Wednesday, December 30, 2009

ಒಂದೆಡೆ ಯಜಮಾನನ ಅಗಲಿಕೆಯ ನೋವು...ಇನ್ನೊಂದೆಡೆ ಹೇಸಿಗೆ ತರಿಸುವಷ್ಟು ರಾಜಕೀಯ...











ಮನೆಯ ಯಜಮಾನನ ನಿರ್ಗಮನವಾಗಿದೆ...ಅಲ್ಲಿ ಈಗ ಕೇವಲ ನೀರವ ಮೌನ ಮಾತ್ರ....ಬಿಕ್ಕಳಿಕೆಗಳಿಗೂ ಹೊಸ ಅರ್ಥಗಳು ಹುಟ್ಟಲಾರಂಭಿಸಿವೆ....ಹುಟ್ಟು ಸಾವುಗಳನ್ನು ನಾನು ಮೊದಲಿನಿಂದಲೂ ಸಮಾನವಾಗಿ ಸ್ವೀಕರಿಸುತ್ತ ಬಂದವ...ನನ್ನ ಪ್ರಾಣ ಸ್ನೇಹಿತನ ತಂದೆಯವರು ನನ್ನ ತೊಡೆಯ ಮೇಲೆ ತಮ್ಮ ಪ್ರಾಣವನ್ನು ಬಿಟ್ಟಾಗ ಸಾವನ್ನು ಕಣ್ಣಾರೆ ಕಂಡವ ನಾನು..ಆಗ ನನಗೆ ೨೩ ವರ್ಷ ವಯಸ್ಸು....ಆಗಲೂ ಸಹ ನನಗೆ ಕಣ್ಣಿನಿಂದ ಒಂದು ಹನಿ ನೀರು ಹೊರಬರಲಿಲ್ಲ...ಬದಲಾಗಿ ಅವರ ನಿರ್ಜೀವ ದೇಹವನ್ನು ನನ್ನ ತೊಡೆಯಿಂದ ಕೆಳಗೆ ಇಳಿಸಿದವನೆ ಹೊರಗೆ ಅವರ ಅಂತಿಮ ಸಂಸ್ಕಾರದ ತಯಾರಿಗಳನ್ನು ಮಾಡುವತ್ತ ನಡೆದೆ....

ಆದರೆ ಯಾಕೋ ಗೊತ್ತಿಲ್ಲ..ಡಾ. ವಿಷ್ಣುವರ್ಧನ್ ಅವರ ಸಾವು ನನ್ನಲ್ಲಿ ಒಂದು ತರಹದ ಮೂಕವೇದನೆಯನ್ನು ಸೃಷ್ಟಿಸಿದೆ....ಟಿವಿ ಚಾನೆಲ್‍ಗಳಲ್ಲಿ ಅವರ ನಿಧನದ ಸುದ್ದಿಯನ್ನು ನೋಡುತ್ತಿದ್ದಂತೆಯೆ ಅದೆಲ್ಲಿತ್ತೋ ಗೊತ್ತಿಲ್ಲ ದುಖಃ ತನ್ನಷ್ಟಕ್ಕೆ ತಾನೇ ಉಕ್ಕಿ ಬಂತು....ಖಂಡಿತವಾಗಿಯೂ ವಿಷ್ಣು ಒಬ್ಬ ಮಾನವತಾವಾದಿ..ಎಂದಿಗೂ ಅವರು ತಾವಾಗಿಯೇ ಗೊಂದಲಗಳಲ್ಲಿ ಬೀಳಲಿಲ್ಲ...ರಾಜಕೀಯದಿಂದ ನಾನೊಂದು ತೀರ ನೀನೊಂದು ತೀರ ಎಂಬಂತೆ ಬದುಕಿದರು....ಅದೊಂದು ವಿಶಿಷ್ಟ ವ್ಯಕ್ತಿತ್ವ....ಇಂಟರೆಸ್ಟಿಂಗ್ ಕ್ಯಾರೆಕ್ಟರ್...ಮುಂದೆ ಅನಿರುದ್ಧ ಅವರ ಅಳಿಯನಾದ...ಅವನು ಧಾರವಾಡದಲ್ಲಿ ನಮ್ಮ ಗರಡಿಯಲ್ಲಿ ಪಳಗಿದವ..ನಮ್ಮೊಂದಿಗೆ ನಾಟಕ ಮಾಡಿದ ಹುಡುಗ....ರಂಗಭೂಮಿಯ ಬಗ್ಗೆ ಅವನಿಗಿರುವ ನಿಷ್ಠೆ, ಒಲವನ್ನು ಯಾರೇ ಆಗಲಿ ಮೆಚ್ಚಲೇ ಬೇಕು...ಅವನ ತಂಗಿ ಅರುಂಧತಿ ಸಹ ಅಷ್ಟೇ...

ಇಡೀ ರಾಜ್ಯ ವಿಷ್ಣು ಅವರ ಸಾವಿನ ಶೋಕಾಚರಣೆಯಲ್ಲಿ ಮುಳುಗಿತ್ತು..ರಾಜ್ಯ ಸರ್ಕಾರ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಅಗಲಿದ ಜೀವಕ್ಕೆ ಶಾಂತಿ ಕೋರಿತು....ಆದರೆ...ನಮ್ಮ ನೀಚ ನಾಲಾಯಕ್ ರಾಜಕಾರಣಿಗಳು ಮಾತ್ರ ಇದೇನೂ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸಿದ್ದು, ನಮ್ಮ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿತು. ಒಂದು ಕಡೆ ವಿಷ್ಣುವರ್ಧನ್ ಅವರ ಸಾವಿಗೆ ಸಂತಾಪ ಸೂಚಿಸುವ ಸಲುವಾಗಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ, ವಿಧಾನ ಸಭೆಯಲ್ಲಿ ಇದನ್ನಾವುದನ್ನು ಲೆಕ್ಕಿಸದೇ ವಿಧಾನ ಸಭಾಧ್ಯಕ್ಷರ ಆಯ್ಕೆಯ ಪ್ರಕ್ರೀಯೆಯಲ್ಲಿ ತೊಡಗಿಕೊಂಡಿತು. ಇದು ನಮ್ಮ ನಾಡಿನ ಹಿರಿಯ ಕಲಾವಿದರಿಗೆ ಕೊಡುವ ಗೌರವವೇ? ಇಷ್ಟಕ್ಕೆ ಸುಮ್ಮನಾಗದ ನಮ್ಮ ಪ್ರತಿಪಕ್ಷದ ನಾಯಕರುಗಳು ಅಲ್ಲಿ ವರ್ತಿಸಿದ ರೀತಿ ಇನ್ನೂ ಘೋರ....

ಮುಖ್ಯ ಮಂತ್ರಿಗಳೆ ನೀವು ನಿಮ್ಮ ಖುರ್ಚಿ ಉಳಿಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ಗಳಿಂದ ಜನಸಾಮಾನ್ಯರಾದ ನಮಗೆ ವಾಕರಿಕೆ ಬರುತ್ತಿದೆ....ನಿಮಗೆ ಶೇಮ್! ಶೇಮ್!! ನಾಚಿಕೆಯಾಗಬೇಕು ನಿಮ್ಮಂತಹ ಹಿರಿಯ ನಾಯಕರಿಗೆ...ವಿಧಾನ ಸಭಾಧ್ಯಕ್ಷರ ಆಯ್ಕೆ/ಚುನಾವಣೆ ಒಂದು ದಿನ ಮುಂದೂಡಿದ್ದರೆ ಇಡೀ ವಿಶ್ವ ಪ್ರಳಯ ವಾಗುತ್ತಿತ್ತೇ? ಅಥವಾ ನಿಮ್ಮ ಬೊಕ್ಕಸಕ್ಕೆ ಬಂದು ಬೀಳುವ ಮಾಮೂಲಿ ನಿಂತು ಹೋಗುತ್ತಿತ್ತೇ? ಥೂ ನಿಮ್ಮ....ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತೀರಿ..ಮತ್ತೆ ಜನರ ಮುಂದೆ ಕಣ್ಣೀರು ಹಾಕುವುದು....ಇಂತಹ ತಪುಗಳನ್ನು ಇನ್ನು ಮುಂದೆ ಮಾಡುವುದಿಲ್ಲ ಎಂಬ ಸಾರ್ವಜನಿಕ ಹೇಳಿಕೆ ನೀಡುವುದು...ಏನಾಗಿದೆ ನಿಮ್ಮ ಬುದ್ಧಿಗೆ?

ಒಂದು ಕಡೆ ರಾಜಕಾರಣಿಗಳ ಹಾರಾಟ ನಡೆಯುತ್ತಿದ್ದರೆ, ಕನ್ನಡದ ಹೆಸರಿನಲ್ಲಿ ಗೂಂಡಾ ಪ್ರವೃತ್ತಿಯಲ್ಲಿ ತೊಡಗಿಕೊಂಡವರ ಕೆಲವರ ಪುಂಡತನ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಕಾರು/ಜೀಪುಗಳಲ್ಲಿ ಕನ್ನಡದ ಧ್ವಜವನ್ನು ಹಿಡಿದುಕೊಂಡು ಅಂಗಡಿ ಮುಗ್ಗಟ್ಟುಗಳನ್ನು, ಕಚೇರಿಗಳನ್ನು ಮುಚ್ಚಿಸುವ ಕಾಯಕದಲ್ಲಿ ತೊಡಗಿದ್ದರು. ಯಾರಾದರೂ ಸ್ವಲ್ಪ ವಿರೋಧ ವ್ಯಕ್ತಪಡಿಸಿದಲ್ಲಿ ಅವರ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸ ಗೊಳಿಸಿ, ಅವರನ್ನು ಸಹ ಮನ ಬಂದಂತೆ ಥಳಿಸಿ ಅಲ್ಲಿಂದ ಕಾಲ್ಕಿತ್ತುತ್ತಿದ್ದರು. ಯಾವ ಪುರುಷಾರ್ಥಕ್ಕಾಗಿ ಈ ಎಲ್ಲ ಸಾಹಸ? ಹೀಗೆ ಒತ್ತಾಯ ಪೂರ್ವಕವಾಗಿ "ಬಂದ್" ಮಾಡಿಸಿ ಇವರುಗಳು ಏನನ್ನು ಸಾಧಿಸ ಹೊರಟಿದ್ದಾರೆ? ಬದಲಿಗೆ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಇವರು ತಮ್ಮ ಎಲ್ಲ ಶಕ್ತಿಯನ್ನು ಪ್ರದರ್ಶಿಸಿದ್ದರೆ ಅದು ನಾಡಿನ ಉಳಿದೆಲ್ಲರಿಗೆ ಮಾದರಿಯಾಗುತ್ತಿತ್ತು.

ಯಾಕೋ ಗೊತ್ತಿಲ್ಲ....ನಮ್ಮ ನಾಡಿಗೆ ಒಳ್ಳೆಯ ಗತಿ ಬರುವ ಲಕ್ಷಣಗಳಂತೂ ಸಧ್ಯಕ್ಕೆ ತೋರುತ್ತಿಲ್ಲ....

Monday, December 28, 2009

ಮಣಿಯ ದೈತ್ಯ ಬರವಣಿಗೆಗೆ ಮತ್ತು ಅವನ ಹುಚ್ಚು ಪ್ರೀತಿಗೆ....ಸಾವಿರ ಸಾವಿರ ಸಲಾಮ್!!!


ಅದೇಕೋ ಗೊತ್ತಿಲ್ಲ....ನಾನು ಗೂಗಲ್ ಚಾಟ್‍ನಲ್ಲಿ ಬಂದಾಗ ಮಣಿ ಬಂದು ಹೆಲ್ಲೋ ಸಾರ್ ಎಂದು ಮಾತನಾಡಲು ಶುರುವಿಟ್ಟುಕೊಂಡರೆ ನನಗಂತೂ ಇಲ್ಲ ಎನ್ನಲು ಸಾಧ್ಯವೇ ಇಲ್ಲ...ಬೇರೆ ಯಾವುದೇ ಟೈಮ್‍ಪಾಸ್ ಗೆಳೆಯರಾದರೆ ಅವರನ್ನು ನಾನು ಸಾಗಹಾಕಬಹುದು..ಆದರೆ ಮಣಿಯ ದೈತ್ಯ ಬರವಣಿಗೆ ಹಾಗೂ ಆತನ ಹುಚ್ಚು ಪ್ರೀತಿಗೆ ಕೆಲವೊಂದು ಬಾರಿ ನನ್ನಲ್ಲಿ ಮಾತೇ ಹೊರಡುವುದಿಲ್ಲ....

ನನ್ನ ಬಹುತೇಕ ಗೆಳೆಯರ ಬಳಗಕ್ಕೆ ಮಣಿಯ ಪರಿಚಯವಿದೆ. ನನಗೆ ಈತನ ಬಗ್ಗೆ ಹೆಚ್ಚು ಹೆಚ್ಚು ಸುದ್ದಿಗಳು ಗೊತ್ತಾಗಿದ್ದು ಮತ್ತು ಇವನ ಒಡನಾಟಕ್ಕೆ ಕಾರಣವಾದದ್ದು ಒಂದು ರೀತಿಯಲ್ಲಿ ಜಿ.ಎಚ್. ಯಾರಿಗೋ ತಮಾಷೆ ಮಾಡಲು ಹೋಗಿ ಒಂದಿಲ್ಲೊಂದು ಅವಘಡಗಳಲ್ಲಿ ಬೀಳುವುದು..ಮತ್ತು ತನ್ನ ಅವಘಡಗಳನ್ನು ತಾನೇ ಬೇರೆಯವರ ಮುಂದೆ ಹೇಳಿಕೊಂಡು ಗೇಲಿಗೊಳಗಾವುವುದು...ಇವೆಲ್ಲವುಗಳನ್ನು ಜಿ.ಎಚ್ ನಮ್ಮ ಮುಂದೆ ರಸವತ್ತಾಗಿ ವರ್ಣನೆ ಮಾಡುತ್ತಿದ್ದರು. ಆ ಹಟಕ್ಕಾಗಿಯಾದರೂ ನಾನು ಮಣಿಯನ್ನು ಪರಿಚಯ ಮಾಡಿಕೊಳ್ಳಬೇಕೆಂದು ಕಾಯುತ್ತಿದ್ದೆ ಮತ್ತು ಮುಂದೆ ಅಂತಹ ಒಂದು ಸಂದರ್ಭ ಒದಗಿ ಬಂದಾಗ ಮಣಿಯನ್ನು ಪರಿಚಯ ಮಾಡಿಕೊಂಡೆ...ಜಿ.ಎಚ್ ಅವರ ಸಾಂಗತ್ಯದಿಂದ ನಾವು ಬಹಳ ಬೇಗ ತೀರ ಹತ್ತಿರದವರಾಗಿ ಬಿಟ್ಟೆವು....ಸಾಹಿತ್ಯದ ಕುರಿತು, ಬರವಣಿಗೆಯ ಕುರಿತು, ನಮ್ಮ ಗೆಳೆಯರ ಕುರಿತು ಹೀಗೆ ನಮ್ಮ ಚರ್ಚೆಗಳು ಆರಂಭವಾದವು...ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹ ಚರ್ಚಿಸುವಷ್ಟು ನಾವು ಹತ್ತಿರದವರಾದೆವು...ಅದೊಂದು ತರಹದ ವಿಚಿತ್ರ ಹುಚ್ಚು ಪ್ರೀತಿಯೆಂದೆ ಹೇಳಬೇಕು...ರಾತ್ರಿ ೧೨ ಆಗಿದ್ದರೂ ಯಾವುದೇ ಆತಂಕವಿಲ್ಲದೇ ನನ್ನ ಮೊಬೈಲಿಗೆ ಸಂದೇಶ ರವಾನಿಸಿ ನನ್ನನ್ನು ಡಿಸ್ಟರ್ಬ್ ಮಾಡಬಲ್ಲ ಏಕೈಕ ವ್ಯಕ್ತಿ ಈ ಮಣಿ...ಅವನ ಬರವಣಿಗೆಯಂತೂ....ಅಬ್ಬ...ಈಗ ಅವನು ಬರೆದ "ಅಮ್ಮ ಹೇಳಿದ...." ಪುಸ್ತಕ ಪುಸ್ತಕದ ಅಂಗಡಿಗಳಲ್ಲಿ ಒಳ್ಳೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿಗಳಂತೆ ಖರ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ...ಹಿಂದೊಮ್ಮೆ ಮಣಿನೇ ಹೇಳಿದ್ದ..ಪತ್ರಕರ್ತರ ಜೀವನದಲ್ಲಿಯೂ ಸಹ ಹೀಗೆ ಉತ್ತಮ ಮೊತ್ತದ ಹಣವನ್ನು ನೋಡಬಹುದೆಂದು ನಾನು ನನ್ನ ಈ ಪುಸ್ತಕ ಮಾರಾಟವಾಗುತ್ತಿರುವ ಸಂದರ್ಭದಲ್ಲಿ ಕಾಣುತ್ತಿದ್ದೇನೆ ಸಾರ್ ಎಂದು...

ಅವನ ಹಾಡು ಹುಟ್ಟಿದ ಸಮಯ ಅಂಕಣವಂತೂ ತುಂಬಾ ಜನಪ್ರೀಯತೆಯನ್ನು ಗಳಿಸಿದೆ. ಆ ಅಂಕಣದಲ್ಲಿ ಅವನು ಇಟಗಿ ಈರಣ್ಣ ಅವರು ಬರೆದ "ಚಂದಕಿಂತ ಚಂದ ನೀನೆ ಸುಂದರ..." ಹಾಡಿನ ಕುರಿತು ಬರೆಯಲು ತನ್ನ ಆಸೆ ವ್ಯಕ್ತ ಪಡಿಸಿ, ಆ ಹಾಡು ಹುಟ್ಟಿದ ಸಮಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಡಲು ನನಗೆ ಬರೊಬ್ಬರಿ ಮೂರು ತಿಂಗಳುಗಳ ಕಾಲು ದುಂಬಾಲು ಬಿದ್ದ. ಆಗ ನನ್ನ ಪರಿಸ್ಥಿತಿ ಹೇಗಾಗಿತ್ತೆಂದರೆ ಅಕ್ಷರ ಶಹ: ನಾನು ಮಣಿಯನ್ನು ತಪ್ಪಿಸಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.......ಒಂದು ದಿನ ಇಟಗಿ ಈರಣ್ಣ ಸಿಕ್ಕರು, ಅವರಿಂದ ಮಾಹಿತಿ ಕಲೆಹಾಕಿ ಅದನ್ನು ಮಣಿಗೆ ತಲುಪಿಸಿದಾಗ ಅವನಿಗಾದ ಆನಂದಕ್ಕೆ ಪಾರವೇ ಇರಲಿಲ್ಲ..ಮಾರನೇ ದಿನವೇ ಅದು ಅವನ ಅಂಕಣದಲ್ಲಿ ಪ್ರತ್ಯಕ್ಷವಾಯಿತು...ಆ ವಿಷಯವನ್ನು ಅವನಿಗೆ ನಾನೇ ತಂದು ಕೊಟ್ಟಿದ್ದೆಂಬ ಶರಾ ಬೇರೆ ಇತ್ತು...ನನಗೆ ಹಾಗೂ ಇಟಗಿ ಈರಣ್ಣ ಅವರಿಗೆ ಬಿಡುವಿಲ್ಲದಷ್ಟು ಫೋನ್ ಕರೆಗಳು...

ಅಂದು ಇಟಗಿ ಈರಣ್ಣ ನನಗೆ ನೇರವಾಗಿ ಫೋನಾಯಿಸಿ.."ಧನಂಜಯ ಅವರ ನಿಮ್ಮ ಲೇಖನ ಎಷ್ಟು ಚೆಂದಾಗಿ ಬಂದೈತಂದರ..ನನ್ನ ಇಪ್ಪತ್ತು ವರ್ಷದ ಹಿಂದಿನ ಗೆಳೆಯರು, ಗೆಳತ್ಯಾರು ಎಲ್ಲರು ನನ್ನನ್ನ ನೆನಪಿಸಿಕೊಂಡು ಫೋನ್ ಮಾಡಾಕತ್ಯಾರ..." ಇದನ್ನು ಮಣಿಗೆ ತಿಳಿಸಿದಾಗ ತಕ್ಷಣಕ್ಕೆ "ಸಾರ್ ನಾನು ಪೆನ್ನು ಹಿಡಿದದ್ದು ಸಾರ್ಥಕ ಆಯ್ತು ಇವತ್ತಿಗೆ" ಎಂದು ಬಿಟ್ಟ...ತುಂಬ ಭಾವುಕ ಜೀವಿ ಅದು...

ಅಂದ ಹಾಗೆ ಅವನ ಹಾಡು ಹುಟ್ಟಿದ ಸಮಯ ಪುಸ್ತಕದ ಬಿಡುಗಡೆ ಜನೆವರಿ ಹತ್ತರಂದು ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದಾನೆ ಮಣಿ..ಪುಸ್ತಕ ಬಿಡುಗಡೆಯ ನೆಪದಲ್ಲಿ ಹಳೆಯ ಹಾಡುಗಳನ್ನು ಕೇಳೋಣ ಬನ್ನಿ ಎಂದು ಎಲ್ಲರನ್ನು ದುಂಬಾಲು ಬೀಳುತ್ತಿದ್ದಾನೆ...ನೀವು ಸಹ...ದಯವಿಟ್ಟು ಅಂದು ಬಿಡುವು ಮಾಡಿಕೊಳ್ಳಿ...ಹಳೆಯ ಹಾಡುಗಳನ್ನು ಕೇಳೋಣ...ಬನ್ನಿ ಪ್ಲೀಸ್....

Monday, December 14, 2009

ಪಾಪ ಮುಗ್ಧರು..ಬರೆಯಲಿ ಬಿಡಿ.....!!!



ಇತ್ತೀಚೆಗೆ ರಂಗಾಯಣ ಕುರಿತಾಗಿ ಸರಣಿ ಲೇಖನಗಳು ಬರಲಾರಂಭಿಸಿದ ಮೇಲೆ ಮೈಸೂರಿನಲ್ಲಿ ರಂಗ ಕಲಾವಿದರು, ಸಾಹಿತಿಗಳು, ರಂಗಾಯಣದ ಫಲಾನುಭವಿಗಳಲ್ಲಿ ರಂಗಾಯಣದ ಕಲಾವಿದರ ಬಗ್ಗೆ ಅನುಕಂಪದ ಅಲೆಗಳು ಏಳಲಾರಂಭಿಸಿವೆ.




"ರಂಗಾಯಣದ ಕಲಾವಿದರ ಬಗ್ಗೆ ಈ ರೀತಿಯಾಗಿ ಬರೆಯಬಾರದಾಗಿತ್ತು. ಅವರಿಗೆ ಸರಕಾರಿ ಗುಮಾಸ್ತರಿಗೆ ಸಿಗುವ ಸಂಬಳಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತಿದೆ. ಅವರ ಬದುಕು ತುಂಬಾ ಕಷ್ಟದಲ್ಲಿದೆ"...ಹೀಗೆ ಹತ್ತು ಹಲವು ಮಾತುಗಳು ಮೈಸೂರಿನಿಂದ ಕೇಳಿ ಬರುತ್ತಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ರಂಗಾಯಣದ ರಗಲೆಗಳ ಕುರಿತು ಸರಣಿಯಾಗಿ ಲೇಖನಗಳು ಬಂದ ನಂತರ, ಇದನ್ನು ಖಂಡಿಸಲೆಂದೇ ಮೈಸೂರಿನಲ್ಲಿ ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಅನೇಕ ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಆದರೆ ದುರಂತವೆಂದರೆ ಇದೇ ರಂಗಕರ್ಮಿಗಳು ಅಲ್ಲಿನ ಸಮಸ್ಯೆಗಳ ಕುರಿತು ಚರ್ಚೆನಡೆಸಲು ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನು ಇದುವರೆಗೆ ಮಾಡದೇ ಇರುವುದು.



ರಂಗಾಯಣದ ಕಲಾವಿದರೊಬ್ಬರು ಇತ್ತೆಚೆಗೆ ಬೆಂಗಳೂರಿಗೆ ಬಂದು, ನನ್ನ ಕೆಲ ರಂಗ ಮಿತ್ರರೊಂದಿಗೆ ಚರ್ಚೆ ನಡೆಸಿದರೆಂಬ ಸುದ್ದಿಯೂ ಬಂತು. ಅವರ ಪ್ರಕಾರ ಪತ್ರಿಕೆಗಳಲ್ಲಿ ರಂಗಾಯಣದ ಕುರಿತು (ವಿರುದ್ಧವಾಗಿ) ಬರೆಯುತ್ತಿರುವವರೆಲ್ಲ ಪಾಪ ಮುಗ್ಧರು, ಅವರಿಗೆ ರಂಗಾಯಣ ಹೇಗೆ ಕಾರ್ಯನಿರ್ವಹಿಸುತ್ತದೆ ಎಬ ಅರಿವಿಲ್ಲ. ಆ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲವಂತೆ. ಹಾಗಿದ್ದರೆ ಮೈಸೂರಿನಲ್ಲಿ ಕೆಲ ರಂಗಕರ್ಮಿಗಳು ನಡೆಸಿದ ಸಂವಾದ ಕಾರ್ಯಕ್ರಮ ಏತಕ್ಕೆ? ಇದೊಂದು ವ್ಯವಸ್ಥಿತವಾದ ಸಾಂಸ್ಕೃತಿಕ ಗುತ್ತಿಗೆದಾರರ ವ್ಯವಸ್ಥಿತ ಹುನ್ನಾರ. ಸ್ವಾಮಿ ರಂಗಚಟುವಟಿಕೆಗಳು ಕೇವಲ ರಂಗಾಯಣದಲ್ಲಿ ಮಾತ್ರ ನಡೆಯುತ್ತಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಹ ನಡೆಯುತ್ತಿವೆ. ಅವನ್ನು ನಿಮ್ಮ ತೆರೆದು ಕಣ್ಣುಗಳಿಂದ ನೋಡುವ ಮನಸ್ಸಿರಬೇಕಷ್ಟೇ.




ಒಂದು ಕಡೆಯಿಂದ ಪ್ರಗತಿಪರರು, ಜನಪರ ಹೋರಾಟಗಾರರು, ಅನ್ಯಾಯದ ವಿರುದ್ಧ ದನಿ ಎತ್ತುವವರು ಎಂದೆಲ್ಲಾ ಬೊಗಳೆ ಬಿಡುವ ದಾಸಯ್ಯಗಳೆ, ಮಠಗಳ ಬಾಗಿಲು ಬಡಿದು, ಸ್ವಾಮಿಗಳ ಕಾಲು ಹಿಡಿದು, ತಮ್ಮನ್ನು ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ನೇಮಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ದುಂಬಾಲು ಬೀಳುತ್ತಾರೆ. ಇನೊಂದೆಡೆ, ಶ್ರೀ. ಲಿಂಗದೇವರು ಹಳೆಮನೆಯವರನ್ನು ನಿರ್ದೇಶಕ ಸ್ಥಾನಕ್ಕೆ ನೇಮಿಸಿದ ನಂತರ ಎದ್ದ ಅನೇಕ ವಿವಾದಗಳಿಗೆ ಪತಿಕ್ರೀಯೆಯಾಗಿ ಬೆಂಗಳೂರಿನ ಕೆಲವು ಸಾಂಸ್ಕೃತಿಕ ಗುತ್ತಿಗೆದಾರರು ಮತ್ತು ಅವರ ಬಾಲಬಡುಕರು ಸರಕಾರದಿಂದ ಆದೇಶ ಬರುವವರೆಗೆ ಹಳೆಮನೆಯವರು ಪತ್ರಿಕೆಗಳಿಗೆ ಹೇಳಿಕೆ ನೀಡಬಾರದಿತ್ತು. ಅವರ್ಉ ತುಬಾ ಅವಸರ ಮಾಡಿದರು ಎಂದೆಲ್ಲ ಮಾತನಾಡಿಕೊಂಡು ತಿರುಗುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ ಪತ್ರಿಕೆಯವರು ಏನು ಬೇಕದರೂ ಬರೆದುಕೊಳ್ಳಿ, ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂಬ ದಾರ್ಷ್ಟ್ಯತನದ ಪರಮಾವಧಿ.



ಇನ್ನು ಇದಕ್ಕೆ ಸರಕಾರದಿಂದ ಪರಿಹಾರ ಬಯಸ ಹೋದರೆ ಅದೊಂದು ಮೂರ್ಖತನದ ಪರಮಾವಧಿಯಾದೀತು. ಗಣಿ, ಧಣಿ, ರೆಸಾರ್ಟ್ ರಾಜಕೀಯಗಳಲ್ಲಿ ಮುಳುಗಿಹೋಗಿರುವ ನಮ್ಮ ಮುಖ್ಯ ಮಂತ್ರಿ ಹಾಗೂ ಅವರ ಸಹೋದ್ಯೋಗಿಗಳಿಗೆ ಇದು ಅರ್ಥವಾಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ತುಘಲಕ್ ದರ್ಬಾರು ನಡೆಯುತ್ತಿದೆ. ಮತ್ತು ನಾವೆಲ್ಲ ನಮ್ಮು ಮುಂದೆ ನಡೆಯುತ್ತಿರುವ ಸಾಂಸ್ಕೃತಿಕ ಹಗಲು ದರೋಡೆಗೆ ಮೂಕ ಸಾಕ್ಷಿಗಳಾಗುತ್ತಿದೇವೆ.

Thursday, December 10, 2009

ಸಮಸ್ಯೆಗಳ ಬಗ್ಗೆ ಕಾಳಜಿ ತೋರದಿರುವವರಿಗೆ ಅಧಿಕಾರ ಬೇಕಾಗಿದೆ....

ರಂಗಾಯಣದ ಕುರಿತು ಪ್ರಸ್ತುತ ಸ್ಥಿತಿಗತಿ ಹಾಗೂ ಅದಕ್ಕೆ ನಿರ್ದೇಶಕರ ನೇಮಕ ಕುರಿತಾದ ಆಯ್ಕೆ, ನಿರ್ಧಾರ ಮುಂತಾದವುಗಳು ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇದು ನಿಜಕ್ಕೂ ಸ್ವಾಗತಾರ್ಹ. ಇದು ಒಂದಿಲ್ಲ ಒಂದು ದಿನ ಹೀಗೆ ಬಹಿರಂಗವಾಗಿ ಚರ್ಚೆಯಾಗಲೇ ಬೇಕಿತ್ತು. ಏಕೆಂದರೆ ನಾನು ಈ ಹಿಂದೆ ಹೇಳಿದಂತೆ ರಂಗಾಯಣಕ್ಕೆ ಈಗ ಬೇಕಾಗಿರುವುದು ಅತ್ಯಂತ ತುರ್ತು ಶಸ್ತ್ರ ಚಿಕಿತ್ಸೆ. ತನ್ಮೂಲಕ ಕನ್ನಡ ರಂಗಭೂಮಿಗೆ ಒಂದು ಹೊಸ ದಿಕ್ಕು ಕಾಣುವಂತಾದರೆ ಅದು ಉತ್ತಮ ಬೆಳವಣಿಗೆ.

ಇತ್ತೀಚೆಗೆ ಶ್ರೀ. ಲಿಂಗದೇವರು ಹಳೆಮನೆಯವರನ್ನು ತರಾತುರಿಯಲ್ಲಿ ರಂಗಾಯಣದ ನಿರ್ದೇಶಕರೆಂದು ಸರಕಾರ ಹೆಸರಿಸಿ, ಅದನ್ನು ಪುಷ್ಠೀಕರಿಸುವಂತೆ ಕನಡ ಮತ್ತು ಸಂಸೃತಿ ಇಲಾಖೆ ಪತ್ರಿಕೆಗಳಿಗೆ ಹೇಳಿಕೆಯನ್ನು ಸಹ ನೀಡಿತ್ತು. ತದ ನಂತರ ಅವರ ಆಯ್ಕೆಯನ್ನು ಪ್ರಶ್ನಿಸಿ, ಅವರಿಗೆ ನಕ್ಸಲರ ಜೊತೆ ನಂಟಿರುವುದನ್ನು ಶಂಕಿಸಿ ಪೊಲೀಸ್ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿದ್ದರ ಕುರಿತು ವರದಿಗಳು ದಾಖಲೆ ಸಮೇತ ಪ್ರಕಟಗೊಂಡವು. ಅಲ್ಲದೇ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಹಾಗೂ ಪ್ರಯೋಗಾತ್ಮಕ ಸಂಸ್ಥೆಯಾದ ರಂಗಾಯಣಕ್ಕೆ ಶ್ರೀ. ಹಳೆಮನೆಯವರ ಅನುಭವದ ಹಿನ್ನಲೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಲೇಖನ ಸಹ ಪ್ರಕಟಗೊಂಡಿತು. ಇವೆಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಎಲ್ಲರನ್ನೂ ಗೊಂದಲದಲ್ಲಿ ನೂಕುವಂತೆ ಅದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿ "ಶ್ರೀ. ಹಳೆಮನೆ ಅವರ ಆಯ್ಕೆಯ ಕುರಿತು ಅಧೀಕೃತವಾಗಿ ಆದೇಶ ಹೊರಡಿಸುವುದು, ಅವರನ್ನು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನಿರ್ದೇಶಕರೆಂದು ಅಧಿಕಾರ ಸ್ವೀಕರಿಸುವಂತೆ ಆಹ್ವಾನಿಸುವುದು ಎಲ್ಲ ಸರಕಾರದ ಕೈಯಲ್ಲಿದೆ. ಈಗ ನಾವು ಕೇವಲ ಸರಕಾರದ ನಿರ್ಧಾರವನ್ನು ಕಾಯ್ದು ನೋಡಬೇಕಷ್ಟೇ" ಎಂಬಂತಹ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡತೊಡಗಿದರು.

ಇದಕ್ಕೆ ತದ್ವಿರುದ್ಧವಾಗಿ ಕೆಲವು ಹಿರಿಯ ರಂಗ ಕರ್ಮಿಗಳು, ಸಾಹಿತಿಗಳು ಸರಕಾರದ ಈ ರೀತಿಯ ನಿರ್ಧಾರ ರಾಜಕೀಯ ಕುತಂತ್ರದಿಂದ ಕೂಡಿದ್ದು. ಪ್ರಗತಿಪರ ಚಿಂತಕರೆಲ್ಲ ನಕ್ಸಲರೊಂದಿಗೆ ನಂಟನ್ನು ಹೊಂದಿದವರೆಂದು ಸರಕಾರ ಯಾವತ್ತೂ ಬಿಂಬಿಸುತ್ತ ಬಂದಿದೆ. ಇದು ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮುಂತಾದ ರೀತಿಯಲ್ಲಿ ಹೇಳಿಕೆಗಳನ್ನು ನೀಡತೊಡಗಿದರು. ಇದೂ ಸಹ ಒಂದು ರೀತಿಯಲ್ಲಿ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನವೇ. ಏಕೆಂದರೆ ಯಾರೂ ಸಹ ರಂಗಾಯಣದ ಮೂಲ ಸಮಸ್ಯೆಗಳ ಕುರಿತು ಮಾತನಾಡಲು ತಯಾರಿಲ್ಲ. ರಂಗಾಯಣವನ್ನು ಆಡಳಿತಾತ್ಮಕವಾಗಿ ನೋಡಿಕೊಳ್ಳಲು ಒಬ್ಬ ಶಕ್ತ ಅನುಭವಿ ನಿರ್ದೇಶಕರ ಅಗತ್ಯವಿರುವಂತೆಯೇ, ಅದನ್ನು ಕ್ರಿಯಾತ್ಮಕವಾಗಿ ಮುನ್ನಡೆಸುವ ನಾಯಕನ ಅವಶ್ಯಕತೆ ಕೂಡ ಖಂಡಿತವಾಗಿ ಇದೆ. ಇದೆಲ್ಲವನ್ನು ಬಿಟ್ಟು, ಈಗ ಇಂತಹ ದಿಕ್ಕು ತಪ್ಪಿಸುವ ಹೇಳಿಕೆಗಳಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಹಿಂದೆ ರಾಜಕೀಯ ಕುತಂತ್ರ ಅಡಗಿದೆ ಎಂಬಂತಹ ಹೇಳಿಕೆಗಳು ಎಷ್ಟರ ಮಟ್ಟಿಗೆ ಸೂಕ್ತ?

ರಂಗಾಯಣ ಆರಂಭವಾದಾಗಿನಿಂದ ಇಂದಿನ ವರೆಗೆ ೨೧ ವರ್ಷಗಳ ಕಾಲ ಅಲ್ಲಿನ ಕಲಾವಿದರು ಯಾವುದೇ ರಾಜಕಾರಣಿಗಳಿಗೆ ಕಡಿಮೆ ಇಲ್ಲದಂತೆ ರಾಜಕೀಯ ಮಾಡುತ್ತ, ನಿರ್ದೇಶಕರ ಆಯ್ಕೆಯಲ್ಲಿ ತಮ್ಮ ಪಾತ್ರವೂ ಸಹ ಅತೀ ಮುಖ್ಯವೆಂದು ಬಿಂಬಿಸುವ ಕಾರ್ಯ, ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ತಮ್ಮ ಕ್ಷೇತ್ರಗಳಿಗೆ ಹಾಕಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಮಯ ಸಾಧಕರಂತೆ ವರ್ತಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಲೋಕದ ವಿಪರ್ಯಾಸಗಳಲ್ಲೊಂದು. ನಿರ್ದೇಶಕರ ಆಯ್ಕೆ ಪ್ರಕ್ರೀಯೆಯಲ್ಲಿ ಆದ ಗೊಂದಲಗಳಿಗೆ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಅನೇಕ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ರಂಗಾಯಣದ ಕಲಾವಿದರು ಹೇಗೆ ವರ್ತಿಸಬೇಕು, ಅವರು ಮಾಡಬೇಕಾದ ಕೆಲಸ ಕಾರ್ಯಗಳೇನು ಎಂಬ ಕುರಿತು ಏನಾದರೂ ಚೌಕಟ್ಟುಗಳನ್ನು ಹಾಕಿ ಆ ನಿಟ್ಟಿನಲ್ಲಿ ಅವರು ಕಾರ್ಯ ಪ್ರವೃತ್ತರಾಗುವಂತೆ ಆದೇಶಿಸಿದ್ದಾರೆಯೇ? ಅಥವಾ ಅದನ್ನು ನೇರವಾಗಿ ಸರಕಾರದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆಯೇ? ಒಂದು ವೇಳೆ ಆ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದರೂ ಅದು ಕಾರ್ಯ ರೂಪಕ್ಕೆ ಯಾಕೆ ಬರುತ್ತಿಲ್ಲ ಎಂದು ಸಂಬಂಧಪಟ್ಟವರ ಕೊರಳ ಪಟ್ಟಿಹಿಡಿದು ಕೇಳಲು ಹಿಂಜರಿಕೆ ಏಕೆ? ಈ ರೀತಿಯ ಹೇಳಿಕೆಗಳನ್ನು ನೀಡಿ ತಮ್ಮ ಹೆಸರು ಚಾಲ್ತಿಯಲ್ಲಿರಬೇಕೆಂಬ ಬಯಕೆಯೇ ಅಥವಾ ಇಚ್ಛಾ ಶಕ್ತಿಯ ಕೊರತೆಯೇ?

ನಮ್ಮ ಸುತ್ತಮುತ್ತಲಿನ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮತ್ತು ಅದನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ನಮ್ಮ ಕಾಳಜಿ ಕೇವಲ ಯಾವುದೇ ವಿಚಾರ ಸಂಕಿರಣಗಳಿಗೆ, ವೇದಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ. ಈಗ ರಂಗಾಯಣದ ಪರಿಸ್ಥಿತಿಯನ್ನು ಕುರಿತು ಎಲ್ಲ ಸಾಂಸ್ಕೃತಿಕ ಕಾಳಜಿಯುಳ್ಳ ಜನ ಸಾಮಾನ್ಯರು ಬೀದಿಗಿಳಿಯುವ ಮೊದಲೇ ಅದಕ್ಕೊಂದು ಸರಿಯಾದ ಮಾರ್ಗವನ್ನು ತೋರುವ ಅನಿವಾರ್ಯತೆ ಇದೆ. ಸರಕಾರ ರಂಗಾಯಣಕ್ಕೆ ಪ್ರತಿ ವರ್ಷ ವ್ಯಯಿಸುತ್ತಿರುವ ಹಣ ಬಿಳಿ ಆನೆಯನ್ನು ಸಾಕದಂತಾಗದೇ, ಆ ಹಣದ ಸಾರ್ಥಕ ಉಪಯೋಗವಾಗಿ ಇಡೀ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ನಾಂದಿಯಾಗಲಿ.

Friday, December 4, 2009

ರಂಗಾಯಣ.....ಸಾಕುಮಾಡಿ ರಾಮಾಯಣ!

(ಪ್ರಸ್ತುತ ಲೇಖನವು ದಿನಾಂಕ ೦೯-೧೧-೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿ ವಾಚಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ದಾಖಲಿಸಿ.)

ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.

ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು...... ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.

ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.

ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.

ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.

ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು...ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.

ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.

ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.

ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.

ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.

ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.