Saturday, September 4, 2010

ನನ್ನ ಕೆಲಸಕ್ಕೆ ಅವರು ಅರ್ಜಿ ಬರೆಯದೇ ಹೋಗಿದ್ದರೆ...

ನಮ್ಮ ಬದುಕನ್ನ ಹಸನಗೊಳಿಸಿ, ನಮ್ಮ ಬದುಕಿಗೆ ಹೊಸ ಭಾಷ್ಯ ಬರೆದ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

ನಾನು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಸೇರಿದಾಗಿನ ಮಾತುಗಳಿವು...ಈ ಮೊದಲು ತಿಳಿಸಿದಂತೆ ನಾನು ಪತ್ರಿಕೋದ್ಯಮಕ್ಕೆ ಆಕಸ್ಮಿಕವಾಗಿ ಬಂದಿದ್ದಲ್ಲ...ಅದನ್ನು ಕಲಿಯಲೇ ಬೇಕು ಮತ್ತು ಅದರಲ್ಲಿ ನನ್ನ ಭವಿಷ್ಯವನ್ನು ಕಂಡು ಕೊಳ್ಳಬೇಕೆಂದು ಬಂದವನು...

ಮೊದಲಿನಿಂದಲು ಪತ್ರಿಕೆಗಳಿಗೆ ಬರೆಯುವ ಉತ್ಸಾಹ, ಆಸಕ್ತಿ ನನಗೆ ಇದ್ದುದರಿಂದ ಕ.ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಬಾಲಸುಬ್ರಮಣ್ಯ ಅದೇನೋ ನನ್ನ ಮೇಲೆ ವಿಶೇಷ ವಾತ್ಸಲ್ಯ...ಅದೊಂದು ದಿನ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು.ಬಾಲು ಸರ್ ಎಂದಿನಂತೆ ತಮ್ಮ ತರಗತಿಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರಿಗು ಅರ್ಜಿ ಹಾಕಲು ಹೇಳಿದರು. ನನ್ನನ್ನು ತಮ್ಮ ಚೇಂಬರಿಗೆ ಕರೆಯಿಸಿ ಅರ್ಜಿ ಹಾಕುವಂತೆ ತಾಕೀತು ಮಾಡಿದರು...ನಾನು ಹುಂ ಎಂದು ಸುಮ್ಮನಾದೆ...ಅದರ ಕಡೆ ಹೆಚ್ಚು ಗಮನ ಹರಿಸದೆ ಎಂದಿನಂತೆ ನನ್ನ ನಾಟಕ, ಓದು ಮುಂತಾದವುಗಳ ಕಡೆ ಗಮನ ಹರಿಸಿ ಅದನ್ನು ಮರೆತು ಬಿಟ್ಟೆ...

ಅರ್ಜಿಹಾಕಲು ಇನ್ನು ಎರಡು ದಿನ ಬಾಕಿ ಇರುವಾಗ ಬಾಲು ಸರ್ ತಮ್ಮ ಚೇಂಬರಿಗೆ ನನ್ನನ್ನು ಮತ್ತೆ ಕರೆಯಿಸಿ ತಮ್ಮ ಎಂದಿನ ಶೈಲಿಯಲ್ಲಿ "ಏನಯ್ಯಾ ಅಪ್ಲಿಕೇಶನ್ ಹಾಕಿದ್ಯಾ" ಎಂದರು. ನಾನು ಇಲ್ಲ ಸರ್..ನನ್ನ ಓದು ಮುಗಿದ ನಂತರ ಕೆಲಸಕ್ಕೆ ಪ್ರಯತ್ನಿಸುತ್ತೇನೆ ಎಂದಾಗ ಅವರ ಸಿಟ್ಟು ನೆತ್ತಿಗೇರಿತ್ತು...ತಾವೇ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ನನ್ನ ಪರವಾಗಿ ಅರ್ಜಿ ಬರೆದು ನನಗೆ ಕೆಳಗೆ ಸಹಿ ಮಾಡಲು ಹೇಳಿ ಕಛೇರಿಯ ಸಹಾಯಕನನ್ನು ಕರೆದು ಅದನ್ನು ಪೋಸ್ಟ್ ಮಾಡಲು ಹೇಳಿದರು..

ನಂತರ ಸಂ.ಕ ದಿಂದ ನನಗೆ ಲಿಖಿತ ಪರೀಕ್ಷೆಗೆ ಪತ್ರ ಬಂದಿತು...ನಾನು ಹಾಜರಾಗಲಿಲ್ಲ...ಸಂದರ್ಶನಕ್ಕೆ ಕರೆ ಬಂದಿತು...ಅದಕ್ಕೂ ಹೋಗಲಿಲ್ಲ..ಕೊನೆಗೆ ನನಗೆ ಕೆಲಸಕ್ಕೆ ಹಾಜರಾಗಲು ಕರೆ ಬಂದಿತು ಮತ್ತು ೧೯೯೪ ಡಿಸೆಂಬರ್ ೩೧ ರಂದು ಕೊನೆಯ ದಿನ ಎಂದು ನಿಗದಿ ಪಡಿಸಿ ಪತ್ರವನ್ನು ಕಳಿಸಿದರು...ಇದರಿಂದ ಬಾಲು ಸರ್ ತುಂಬ ಖುಷಿ ಪಟ್ಟಿದ್ದರು...

ಇಷ್ಟಾದರೂ ನಾನು ಕೆಲಸಕ್ಕೆ ಸೇರಬೇಕೆ ಬೇಡವೇ ಎಂದು ವಿಚಾರಮಾಡುತ್ತಿರುವಾಗ ನನ್ನನ್ನು ಮತ್ತೆ ತಮ್ಮ ಚೇಂಬರಿಗೆ ಕರೆಯಿಸಿ ಬೈದು ಕೆಲಸಕ್ಕೆ ಸೇರುವಂತೆ ಮಾಡಿದರು...

ಅಂದು ಬಹುಶಃ ಅವರು ನನ್ನನ್ನು ಈ ಪರಿ ವತ್ತಾಯಿಸದೆ ಹೋಗಿದ್ದರೆ ನಾನೆಲ್ಲಿರುತ್ತಿದ್ದೆ? ನನ್ನ ಜೀವನಕ್ಕೆ ಒಂದು ಹೊಸ ಭಾಷ್ಯ ಬರೆದ ಬಾಲು ಸರ್ ಅವರನ್ನು ನಾನು ಮರೆಯಲು ಸಾಧ್ಯವೇ ಇಲ್ಲ... ಹಿ ಇಸ್ ಎ ಗ್ರೇಟ್ ಹ್ಯುಮನ್ ಬಿಯಿಂಗ್...ಹ್ಯಾಟ್ಸ್ ಆಫ್ ಸರ್...!!!

1 comment:

  1. ಬದುಕಿಗೆ ಕಾರಣರಾದ ಶಿಕ್ಷಕರನ್ನು ಆತ್ಮೀಯವಾಗಿ ನೆನೆಸಿದ್ದಿರಾ...

    ReplyDelete