಳ ಮಧ್ಯೆ ವೈಷಮ್ಯ, ಲಿಂಗ ಬೇಧಗಳು ಮುಂತಾದವುಗಳ ಮಧ್ಯೆ ನರಳುತ್ತಿರುವ ಅಮಾಯಕರು ಕೇವಲ ರಾಜಕೀಯ ದಾಳಗಳಾಗುತ್ತಿಲ್ಲ, ಬದಲಿಗೆ ನಮ್ಮ ಸುತ್ತಮುತ್ತಲಿನವರ ವಕ್ರ ದೃಷ್ಟಿಗೆ ಬಿದ್ದು, ಅಸಹಾಯಕತೆಯಿಂದ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ಮುಗ್ಧ ಬುದ್ಧಿಮಾಂಧ್ಯ ಹೆಣ್ಣು ಮಗು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ, ಏನೂ ಅರಿಯದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಪರಿಸ್ಥಿತಿ ಹೇಗಿರುತ್ತದೆ? ಅದನ್ನು ಸಮಾಜ ಹೇಗೆ ಸ್ವೀಕರಿಸೀತು......

ಈ ಎಲ್ಲಾ ಪ್ರಶ್ನೆಗಳಿಗೆ ಮುನಿರಾಬಾದಿನ ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರು ತಮ್ಮ ಹೊಸ ನಾಟಕದಲ್ಲಿ ಉತ್ತರಿಸಿದ್ದಾರೆ. ಇದು ನಾನು ಕೈಗೆತ್ತಿಕೊಳ್ಳುತ್ತಿರುವ ಮುಂದಿನ ನಾಟಕ. ತುಂಬ ವಿಭಿನ್ನ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಾಳೆಯಿಂದ ಈ ನಾಟಕದ ಆರಂಭಿಕ ಹಂತದ ತಯಾರಿ ಹೊಸಪೇಟೆಯಲ್ಲಿ ಶುರು. ಪ್ರದರ್ಶನದ ದಿನಾಂಕವನ್ನು ಸಹ ನಿಮಗೆ ಇಷ್ಟರಲ್ಲಿಯೇ ತಿಳಿಸುತ್ತೇನೆ...ಬನ್ನಿ ನಾಟಕ ನೋಡಿ...

Saturday, September 4, 2010

ನನ್ನ ಕೆಲಸಕ್ಕೆ ಅವರು ಅರ್ಜಿ ಬರೆಯದೇ ಹೋಗಿದ್ದರೆ...

ನಮ್ಮ ಬದುಕನ್ನ ಹಸನಗೊಳಿಸಿ, ನಮ್ಮ ಬದುಕಿಗೆ ಹೊಸ ಭಾಷ್ಯ ಬರೆದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ನಾನು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಸೇರಿದಾಗಿನ ಮಾತುಗಳಿವು...ಈ ಮೊದಲು ತಿಳಿಸಿದಂತೆ ನಾನು ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಬಂದಿದ್ದಲ್ಲ...ಅದನ್ನು ಕಲಿಯಲೇ ಬೇಕು ಮತ್ತು ಅದರಲ್ಲಿ ನನ್ನ ಭವಿಷ್ಯವನ್ನು ಕಂಡು ಕೊಳ್ಳಬೇಕೆಂದು ಬಂದವನು...

ಮೊದಲಿನಿಂದಲು ಪತ್ರಿಕೆಗಳಿಗೆ ಬರೆಯುವ ಉತ್ಸಾಹ, ಆಸಕ್ತಿ ನನಗೆ ಇದ್ದುದರಿಂದ ಕ.ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯ ಅದೇನೋ ನನ್ನ ಮೇಲೆ ವಿಶೇಷ ವಾತ್ಸಲ್ಯ...ಅದೊಂದು ದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.ಬಾಲು ಸರ್ ಎಂದಿನಂತೆ ತಮ್ಮ ತರಗತಿಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರಿಗು ಅರ್ಜಿ ಹಾಕಲು ಹೇಳಿದರು. ನನ್ನನ್ನು ತಮ್ಮ ಚೇಂಬರಿಗೆ ಕರೆಯಿಸಿ ಅರ್ಜಿ ಹಾಕುವಂತೆ ತಾಕೀತು ಮಾಡಿದರು...ನಾನು ಹುಂ ಎಂದು ಸುಮ್ಮನಾದೆ...ಅದರ ಕಡೆ ಹೆಚ್ಚು ಗಮನ ಹರಿಸದೆ ಎಂದಿನಂತೆ ನನ್ನ ನಾಟಕ, ಓದು ಮುಂತಾದವುಗಳ ಕಡೆ ಗಮನ ಹರಿಸಿ ಅದನ್ನು ಮರೆತು ಬಿಟ್ಟೆ...

ಅರ್ಜಿಹಾಕಲು ಇನ್ನು ಎರಡು ದಿನ ಬಾಕಿ ಇರುವಾಗ ಬಾಲು ಸರ್ ತಮ್ಮ ಚೇಂಬರಿಗೆ ನನ್ನನ್ನು ಮತ್ತೆ ಕರೆಯಿಸಿ ತಮ್ಮ ಎಂದಿನ ಶೈಲಿಯಲ್ಲಿ "ಏನಯ್ಯಾ ಅಪ್ಲಿಕೇಶನ್ ಹಾಕಿದ್ಯಾ" ಎಂದರು. ನಾನು ಇಲ್ಲ ಸರ್..ನನ್ನ ಓದು ಮುಗಿದ ನಂತರ ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂದಾಗ ಅವರ ಸಿಟ್ಟು ನೆತ್ತಿಗೇರಿತ್ತು...ತಾವೇ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನನ್ನ ಪರವಾಗಿ ಅರ್ಜಿ ಬರೆದು ನನಗೆ ಕೆಳಗೆ ಸಹಿ ಮಾಡಲು ಹೇಳಿ ಕಛೇರಿಯ ಸಹಾಯಕನನ್ನು ಕರೆದು ಅದನ್ನು ಪೋಸ್ಟ್ ಮಾಡಲು ಹೇಳಿದರು..

ನಂತರ ಸಂ.ಕ ದಿಂದ ನನಗೆ ಲಿಖಿತ ಪರೀಕ್ಷೆಗೆ ಪತ್ರ ಬಂದಿತು...ನಾನು ಹಾಜರಾಗಲಿಲ್ಲ...ಸಂದರ್ಶನಕ್ಕೆ ಕರೆ ಬಂದಿತು...ಅದಕ್ಕೂ ಹೋಗಲಿಲ್ಲ..ಕೊನೆಗೆ ನನಗೆ ಕೆಲಸಕ್ಕೆ ಹಾಜರಾಗಲು ಕರೆ ಬಂದಿತು ಮತ್ತು ೧೯೯೪ ಡಿಸೆಂಬರ್ ೩೧ ರಂದು ಕೊನೆಯ ದಿನ ಎಂದು ನಿಗದಿ ಪಡಿಸಿ ಪತ್ರವನ್ನು ಕಳಿಸಿದರು...ಇದರಿಂದ ಬಾಲು ಸರ್ ತುಂಬ ಖುಷಿ ಪಟ್ಟಿದ್ದರು...

ಇಷ್ಟಾದರೂ ನಾನು ಕೆಲಸಕ್ಕೆ ಸೇರಬೇಕೆ ಬೇಡವೇ ಎಂದು ವಿಚಾರಮಾಡುತ್ತಿರುವಾಗ ನನ್ನನ್ನು ಮತ್ತೆ ತಮ್ಮ ಚೇಂಬರಿಗೆ ಕರೆಯಿಸಿ ಬೈದು ಕೆಲಸಕ್ಕೆ ಸೇರುವಂತೆ ಮಾಡಿದರು...

ಅಂದು ಬಹುಶಃ ಅವರು ನನ್ನನ್ನು ಈ ಪರಿ ವತ್ತಾಯಿಸದೆ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ? ನನ್ನ ಜೀವನಕ್ಕೆ ಒಂದು ಹೊಸ ಭಾಷ್ಯ ಬರೆದ ಬಾಲು ಸರ್ ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ... ಹಿ ಇಸ್ ಎ ಗ್ರೇಟ್ ಹ್ಯುಮನ್ ಬಿಯಿಂಗ್...ಹ್ಯಾಟ್ಸ್ ಆಫ್ ಸರ್...!!!

Thursday, August 19, 2010

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ....
















ಮಾನ್ಯ ಮುಖ್ಯ ಮಂತ್ರಿಗಳೇ,

ನಿಮಗೆ ಈ ರೀತಿಯ ಪತ್ರಗಳು ಹೊಸದೇನಲ್ಲ. ನನ್ನಂತಹ ಅನೇಕ ಜನ ನಿಮಗೆ ಈಗಾಗಲೇ ಇಂತಹ ಪತ್ರಗಳನ್ನು ಬರೆದಿದ್ದಾರೆ ಮತ್ತು ನೀವು ಅವುಗಳನ್ನು ಅಷ್ಟೇ ಮೌನದಿಂದ ಸ್ವೀಕರಿಸಿದ್ದೀರಿ ಕೂಡ. ಅದಕ್ಕೆ ನಾವು "ಮೌನಂ ಸಮ್ಮತಿ ಲಕ್ಷಣಂ" ಎಂದು ಅರ್ಥೈಸಿ ಕೊಳ್ಳಬೇಕೆಂದರೆ ಅಂತಹ ಪತ್ರಗಳಿಗೆ ನಿಮ್ಮಿಂದ ದೊರೆತ ಉತ್ತರ ಮತ್ತು ಫಲಿತಾಂಶ ಮಾತ್ರ ಸೊನ್ನೆ. ಹೀಗಾಗಿ ಮತ್ತೆ ಮತ್ತೆ ಬರೆಯುವ ಅನಿವಾರ್ಯತೆ ಒದಗಿ ಬಂದಿದೆ.

ನೀವು ಅಧಿಕಾರಕ್ಕೆ ಬಂದ ಮೊದಲಿನ ಎರಡು ವರ್ಷಗಳನ್ನು ನಿಮ್ಮ ಪಕ್ಷದ ಆಂತರಿಕ ಬಂಡಾಯ, ಕಚ್ಚಾಟ, ಶಾಸಕರ ಖರೀದಿ ವ್ಯವಹಾರಗಳಲ್ಲೇ ಕಳೆದಿರಿ. ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡಿರಿ, ಜನರ ಮುಂದೆ ಕಣ್ಣೀರು ಹಾಕಿದಿರಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಆಡಳಿತ ಪಕ್ಷದ ಜನರಿಗೆ ನಿಮ್ಮ ಮಾತುಗಳು ಬೆಂಕಿಯುಂಡೆಯಾಗುತ್ತಿದ್ದವು. ಆದರೆ ಈಗ ನಿಮ್ಮ ಮಾತುಗಳು ಹಾಗಿರಲಿ, ನೀವೇ ಬಾಲ ಸುಟ್ಟ ಬೆಂಕಿನಂತಾಗಿದ್ದೀರಿ. ಕೇವಲ ಅಧಿಕಾರವನ್ನುಳಿಸಿಕೊಳ್ಳಲು ಈ ರೀತಿಯ ಅಸಹಾಯಕತೆಯನ್ನು ಪ್ರದರ್ಶಿಸುವ ನಾಯಕರನ್ನು ನಾವೆಂದೂ ಕಂಡಿಲ್ಲ. ನಿಜಕ್ಕೂ ನಿಮ್ಮ ಪರಿಸ್ಥಿತಿಯನ್ನು ನೋಡಿ ನಮಗೆಲ್ಲ ಅಯ್ಯೋ ಅನ್ನಿಸುತ್ತಿದೆ.

ನಿಮ್ಮ ಸರಕಾರ ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಅನೇಕ ಕ್ಲಿಷ್ಟ ಪರಿಸ್ಥಿತಿಯನ್ನು ಮತ್ತು ಕಠಿಣ ಸಮಸ್ಯೆಗಳನ್ನು ಹಿಂದಿನ ಬಹುತೇಕ ಸರಕಾರಗಳು ಎದುರಿಸುತ್ತಿದ್ದವು. ಆದರೆ ಅವುಗಳನ್ನು ಬಗೆಹರಿಸುವಲ್ಲಿ ನಮಗೆಲ್ಲ ಕಾಣಸಿಗುತ್ತಿದ್ದ ರಾಜಕೀಯ ಮುತ್ಸದ್ದಿತನ, ಮೇಧಾವಿತನ ನಮಗೆ ನಿಮ್ಮಿಂದ ಸಿಗುತ್ತಿಲ್ಲ. ಒಂದು ಕಡೆಯಿಂದ ಗಣಿಧಣಿಗಳು ನಿಮಗೆ ಪ್ರತಿಪಕ್ಷದವರಂತೆ ವರ್ತಿಸುತ್ತಿದ್ದರೆ, ಇನ್ನು ಕೆಲವು ಸಚಿವರ ಬೇಜವಾಬ್ದಾರಿಯುತ ವರ್ತನೆಗಳಿಗೆ ಮುಖ್ಯಮಂತ್ರಿಯಾದ ನೀವು ಕ್ಷಮೆ ಕೇಳುತ್ತೀರಿ. ಆದರೆ ಬೇಜವಾಬ್ದಾರಿ ಪ್ರದರ್ಶಿಸಿದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ನಮ್ಮ ರಾಜ್ಯದ ಗೃಹ ಮಂತ್ರಿಗಳಂತೂ ಬಿಡಿ. ಅವರು ರಾಜ್ಯಕ್ಕೆ ಗೃಹ ಮಂತ್ರಿಗಳಾ ಅಥವಾ ತಮ್ಮ ಮನೆಗೆ ಗೃಹ ಮಂತ್ರಿಗಳಾ ಎನ್ನುವುದನ್ನು ಪರಾಮರ್ಶಿಸುವ ಅಗತ್ಯವಿದೆ. ಯಾವುದೇ ವಿಷಯವಾಗಲೀ, ಘಟನೆಯಾಗಲೀ ಅದಕ್ಕೆ ಅವರು ಮೊದಲು ನೀಡುವ ಸ್ಪಷ್ಟನೆಯೆಂದರೆ "ಇದು ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಬಂದ ನಂತರ ಆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ". ಅಷ್ಟರಲ್ಲಿ ಎಲ್ಲ ಮುಗಿದು ಮತ್ತೊಂದು ಹಗರಣಕ್ಕೆ ನಿಮ್ಮ ಶಾಸಕರು, ಸಚಿವರು ಸಿದ್ಧತೆ ನಡೆಸಿರುತ್ತಾರೆ.

ನೀವು ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಷ್ಟು ಬಾರಿ ಆಡಳಿತ ಪಕ್ಷದವರನ್ನು ಸಂಕಷ್ಟಕ್ಕೆ ಸಿಲುಕಿಸಲು ಪಕ್ಷದ ಸಮಾವೇಶಗಳನ್ನು ನಡೆಸಿದ್ದಿರಿ? ಸ್ವಲ್ಪ ನೆನಪಿಸಿಕೊಳ್ಳಿ. ಈಗ ಕಳೆದ ಎರಡೂವರೆ ವರ್ಷಗಳಲ್ಲಿ ಅವೆಲ್ಲವನ್ನು ಬಡ್ಡಿ ಸಮೇತ ತೀರಿಸುವವರಂತೆ ಸಮಾವೇಶಗಳನ್ನು ನಡೆಸುತ್ತಿದ್ದೀರಿ. ವಿಧಾನಸೌಧ ಒಂದು ಪವಿತ್ರ ಸ್ಥಳವಾಗಿತ್ತು. ಅದನ್ನು ಅಸಂವಿಧಾನಿಕ ಪದಬಳಕೆಗಳಿಂದ ನಿಮ್ಮ ಶಾಸಕರು, ಸಚಿವರು ಮತ್ತು ವಿರೋಧ ಪಕ್ಷದವರು ಅಪವಿತ್ರಗೊಳಿಸಿಬಿಟ್ಟಿದ್ದೀರಿ. ವಿರೋಧ ಪಕ್ಷದವರು ಅಂತಹ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದಾಗ ಸ್ವಲ್ಪ ತಾಳ್ಮೆ, ಸಹನೆಗಳನ್ನು ತೋರಿ, ನಿಮ್ಮ ಶಾಸಕರನ್ನು ನಿಯಂತ್ರಿಸಿ ನಿಮ್ಮ ಸ್ಥಾನಕ್ಕೆ ಮತ್ತು ಖುರ್ಚಿಗೆ ಒಂದು ಘನತೆಯನ್ನು ತಂದು ಕೊಡಬಹುದಾಗಿತ್ತು. ಆದರೆ ಅದ್ಯಾವುದನ್ನೂ ನೀವು ಮಾಡಲೇ ಇಲ್ಲ. ಬದಲಾಗಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಒಂದೇ ಸಾಲಿನ ಮಾತುಗಳನ್ನು ಪುನರಾವರ್ತಿಸುತ್ತ ಹೋದಿರಿ. ಗಣಿಧಣಿಗಳು ವಿಧಾನಸೌಧದಲ್ಲಿ ಆರ್ಭಟಿಸುತ್ತಿರುವಾಗ ನೀವು ಮೌನರಾಗ ತಾಳಿದ್ದೇಕೆ. ಆ ಆರ್ಭಟದಿಂದಲೇ ಅಲ್ಲವೇ ನಮ್ಮ ನಾಡಿನ ಐದು ಕೋಟಿಜನರು ಕಳೆದ ಒಂದೂವರೆ ತಿಂಗಳಿನಿಂದ "ದೊಂಬರಾಟ" ವನ್ನು ನೋಡುತ್ತಿರುವುದು? ಬಳ್ಳಾರಿ - ಹೊಸಪೇಟೆ ನಡುವಿನ ಅಂತರ ಕೇವಲ ೬೨ ಕಿಲೋ ಮೀಟರ್. ಆದರೆ ಅದನ್ನು ಕ್ರಮಿಸಲು ಬರೊಬ್ಬರಿ ೩ ಗಂಟೆ ಬೇಕು. ಅಷ್ಟು ಅದ್ಭುತವಾಗಿವೆ ಅಲ್ಲಿನ ರಸ್ತೆಗಳು. ಇದು ನಿಮ್ಮ ಬಳ್ಳಾರಿ ಗಣಿಧಣಿಗಳು ಮಾಡಿದ ಅಭಿವೃದ್ಧಿ ಕಾರ್ಯವೆಂದು ಸಮರ್ಥಿಸಿಕೊಳ್ಳುತ್ತೀರಾ?

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ನೆರೆ ಸಂತೃಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ, ಸಣ್ಣ ಉದ್ದಿಮೆದಾರರಿಗೆ ಸರಿಯಾಗಿ ವಿದ್ಯುತ್ ಸಿಗದೇ ಕಂಗಾಲಾಗಿ ಬೀದಿಗೆ ಬರುತ್ತಿದ್ದಾರೆ. ರೈತರಿಗೆ ಬೀಜ ಮತ್ತು ಗೊಬ್ಬರ ಸರಿಯಾಗಿ ಸಿಗದೇ ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಶಾಲೆಗಳು ಆರಂಭವಾಗಿ ೩-೪ ತಿಂಗಳುಗಳು ಕಳೆದರೂ, ಪ್ರತಿ ವರ್ಷದಂತೆ ಈ ವರ್ಷವು ಸಹ ಪಠ್ಯ ಪುಸ್ತಕಗಳ ಸಮಸ್ಯೆ ಎಂದಿನಂತೆ ಇದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಇಂಜಿನೀಯರಿಂಗ್ ಓದಬೇಕೊ ಅಥವಾ ವೈದ್ಯಕೀಯ ಓದಬೇಕೋ ಎಂಬ ಗೊಂದಲದಲ್ಲಿದ್ದಾರೆ. ಹೀಗೆ ಸಮಸ್ಯೆಗಳ ಮಹಾಪೂರವೇ ನಮ್ಮ ಮುಂದಿರುವಾಗ ನೀವು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಾರಕ್ಕೆರಡು ಸಮಾವೇಶಗಳನ್ನು ನಡೆಸುವ ಅಗತ್ಯವಿದೆಯಾ?

ಅಚಾನಕ್ಕಾಗಿ ನಿಮಗೆ ಸಿಕ್ಕ ಈ ಅದ್ಭುತ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ರಾಜ್ಯಕ್ಕೆ ಮಾದರಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ. ಸ್ವಲ್ಪ ಶಾಂತಚಿತ್ತರಾಗಿ ಕುಳಿತು ವಿಚಾರಮಾಡಿ. ನೀವು ಮಾಡಿದ್ದು, ಮಾಡುತ್ತಿರುವುದು ಸರಿಯೇ ಎಂದು. ಉತ್ತರ ನಿಮ್ಮಲ್ಲಿಯೇ ಇದೆ.

ಇಂತಿ ನಿಮ್ಮವ
ಧನಂಜಯ ಕುಲಕರ್ಣಿ

Wednesday, August 4, 2010

ಕೈಲಾಸಂ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆಯ ಕೆಲವು ಚಿತ್ರಗಳು





















ಹೊಸಪೇಟೆಯಲ್ಲಿ
ಜುಲೈ ೩೧ ಹಾಗೂ ಆಗಷ್ಟ್ ರಂದು ನಡೆದ ಮುಂಗಾರು ರಂಗ ಸಮ್ಮಿಲನ ಹಾಗೂ ಕೈಲಾಸಂ ದಿನಾಚರಣೆಯ ಕೆಲವು ಚಿತ್ರಗಳು. ಆಗಷ್ಟ್ ರಂದು ಖ್ಯಾತ ರಂಗಭೂಮಿ ಕಲಾವಿದೆ ಡಿ. ಹನುಮಕ್ಕ ಅವರಿಗೆ ಕೈಲಾಸಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂದಿನ ದಿನವೇ ನನ್ನ ಮೊದಲ ಪುಸ್ತಕ "ನೆನಪುಗಳ ರಾವೀ ನದಿಯ ದಂಡೆ" ಪುಸ್ತಕವನ್ನು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರು ಬಿಡುಗಡೆ ಗೊಳಿಸಿದರು. ಸಾವಿರ ಶಾಯಿರಿಗಳ ಸರದಾರ ಇಟಗಿ ಈರಣ್ಣ ಸಹ ಉಪಸ್ಥಿತರಿದ್ದರು.

Tuesday, July 27, 2010

ಸಂತ್ಯಾಗ ನಿಂತ 'ಧನ್ಯಾ'....

ಆತ್ಮೀಯರೇ,

ಈ ಮೊದಲು ನಿಮಗೆ ತಿಳಿಸಿದಂತೆ ನನ್ನ ಬ್ಲಾಗ್ ಪುಸ್ತಕದ ಬಿಡುಗಡೆ ಇದೇ ದಿನಾಂಕ ೨೯ ರಂದು ಆಗಬೇಕಿತ್ತು. ಕಾಲಲ್ಲಿ ನಾಯಿ ಗೆರೆಯನ್ನಿಟ್ಟುಕೊಂಡಂತೆ ತಿರುಗಾಡುತ್ತಿರುವ ನಾನು ಅನಿವಾರ್ಯ ಕಾರಣಗಳಿಂದ ಇದನ್ನು ಎರಡು ದಿನಗಳ ಮಟ್ಟಿಗೆ ಮುಂದೂಡುತ್ತಿದ್ದೇನೆ..ದಯವಿಟ್ಟು ಕ್ಷಮಿಸಿ...ಆಗಷ್ಟ್ ೧ ರಂದು ಹೊಸಪೇಟೆಯ ಪಂಪ ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಪುಸ್ತಕ ಬಿಡುಗಡೆಯಾಗಲಿದೆ. ಅಂದು ನಮ್ಮೊಂದಿಗೆ ನಾಡಿನ ಹೆಸರಾಂತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ. ಕುಂ.ವೀ ಇರುತ್ತಾರೆ. ಸಾವಿರ ಶಾಯಿರಿಗಳ ಸರದಾರ ಶ್ರೀ. ಇಟಗಿ ಈರಣ್ಣ ಅವರು ಪ್ರಾಧ್ಯಾಪಕ ವೃತ್ತಿಯಿಂದ ಅಂದು ನಿವೃತ್ತಗೊಳ್ಳಲಿರುವುದರಿಂದ ಅವರಿಗೆ ಈ ಪುಸ್ತಕ ಅರ್ಪಿತವಾಗಲಿದೆ. ಗೆಳೆಯ ಮಣಿಕಾಂತ್ ಸಹ ಅಂದು ನಮ್ಮೊಡನಿದ್ದಾರೆ.... ಅಂದಿನ ದಿನವೇ ಪುಸ್ತಕ ಬಿಡುಗಡೆಯ ನಂತರ ನಾನು ವಿನ್ಯಾಸಗೊಳಿಸಿ, ನಿರ್ದೇಶನ ಮಾಡಿದ ಚಂದ್ರಶೇಖರ್ ಕಂಬಾರ್ ಅವರ "ಜೋಕುಮಾರ ಸ್ವಾಮಿ" ನಾಟಕವನ್ನು ಕನ್ನಡ ಕಲಾ ಸಂಘದ ಗೆಳೆಯರು ಅಭಿನಯಿಸಲಿದ್ದಾರೆ. ಇಂತಹ ಅಪರೂಪದ ಬಣ್ಣದ ಸಂಜೆಯ ಸವಿಯನ್ನು ಅನುಭವಿಸಲು ನೀವಿಲ್ಲದಿದ್ದರೆ ನನಗೆ ಏನೊ ಕಳೆದುಕೊಂಡ ಅನುಭವ...ದಯವಿಟ್ಟು ಬನ್ನಿ...

ಅಂದ ಹಾಗೆ ನನ್ನ ಪುಸ್ತಕಕ್ಕೆ ಹಿರಿಯ ಪತ್ರಕರ್ತ ಗೆಳೆಯರಾದ ಶ್ರೀ. ಜೆ.ಎನ್. ಮೋಹನ್ ಅವರು ಮುನ್ನುಡಿಯನ್ನು ಬರೆದಿದ್ದಾರೆ...ಓದಿ.....

'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ, ಅದಕ್ಕೆ ಇನ್ನಷ್ಟು ಭಯ ಹುಟ್ಟಿಸುವ ಗಂಭೀರತೆ ನೀಡಲೆಂದೇ ಇರುವ ಬುಲ್ಗಾನಿನ್ ಗಡ್ಡ, ಅದಕ್ಕೆ ನನ್ನ ಪಾಲೂ ಇರಲಿ ಎಂದು ಹೇಳುವ ಕನ್ನಡಕ, ಅದಕ್ಕೆಲ್ಲ 'ಅಹುದಹುದು' ಎಂಬ ಮುದ್ರೆ ಒತ್ತುವ ಅವರ ಹೈಟು ಮಾತ್ರ ನೋಡಿ ಗೊತ್ತಿದ್ದ ಧನಂಜಯ ಕುಲಕರ್ಣಿಯವರನ್ನು ಒಂದೇ ಏಟಿಗೆ 'ಧನ್ಯಾ' ಆಗಿ ಮಾಡಿ ಬಿಟ್ಟಿತಲ್ಲ ಅದೇ 'ನೆನಪುಗಳ ರಾವೀ ನದಿಯ ದಂಡೆ' ಯ ಸಕ್ಸಸ್.

ಪ್ರೊ ಜಿ ಎಸ್ ಸಿದ್ಧಲಿಂಗಯ್ಯ ಹೇಳುತ್ತಿದ್ದ ಒಂದು ಮಾತು ನನಗೆ ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಹಸು ಕರುವಿಗೆ ಜನ್ಮ ಕೊಟ್ಟ ತಕ್ಷಣ ಅದನ್ನು ತನ್ನದಾಗಿಸಿಕೊಳ್ಳುವುದಿಲ್ಲವಂತೆ. ಆದರೆ ಕರುವಿನ ಮೈ ಮೇಲಿರುವ ಲೋಳೆಯನ್ನು ನೆಕ್ಕಿ ಸ್ವಚ್ಚ ಮಾಡುತ್ತಾ ಮಾಡುತ್ತಾ ಅದನ್ನು ಬಿಟ್ಟಿರಲಾರದಷ್ಟು ನಂಟು ಬೆಳಸಿಕೊಳ್ಳುತ್ತದೆ ಅಂದಿದ್ದರು. exactly, 'ನೆನಪುಗಳ ರಾವೀ ನದಿಯ ದಂಡೆ' ಯ ಒಂದೊಂದೇ ಪುಟ ಮುಗಚುತ್ತಾ, ಮುಗುಚುತ್ತಾ ಹೋದಂತೆ ಒಂದು ರೀತಿಯ ನಂಟು ಬೆಳೆದುಬಿಡುತ್ತದೆ. ಧನಂಜಯ ಕುಲಕರ್ಣಿ 'ಧನ್ಯಾ..' ಆಗಿ ಬದಲಾಗಿಬಿಡುತ್ತಾರೆ.

ಧನಂಜಯ ನನಗೆ ನಿಜಕ್ಕೂ ಗೊತ್ತಿದ್ದದ್ದು ಅವರ ಪಿ ಆರ್ ಓ ಪೋಷಾಕಿನಲ್ಲಿ. ಆದರೆ ಅವರಿಗೆ ಆ ಪೋಷಾಕು ನಾಟಕದ ಪಾತ್ರವೊಂದಕ್ಕೆ ಬಳಸುವ ಪೋಷಾಕಿನಂತೆ ಮಾತ್ರ ಎಂದು ಗೊತ್ತಾದದ್ದು ನಾನೂ ಈ 'ರಾವೀ ನದಿಯ ದಂಡೆ'ಯಲ್ಲಿ ನಿಂತಾಗ. ಧನಂಜಯ ಹೇಳಿ ಕೇಳಿ ನಾಟಕವೆಂಬ ಗುಂಗೀ ಹುಳುವಿನ ಬೆನ್ನತ್ತಿದಾತ. ಹಾಗಾಗಿಯೇ ಇಂದು ಇಲ್ಲಿ, ನಾಳೆ ಅಲ್ಲಿ, ಇಂದು ಈ ಬಣ್ಣ, ನಾಳೆ ಯಾವ ಬಣ್ಣವಾದರೂ ಸೈ, ಇಂದು ಈ ಪೋಷಾಕು, ನಾಳೆ ಇನ್ನೇನೋ.. ಎನ್ನುವಂತೆ ಆ ಗುಂಗೀ ಹುಳದ ಬೆನ್ನತ್ತಿ ನಡೆದಿದ್ದಾರೆ. ಆ ಬೆನ್ನತ್ತಿ ನಡೆದವನ ಒಳಗೆ ಒಬ್ಬ ಪತ್ರಕರ್ತನಿದ್ದಾನೆ, ರಂಗಕರ್ಮಿಯಿದ್ದಾನೆ, ಅಸಡ್ದಾಳ ತುಂಟನೊಬ್ಬನಿದ್ದಾನೆ, ಕಾಡುವ ಕಾಲೇಜು ಹುಡುಗನಿದ್ದಾನೆ..ಹಾಗೇ ಕಾಳಜಿ ಮಾಡುವ ಧನಂಜಯನೂ ಇದ್ದಾನೆ.

ಧನಂಜಯರಿಗೆ ಮತ್ತೆ ಮತ್ತೆ ನೆನಪುಗಳ ಲೋಕಕ್ಕೆ ಜಿಗಿಯುವ ಹುಚ್ಚಿದೆ. ಬೆಳಕನ್ನು ಕಂಡ ತಕ್ಷಣ ತಾನೇ ಹಾರಿ ಹೋಗಿ ಡಿಕ್ಕಿ ಹೊಡೆದು ರೆಕ್ಕೆ ಸುಟ್ಟುಕೊಳ್ಳುವ ಪತಂಗದಂತೆ.. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವನ್ನು ಹಚ್ಚಿಕೊಂಡು ಇವರೇ ಹಳೆಯ ನೆನಪುಗಳ ಬೆನ್ನಟ್ಟಿ ಹೋಗುತ್ತಾರೆ. ಇವರು ನೆನಪುಗಳ ಬೆನ್ನತ್ತುವ ತೀವ್ರತೆ ಕಂಡು ಅಚ್ಚರಿಯಿಂದ ನಿಂತಿದ್ದೇನೆ. ಧನಂಜಯ ತಾವೇ ಬಣ್ಣಿಸಿಕೊಳ್ಳುವಂತೆ ಒಬ್ಬ 'ಮಧುಗಿರಿ ಪಟ್ಟಣಕೆ ಹೋದ ಸಿದ್ಧಯ್ಯನೆಂಬ ಅಗಸ'. ಸಿದ್ಧಲಿಂಗಯ್ಯ ಅವರ 'ಕತ್ತೆ ಮತ್ತು ಧರ್ಮ' ಕವಿತೆಯಲ್ಲಿ ಸಿದ್ಧಯ್ಯ ಮತ್ತು ಅವನ ಕತ್ತೆಯ ಕಥೆ ಬರುತ್ತದೆ. ಕತ್ತೆಯನ್ನು ಮಣ್ಣು ಮಾಡಿದ ಜಾಗದಲ್ಲಿ ದೇಗುಲವೇ ಎದ್ದು ನಿಲ್ಲುವುದನ್ನು ಕಂಡ ಸಿದ್ಧಯ್ಯ ಕಕ್ಕಾಬಿಕ್ಕಿಯಾಗಿ ನಿಲ್ಲುತ್ತಾನೆ. ಹಾಗೆ ಧನಂಜಯ ಮತ್ತೆ ಮತ್ತೆ ತಮ್ಮ ಹಳೆಯ ನೆನಪುಗಳಿಗೆ ಮಾತ್ರವಲ್ಲ, ತಮ್ಮ ಹಳೆಯ ನೆನಪುಗಳ ಜಾಗಕ್ಕೂ ಹೋಗಿ ನಿಲ್ಲುತ್ತಾರೆ. ಹಿಂದೆ ತಾನೊಮ್ಮೆ ರಾತ್ರಿ ಮಲಗಬೇಕಾಗಿ ಬಂದ ಹೊಸಪೇಟೆ ಬಸ್ ನಿಲ್ದಾಣದ ಸೀಟು, ಹದಿನಾರು ವರ್ಷಗಳ ನಂತರ ಸಿಕ್ಕ ಗೆಳೆಯ ಪ್ರಮೋದ ತುರುವಿಹಾಳ, ಶಾಲೆಯಲ್ಲಿ ಟೀಚರ್ ಆಗಿದ್ದ ಲೋಕುರ್ ಮೇಡಂ, ದ ರಾ ಬೇಂದ್ರೆ ಕೈನಿಂದ ಪಡೆದ ಆ ಬಹುಮಾನ, ಬೆಂಗಳೂರಿನ ಮೈದಾನದಲ್ಲಿ ಹಾರಿಸಿದ ಗಾಳಿಪಟ, ವಿಮಾನ ನಿಲ್ದಾಣದಲ್ಲಿ ಕಂಡ ಗುಬ್ಬಚ್ಚಿ, ಹಂಪಿಯ ಲೋಟಸ್ ಮಹಲ್, ಅದೇ ಮಧು ದೇಸಾಯಿ ಕನಸುಗಳು, ನರಸಿಂಹನ ತರಲೆ, ಬಂಡು ಕುಲಕರ್ಣಿಯ ಅಮಾಯಕತೆ, ಅದೇ ರವಿ ಕುಲಕರ್ಣಿ, ದಿಲಾವರ್, ಸುರೇಶ. ತಾವೇ ಹುಟ್ಟುಹಾಕಿದ ಕಾಲ್ಪನಿಕ ಪಂಕಜಾ, ಶಾಯರಿಗಳ ತೇಲಿ ಬಿಡುವ ಇಟಗಿ ಈರಣ್ಣ, ತಮ್ಮನೆಂದು ತಬ್ಬಿಕೊಂಡ ಜಿ ಎಚ್ ರಾಘವೇಂದ್ರ, ಆ 'ಹಲ್ಲಾ ಬೋಲ್', ಆ ಸಫ್ದರ್ ಹಶ್ಮಿ, ಹೀಗೆ ಧನಂಜಯರ ನೆನಪಿನ ಬುತ್ತಿ ದ್ರೌಪದಿಯ ಕೈನಲ್ಲಿದ್ದ ಅಕ್ಷಯ ಪಾತ್ರೆಯಂತೆ. ಎಷ್ಟು ಮಂದಿ ಎಷ್ಟು ದಿನ ತಿಂದು ಮುಗಿಸಿದರೂ ಬೆಳೆಯುತ್ತಲೇ ಹೋಗುವ ಭಂಡಾರ.

ಯಾಕೋ ಧನಂಜಯರ ಈ ನೆನಪುಗಳ ಲೋಕ ಹೊಕ್ಕಾಗ ನನಗೂ, ನನ್ನ ಮಾತಂತಿರಲಿ ಎಲ್ಲರಿಗೂ ತಮ್ಮ ತಮ್ಮ ನೆನಪುಗಳು ಲೋಕ ಹರಡಿಕೊಳ್ಳುತ್ತಾ ಹೋಗುತ್ತದೆ. ಅಷ್ಟರ ಮಟ್ಟಿಗೆ 'ನೆನಪುಗಳ ರಾವೀ ನದಿಯ ದಂಡೆ' ನೆನಪುಗಳ ಲೋಕಕ್ಕೊಂದು ರಹದಾರಿ. ನೆನಪುಗಳ ಲೋಕ ಹೊಕ್ಕಲು ಪಾಸ್ ಪೋರ್ಟ್, ವೀಸಾ ಯಾಕೆ ಬೇಕು, ಈ ರಾವೀ ನದಿಯ ದಂಡೆಯೊಂದೇ ಸಾಕು..ಯಾಕೋ ಮತ್ತೆ ಮತ್ತೆ ಈ ನೆನಪುಗಳ ಮಾಲೆ ಓದುವಾಗ ಕಂಬಾರರ ಹಾಗೆ ' ನಾ ಕುಣೀಬೇಕ, ಮೈ ಮಣೀಬೇಕ, ಕಾಲ್ ದಣೀಬೇಕ ತಾಯಿ..' ಹಾಡು ನೆನಪಾಗುತ್ತದೆ. ಅಂತಹ ಹಾಡಿನ ಹರಯಕ್ಕೆ ಮರಳುವ ಮನಸ್ಸಾಗುತ್ತಿದೆ.

ಧನಂಜಯ ಅವರದ್ದು ನೆನಪುಗಳ ಲೋಕದಲ್ಲಿ ಕರಗಿ ಹೋಗುವ, ಹಳಹಳಿಕೆಯಲ್ಲಿ ಮುಗಿದು ಹೋಗುವ ಮನಸ್ಸಲ್ಲ ಎಂಬುದನ್ನು ಇಲ್ಲಿನ ಇತರ ಲೇಖನಗಳೂ ತೋರಿಸುತ್ತಿವೆ. ಪತ್ರಿಕೋದ್ಯಮ ಹಾಗೂ ರಂಗಭೂಮಿಯ ಬಗ್ಗೆ ಧನ್ಯಾ 'ಖಡಕ್' ಬರಹಗಳನ್ನು ನೀಡಿದ್ದಾರೆ. ಇವರ ಆಲೋಚನೆಯ ದಾರಿಗೆ ಅಡ್ಡ ಸಿಕ್ಕವರನ್ನು ನೇರಾನೇರ ಎದುರಿಸಿಯೇ ನಿಲ್ಲುತ್ತಾರೆ. ಸರಿ ಅಲ್ಲದ ದಾರಿಗೆ ಹೊರಳಿದವರನ್ನೂ ಮುಲಾಜಿಲ್ಲದೆ ನಿಲೆ ಹಾಕಿಕೊಳ್ಳುತ್ತಾರೆ ಎಂಬುದಕ್ಕೆ ಈ ಎರಡೂ ರಂಗದ ಬಗ್ಗೆ ಬರೆದಿರುವ ಲೇಖನಗಳು ಸಾಕ್ಷಿ. ಧನಂಜಯ ತಮ್ಮ ರಂಗಭೂಮಿ ಬರವಣಿಗೆಯಲ್ಲಿ ಎತ್ತಿರುವ ಪ್ರಶ್ನೆಗಳ ಬಗ್ಗೆ ನನ್ನ ತಕರಾರು ಸಾಕಷ್ಟಿದೆ. ರಂಗಾಯಣ, ಮಲೆಗಳಲ್ಲಿ ಮದುಮಗಳು, ಲಿಂಗದೇವರು ಹಳೆಮನೆ ಗೆ ಸಂಬಂಧಿಸಿದಂತೆ ಇವರ ಪ್ರಶ್ನೆಗಳು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಧನಂಜಯರ ಬರಹಗಳು ನನಗೆ ಯಾಕೆ ಇಷ್ಟ ಎಂದರೆ ಅವರು ಬೆಣ್ಣೆ ಮಾತನಾಡುತ್ತಾ ಅಸಹನೆಯನ್ನು ಬಗಲಲ್ಲಿಟ್ಟುಕೊಳ್ಳುವವರಲ್ಲ. ಅದೇ ಧಾರವಾಡದ ಖಡಕ್ ರೊಟ್ಟಿಯಂತೆ ಹಿಂಗ್ಯಾಕಲೇ ಮಗನಾ.. ಅಂತ ಕೇಳಬಲ್ಲವರು.

ಧನಂಜಯ ಹಾಗೂ ನಾನೂ ರಂಗಭೂಮಿ ಬಗ್ಗೆ ಅವರು 'ವಿಜಯ ಕರ್ನಾಟಕ'ದಲ್ಲಿ ಎತ್ತಿದ, ಈ ಪುಸ್ತಕದಲ್ಲಿರುವ ಲೇಖನಗಳ ಬಗ್ಗೆ ಎದುರಾಬದುರಾ ಕುಳಿತು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಧನಂಜಯ ನಾನೂ ಇಬ್ಬರೂ ರಂಗಭೂಮಿಯ ರುಚಿ ಉಂಡಿದ್ದೇವೆ. ನಾನು ವಿಮರ್ಶೆ ಬರೆಯುತ್ತಾ ರಂಗಭೂಮಿ ಜೊತೆ ಒಂದಿಷ್ಟು ನಂಟು ಇಟ್ಟುಕೊಂಡಿದ್ದರೆ ಧನಂಜಯರದ್ದು ಸ್ಟ್ರೈಟ್ ಎಂಟ್ರಿ. ಮುಂಬೈನ ಪ್ರತಿಷ್ಠಿತ ಕುವೆಂಪು ನಾಟಕ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಬಾರಿಸಿದ ಕೀರ್ತಿ ಧನಂಜಯರದ್ದು. ಮತ್ತು ಆ ಹ್ಯಾಟ್ರಿಕ್ ದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ. ಹೀಗಿರುವಾಗ ಧನಂಜಯ ಅವರು ರಂಗಭೂಮಿಯ ಬಗ್ಗೆ ಎತ್ತುವ ಪ್ರಶ್ನೆಯನ್ನು ಒಂದೇ ಏಟಿಗೆ ಜಾತಿಗನ್ನಡಿಯಲ್ಲಿ ನೋಡಿ ತಳ್ಳಿ ಹಾಕಲು ಸಾಧ್ಯವೇ ಇಲ್ಲ. ಧನಂಜಯ 25 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದ ಕಾರಣ ಅವರ ಆಕ್ಷೇಪ, ಆಕ್ರೋಶ, ಅಸಹನೆ ಎಲ್ಲವೂ ಚರ್ಚೆಗೆ ತೆರೆದಿಟ್ಟ ಬಾಗಿಲು.

'ಮಲೆಗಳಲ್ಲ್ಲಿ ಮದುಮಗಳು' ನಾಟಕವನ್ನು ಬಸವಲಿಂಗಯ್ಯ ಕೈಗೆತ್ತಿಕೊಂಡಾಗ ಇಷ್ಟು ಹಣವನ್ನು ಕರ್ನಾಟಕದ ಎಷ್ಟೋ ಭಾಗಕ್ಕೆ ಹಂಚಿ ಸಾಕಷ್ಟು ಹೊಸ ನಾಟಕಗಳು ಬರುವಂತೆ ಮಾಡಬಹುದಿತ್ತಲ್ಲಾ ಅಂತ ಧನಂಜಯರಿಗೆ ಅನಿಸುತ್ತದೆ, ಲಿಂಗದೇವರು ಹಳೆಮನೆ ಅವರನ್ನು ರಂಗಾಯಣದ ನಿರ್ದೇಶಕರಾಗಿ ನೇಮಕ ಮಾಡಿದಾಗ ನಾಟಕ ಬರೆದವರು, ಸಂಶೋಧನೆ ಮಾಡಿದವರು ಈ ಸ್ಥಾನಕ್ಕೆ ಯಾಕೆ ಅನಿಸುತ್ತದೆ. ರಂಗಾಯಣ ಏಕೆ ಮೈಸೂರಿನಲ್ಲಿ ಮಾತ್ರ ಕುಳಿತಿರಬೇಕು ಅನಿಸುತ್ತದೆ. ಹೀಗೆಲ್ಲಾ ಅನಿಸುವ ಅವರ ಪ್ರಶ್ನೆಗಳನ್ನು ಸುಲಭವಾಗಿ ಅಪಾರ್ಥ ಮಾಡಿಕೊಳ್ಳಬಹುದು. ಹಾಗೆ ಅಪಾರ್ಥ ಮಾಡಿಕೊಂಡ ರಂಗಕರ್ಮಿಗಳೂ ಇದ್ದಾರೆ. ಆದರೆ ಈಗ ಅವರ ಒಟ್ಟೂ ಲೇಖನಗಳನ್ನು ನಾನು ಓದುವಾಗ, ಅವರೊಡನೆ ಕೂತು ಮಾತನಾಡುವಾಗ ಅವರ ಎಲ್ಲಾ ನಕಾರ ಪ್ರಶ್ನೆಗಳ ಆಳದಲ್ಲಿರುವುದು ಅವರ ಧಾರವಾಡ ಪ್ರೀತಿಯೇ ಎನಿಸುತ್ತದೆ. ಉತ್ತರ ಕರ್ನಾಟಕದಲ್ಲಿ ರಂಗಾಯಣ ಆಗಬೇಕು, ಅದು ಸಕ್ರಿಯವಾಗಿ ಕೆಲಸ ಮಾಡಬೇಕು, ಒಂದು ಯೋಜನೆ ಹಿಡಿದು ಉತ್ತರ ಕರ್ನಾಟಕದ ರಂಗ ಕರ್ಮಿಗಳು ಧನ ಸಹಾಯ ಕೇಳಿದರೆ ತಿರಸ್ಕರಿಸುವ, ಘನ ಮೌನ ತಾಳುವ ಸರ್ಕಾರ ದೊಡ್ಡ ಮೊತ್ತದ ಹಣ ಒಂದೇ ನಾಟಕಕ್ಕೆ ಕೊಡುವುದು ಹೇಗೆ ಎನಿಸುತ್ತದೆ. ಈ ಎಲ್ಲಾ ಪ್ರಶ್ನೆಗಳೂ ಸಹಾ ಉತ್ತರವನ್ನು ಬಯಸುತ್ತದೆ ಮತ್ತು ಚರ್ಚೆಯನ್ನು ಅಪೇಕ್ಷಿಸುತ್ತದೆ.

ಗುಲ್ಬರ್ಗದಲ್ಲಿ ಮೂರು ವರ್ಷ ಜನರೊಡನೆ ಒಡನಾಡಬೇಕಾಗಿ ಬಂದ ನನಗೆ ಅದುವರೆಗೂ ಬಾಲಿಶ ಅನಿಸುತ್ತಿದ್ದ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯದ ಬೇಡಿಕೆ ಎಷ್ಟು ಒಡಲ ದಳ್ಳುರಿಯನ್ನು ಹೊಂದಿದೆ ಅನಿಸಿದೆ. ತೆಲಂಗಾಣ ಹೋರಾಟದ ಹಿನ್ನೆಲೆಯಲ್ಲೂ ಈ ತರಹದ ನಿರ್ಲಕ್ಷದ ನೋವು ಅಡಗಿದೆ. ಹಾಗಾಗಿಯೇ ನಾನು ಧನಂಜಯ ಕುಲಕರ್ಣಿ ಎತ್ತಿರುವ ಪ್ರಶ್ನೆಗಳನ್ನು ಅವರ ಕಣ್ಣಿನಿಂದ ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ವಾಗ್ವಾದಗಳು ಬೆಳೆದು ಅದು ಕುಲಕರ್ಣಿ ಅವರ ಚಿಂತನೆಯನ್ನು ಪ್ರಬುದ್ಧವಾಗಿಸಿದರೆ, ಮಾಗಿಸಿದರೆ ಇನ್ನೂ ಸಂತೋಷವೇ..

ಧನಂಜಯ ಕುಲಕರ್ಣಿ ಇದೇ ರೀತಿ ಮತ್ತೆ ಚರ್ಚೆ ಎತ್ತುವುದು ಪತ್ರಿಕೋದ್ಯಮದ ಬಗ್ಗೆ. ಮಾರ್ಗರೆಟ್ ಆಳ್ವಾ ಚುನಾವಣಾ ಪ್ರಚಾರದಲ್ಲಿ ದೊಡ್ಡ ದುಡ್ಡು ಮಾಡಿದ ಪತ್ರಕರ್ತರಿಂದ ಹಿಡಿದು, ಚುನಾವಣಾ ಸಮೀಕ್ಷೆಗಾಗಿ ಹಣ ಕೇಳುವ, ಬಿಟ್ಟಿ ಕಾರಿಗೆ ಹಾತೊರೆಯುವವರನ್ನೆಲ್ಲಾ ಬಯಲಿಗಿಡುತ್ತಾ ಹೋಗುತ್ತಾರೆ. ಆದರೆ ಸಮೀಕ್ಷೆಗೆ ಬಿಟ್ಟಿ ಕಾರು ಕೇಳಿದಾಗ ಖಡಕ್ ಆಗಿ ವರ್ತಿಸುವ ಇದೇ ಧನಂಜಯ ಕುಲಕರ್ಣಿ ಬೆಳಗಾವಿಯಲ್ಲಿ ಚುನಾವಣಾ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಾಗಿ ಬಂದಾಗ ತಾವೇ ಮುಂದಾಗಿ ಪತ್ರಕರ್ತರ ಕೈ ಬೆಚ್ಚಗೆ ಮಾಡುತ್ತಾರೆ. ಇವೂ ಚರ್ಚೆಯನ್ನು ಅಪೇಕ್ಷಿಸುತ್ತಿದೆ.

ರಾವೀ ನದಿಯ ದಂಡೆಯಲ್ಲಿ, ಧಫನ್, ಸ್ಪಾರ್ಟಕಸ್, ರಾಕ್ಷಸ, ನಾಯೀಕಥೆ, ಜೋಕುಮಾರಸ್ವಾಮಿ ನಾಟಕ ಆಡಿಸಿದ, ಕೃಷ್ಣ ಪಾರಿಜಾತಕ್ಕೆ ಬೆಳಕು ಹಂಚಿದ, ಬೇಲಿ ಮತ್ತು ಹೊಲ, ಒಂದು ಬೀದಿಯ ಕಥೆಯಲ್ಲಿ ಅಭಿನಯಿಸಿದ ಧನಂಜಯ ಕುಲಕರ್ಣಿಗೆ ಸಂತೆ ಸೇರಿಸಿಕೊಳ್ಳದೆ ಬದುಕಲು ಸಾಧ್ಯವೇ ಇಲ್ಲ. ಆ ಅರ್ಥದಲ್ಲಿ ಇವರೂ 'ಸಂತ್ಯಾಗ ನಿಂತ ಕಬೀರ'
-ಜಿ ಎನ್ ಮೋಹನ್

Wednesday, June 2, 2010

ಅಲ್ಲಿ ನೀವು ಇರಲೇ ಬೇಕು...


ನನ್ನ ಅನೇಕ ಗೆಳೆಯರು ಮೇಲಿಂದ ಮೇಲೆ ನನಗೆ ಹೇಳುತ್ತಿದ್ದರು. ನನ್ನ ಬ್ಲಾಗ್ ನಲ್ಲಿರುವ ಲೇಖನಗಳು ಒಂದೇ ಗುಟುಕಿನಲ್ಲಿ ಓದಲು ದೊರೆಯುವಂತೆ ಮಾಡು, ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿ ಪ್ರಯತ್ನಿಸು ಎಂದು ಪ್ರೀತಿಯಿಂದ ಗದರಿಸುತ್ತಿದ್ದರು. ಒಂದು ದಿನ ನಾನು ಹಾಗೇ ಸುಮ್ಮನೇ ಕುಳಿತು ಯೋಚಿಸುತ್ತಿರುವಾಗ ಇದನ್ನು ನಾನು ಯಾಕೆ ಮಾಡಬಾರದು ಎಂದೆನಿಸಿತು. ಅದರ ಫಲವೇ ಈಗ ನನ್ನ ಬ್ಲಾಗ್ ನಲ್ಲಿರುವ ಕೆಲವು ಲೇಖನಗಳು ಪುಸ್ತಕದಲ್ಲಿ ಕಾಣಿಸಿಕೊಳ್ಳಲಿವೆ.

ಬಿಡುಗಡೆಯ ದಿನಾಂಕ ಸಹ ನಿಗದಿಯಾಗಿದೆ...ಜುಲೈ ೨೯ ಟಿ.ಪಿ.ಕೈಲಾಸಂ ಅವರ ಜನ್ಮ ದಿನಾಚರಣೆ. ಹೊಸಪೇಟೆಯ ನನ್ನ ತಂಡ ಕನ್ನಡ ಕಲಾ ಸಂಘ ಇದನ್ನು ಪ್ರತಿ ವರ್ಷ ಅತ್ಯಂತ ವಿಶೇಷವಾಗಿ ಆಚರಿಸುತ್ತದೆ. ಅಂದಿನ ದಿನವೇ ಪುಸ್ತಕವನ್ನು ಬಿಡುಗಡೆ ಮಾಡುವುದೆಂದು ನಿರ್ಧರಿಸಿಯಾಗಿದೆ. ಹಿರಿಯ ಗೆಳೆಯರಾದ ಜಿ.ಎನ್. ಮೋಹನ್ ಅವರು ಇದಕ್ಕೆ ಮುನ್ನುಡಿ ಬರೆದುಕೊಡಲಿದ್ದಾರೆ. ನನ್ನ ಅಪರೂಪದ ಗೆಳೆಯ ಮಣಿಕಾಂತ್ ಅದಕ್ಕೆ ಹಿನ್ನುಡಿ ಬರೆಯಲಿದ್ದಾರೆ. ಅಂತೆಯೇ ನನ್ನ ಅನುಗಾಲದ ರಂಗಸಂಗಾತಿಗಳಾದ ದಿಲಾವರ್, ರವಿ ಕುಲಕರ್ಣಿ, ಯಶವಂತ್ ಸರದೇಶಪಾಂಡೆ, ಜಗುಚಂದ್ರ, ಡಾ. ಆಶ್ವಥ್ ಕುಮಾರ್ ಇವರು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳಲಿದ್ದಾರೆ.

ಒಟ್ಟಾರೆ ಪುಸ್ತಕವನ್ನು ವಿಭಿನ್ನವಾಗಿ ನಿಮ್ಮ ಮುಂದೆ ಇಡಬಯಸಿದ್ದೇನೆ...ಪುಸ್ತಕ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಲಿದೆ....ನೀವೆಲ್ಲ ನನಗೆ ಗದರಿದಂತೆ ನಾನೂ ಸಹ ಈಗ ಗದರುತ್ತಿದ್ದೇನೆ....ಪುಸ್ತಕವನ್ನು ಬಿಡುಗಡೆ ಮಾಡಲು ಬನ್ನಿ...ಜುಲೈ ೨೯ ರ ಸಂಜೆ ೬ ಗಂಟೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಿಮ್ಮನ್ನೆಲ್ಲ ನಾನು ಎದುರು ನೋಡುತ್ತಿರುತ್ತೇನೆ....


Friday, May 21, 2010

ತಪ್ಪು ಗ್ರಹಿಕೆ ಮತ್ತು ಅದಕ್ಕೆ ಸ್ಪಷ್ಟನೆ........

ಕಳೆದ ವಾರ ಪ್ರಜಾವಾಣಿಯ ವಾಚಕರ ವಾಣಿ ಅಂಕಣದಲ್ಲಿ "ರಂಗಾಯಣದಲ್ಲಿ ದೊಂಬರಾಟ" ಎಂಬ ಪತ್ರವನ್ನು ಬರೆದಿದ್ದೆ. ಅದಕ್ಕೆ ಇಂದು ಬೆಂಗಳೂರಿನಿಂದ ಜಿ.ಎನ್. ನಿಶಾಂತ್ ಅವರು ಪ್ರತಿಕ್ರೀಯಿಸಿ "ಕುವೆಂಪು ಬಗ್ಗೆ ಅಸಹನೆ ಏಕೆ?" ಎಂದು ಪ್ರಶ್ನಿಸಿದ್ದಾರೆ. ಕೆಲವೊಂದು ಸಲ ಪತ್ರದ ಒಳ ನೋಟ ಏನಿದೆ ಮತ್ತು ಅದರ ಹಿಂದಿನ ಕಾಳಜಿ ಎಂತಹುದು ಎಂದು ಅರ್ಥೈಸಿ ಕೊಳ್ಳದೇ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ.

ನಾನು ನನ್ನ ಪತ್ರದಲ್ಲಿ ಎಲ್ಲಿಯೂ ಕುವೆಂಪು ಅವರ ಬಗ್ಗೆ ಅಸಹನೆಯನ್ನು ವ್ಯಕ್ತ ಪಡಿಸಿಲ್ಲ ಮತ್ತು ಆ ಯೋಗ್ಯತೆಯೂ ನನಗಿಲ್ಲ. ಸಿ.ಬಸವಲಿಂಗಯ್ಯ ಅವರ ಪ್ರತಿಭೆಯ ಬಗ್ಗೆ ಆಗಲೀ ಅವರ ಕೆಲಸದ ಬಗ್ಗೆಯಾಗಲೀ ಯಾರು ಕೂಡ ಅಪಸ್ವರ ಎತ್ತುವ ಹಾಗೆ ಇಲ್ಲ. ನಾನೂ ಸಹ ಬಸೂ ಅವರ ಹತ್ತಿರ ಕೆಲಸಮಾಡಿದ್ದೇನೆ, ಮತ್ತು ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರಲು ಅವರು ನನಗೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವೇ ಕಾರಣ.

ರಂಗಾಯಣದ ಕುರಿತು ನಾನು ಮಾತನಾದುತ್ತಿರುವುದು ಇದೇ ಮೊದಲ ಸಲವೇನಲ್ಲ. ರಂಗಾಯಣದ ಬಗ್ಗೆ ಅಪಾರ ಪ್ರೀತಿ ವಿಶ್ವಾಸಗಳಿರುವುದರಿಂದಲೇ ಅದರ ಬಗ್ಗೆ ನಾನು ಕಾಳಜಿ ಪೂರ್ವಕವಾಗಿ ಲೇಖನಗಳನ್ನು ಬರೆದಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಿ, ನಾನು ರಂಗಾಯಣದ ವಿರೋಧಿ ಎಂಬರ್ಥದಲ್ಲಿ ಪ್ರತಿಕ್ರೀಯೆಗಳು ಬರಲಾರಂಭಿಸಿರುವುದು ದುರಂತ.

ನಾನಿಲ್ಲಿ ಪ್ರಶ್ನಿಸುತ್ತಿರುವುದು ವ್ಯವಸ್ಥೆಯನ್ನು ಹಾಗೂ ಸರಕಾರದ ಮಲತಾಯಿ ಧೋರಣೆಯನ್ನು. ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆಯೇ ಎಂಬ ನನ್ನ ಪ್ರಶ್ನೆಗೆ ನಿಶಾಂತ್ ಅವರು ಹಾಗಿದ್ದರೆ ಎಲ್ಲರೂ ಸೇರಿ ಪ್ರತಿಭಟಿಸೋಣ ಎಂದಿದ್ದಾರೆ. ಹಾಗಿದ್ದರೆ ಇಷ್ಟು ದಿನಗಳ ವರೆಗೆ ಈ ವಿಷಯ ನಿಮಗೆ ತಿಳಿದಿರಲಿಲ್ಲವೇ? ಧಾರವಾಡದಲ್ಲಿ ರಂಗಾಯಣ ಘಟಕ ಆರಂಭವಾದಾಗಿನಿಂದ ಅದು ಗೊಂದಲದ ಗೂಡಾಗಿಯೇ ಪರಿಣಮಿಸಿದೆ. ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿದ್ದು, ಅದು ಧಾರವಾಡದಲ್ಲಿಯೂ ಸಹ ಮುಂದುವರೆದು ರಂಗಭೂಮಿಯ ಎಲ್ಲ ರೀತಿಯ ಕೆಲಸಗಳಿಗೆ ಮೈಸೂರಿನಿಂದ ಜನರನ್ನು ಕರೆಯಿಸಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಕಡೆಗಣಿಸಿದ್ದೇಕೆ? ಹೋಗಲಿ ಇದುವರೆಗೆ ಧಾರವಾಡದ ರಂಗಾಯಣ ಸಾಧಿಸಿದ್ದಾದರೂ ಏನು? ಸರಕಾರದ ಎಲ್ಲ ಹಿರಿಯ ಅಧಿಕಾರಿಗಳು ರಜಾದಿನದ ಸವಿಯನ್ನು ಸವಿಯುವ ಹಾಗೆ ಬಂದು ಭರಪೂರ ಆಶ್ವಾಸನೆಗಳನ್ನು ಕೊಟ್ಟು ಮತ್ತೆ ರಾಜಧಾನಿಯ ಕಡೆಗೆ ತಮ್ಮ ಗಾಡಿಯನ್ನು ಬಿಡುತ್ತಾರೆ. ರಾಜಧಾನಿ ತಲುಪಿದ ನಂತರ ಅವರಿಗೆ ಇದಾವುದೂ ನೆನಪಿರುವುದಿಲ್ಲ.

ಬೆಂಗಳೂರು ಹಾಗೂ ಮೈಸೂರು ನಗರಗಳಿಗೆ ಸರಕಾರ ಯಥೇಚ್ಛವಾಗಿ ರಂಗಚಟುವಟಿಕೆಗೆ ಹಣ ನೀಡುವುದಾದರೆ, ಉತ್ತರ ಕರ್ನಾಟಕದ ರಂಗಚಟುವಟಿಕೆಗೂ ಸಹ ಯಾಕೆ ನೀಡಬಾರದು? ನಾವು ಅನೇಕ ಸಲ ರಂಗಚಟುವಟಿಕೆಗಳಿಗಾಗಿ ಸರಕಾರಕ್ಕೆ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅನೇಕ ಬಾರಿ ಅವರಿಂದ ಇಂತಹ ಮನವಿಗಳಿಗೆ ಯಾವುದೇ ಉತ್ತರವಿರುವುದಿಲ್ಲ. ಇದ್ದರೂ ಸಹ ಅದು ನಕಾರಾತ್ಮಕವಾಗಿರುತ್ತದೆ. ಬಹುಶಃ ನಮ್ಮ ಜನರಿಗೆ ಇಲ್ಲಿನ ಜನರ ತರಹ ಲಾಬಿ ಮಾಡಲು ಬರುವುದಿಲ್ಲ ಎನಿಸುತ್ತದೆ. ಅಥವಾ ಅಂತಹ ಲಾಬಿಗೆ ನಾವು ಯೋಗ್ಯರಲ್ಲ ಎಂದು ಸುಮ್ಮನಾಗುತ್ತಾರೆ.


Tuesday, May 11, 2010

ರಂಗಾಯಣದಲ್ಲಿ ಮತ್ತೊಂದು ದೊಂಬರಾಟ...

ರಂಗಾಯಣ ಮತ್ತೆ ಈಗ ಸುದ್ದಿಯಲ್ಲಿದೆ. ನಮ್ಮ ನಾಡಿನ ಖ್ಯಾತ ರಂಗ ನಿರ್ದೇಶಕರಾದ ಶ್ರೀ. ಬಸವಲಿಂಗಯ್ಯ ಅವರು ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ರಂಗಕ್ಕೆ ತಂದು, ಅದನ್ನು ಬರೊಬ್ಬರಿ ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರ ಎದುರು ಬಿಡಿಸಿಟ್ಟಿದ್ದರಿಂದ ರಂಗಾಯಣ ಮತ್ತೆ ಸುದ್ದಿ ಮಾಡುತ್ತಿದೆ. ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಎಲ್ಲ ರಂಗಕರ್ಮಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಆದರೆ ಅದರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನೂ ಸಹ ಎತ್ತುತ್ತಿದ್ದೇನೆ. ನನಗೆ ಗೊತ್ತು ಇವುಗಳಿಗೆ ನನಗೆ ಉತ್ತರ ದೊರೆಯುವುದಿಲ್ಲ ಎಂದು. ಆದರೂ ರಂಗಭೂಮಿಯ ಒಬ್ಬ ಕಾರ್ಯಕರ್ತನಾಗಿ ಇವುಗಳನ್ನು ಎತ್ತುವ ಅನಿವಾರ್ಯತೆ ಇದೆ ಎಂದು ಭಾವಿಸಿ, ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಈ ಹಿಂದೆ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದಂತೆ ಈ ನಾಟಕವನ್ನು ಮೈಸೂರಿಗೆ ಸೀಮಿತಗೊಳಿಸಿ, ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳಿಗೇನು ಬರ ಬಿದ್ದಿತ್ತೇ? ಇಂತಹ ಪ್ರಯತ್ನ, ಪ್ರಯೋಗಗಳನ್ನು ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ನಡೆಸಿದ್ದರೆ ಅಲ್ಲಿನ ರಂಗಚಟುವಟಿಕೆಗಳಿಗೆ ಜೀವ ತುಂಬಿದಂತಾಗುತ್ತಿತ್ತಲ್ಲವೇ? ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೊಳಗಾಗಿರುವ ಉತ್ತರ ಕರ್ನಾಟಕ, ಸಾಂಸ್ಕೃತಿಕವಾಗಿಯೂ ನಿರ್ಲಕ್ಷಕ್ಕೊಳಗಾಗುತ್ತಿರುವುದಕ್ಕೆ ಇದೊಂದು ಜೀವಂತ ಸಾಕ್ಷಿ.

ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಇಂತಹ ಅದ್ದೂರಿ ನಾಟಕದ ತಯಾರಿ ಎಷ್ಟರ ಮಟ್ಟಿಗೆ ಸೂಕ್ತ? ಯಾವ ಉದ್ದೇಶಕ್ಕಾಗಿ ಈ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು? ಹಿಂದೆ ಪತ್ರಿಕೆಯಲ್ಲಿ ಸಂದರ್ಶನವೊಂದರಲ್ಲಿ ಬಸವಲಿಂಗಯ್ಯನವರು ಉಲ್ಲೇಖಿಸಿದಂತೆ ಈ ನಾಟಕ ನೋಡಿದ ಪ್ರತಿಯೊಬ್ಬರು ಮತ್ತೆ ಮತ್ತೆ ಕಾದಂಬರಿಯನ್ನು ಓದುವಂತೆ ಮಾಡುವುದೆ ಇದರ ಹಿಂದಿನ ಉದ್ದೇಶ. ಇದು ನಿಜವೇ ಆಗಿದ್ದರೆ ಅದು ಒಬ್ಬ ನಿಜವಾದ ರಂಗಕರ್ಮಿಯ ಕಾಳಜಿ ಅಲ್ಲವೇ ಅಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ವ್ಯರ್ಥ. ಇದರಲ್ಲಿರುವ ಸಾಮಾಜಿಕ ಕಳಕಳಿಯಾದರೂ ಏನು?

ಉತ್ತರ ಕರ್ನಾಟಕದ ಜನರ ಒತ್ತಾಸೆಯಂತೆ ಧಾರವಾಡದಲ್ಲಿ ರಂಗಾಯಣದ ಘಟಕವನ್ನು ತೆರೆಯಲಾಯಿತು. ಆದರೆ ಅದು ಏನನ್ನೂ ಸಾಧಿಸಲಿಲ್ಲ. ಅಲ್ಲಿಗೆ ಬಂದ ನಿರ್ದೇಶಕರೆಲ್ಲರೂ ಕೇವಲ ರಾಜಕೀಯ ಮಾಡುತ್ತ ಕಾಲಹರಣ ಮಾಡಿದರೇ ಹೊರತು, ಒಂದೇ ಒಂದು ಮಹಾತ್ವಾಕಾಂಕ್ಷೆಯ ಪ್ರಯೋಗವಾಗಲೀ ನಡೆಯಲಿಲ್ಲ. ಬದಲಾಗಿ ಧಾರವಾಡದಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲ ಎಂದು ಹಾರಿಕೆಯ, ಧಿಮಾಕಿನ ಮಾತುಗಳನ್ನಾಡುತ್ತ ಮತ್ತೆ ಮೈಸೂರಿನ ಕಡೆಗೆ ಹೊರಟುಹೊದರು.

ಬಸವಲಿಂಗಯ್ಯ ನಮ್ಮ ನಾಡು ಕಂಡ ಒಬ್ಬ ಉತ್ತಮ ರಂಗಕರ್ಮಿ, ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಇಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಭಿನ್ನವಾದ ರಂಗಚಳುವಳಿಯನ್ನು ರೂಪಿಸಿದ್ದರೆ ಅದಕ್ಕೊಂದು ಹೊಸ ಅರ್ಥ ಬರುತ್ತಿತ್ತು ಮತ್ತು ಕನ್ನಡ ರಂಗಭೂಮಿಗೆ ಒಮ್ದು ಹೊಸ ದಿಕ್ಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು. ನಮ್ಮ ರಂಗಭೂಮಿ ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ನಿಜ ಆದರೆ ಆರ್ಥಿಕವಾಗಿ ನಾವು ತುಂಬಾ ಬಡವರು. ಸಾರ್ವಜನಿಕರ ಹಣ ಈ ರೀತಿಯಾಗಿ ಅನವಶ್ಯಕವಾಗಿ ಪೋಲಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ.

ಅದೇ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಿ, ಅಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದರೆ, ಸ್ಥಳೀಯ ತಂಡಗಳಿಗೆ ಹೆಚ್ಚಿನ ಸ್ಪೂರ್ತಿ ನೀಡಿದಂತಾಗುತ್ತಿತ್ತು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗುತ್ತಿತ್ತು. ಸರಕಾರ ಏಕೆ ಈ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ? ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆ ಎಂಬ ನೀತಿಯೇನಾದರೂ ಇದೆಯೇ? ಅಥವಾ ಇದರ ಹಿಂದೆ ಬೇರೆ ಬೇರೆ ಒತ್ತಾಸೆಗಳಿರುವ ಪ್ರಬಲ ಲಾಬಿಯೊಂದು ಕಾರ್ಯನಿರ್ವಹಿಸುತ್ತಿದೆಯೇ? ಸಂಬಂಧಪಟ್ಟವರು ಉತ್ತರಿಸಿಯಾರೇ??

Saturday, May 8, 2010

ಇಂಗ್ಲೀಷ್ ಕವಿಗಳ ನೆನೆದದ್ದು ಹೀಗೆ....



ಈ ಹಿಂದೆ ನಾನು ಇಲ್ಲಿ ಬರೆದಿದ್ದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು ಸಂತಾನೋತ್ಪತ್ತಿ ಕ್ರೀಯೆಯಲ್ಲಿ ತುಂಬಾ ಬ್ಯೂಸಿ ಆಗಿವೆ ಅಂತ...ಅದರ ಫಲಿತಾಂಶವೇ ಈಗ ಮುರು ಪುಟ್ಟ ಪುಟ್ಟ ಪ್ರೇಮ ಪಕ್ಷಿಗಳ ಕಲರವ ಮನೆಯ ತುಂಬೆಲ್ಲ ಹಬ್ಬಿದೆ. ನಿನ್ನೆ ಆಕಸ್ಮಾತ್ ಆಗಿ ಒಂದು ಪುಟ್ಟ ಪಕ್ಷಿ ಗಡಿಗೆಯಿಂದ ತನ್ನ ಮುಖ ಹೊರಕ್ಕೆ ಮಾಡಿ ತಾಯಿಯನ್ನು ಪೀಡಿಸಿ ಗುಟುಕು ತೆಗೆದುಕೊಳ್ಳಲು ಹೋಗಿ ಪಂಜರದಲ್ಲಿ ಬಿದ್ದು ಬಿಟ್ಟಿದೆ. ತುಂಬ ಗಲಾಟೆ ಮಾಡುತ್ತಿತ್ತು. ಸರಿಯಾಗಿ ನಡೆದಾಡಲೂ ಬಾರದೆ, ಹಾರಲೂ ಬಾರದೇ ತುಂಬ ವೇದನೆಯನ್ನು ಅನುಭವಿಸುತ್ತಿತ್ತು. ನಾನು ಆಫೀಸಿನಿಂದ ಬಂದವನೇ ಅದರ ಆವಾಂತರ ನೊಡಲಾರದೇ ಅದನ್ನು ಮತ್ತೆ ಅದರ ಗುಡಿಗೆ ಸೇರಿಸಲು ಹೋದಾಗ ದೊಡ್ಡದೊಂದು ಪಕ್ಷಿ ಪಂಜರದಿಂದ ಹೊರಕ್ಕೆ ಹಾರಿ ಮನೆಯ ತುಂಬೆಲ್ಲ ದೊಡ್ಡ ಗಲಾಟೆಯನ್ನೇ ಎಬ್ಬಿಸಿಬಿಟ್ಟಿತು. ಅದನ್ನು ರಮಿಸಿ, ಕರೆದು ಮತ್ತೆ ಅದನ್ನು ಪಂಜರದೊಳಕ್ಕೆ ಸೇರಿಸುವ ಹೊತ್ತಿಗೆ ನನ್ನ ಹೆಂಡತಿಗೆ ಹೋದ ಉಸಿರು ಮತ್ತೆ ವಾಪಸು ಬಂದತಾಗಿತ್ತು...ಈಗ ಮತ್ತೆ ಅವುಗಳ ಬದುಕು ಎಂದಿನಂತೆ ಸಾಗುತ್ತಿದೆ...ಅವುಗಳ ಸಂಸಾರ ದೊಡ್ಡದಾಗಿದೆ...ಅವುಗಳಿಗೊಂದು ಪುಟ್ಟ ಕಾಂಗ್ರ್ಯಾಟ್ಸ್!!!

ಇವಲ್ಲದೇ ನಾನು ನಾಲ್ಕು "ಪಿಂಚರ್ಸ್" ಸಾಕಿದ್ದೆ. ಪಿಂಚರ್ಸ್ ಗುಬ್ಬಚ್ಚಿಗಳಿಗಿಂತಲೂ ಅತ್ಯಂತ ಚಿಕ್ಕದಾದ, ತುಂಬ ಚುರುಕಾದ, ಪುಕ್ಕಲು ಪಕ್ಶಿಗಳು. ಕೇಸರಿ ಬಣ್ಣದ ಚುಂಚು ಹೊಂದಿರುವ ಇವು ಪ್ರೇಮ ಪಕ್ಷಿಗಳಿಗಿಂತಲೂ ಹೆಚ್ಚು ನೀರನ್ನು ಕುಡಿಯುತ್ತವೆ. ಯಾರೇ ಆಗಲಿ ನೋಡಿದ ಮೊದಲ ನೋಟಕ್ಕೆ ಮರುಳಾಗುವ ಆಕೃತಿ ಇವುಗಳದ್ದು.

ಅದೊಂದು ದಿನ ನಾನು ಹೀಗೆಯೇ ಗೆಳೆಯ ಮಣಿ ಜೊತೆ ಮಾತನಾಡುತ್ತಿದ್ದಾಗ ನಮ್ಮ ಮನೆಯಲ್ಲಿರುವ ಪಿಂಚರ್ಸ್ ಪಕ್ಷಿಗಳ ಬಗ್ಗೆ ಹೇಳಿದೆ. ಅವನ ಮಗಳು ನೀಲಿಗೆ ಪಕ್ಷಿಗಳೆಂದರೆ ಪಂಚಪ್ರಾಣ ಎಂದ. ಸರಿ ಬಂದು ಪಿಂಚರ್ಸ್ ತೆಗೆದುಕೊಂಡು ಹೋಗು ಎಂದೆ. ಆದರೆ ಒಂದು ಕರಾರು. ಒಬ್ಬನೇ ಬಂದರೆ ಕೊಡಲ್ಲ. ಜೊತೆಯಲ್ಲಿ ನೀಲಿ ಸಹ ಬರಲೇ ಬೇಕು ಅಂತ ಹೇಳಿದೆ. ಸರಿ ಇಬ್ಬರೂ ಸೇರಿ ಬಂದರು. ಮನೆಗೆ ಬಂದದ್ದೇ ತಡ ನೀಲಿ ನೇರವಾಗಿ ಪಿಂಚರ್ಸ್ ಇರುವ ಪಂಜರದ ಮುಂದೆ ಪ್ರತಿಷ್ಠಾಪನೆಗೊಂಡಳು. ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅವರಿಬ್ಬರನ್ನೂ ಪಕ್ಷಿಗಳ ಸಮೇತ ನನ್ನ ಕಾರಿನಲ್ಲಿ ಅವರ ಮನೆಯ ತನಕ ಬಿಟ್ಟು ಬಂದೆ.


ನಂತರದ ಕಥೆ ತುಂಬಾ ಕುತೂಹಲಕಾರಿಯಾಗಿತ್ತು. ಮಣಿಯ ಹೆಂಡತಿ ಪುಟ್ಟಿ ಹಾಗೂ ನೀಲಿ ಖಾಯಂ ಆಗಿ ಅವುಗಳ ಮುಂದೆ ಪ್ರತಿಷ್ಠಾಪನೆಗೊಳ್ಳತೊಡಗಿದರು. ನೀಲಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎಲ್ಲ ಸಂಬಂಧಿಕರು, ಗೆಳೆಯ ಗೆಳತಿಯರಿಗೆ ತಮ್ಮ ಮನೆಗೆ ಆಗಮಿಸಿದ ನೂತನ ಅತಿಥಿಗಳ ಸುದ್ದಿ ಕೊಡುವುದೇ ಅವಳ ಪ್ರಥಮ ಆದ್ಯತೆಯಾಯ್ತು. ಹುಬ್ಬಳ್ಳಿಯಿಂದ ಜಿ.ಎಚ್ ಅವರ ಮಗ ಸಂದೇಶ್ ಫೋನಾಯಿಸಿ "ಪಕ್ಷಿ ನೋಡಲಿಕ್ಕೆ ಬೆಂಗಳೂರಿಗೆ ಬರಬೇಕಾ ಅಂಕಲ್" ಅಂತ ಕೇಳಿದ....


ಇದಕ್ಕೂ ಮುಂದು ವರೆದು ತಾಯಿ ಮಗಳಿಬ್ಬರೂ ಆ ನಾಲ್ಕು ಪಿಂಚರ್ಸ್ ಗಳಿಗೆ ನಾಮಕರಣ ಮಾಡಲು ಮುಂದಾದರು. ಅವುಗಳಿಗೆ ಸೂಕ್ತ ಹೆಸರನ್ನು ಹುಡುಕಲು ಶುರುಮಾಡಿದರು. ಪುಟ್ಟಿ ತನ್ನ ಬಿ.ಎ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ತಕ್ಷಣವೇ ಅವಳ ತಲೆಯಲ್ಲಿ ಹೊಳೆದ ಹೆಸರುಗಳು "ಶೆಕ್ಸ್ ಪೀಯರ್, ಎಮಿಲಿಯಾ, ಗ್ರೇಸಿ, ಮಿಲ್ಟನ್" ಎಂದು ಇಂಗ್ಲೀಷಿನ ಖ್ಯಾತ ಕವಿಗಳ ಹೆಸರುಗಳನ್ನಿಡಲಾಯಿತು. ಮಣಿ ಮಾರನೇ ದಿನ ಚಾಟ್ ನಲ್ಲಿ ಸಿಕ್ಕ ತಕ್ಷಣ ಈ ವಿಷಯವನ್ನು ತಿಳಿಸಿದ. ನಾನು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ. ನಾನು ಮಣಿಗೆ ಹೇಳಿದೆ "ಅವು ನಮ್ಮ ಪಕ್ಷಿ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ...ನೀವ್ಯಾರು ಕೇಳೋದಿಕ್ಕೆ" ಅಂತ..ಅವನು ಅದಕ್ಕೆ ಆಯ್ತು ಸಾರ್ ಎಂದು ತಲೆ ದೂಗಿದ.

ಇಂದು ಮತ್ತೆ ಚಾಟ್ ನಲ್ಲಿ ಸಿಕ್ಕಾಗ ಮಣಿ ಹೇಳುತ್ತಿದ್ದ..."ಖ್ಯಾತ ಇಂಗ್ಲೀಷ್ ಕವಿಗಳ ಜೊತೆ ನಮ್ಮ ಬದುಕು ಸಾಗಿದೆ ಸಾರ್" ಎಂದು. ನಾನವನಿಗೆ ಹೇಳಿದೆ. "ಆ ಮಹಾಕವಿಗಳ ಬದುಕಿನ ಜೊತೆ ನಿಮ್ಮ ಬದುಕು ಬಂಗಾರವಾಗಲಿ ಎಂದು"...ತುಂಬ ಭಾವುಕನಾದ ಮಣಿ...

ಬದುಕಿನ ಬವಣೆಗಳೆಲ್ಲ ಮಾಯವಾಗಿ ಅಲ್ಲಿ ಬರೀ ಬೆಳದಿಂಗಳೇ ತುಂಬಿರಲಿ....ಎನ್ನುತ್ತಾ ನನ್ನ ಮಾತಿಗೆ ಪೂರ್ಣ ವಿರಾಮಹಾಕಿದೆ......

Thursday, April 22, 2010

Seasoned veterans added to Mumbai, Bangalore offices

Blue Lotus Communications Pvt Ltd, one of the fastest growing public relations agencies in India, announced the appointment of two seasoned public relations professionals Jerald David and Dhananjay Kulkarni to scale up the firm’s networking operations in the Western and Southern zones.


Jerald, arguably one of the most experienced PR professionals in the industry with over 3 decades of experience in public and media relations will bolster the media relations capabilities of Blue Lotus in the Western region. Dhananjay with 14 years of media relations experience will head the Southern media relations team covering Andhra Pradesh, Tamil Nadu, Karnataka and Kerala.


Commenting on the two new appointments, N. Chandramouli, CEO Blue Lotus Communications Pvt. Ltd, says “We’ve ridden the challenging economic conditions with ease due to our nimble approach and knowledge centric servicing. Since the start of the year we have continued steady expansion with new appointments at senior levels. Jerry and Dhananjay will add to delivery strength of Blue Lotus.”

Jerald has the experience of handling complex media relation tasks having handled a basket of reputed clients such as Godrej consumer, Godrej properties, HDIL, IDBI Bank, Cathay Pacific Airways, Birla Sunlife Insurance, AMC, Shinsei Bank of Japan among others. He enjoys excellent rapport with senior media professionals across the board and has worked with agencies like Concept PR, Percept and Pressman Ltd.

Dhananjay Kulkarni, based out of Bangalore, has experience in journalism, corporate communications and public relations, and consequently has deep understanding of the media. He has handled clients that include Fuji Films, Reebok India, LG Electronics, Spice Telecom, Shoppers Stop, ISCKON (Akshaya Patra Project), Air India, Ashok Leyland, Diageo India Pvt Ltd, Coca-Cola among others. His repertoire of expertise includes holding Crisis Management workshops for the clients, conducting media workshops for the clients and preparing media plans.

Before joining Blue Lotus Communications, Dhananjay was the Media Head (Southern Region) with Perfect Relations and Senior Manager (Media Relations and Client Servicing) at Mutual Image. He also worked as a reporter-sub-editor for the leading Kannada daily Prajavani and as sub-editor /reporter for the Kannada daily Samyukta Karnataka.

About Blue Lotus:

BlueLotus Communications is a seven-year agency that started in October 2002. With humble beginnings as a two-person agency, the agency has grown to a size of more than 115 consultants, nine offices and three profitable business lines in this very short time-span. The other businesses of the group include a design boutique called Mustard Designs and Blue Bytes, an Information Logistics service.


BlueLotus Communications has specializations in Healthcare, Technology, and Finance. The agency's impressive array of clients includes Sharekhan, Dun& Bradstreet, Bharatmatrimony.com, KEIP, Nasscom Foundation and Yash Birla Group among others.

http://www.business-standard.com/india/news/blue-lotus-gearsservice-capability/392616/

Friday, March 26, 2010

ಪ್ರೇಮ ಪಕ್ಷಿಗಳ ಸಂತಾನೋತ್ಪತ್ತಿಯ ಕ್ಷಣಗಳನ್ನರಸುತ್ತ.......



ಅಸ್ಗರ್ ವಜಾಹತ್ ಅವರು ಬರೆದಿರುವ "ರಾವೀ ನದಿಯ ದಂಡೆಯ ಮೇಲೆ" ನಾಟಕದಲ್ಲಿ ಒಂದು ಮಾತು ಬರುತ್ತದೆ....."ನಮಗೆ ಯಾರಿಗೂ ಬದುಕನ್ನು ಕೊಡುವ ಶಕ್ತಿ ಇಲ್ಲ ಎಂದ ಮೇಲೆ ಅವರ ಜೀವವನ್ನು ತೆಗೆಯುವ ಅಧಿಕಾರವನ್ನು ನಮಗೆ ಕೊಟ್ಟವರಾರು...." ನಾಟಕದ ಈ ಮಾತು ಬರುವ ದೃಶ್ಯವನ್ನು ನಾನು ಸಂಯೋಜಿಸುವಾಗ ಮತ್ತು ಅದರ ತಾಲೀಮಿನಲ್ಲಿ ತೊಡಗಿಕೊಳ್ಳುವಾಗ ಇದರ ಅನುವಾದಕರಾದ ಇಟಗಿ ಈರಣ್ಣ ಅವರು ಅನೇಕ ಬಾರಿ ಕಣ್ಣೀರಿಟ್ಟಿದಾರೆ.......ಭಾವುಕರಗಿದ್ದಾರೆ. ಭಾವನೆಗಳನ್ನು ಕೆದಕಿ ಅದರೊಂದಿಗೆ ಅದ್ಭುತವಾಗಿ ಆಟವಾಡಬಲ್ಲ ನಾಟಕವಿದು....

ಮೊನ್ನೆ ನಾನು ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿದ್ದೆ...ಈ ನಾಟಕ ಹೊಸಪೇಟೆಯಲ್ಲಿ ಪ್ರದರ್ಶನಗೊಂಡು ಹತ್ತು ವರ್ಷಗಳಾದ ನಂತರವೂ ಅಲ್ಲಿನ ರಂಗಭೂಮಿಯ ಗೆಳೆಯ ಅಬ್ದುಲ್ ಅದನ್ನು ನೆನೆಪಿಗೆ ತಂದು ಬಹಳ ಸಂತೋಷಪಟ್ಟ.....ಮಾನವ ಸಂಬಂಧಗಳ ಬಗ್ಗೆ ಬಹಳ ಹೊತ್ತು ಮಾತನಾಡಿದ...ಎಪ್ರಿಲ್ ೧೦ ರಿಂದ ರಂಗ ತರಬೇತಿ ಶಿಬಿರ ನಡೆಸುತ್ತಿರುವುದಾಗಿಯೂ, ಒಂದೆರಡು ದಿನಗಳ ಮಟ್ಟಿಗೆ ಬಂದು ಶಿಬಿರಾರ್ಥಿಗಳಿಗೆ ತಾಲೀಮನ್ನು ನಡೆಸಿಕೊಡಬೇಕೆಂದು ಕೇಳಿಕೊಂಡ.....ತುಂಬ ಸರಳವಾಗಿ ಜೀವಿಸುತ್ತಿರುವ ವ್ಯಕ್ತಿ ಮತ್ತು ನಿಜವಾದ ರಂಗ ಕಾಳಜಿಯನ್ನು ಹೊಂದಿರುವಂತಹ ಮನುಷ್ಯ ಆತ....

ರಂಗಭೂಮಿ ನಮಗೆಲ್ಲ ನಿಜವಾದ ಮನ್ವಂಥರದ ಕಾಲವನ್ನು ಸೃಷ್ಟಿಸಿಕೊಡುತ್ತದೆ ಎಂಬುದಕ್ಕೆ ಈ ಎಲ್ಲ ಸಂಬಂಧಗಳೇ ಸಾಕ್ಷಿ...ಈ ಎಲ್ಲ ಗುಂಗಿನಲ್ಲೇ ನಾನು ಬೆಂಗಳೂರಿಗೆ ವಾಪಸ್ಸಾದೆ...ನಾನು ಮುದ್ದಾಗಿ ಸಾಕಿದ ಪ್ರೇಮ ಪಕ್ಷಿಗಳು (ಲವ್ ಬರ್ಡ್ಸ್) ನನ್ನನ್ನು ಕಂಡೊಡನೇ ಅಕ್ಕರೆಯಿಂದ ಗಲಾಟೆಮಾಡ ತೊಡಗಿದವು...ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರ ಹೇಳಿಕೆಯಂತೆ ಪ್ರೇಮ ಪಕ್ಷಿಗಳ ಸಂತಾನೋತ್ಪತ್ತಿಗೆ ಅನುಕೂಲವಾಗಲೆಂದು ಕೇವಲ ಹತ್ತು ದಿನಗಳ ಹಿಂದೆ ಅವುಗಳ ಪಂಜರದಲ್ಲಿ ಮಡಿಕೆಗಳನ್ನು ಕಟ್ಟಿದ್ದೆ.....ಸ್ವಲ್ಪ ದಿನಗಳ ವರೆಗೆ ಅದರ ಹತ್ತಿರಕ್ಕೂ ಹೋಗದಿದ್ದ ಇವು, ಕ್ರಮೇಣ ಆ ಮಡಿಕೆಗಳ ಒಳ ಹೊರಗೆ ಅಡ್ಡಾಡಿ, ಇದು ತಮ್ಮವೇ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದವು...ಇಂದು ನಾನು ಸುಮ್ಮನೇ ಅವುಗಳ ಹತ್ತಿರ ನೋಡುತ್ತ ಕುಳಿತಾಗ ಒಂದು ಜೋಡಿ ಪಕ್ಷಿ ಮಿಲನ ಮಹೋತ್ಸವದಲ್ಲಿ ತೊಡಗಿದ್ದವು....ತಕ್ಷಣ ನನ್ನ ಕ್ಯಾಮೆರಾದಲ್ಲಿ ಆ ಕ್ಷಣವನ್ನು ಸೆರೆ ಹಿಡಿದೆ....ಹಿಂದೆ ಪಾರಿವಾಳಗಳ ಸಂತಾನೋತ್ಪತ್ತಿಯ ಕಾಲವನ್ನು ಕ್ಷಣ ಕ್ಷಣವೂ ಬಿಡದಂತೆ ಸೆರೆಹಿಡಿದ ನಾನು ಗ ಅಂತಹ ಮತ್ತೊಂದು ಅಪರೂಪದ ಕೆಲಸಕ್ಕೆ ಕೈಹಾಕಿದ್ದೇನೆ.....

ನಾಟಕ, ಪರಿಸರ, ಪುಸ್ತಕ ಮಾತು ನಮ್ಮ ಸಾಂಸ್ಕೃತಿಕ ಕಾಳಜಿ ಇವುಗಳಿಂದಲ್ಲವೇ ನಮ್ಮ ನಿಜವಾದ ಸಂಬಧಗಳು ಹುಟ್ಟುವುದು ಮತ್ತು ಅದಕೊಂದು ಹೊಸ ಅರ್ಥ ಕಲ್ಪಿಸಿಕೊಡಲು ಸಾಧ್ಯವಾಗುವುದು.........

Friday, February 26, 2010

ಹೀಗೊಂದು ಗಂಭೀರ ಚರ್ಚೆ...

ಗೆಳೆಯ ಮಣಿಕಾಂತ್ - ಅವಧಿ ಬ್ಲಾಗ್ ನಲ್ಲಿ ಯಡಿಯೂರಪ್ಪನವರ ಕುರಿತು, ಗಣಿ ಪರವಾನಗಿ ಕುರಿತು ಅವರ ನಿಲುವುಗಳ ಬಗ್ಗೆ ಗಂಭೀರವಾದ ಪತ್ರ ಬರೆದಿದ್ದಾರೆ.
ಮಣಿಯ ಪತ್ರ ಓದಲು ಇ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ...
ಮಣಿಯ ಪತ್ರಕ್ಕೆ ನನ್ನ ಅಭಿಪ್ರಾಯ ಹೀಗಿದೆ...
ನಮ್ಮ ನಾಡಿನ ಮುಖ್ಯ ಮಂತ್ರಿಗಳಿಗೆ ನಿಮ್ಮ ಯಾವುದೇ ಕಾಳಜಿಗಳು ಕೇಳಿಸುವುದಿಲ್ಲ. ಅವರದು ಜಾಣ ಕಿವುಡು. ತುಘಲಕ್ ದರ್ಬಾರ ನಡೆದಿದೆ ಇಲ್ಲಿ. ಒಂದು ಪ್ರದೇಶದ ಭೌಗೋಲಿಕ ಸಂಪತ್ತು ಆ ಪ್ರದೇಶದ ಸಾಂಸ್ಕೃತಿಕ ಕಾಳಜಿಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಾಡುತ್ತದೆ ಎಂಬ ಮಾತು ನಮ್ಮ ಸನ್ಮಾನ್ಯ ಮುಖ್ಯ ಮಂತ್ರಿಗಳ ಪಾಲಿಗೆ ಅರಣ್ಯರೋದನವಾಗಿದೆ. ಸ್ವಲ್ಪ ದಿನ ಕಾದು ನೋಡಿ…ಇದೇ ನಮ್ಮ ಮುಖ್ಯ ಮಂತ್ರಿಗಳು ಒಂದೋ ಇದು ಮಾಧ್ಯಮಗಳ ಸೃಷ್ಟಿ ಎಂತಲೋ ಅಥವಾ ಇಂತಹ ತಪ್ಪು ಮತ್ತೆ ಪುನರಾವರ್ತನೆ ಆಗುವುದಿಲ್ಲ ಅಂತಲೋ ಹೇಳಿಕೆಕೊಟ್ಟು ತಮ್ಮ ಹೆಗಲ ಮೇಲಿನ ಭಾರವನ್ನು ಇಳಿಸಿಕೊಳ್ಳುತ್ತಾರೆ. ನಂತರ ಗುಡಿ ಗುಂಡಾರಗಳಿಗೆ ತಿರುಗಿ ತಮ್ಮ ಹರಕೆಯನ್ನು ಸಾರ್ವಜನಿಕರ ಹಣದಲ್ಲಿ ತೀರಿಸುತ್ತಾರೆ.

ಥೂ ನಿಮ್ಮ….ನಿಮಗೇನಾದರೂ ಮಾನ, ಮರ್ಯಾದೆ, ನಾಚಿಕೆಗಳ ಅರ್ಥ ತಿಳಿದಿದ್ದರೆ ನಮ್ಮ ನಾಡನ್ನು, ನಾಡಿನ ಸಂಪತ್ತನ್ನು ರಕ್ಷಿಸುವ ಕೆಲಸ ಮೊದಲು ಮಾಡಿ. ನಂತರ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಾಯಕದಲ್ಲಿ ತೊಡಗಿ.
ನೀವೂ ಪ್ರತಿಕ್ರೀಯಿಸಿ...

Monday, February 22, 2010

ನಾನು ಇವನ್ನೆಲ್ಲ ನಂಬುವುದಿಲ್ಲ...ಆದರೆ.....

ಜನವರಿ ೨೯ ಹಾಗೂ ೩೦ ರಂದು ನಾನು ಧಾರವಾಡಕ್ಕೆ ಹೋಗಿದ್ದೆ. ನಾನು ಕಲಿತ ವಿಶ್ವವಿದ್ಯಾಲಯದವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾಧ್ಯಮ ಕುರಿತ ವಿಚಾರ ಸಂಕಿರಣಕ್ಕೆ ನನ್ನನ್ನು ಉಪನಾಸಕರಲ್ಲೊಬ್ಬನೆಂದು ಆಹ್ವಾನಿಸಿದ್ದರು. ಹೀಗಾಗಿ ಮಾಧ್ಯಮ ಲೋಕದಲ್ಲಿ ನನಗಿರುವ ಅಲ್ಪ ಸ್ವಲ್ಪ ಅನುಭವಗಳನ್ನು ನನ್ನ ಕಿರಿಯ ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಲು ಹೋಗಿದ್ದೆ. ಅಂದು ನಾನ್ಉ ಎಂದಿನಂತೆ ನನ್ನ ಧಾರವಾಡದ ಎಲ್ಲ ಹಳೆಯ ಗೆಳೆಯರನ್ನು ಕಂದು ಮಾತನಾಡಿಸಿದೆ. ಅನೇಕರು ನನ್ನನ್ನು "ಏನಪಾ ಯಾವ ನಾಟಕಾ ಮಾಡಸ್ಲೀಕತ್ತೀ" ಎಂದೇ ಪ್ರಶ್ನಿಸಿದ್ದರು. ನಾನು ಚಂದ್ರಶೇಖರ್ ಕಂಬಾರರ "ಜೋಕುಮಾರಸ್ವಾಮಿ" ಎಂದಾಗ ಎಲ್ಲರಿಗೂ ಖುಷಿಯಾಗಿತ್ತು. ಜನಪದ ಪ್ರಕಾರದ ನಾಟಕ ಅದರಲ್ಲೂ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವುದರಿಂದ ಅದಕ್ಕೆ ಹೆಚ್ಚಿನ ಮೆರಗು ನೀಡಲು ನನ್ನಿಂದ ಸಾಧ್ಯ ಎಂದು ನನ್ನ ಅನೇಕ ಮಿತ್ರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಾನು ಹಿಂದೆ ಒಂದು ಸಲ ನನ್ನ ಗುರುಗಳಾದ ಶ್ರೀ. ಬಿ.ವಿ. ಕಾರಂತರ ಹತ್ತಿರ ನನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದೆ. "ಮೇಷ್ಟ್ರೇ ನಾನು ಒಂದು ನಾಟಕವನ್ನು ನಿರ್ದೇಶಿಸುತ್ತೇನೆ ಮತ್ತು ಅದಕ್ಕೆ ತಾವು ಸಂಗೀತ ನಿರ್ದೇಶನ ಮಾಡಬೇಕು" ಎಂದಿದ್ದೆ. ಅದಕ್ಕವರು ಸಂತೋಷದಿಂದ ಒಪ್ಪಿ, ನನ್ನ ಬೆನ್ನಮೇಲೆ ಕೈಯಾಡಿಸಿದ್ದರು. ಮುಂದೆ ಕಾರಂತರ ಆರೋಗ್ಯ ತೀರ ಹದಗೆಟ್ಟಿತು, ನಮ್ಮಿಂದ ತುಂಬಾ ದೂರ ಸಾಗಿ ಬಿಟ್ಟರು...ಅವರಿಂದ ನನ್ನ ನಿರ್ದೇಶನದ ನಾಟಕಕ್ಕೆ ಸಂಗೀತ ಮಾಡಿಸುವ ಕನಸು ಕನಸಾಗಿಯೇ ಉಳಿದು ಹೋಯಿತು. ಆದರೆ ಕಾರಂತರು ಈಗಾಗಲೇ ಸಂಗೀತ ಸಂಯೋಜನೆ ಮಾಡಿರುವ ನಾಟಕವನ್ನು ಏಕೆ ನಿರ್ದೇಶಿಸಬಾರದು ಎಂಬ ನನ್ನ ಆಸೆಗೆ ಒತ್ತಾಸೆಯಾಗಿ ನಿಂತವರು ರಾ.ಶಿ.ಕುಲಕರ್ಣಿ. ನಾನೂ ಸಹ ಒಪ್ಪಿ ಅವರು ಸಂಗೀತ ಸಂಯೋಜನೆ ಮಾಡಿರುವ "ಜೋಕುಮಾರಸ್ವಾಮಿ" ನಾಟಕವನ್ನು ನಿರ್ದೇಶಿಸುವ ಸಿದ್ಧತೆಯನ್ನು ನಡೆಸಿದೆ.

ಧಾರವಾಡದ ನನ್ನ ಗೆಳೆಯನೊಬ್ಬ ನಾನು ಈ ನಾಟಕವನ್ನು ಮಾಡಿಸುತ್ತಿದ್ದೇನೆಂಬ ವಿಷಯ ತಿಳಿದ ತಕ್ಷಣವೇ "ಧನ್ಯಾ...ಹುಶಾರ್...ಈ ನಾಟಕ ಭಾಳ ಡೇಂಜರ್...ಛೋಲೋತ್ನಂಗ ಪೂಜಾ ಮಾಡ್ಸಿ ಆಮ್ಯಾಲ ಈ ನಾಟಕಾ ಮಾಡಸ್ಲಿಕ್ಕೆ ಕೈಹಾಕು" ಅಂದ....ನಾನು ಸುಮ್ಮನೇ ಅವನತ್ತ ನೋಡಿ ನಕ್ಕು ಮತ್ತೆ ನನ್ನ ಕೆಲಸದ ಕಡೆಗೆ ವಾಲಿದೆ.

ಆದರೆ ಒಂದು ಮಾತನ್ನಂತೂ ಇಲ್ಲಿ ಹೇಳಲೇ ಬೇಕು...ನನ್ನ ಗೆಳೆಯ ಹೇಳಿದ ಅಂತಲೊ ಅಥವಾ ಈ ನಾಟಕಕ್ಕೆ ಆ ರೀತಿಯ ಕಳಂಕ ಅಂಟಿದೆಯೋ ಗೊತ್ತಿಲ್ಲ. ನನ್ನ ಬರೊಬ್ಬರಿ ೨೮ ವರ್ಷಗಳ ರಂಗಭೂಮಿಯ ಅನುಭವದಲ್ಲಿ ನಾನು ಈ ನಾಟಕದ ತಯಾರಿಯಲ್ಲಿ ಅನುಭವಿಸಿದ ಕಿರಿಕಿರಿ, ತೊಂದರೆ ಬೇರೆ ಯಾವ ನಾಟಕದ ತಯಾರಿ ಸಂದರ್ಭದಲ್ಲಿಯೂ ಅನುಭವಿಸಲಿಲ್ಲ. ನಮ್ಮ ತಂಡದ "ಮ್ಯಾನೇಜರ್" ಎಂದೇ ಹೆಸರಾಗಿರುವ ಹಿರಿಯರಾದ ಸದಾನಂದ ಅವರು ತಮ್ಮ ತಮ್ಮನ ಮಗಳ ಮದುವೆಗೆಂದು ಸಂಸಾರ ಸಮೇತರಾಗಿ ಊರಿಗೆ ಹೋದರು.ಅವರು ನಮ್ಮ ಇಡೀ ತಂಡದ ಯಜಮಾನರು. ಎಲ್ಲ ಬೇಕು ಬೇಡಗಳನ್ನು ಸ್ವತಃ ನಿಂತು ನೋಡಿಕೊಳ್ಳುವವರು. ಅವರ ಮಗಳು ನನ್ನ ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಳು. ನಾಟಕ ಪ್ರದರ್ಶನಕ್ಕೆ ಇನ್ನು ಕೇವಲ ೬ ದಿನ ಮಾತ್ರ ಇತ್ತು. ನನ್ನ ಒತ್ತಡ ಯಾರ ಮುಂದೆಯೂ ಹೇಳಿಕೊಳ್ಳುವಂತಿಲ್ಲ...ಫೆಬ್ರುವರಿ ೭ ರಂದು ಮದುವೆ ಮುಗಿಸಿ ಸದಾನಂದ ಅವರ ಮಗಳು ಮತ್ತೆ ೮ ನೇ ತಾರೀಖಿನಂದು ನಮ್ಮ ನಾಟಕದ ತಾಲೀಮಿಗೆ ಹಾಜರಾದಳು. ಸದಾನಂದ್ ಅವರು ೯ ನೇ ತಾರೀಖಿಗೆ ನಮ್ಮ ತಾಲೀಮಿಗೆ ಹಾಜರಾಗಬೇಕಿತ್ತು. ಅಂದು ಮುಂಜಾನೆ ಸರಿಯಾಗಿ ೧೦ ೩೦ ರ ಸಮಯ ಸದಾನಂದ್ ಅವರಿಂದ ನನಗೆ ಫೋನ್ ಕರೆ..ಅದರಲ್ಲಿ ಅವರಿಂದ ಯಾವುದೇ ಮಾತಿಲ್ಲ..ಕೇವಲ ಬಿಕ್ಕಳಿಕೆ..ಅವರ ಅಣ್ಣ ಹೃದಯಾಘಾತದಿಂದ ನಿಧನ ಹೊಂದಿದ್ದರು!...ನನ್ನಲ್ಲಿ ಆಡಲು ಯಾವ ಮಾತುಗಳು ಉಳಿದಿರಲಿಲ್ಲ....ಅವರ ಮಗಳಿಗೆ ನಾನೇ ಸಾಂತ್ವನ ಹೇಳಿ ಊರಿಗೆ ಕಳಿಸಿದೆ....ಅವಳು ಇನ್ನೂ ಅತ್ತ ಊರಿನ ಬಸ್ಸ್ ಹತ್ತಿರಲಿಲ್ಲ..ಆಗಲೇ ನನಗೆ ಪೋನಾಯಿಸಿ "ಅಂಕಲ್...ನನಗೆ ಕೊಟ್ಟಿರುವ ಪಾತ್ರವನ್ನು ನಾನೇ ಮಾಡುತ್ತೇನೆ...ನಾಳೆ ಬೆಳಿಗ್ಗೆ ನಾನು ತಿರುಗಿ ಬಂದು ಬಿಡುತ್ತೇನೆ...ಯಾವುದೇ ಕಾರಣಕ್ಕೂ ನಿಮ್ಮ ಪರಿಶ್ರಮವನ್ನು ಹಾಳು ಮಾಡಲು ಬಿಡುವುದಿಲ್ಲ...." ಅವಳು ಪಾಪ ಇನ್ನೂ ಮಾತನಾಡುತ್ತಿದ್ದಳೇನೋ....ನಾನೇ ಫೋನ್ ಕಟ್ ಮಾಡಿಬಿಟ್ಟೆ......

ಹೇಳಿದ ಮಾತಿನಂತೆ ಆ ಹುಡುಗಿ ೧೦ ನೇ ತಾರಿಖಿನ ಸಂಜೆಗೆ ಮತ್ತೆ ನನ್ನ ನಾಟಕದ ತಾಲೀಮಿಗೆ ಹಾಜರಾದಳು...ಸದಾನಂದ್ ಅವರು ಮಾಡುತ್ತಿದ್ದ ಪಾತ್ರವನ್ನು ಬೇರೆಯವರಿಗೆ ಹಂಚಿದ್ದಾಯಿತು...ಅಷ್ಟರಲ್ಲಿಯೇ ರಷ್ಮಿ (ಸದಾನಂದ್ ಅವರ ಮಗಳ ಹೆಸರು) ನಿರ್ವಹಿಸುತ್ತಿದ್ದ ಪಾತ್ರಕ್ಕೆ ಬೇರೆಯವರನ್ನು ತಯಾರಿಮಾಡಿದ್ದೂ ಆಯ್ತು...ನಾಟಕದ ತಯಾರಿ ನಡೆಯುತ್ತಿದಂತೆಯೆ..ನಮ್ಮ ನಟ ಮಹಾಶಯರು ತಮಗೆ ಬೇಕಾದಂತೆ ತಾಲೀಮಿಗೆ ಬರುವುದು...ಯಾವುದಕ್ಕೂ ಕ್ಯಾರೇ ಅನ್ನದ ಅವರ ನಿಲುವು.... ಅವೆಲ್ಲವುಗಳ ಮಧ್ಯೆ ಸದಾನಂದ್ ಅವರ ಅನುಪಸ್ಥಿತಿ..ನನ್ನನ್ನು ದಿಕ್ಕು ತಪ್ಪಿಸಿತ್ತು....

ಒಟ್ಟಿನಲ್ಲಿ ಮುಂಬೈನಲ್ಲಿ ಒಳ್ಳೆಯ ಪ್ರದರ್ಶನ ನೀಡಬೇಕೆಂದು ನಾವು ತಯಾರಿ ಮಾಡಿಕೊಂಡು ಮುಂಬೈ ಕಡೆಗೆ ಪ್ರಯಾಣ ಬೆಳೆಸಿದ್ದಾಯಿತು. ಫೆಬ್ರುವರಿ ೧೨ ರ ಬೆಳಿಗ್ಗೆ ಸುಮಾರು ೮.೩೦ ರ ಸಮಯ ಸದಾನಂದ್ ಅವರಿಂದ ಮತ್ತೊಂದು ಫೋನ್!...ಅವರ ಅಣ್ಣನವರ ನಿಧನದ ಸುದ್ದಿ ಕೇಳಿ..ಆ ಆಘಾತವನ್ನು ತಡೆದುಕೊಳ್ಳಲಾಗದೇ, ಸದಾನಂದ್ ಅವರ ಅಕ್ಕನ ಮಗ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ....ಈ ವಿಷಯವನ್ನು ರಷ್ಮಿಗೆ ತಿಳಿಸದಂತೆ ಅವರ ನಮ್ರ ವಿನಂತಿ!....
ಈ ಎಲ್ಲ ತೊಂದರೆಗಳ ಮಧ್ಯೆ ರಷ್ಮಿಯ ಧ್ವನಿ ಬಿದ್ದು ಹೋಗಿತ್ತು..ಮಾತನಾಡಲೂ ಆಗದಷ್ಟು ತೊಂದರೆ ಅನುಭವಿಸುತ್ತಿದ್ದಳು ಹುಡುಗಿ....ಎಲ್ಲವನ್ನೂ ಹಾಗೆಯೇ ಸಹಿಸಿಕೊಂಡು ಮುಂಬೈ ತಲುಪಿ, ಅಲ್ಲಿ ಮತ್ತೆ ೨-೩ ತಾಲೀಮುಗಳನ್ನು ಮಾಡಿ, ಫೆಬ್ರುವರಿ ೧೪ ರಂದು ಪ್ರದರ್ಶನವನ್ನು ನೀಡಿ ರಂಗದಿಂದ ಕೆಳಗಿಳಿಯುತ್ತಿದ್ದಂತೆಯೇ ನನಗೆ ತುಂಬಿದ ಸಭಾಂಗಣದಿಂದ ಕೇವಲ ಪ್ರೇಕ್ಷಕರ ಕರತಾಡನ ಮಾತ್ರ ಕೇಳುತ್ತಿತ್ತು....ಒಂದು ಕ್ಷಣ ಸದಾನಂದ್, ಅವರ ಅಣ್ಣ....ಎಲ್ಲರೂ ನನ್ನ ಕಣ್ಣ ಮುಂದೆ ಬಂದು ಹೋದರು.....ಕಣ್ಣಂಚಿನಲ್ಲಿ ನೀರಿಳಿಯುತ್ತಿತ್ತು....ನಾಟಕವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಕ್ಕೆ ಮನದಲ್ಲಿ ಧನ್ಯತಾ ಭಾವ!...
ಅಂದ ಹಾಗೆ...ಶಂಕರ‍್ನಾಗ್ ಸಹ "ಜೋಕುಮಾರಸ್ವಾಮಿ" ನಾಟಕವನ್ನು ಚಲನಚಿತ್ರವನ್ನಾಗಿಸುವ ಕಾಯಕದಲ್ಲಿ ತೊಡಗಿದ್ದಾಗಲೇ ಭೀಕರ ಅಪಘಾತಕ್ಕೀಡಾಗಿ ದುರಂತ ಸಾವಿಗೀಡಾದರು.....