Saturday, January 1, 2011

ಯಾರಿಗೂ ಮುಖ ತೊರಿಸದೇ ಊರು ಬಿಟ್ಟಿದ್ದಾಯ್ತು...

ನನ್ನ ಮದುವೆಯಾದ ಹೊಸತರಲ್ಲಿ ನನ್ನ ಹೆಂಡತಿ ಮಹಾರಾಷ್ಟ್ರದ ಗಡಿಂಗ್ಲಜ್ ಎಂಬ ಊರಿನಲ್ಲಿ ಕೆಲಸ ಮಾಡುತ್ತಿದ್ದಳು. ನಾನು ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿದ್ದೆ. ನನ್ನ ಮಾವನವರು ಆರ್.ಎಮ್.ಎಸ್ (ರೈಲ್ವೆ ಮೇಲ್ ಸರ್ವಿಸ್) ನಲ್ಲಿ ಕೆಲಸ ಮಾಡುತ್ತಿದ್ದು, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ತೀರ ಅವಸರ ಪ್ರವೃತ್ತಿಯ ಮನುಷ್ಯ ಅವರು. ನನ್ನ ಸ್ನೇಹಿತರೆಲ್ಲ ಸೇರಿ ನನ್ನ ಕೆಲಸದ ಸ್ಪೀಡ್ ನೋಡಿ ನನಗೆ ಅವಸರ ಎನ್ನುವ ಹೆಸರನ್ನಿಟ್ಟಿದ್ದರು. ಆದರೆ ಇವರು ನನಗಿಂತಲೂ ಅವಸರ...

ನಾನು ಜಿಂದಲ್ ವಿಜಯನಗರ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಅಲ್ಲಿನ ಗೆಸ್ಟ್ ಹೌಸ್ ನಲ್ಲಿರುತ್ತಿದ್ದೆ. ತದನಂತರ ನನ್ನ ರಂಗಚಟುವಟಿಕೆಗಳ ಕಾರಣದಿಂದ ಹೊಸಪೇಟೆಗೆ ನನ್ನ ವಾಸ್ತವ್ಯವನ್ನು ಸ್ಥಳಾಂತರಿಸಿದೆ. ಬೆಳಿಗ್ಗೆ ೬.೩೦ ಕ್ಕೆ ಮನೆ ಬಿಟ್ಟು ಕೆಲಸಕ್ಕೆ ಹೋದರೆ, ಬರುವುದು ಸಾಯಂಕಾಲ ೭ ಗಂಟೆಗೆ. ಬಂದವನೇ ನೇರವಾಗಿ ನಾಟಕದ ತಾಲೀಮು, ಚರ್ಚೆ ಹೀಗೆ ಹಲವು ಕಾರಣಗಳಿಂದ ನಮ್ಮ ತಂಡವನ್ನು ಸೇರಿಕೊಂಡು ಬಿಟ್ಟಿರುತ್ತಿದ್ದೆ. ಹೀಗಾಗಿ ನಾನಿರುವ ಮನೆಯ ಆಜೂ ಬಾಜೂ ಯಾರಿದ್ದಾರೆ, ಅವರೇನು ಮಾಡುತ್ತಿದ್ದಾರೆ...ಊಹುಂ..ನನಗೆ ಅದ್ಯಾವುದರ ಮಾಹಿತಿಯೇ ಇರಲಿಲ್ಲ..ನಾನೂ ಸಹ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಮನೆಯ ಎಡಕ್ಕೆ ಹಾಗೂ ಬಲಕ್ಕೆ ಯಾರಿರುತ್ತಾರೆ ಎಂಬುದೂ ಸಹ ನನಗೆ ಗೊತ್ತಿರಲಿಲ್ಲ.

ಹೀಗಿಂತಿರ್ಪ ನನ್ನ ಮಾವನವರು ಕೆಲವುದಿನಗಳ ಮಟ್ಟಿಗೆ ಹೊಸಪೇಟೆಗೆ ಬರುವುದಾಗಿ ತಿಳಿಸಿದರು. ಸರಿ ನನ್ನ ಹೆಂಡತಿ, ಅತ್ತೆ, ಮಾವ ಹಾಗೂ ನನ್ನ ಮಗ (ಆಗಿನ್ನೂ ಅದು ೫ ತಿಂಗಳ ಕೂಸು) ಹೊಸಪೇಟೆಗೆ ಬಂದೇ ಬಿಟ್ಟರು. ನಾನು ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೆನಾದ್ದರಿಂದ, ಯಾವುದೇ ರೀತಿಯ ಕೊರತೆ ಇರಲಿಲ್ಲ. ಅವರಿಗೆ ಬೇಕಾಗುವ ಎಲ್ಲ ದಿನಸಿ ಪದಾರ್ಥ, ತರಕಾರಿ, ಹಾಲು-ಹಣ್ಣಿನ ವ್ಯವಸ್ಥೆಯನ್ನು ಸರಿಯಾಗಿಯೇ ಮಾಡಿಟ್ಟಿದ್ದೆ. ನಾನು ಎಂದಿನಂತೆ ಬೆಳಿಗ್ಗೆ ೬.೩೦ ಕ್ಕೆ ಕೆಲಸಕ್ಕೆ ಹೊರಟೆ. ಅಂದು ಸಂಜೆ ಸ್ವಲ್ಪ ಬೇಗನೇ ಮನೆಗೆ ಬಂದೆ. ಮನೆಯ ಹೊರಗಡೆ ೧೦ ರಿಂದ ೧೨ ಜೊತೆ ಚಪ್ಪಲಿಗಳು..ನನ್ನ ಮನೆಯಿಂದ ಜೋರಾಗಿ ಮಾತುಗಳು ಕೇಳಿಬರುತ್ತಿವೆ. ನನಗೆ ಆಶ್ಚರ್ಯವಾಯಿತು. ನಾನು ಹೊಸಪೇಟೆಗೆ ಬಂದು ೩ ವರ್ಷಗಳ ಅವಧಿಯಲ್ಲಿ ನನ್ನ ಮನೆಗೆ ಎಂದೂ ಇಷ್ಟು ಜನ ಒಂದೇ ಬಾರಿಗೆ ಬಂದವರಲ್ಲ. ಬಂದರೂ ಅವರು ನಾನಿದ್ದಾಗಲೇ ಬರಬೇಕು, ಅದೂ ನಮ್ಮ ತಂಡದ ಕಲಾವಿದರು. ಅವರನ್ನು ಬಿಟ್ಟರೆ ನಾನು ಇಲ್ಲಿ ಯಾರಿಗೂ ಪರಿಚಯವಿರಲಿಲ್ಲ. ಸಂಶಯಗೊಳ್ಳುತ್ತಲೇ ಮನೆಯಲ್ಲಿ ಕಾಲಿರಿಸಿದೆ. ನನ್ನ ಮಾವನವರು ಆ ಮನೆಗೆ ನಾನೇ ಅಪರಿಚಿತ ಎನ್ನುವಂತೆ ಬರಮಾಡಿಕೊಂಡರು. ಅಲ್ಲಿ ಸೇರಿದ್ದ ಎಲ್ಲರಿಗೂ ನನ್ನ ಪರಿಚಯವನ್ನೂ ಮಾಡಿಸಿದ್ದಾಯ್ತು. ನಂತರ ನನಗೆ ತಿಳಿದಿದ್ದು, ಅಲ್ಲಿ ಸೇರಿದ್ದವರೆಲ್ಲ ನನ್ನ ಮಾವನವರ ಗೆಳೆಯರು. ಎಲ್ಲರಿಗೂ ಅಲ್ಪೋಪಹಾರ, ಚಹ ಎಲ್ಲವೂ ನೀಡಿದ್ದಾಯಿತು...ಎಲ್ಲರೂ ನಮ್ಮ ಮನೆಗೆ ಬನ್ನಿ, ನಮ್ಮ ಮನೆಗೆ ಬನ್ನಿ ಎಂದು ಆಹ್ವಾನ ಕೊಡುವವರೆ..ನನಗೋ ಎನೋ ಒಂದು ಮುಜುಗರ.....ಎಲ್ಲರೂ ಹೊರಟು ಹೋದ ಮೇಲೆ ಎನೊ ಒಂದು ದೊಡ್ಡ ಬಿರುಗಾಳಿ ಬೀಸಿ ಹೋದ ಅನುಭವ.

ನಂತರದ ದಿನಗಳಲ್ಲಿ ಇವರೆಲ್ಲರಿಂದ ತಪ್ಪಿಸಿ ಒಡಾಡುವುದೇ ನನಗೊಮ್ದು ಸವಾಲಾಯಿತು. ಎಲ್ಲಿ ಭೇಟಿಯಾದರೂ "ಯಾಕ ಮನೀಗೆ ಬಂದೇ ಇಲ್ಲ", "ನಿಮ್ಮ ಕೆಲಸ ಏನು", "ನೀವು ಖರೇವಂದ್ರೂ ಜಿಂದಲ್ ಕಂಪನಿಯೊಲಗ ಕೆಲಸ ಮಾಡ್ತೀರಾ" ಮುಂತಾದ ಅಸಂಬದ್ಧ ಪ್ರಶ್ನೆಗಳು ನನ್ನನ್ನು ಮುಜುಗರಕ್ಕೊಳಪಡಿಸಿದ್ದವು. ಮುಂದೆ ಕೆಲವು ದಿನಗಳ ನಂತರ ನಾನು ಜಿಂದಲ್ ಕೆಲಸ ಬಿಟ್ಟು ಬೆಂಗಳೂರಿಗೆ ಹೊರದಬೇಕಾಯ್ತು. ನಮ್ಮ ಮಾವನವರು ಅಷ್ಟೇ ಜತನದಿಂದ ನಾನು ಬೆಂಗಳೂರಿಗೆ ಹೊರಡುತ್ತಿರುವ ವಿಷಯವನ್ನು ತಮ್ಮ ಎಲ್ಲ ಗೆಳೆಯರ ಬಳಗಕ್ಕೆ ರವಾನಿಸಿಬಿಟ್ಟಿದ್ದರು. ಕೇವಲ ರಸ್ತೆ ಭೇಟಿಗೆ ಮಾತ್ರ ಸೀಮಿತವಾಗಿದ್ದ ನನ್ನ ಮತ್ತು ಅವರ ಮಾತು ಕತೆ ಮನೆಗೋ ಬಂತು. ಅವರನ್ನು ತಪ್ಪಿಸಲು ನಾನು ಮನೆಯನ್ನು ಖಾಯಂ ಆಗಿ ಬೀಗ ಹಾಕತೊಡಗಿದೆ. ಕೊನೆಗೆ ಬೆಂಗಳೂರಿಗೆ ಹೊರಡುವ ದಿನ ಯಾರಿಗೂ ಹೇಳದೇ ಕೇಳದೇ, ಯಾರಿಗೂ ಮುಖವನ್ನು ಸಹ ತೋರಿಸದೇ ಹೊಸಪೇಟೆಯನ್ನು ತೊರೆಯಬೇಕಾಯ್ತು....

ಥಾರ್ ಮರಭೂಮಿಯಲ್ಲಿ ಒಯ್ದು ನನ್ನ ಮಾವನವರನ್ನು ಬಿಟ್ಟರೂ ಸಹ ಅಲ್ಲಿಯೂ ಯಾರಾದರೂ ಪರಿಚಯದವರನ್ನು ಹೆಕ್ಕಿ ತರುವ ಜಾಯಮಾನದವರು ಇವರು......

No comments:

Post a Comment