Tuesday, May 11, 2010

ರಂಗಾಯಣದಲ್ಲಿ ಮತ್ತೊಂದು ದೊಂಬರಾಟ...

ರಂಗಾಯಣ ಮತ್ತೆ ಈಗ ಸುದ್ದಿಯಲ್ಲಿದೆ. ನಮ್ಮ ನಾಡಿನ ಖ್ಯಾತ ರಂಗ ನಿರ್ದೇಶಕರಾದ ಶ್ರೀ. ಬಸವಲಿಂಗಯ್ಯ ಅವರು ಕುವೆಂಪು ಅವರ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನು ರಂಗಕ್ಕೆ ತಂದು, ಅದನ್ನು ಬರೊಬ್ಬರಿ ಒಂಭತ್ತು ಗಂಟೆಗಳ ಕಾಲ ಪ್ರೇಕ್ಷಕರ ಎದುರು ಬಿಡಿಸಿಟ್ಟಿದ್ದರಿಂದ ರಂಗಾಯಣ ಮತ್ತೆ ಸುದ್ದಿ ಮಾಡುತ್ತಿದೆ. ಇಂತಹ ಅಪರೂಪದ ಪ್ರಯತ್ನಕ್ಕೆ ಕೈಹಾಕಿದ ಎಲ್ಲ ರಂಗಕರ್ಮಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ಆದರೆ ಅದರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನೂ ಸಹ ಎತ್ತುತ್ತಿದ್ದೇನೆ. ನನಗೆ ಗೊತ್ತು ಇವುಗಳಿಗೆ ನನಗೆ ಉತ್ತರ ದೊರೆಯುವುದಿಲ್ಲ ಎಂದು. ಆದರೂ ರಂಗಭೂಮಿಯ ಒಬ್ಬ ಕಾರ್ಯಕರ್ತನಾಗಿ ಇವುಗಳನ್ನು ಎತ್ತುವ ಅನಿವಾರ್ಯತೆ ಇದೆ ಎಂದು ಭಾವಿಸಿ, ಅವುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಈ ಹಿಂದೆ ನಾನು ನನ್ನ ಬರಹಗಳಲ್ಲಿ ಪ್ರಸ್ತಾಪಿಸಿದಂತೆ ಈ ನಾಟಕವನ್ನು ಮೈಸೂರಿಗೆ ಸೀಮಿತಗೊಳಿಸಿ, ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತ ಎಂಬುದನ್ನು ಸಾಬೀತು ಪಡಿಸಿದಂತಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿರುವ ಸಾಹಿತಿಗಳಿಗೇನು ಬರ ಬಿದ್ದಿತ್ತೇ? ಇಂತಹ ಪ್ರಯತ್ನ, ಪ್ರಯೋಗಗಳನ್ನು ಉತ್ತರ ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ನಡೆಸಿದ್ದರೆ ಅಲ್ಲಿನ ರಂಗಚಟುವಟಿಕೆಗಳಿಗೆ ಜೀವ ತುಂಬಿದಂತಾಗುತ್ತಿತ್ತಲ್ಲವೇ? ಎಲ್ಲ ರೀತಿಯಿಂದಲೂ ನಿರ್ಲಕ್ಷಕ್ಕೊಳಗಾಗಿರುವ ಉತ್ತರ ಕರ್ನಾಟಕ, ಸಾಂಸ್ಕೃತಿಕವಾಗಿಯೂ ನಿರ್ಲಕ್ಷಕ್ಕೊಳಗಾಗುತ್ತಿರುವುದಕ್ಕೆ ಇದೊಂದು ಜೀವಂತ ಸಾಕ್ಷಿ.

ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಇಂತಹ ಅದ್ದೂರಿ ನಾಟಕದ ತಯಾರಿ ಎಷ್ಟರ ಮಟ್ಟಿಗೆ ಸೂಕ್ತ? ಯಾವ ಉದ್ದೇಶಕ್ಕಾಗಿ ಈ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು? ಹಿಂದೆ ಪತ್ರಿಕೆಯಲ್ಲಿ ಸಂದರ್ಶನವೊಂದರಲ್ಲಿ ಬಸವಲಿಂಗಯ್ಯನವರು ಉಲ್ಲೇಖಿಸಿದಂತೆ ಈ ನಾಟಕ ನೋಡಿದ ಪ್ರತಿಯೊಬ್ಬರು ಮತ್ತೆ ಮತ್ತೆ ಕಾದಂಬರಿಯನ್ನು ಓದುವಂತೆ ಮಾಡುವುದೆ ಇದರ ಹಿಂದಿನ ಉದ್ದೇಶ. ಇದು ನಿಜವೇ ಆಗಿದ್ದರೆ ಅದು ಒಬ್ಬ ನಿಜವಾದ ರಂಗಕರ್ಮಿಯ ಕಾಳಜಿ ಅಲ್ಲವೇ ಅಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವುದು ವ್ಯರ್ಥ. ಇದರಲ್ಲಿರುವ ಸಾಮಾಜಿಕ ಕಳಕಳಿಯಾದರೂ ಏನು?

ಉತ್ತರ ಕರ್ನಾಟಕದ ಜನರ ಒತ್ತಾಸೆಯಂತೆ ಧಾರವಾಡದಲ್ಲಿ ರಂಗಾಯಣದ ಘಟಕವನ್ನು ತೆರೆಯಲಾಯಿತು. ಆದರೆ ಅದು ಏನನ್ನೂ ಸಾಧಿಸಲಿಲ್ಲ. ಅಲ್ಲಿಗೆ ಬಂದ ನಿರ್ದೇಶಕರೆಲ್ಲರೂ ಕೇವಲ ರಾಜಕೀಯ ಮಾಡುತ್ತ ಕಾಲಹರಣ ಮಾಡಿದರೇ ಹೊರತು, ಒಂದೇ ಒಂದು ಮಹಾತ್ವಾಕಾಂಕ್ಷೆಯ ಪ್ರಯೋಗವಾಗಲೀ ನಡೆಯಲಿಲ್ಲ. ಬದಲಾಗಿ ಧಾರವಾಡದಲ್ಲಿ ರಂಗಭೂಮಿಯಲ್ಲಿ ಆಸಕ್ತಿಯಿರುವವರು ಯಾರೂ ಇಲ್ಲ ಎಂದು ಹಾರಿಕೆಯ, ಧಿಮಾಕಿನ ಮಾತುಗಳನ್ನಾಡುತ್ತ ಮತ್ತೆ ಮೈಸೂರಿನ ಕಡೆಗೆ ಹೊರಟುಹೊದರು.

ಬಸವಲಿಂಗಯ್ಯ ನಮ್ಮ ನಾಡು ಕಂಡ ಒಬ್ಬ ಉತ್ತಮ ರಂಗಕರ್ಮಿ, ಚಿಂತಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಇಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಲೆಗಳಲ್ಲಿ ಮದುಮಗಳು ನಾಟಕ ಮಾಡುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ವಿಭಿನ್ನವಾದ ರಂಗಚಳುವಳಿಯನ್ನು ರೂಪಿಸಿದ್ದರೆ ಅದಕ್ಕೊಂದು ಹೊಸ ಅರ್ಥ ಬರುತ್ತಿತ್ತು ಮತ್ತು ಕನ್ನಡ ರಂಗಭೂಮಿಗೆ ಒಮ್ದು ಹೊಸ ದಿಕ್ಕನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತಿತ್ತು. ನಮ್ಮ ರಂಗಭೂಮಿ ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ನಿಜ ಆದರೆ ಆರ್ಥಿಕವಾಗಿ ನಾವು ತುಂಬಾ ಬಡವರು. ಸಾರ್ವಜನಿಕರ ಹಣ ಈ ರೀತಿಯಾಗಿ ಅನವಶ್ಯಕವಾಗಿ ಪೋಲಾಗಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಡುತ್ತದೆ.

ಅದೇ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಿ, ಅಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ವಿವಿಧ ಕೆಲಸಗಳನ್ನು ಮಾಡಿದ್ದರೆ, ಸ್ಥಳೀಯ ತಂಡಗಳಿಗೆ ಹೆಚ್ಚಿನ ಸ್ಪೂರ್ತಿ ನೀಡಿದಂತಾಗುತ್ತಿತ್ತು, ಮತ್ತು ರಂಗಭೂಮಿಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗುತ್ತಿತ್ತು. ಸರಕಾರ ಏಕೆ ಈ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ? ಸರಕಾರ ಕೇವಲ ರಂಗಾಯಣಕ್ಕೆ ಮಾತ್ರ ಹಣ ನೀಡುತ್ತದೆ ಎಂಬ ನೀತಿಯೇನಾದರೂ ಇದೆಯೇ? ಅಥವಾ ಇದರ ಹಿಂದೆ ಬೇರೆ ಬೇರೆ ಒತ್ತಾಸೆಗಳಿರುವ ಪ್ರಬಲ ಲಾಬಿಯೊಂದು ಕಾರ್ಯನಿರ್ವಹಿಸುತ್ತಿದೆಯೇ? ಸಂಬಂಧಪಟ್ಟವರು ಉತ್ತರಿಸಿಯಾರೇ??

2 comments:

  1. ಸೂಕ್ತವಾದ ಪ್ರಶ್ನೆ ಎತ್ತಿದ್ದಿರಾ.... ನನ್ನ ಸಹಮತವಿದೆ ತಮ್ಮ ಅಭಿಪ್ರಾಯಕ್ಕೆ. ಉತ್ತರ ಕರ್ನಾಟಕ ರ೦ಗ ಚಟುವಟಿಕೆಗೆ ಪರಿಕಲ್ಪ ನೀಡೋ ಕಾರ್ಯ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ೦ತೂ ನಿಜ!

    ReplyDelete
  2. rangayana hesarige matra dharawad ghataka. Aadre allella mysoremaya.bahuroopi, rangotsavagalanta karyakrama namga byada. nimma lekhana avra mele prabhava beeri olle parinama aadra cholo. Illandra dharwad ghataka band mado dina bhala doorilla mattu avali nagarada rangasaktara nirashe kattitta butti. hangagadirali annode nanna ashaya.

    ReplyDelete