Friday, July 31, 2009

ಬರಿಯಾಕಂತನ ಬದಕೇನಿ ಇನ್ನೂ ನಾನು....




"ನಿನ್ನ ಮುಂಗುರುಳು ನೋಡು
ಹ್ಯಾಂಗ ಬಾಗಿ ಬಾಗಿ ನಿನ್ನ
ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು...
ನೀ ಅವಕ್ಕ ಭಾಳ ಸಲಗೀ ಕೊಟ್ಟೀ
ಅಂತ ಕಾಣಸ್ತೈತಿ..
ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು..."

ಕನ್ನಡದಲ್ಲಿ ಯಾವ ಕಾಲಕ್ಕೂ ಚಾಲ್ತಿಯಲ್ಲಿರುವ ಅತ್ಯಂತ ಪ್ರಸಿದ್ಧ ಶಾಯಿರಿ ಇದು...ಇದರಲ್ಲಿ ಶೃಂಗಾರ, ಲಾಲಿತ್ಯ, ಸೊಗಸು, ಪ್ರೀತಿ ಎಲ್ಲವು ಇದೆ...ಆದರೆ ಯಾವ ಹಂತದಲ್ಲಿಯೂ ಅದು ನಿಮಗೆ ಅಶ್ಲೀಲ ಎಂದೆನಿಸುವುದಿಲ್ಲ....ಅದು ಬಿಡಿ...ಸ್ಪರ್ಶ ಚಿತ್ರದ ಈ ಹಾಡನ್ನೇ ಗಮನಿಸಿ...

"ಚಂದಕಿಂತ ಚಂದ ನೀನೆ ಸುಂದರ...
ನಿನ್ನ ನೋಡ ಬಂದ ಬಾನ ಚಂದಿರ..."

ಶಬ್ದಗಳ ಜೊತೆ...ಭಾಷೆಯ ಜೊತೆ ಅತ್ಯಂತ ಸರಳವಾಗಿ ಆಟವಾಡುವುದೆಂದರೆ ಇದು...ನಾನೀಗ ಇದನ್ನೆಲ್ಲಾ ಏಕೆ ಪ್ರಸ್ತಾಪಿಸಲು ಕಾರಣ ಇಷ್ಟೇ...ಅದೇಕೋ ಗೊತ್ತಿಲ್ಲ ಹಿರಿಯ ಮಾರ್ಗದರ್ಶಕರಾದ ಶ್ರೀ. ಇಟಗಿ ಈರಣ್ಣ ಇಂದು ಬೆಳಿಗ್ಗೆಯಿಂದ ತಮ್ಮ ಶಾಯಿರಿ ಗಜಲ್ ಗಳ ಮೂಲಕ ಬಹಳ ಕಾಡುತ್ತಿದ್ದಾರೆ..ಹೀಗಾಗಿ ಅವರ ಜೊತೆಗೆ ಕಳೆದ ಕೆಲವು ಮಧುರ ನೆನಪುಗಳನ್ನು..ಮಧುರ ಪಿಸುಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಆಸೆ...

೧೯೯೮ ರಲ್ಲಿ ನಾನು ನಿರ್ದೇಶಿಸಿದ ದಫನ ನಾಟಕ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ನಂತರ ಅದರ ಸಂತೋಷವನ್ನು ಆಚರಿಸಲು ಎಲ್ಲ ಗೆಳೆಯರು ಸೇರಿ ಹೊಸಪೇಟೆಯ ಹತ್ತಿರದ ಗುಂಡ್ಲುಪೇಟೆ ಪ್ರವಾಸಿಧಾಮಕ್ಕೆ ಹೋಗಿದ್ದೆವು...ಅದೇನೋ ಗೊತ್ತಿಲ್ಲ..ಬಹುಶಃ ನನ್ನ ಬಹುತೇಕ ಯೋಜನೆಗಳು, ಸಂಗೀತ ಸಂಯೋಜನೆ, ನಾಟಕದ ಪರಿಕಲ್ಪನೆ ಮುಂತಾದವುಗಳು ಕೈಗುಡಿದ್ದು "ಗುಂಡು" ಬಿದ್ದ ನಂತರವೇ...ಅಂದು ಕೂಡ ಹೀಗೆಯೇ ಆಯಿತು...ನನ್ನ ಬಹುದಿನದ ಕನಸಿನ ನಾಟಕವಾದ "ರಾವಿ ನದಿಯ ದಂಡೆಯ ಮೇಲೆ" ನಾಟಕವನ್ನು ನಾನು ಮಾಡಿಸುವ ಕನಸು ಕಾಣುತ್ತಿದ್ದೆ...ಅದನ್ನು ತಮ್ಮ ತಂಡಕ್ಕೆ ಮಾಡಿಸಬೇಕೆಂದು ಕನ್ನಡ ಕಲಾ ಸಂಘದ ಗೆಳೆಯರು ಬಯಸುತ್ತಿದರು....ಇವೆಲ್ಲ ಅಂತೆ ಕಂತೆಗಳ ಸುತ್ತ ಮುತ್ತ ನಡೆದಿತ್ತು...ಏಕೆಂದರೆ ಯಾರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಸರಿ ಇಟಗಿ ಈರಣ್ಣ ಅವರನ್ನು ಕೇಳಬೇಕೆಂದು ನಿರ್ಧರಿಸಿ ಅವರಿಗೆ ಗೆಳೆಯರು ಕೂಡಲೇ ಫೋನಾಯಿಸಿದರೆ...ಅವರ ಹತ್ತಿರವೂ ಅದರ ಪ್ರತಿ ಇರಲಿಲ್ಲ...ಕೊನೆಗೆ ನಾನೇ ದಾರಿ ತೋರಿಸಿಕೊಟ್ಟೆ ...ಮೈಸೂರಿನಲ್ಲಿ ನನ್ನ ಗೆಳೆಯರೋಬ್ಬರನ್ನು ಸಂಪರ್ಕಿಸಲು ತಿಳಿಸಿ ಅವರು ಅದರ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ...ಇದೆಲ್ಲ ಮಾತು ನಡೆಯುತ್ತಿರುವಾಗ ಎಲ್ಲರ ಗ್ಲಾಸುಗಳು ಬಹುತೇಕ ಮೂರನೆ ಬಾರಿ ತುಂಬಿದ್ದವು...ಗೆಳೆಯ ಬದರಿ ನಾರಾಯಣ "ಸರ್ ಇನ್ನ ನಾಕು ದಿನದಾಗ ಆ ಸ್ಕ್ರಿಪ್ಟ್ ನಿಮ್ಮ ಕೈಯಾಗ ಇರತದ....ನೀವು ನಾಟಕದ ತಯಾರಿ ಶುರು ಮಾಡ್ರಿ.." ಎಂದರು...ನಾನು ನಿಷೆದಾಗಿನ ಮಾತು ಕಿಷೆದಾಗ ಎನ್ನುವಂತೆ ತಲೆಯಲ್ಲಾಡಿಸಿ ನನ್ನ ಖಾಲಿಯಾದ ಗ್ಲಾಸಿಗೆ ಮತ್ತೆ ವಿಸ್ಕಿ ತುಂಬಿಸಿಕೊಂಡೆ...

ಮಾತಿಗೆ ಸರಿಯಾಗಿ ಮುಂದೆ ನಾಲ್ಕನೆ ದಿನಕ್ಕೆ ಬದರಿ ರಾವಿ ನದಿಯ ದಂಡೆಯ ಮೇಲೆ ನಾಟಕದ ಪ್ರತಿಯೊಂದಿಗೆ ನನ್ನ ಮುಂದಿದ್ದರು..ನಾಟಕದ ತಯಾರಿ ಶುರುವಾಯ್ತು...ಇಟಗಿ ಈರಣ್ಣ ಅವರು ನಾಟಕ ತಯಾರಿಯ ಆರಂಭದಿಂದಲೂ ನನ್ನ ಜೊತೆಗಿದ್ದರು...ಅವಶ್ಯಕತೆ ಇದ್ದಲ್ಲೆಲ್ಲ ಅನುವಾದದ ಕೆಲಸವನ್ನು ತಕ್ಷಣದಲ್ಲಿಯೇ ಮಾಡಿಕೊಡುತ್ತಿದ್ದರು...೧೯೯೯ ಆಗಸ್ಟ್ ೨ ರಿಂದ ಶುರುವಾದ ನಾಟಕದ ತಯಾರಿ ಬರೋಬ್ಬರಿ ಅಕ್ತುಬರ್ ೨, ಗಾಂಧೀ ಜಯಂತಿಯಂದು ಮೊದಲ ಪ್ರದರ್ಶನ ನೀಡುವುದರೊಂದಿಗೆ ಮುಗಿಯಿತು..ಹೊಸಪೇಟೆಯ ಜನ ಪ್ರದರ್ಶನಕ್ಕೆ ತೋರಿದ ಪ್ರತಿಕ್ರೀಯೆ ಅದ್ಭುತ....ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ...ಇದು ಹೊಸಪೇಟೆಯ ಮಟ್ಟಿಗೆ ದಾಖಲೆ....

ಅದರಲ್ಲಿ ಒಂದು ದೃಶ್ಯ ಬರುತ್ತದೆ...ರತನ್ ತಾಯಿ ತನ್ನಿಂದ ಬೇರೆ ಯಾರಿಗೂ ತೊಂದರೆ ಯಾಗದಿರಲೆಂದು ಯಾರಿಗೂ ಹೇಳದೆ ಕೇಳದೆ ಲಾಹೋರ್ ಬಿಟ್ಟು ಹೊರಟುಬಿಡುತ್ತಾಳೆ....ಈ ವಿಷಯ ಸಿಕಂದರ್ ಮಿರ್ಜಾ ಕುಟುಂಬಕ್ಕೆ ತಿಳಿದು...ಅವಳನ್ನು ಹುಡುಕಿಸಿ ತಂದು..ಅವಳಿಂದ ಭಾಷೆಯನ್ನೂ ಪಡೆಯುತ್ತಾರೆ....ಈ ದೃಶ್ಯವನ್ನು ನಾನು ಸಂಯೋಜಿಸುವಾಗ ಹಾಗೂ ಅದರ ತಾಲೀಮನ್ನು ಮಾಡುವ ಪ್ರತಿದಿನ ನಮಗೆಲ್ಲ ತಿಳಿಯದಂತೆ ಇಟಗಿ ಈರಣ್ಣ ಅವರು ಕನ್ನೀರಿತ್ತಿದ್ದರು.. ..ಅಂತಹ ಭಾವುಕ ಜೀವಿ ಅವರು....

ಇದರಲ್ಲಿ ಇನ್ನೊದು ಪ್ರಮುಖ ಪಾತ್ರ ಬರುತ್ತದೆ...ನಾಸಿರ್ ಕಾಜ್ಮಿ ಎಂದು..ಅವನೊಬ್ಬ ಕವಿ...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸಹ ತನ ಅಧ್ಯಯನ..ಕವನಗಳ ಮೂಲಕ ಸದಾ ಎಲ್ಲರೊಂದಿಗೆ ಬೆರೆಯುವ ಜೀವಿ ಮತ್ತು ಯಾವಾಗಲು ಸಮಾಜದ ಒಳಿತಿಗಾಗಿ ಚಿಂತಿಸುವವ...ಯಾರಿಗಾದರು ಸವಾಲಾಗಿ ನಿಲ್ಲಬಲ್ಲಂತಹ ಪಾತ್ರವದು...ಈ ಪಾತ್ರವನ್ನು ಅಭಿನಯಿಸಲು ನಾನು ಚಂದ್ರಶೇಖರ್ ಅವರಿಗೆ ಹೇಳಿದ್ದೆ..ಇದು ಅವರ ಮೊದಲ ಅಭಿನಯದ ನಾಟಕ...ತಂಡದಲ್ಲಿ ಅವರು ಹಿಮ್ಮೇಳ ಗಾಯಕರಾಗಿ ಸೇರಿಕೊಂಡವರು...ಅವರು ನಾಟಕದುದ್ದಕ್ಕೂ ಶಾಯರಿ, ಗಝಲ್ ಗಳನ್ನೂ ಹೇಳಬೇಕಾಗಿರುವುದರಿಂದ ಈ ಪಾತ್ರಕ್ಕೆ ಅವರೇ ಸರಿ ಎಂದು ಅವರಿಗೆ ಈ ಜವಾಬ್ದಾರಿಯನು ವಹಿಸಿದ್ದೆ..ಅವರಿಗೆ ಶಾಯರಿ, ಗಝಲ್ ಗಳನು ಕಲಿಸುವ ಜವಾಬ್ದಾರಿಯನ್ನು ಸ್ವತಃ ಇಟಗಿ ಈರಣ್ಣ ಅವರು ವಹಿಸಿಕೊಂಡಿದ್ದರು...ಒಂದು ದಿನ ಮದ್ಯಾಹ್ನ ನೇರವಾಗಿ ಚಂದ್ರು ಅವರ ಆಫೀಸಿಗೆ ಹೋಗಿ ಅವರನ್ನು ಕರೆದುಕೊಂಡು ಹೊಸಮೆತೆಯ ನೈವೆದ್ಯಂ ಹೋಟೆಲ ನಲ್ಲಿ ಸತತವಾಗಿ ಮೂರು ಗಂಟೆಗಳ ಕಾಲ ಅವರಿಗೆ ಶಾಯರಿ, ಗಝಲ್ ಹೇಳುವ ರೀತಿಯ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ...ಒಂದು ಸಲವಂತೂ ಇಷ್ಟೆಲ್ಲಾ ಹೇಳಿದ ಮೇಲೆಯೂ ಚಂದ್ರು ಸರಿಯಾಗಿ ಹೆಲಿಲ್ಲವೆಂದು ಅವರ ಕಪಾಳ ಮೋಕ್ಷಕ್ಕೂ ಇಟಗಿ ಈರಣ್ಣ ಅವರು ಮುಂದಾಗಿದ್ದರು....

ಇದರಲ್ಲಿ ಬರುವ ಶಾಯರಿ, ಗಝಲ್ ಗಳನ್ನೂ ಅದೆಷ್ಟು ಪರಿಣಾಮಕಾರಿಯಾಗಿ ಅನುವಾದಿಸಿ ಕೊಟ್ಟಿದರೆಂದರೆ...ಅವುಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...ಓದಿಕೊಳ್ಳಿ...

೧. "ಶಹರ ಶಹರಗಳಲ್ಲಿ ಸಾಲು ಸಾಲಾಗಿ ಸಾಲು ಮನೆಗಳನೆಲ್ಲ ಸುಡಲಾಯಿತು
ಸಂತಸದ ಹಬ್ಬವಿದು, ತಾನಿಂತು ಉಕ್ಕಿ, ಭೋರ್ಗರೆವ ಕಡಲಾಯಿತು

ಒಂದೆಡೆಗೆ ತೂಗಿ ತೊನೆಯುತ್ತಾ ಬಂತು ಋತು ವಸಂತದ ಉಲ್ಲಾಸ
ಒಂದೆಡೆಗೆ ಕಂಡ ಕನಸುಗಳ ಗೂಡಿಗೆ ಉರಿವ ಕೊಳ್ಲಿಗಳ ಇಡಲಾಯಿತು

'ಶೀಲ-ದೀಪ' ವ ಹೊತ್ತ ಹಣತೆಗಳ ಕಥೆಯನೆಂತು ಬಣ್ಣಿಸಲಿ ನಾನು?
ನಡುಬೀದಿಯಲ್ಲೇ ಎನ್ನೆಯನು ಚೆಲ್ಲಿ, ಕುಡಿಚಿವುಟಿ ಹೊಸಕಿ ಬಿಡಲಾಯಿತು

ಸಣ್ಣ ಮಕ್ಕಳ ಕಣ್ಣುಗಳು ನೋಡಲಾಗದೆ ನಾಚಿ ಮುಚ್ಚಿಕೊಂಡವು ಗೆಳೆಯ
ಅವರ ಆನಂದಗಳ 'ಹಗಲು ದರೋಡೆಯೇ ನಡೆದು ಕೊಳ್ಲಿಗಳ ರಾಶಿ ಇಡಲಾಯಿತು

ಇಂದಿನ ಈ ಸಮಯದೊಂದಿಗೆ, ಈ ನನ್ನ ಹೆಸರನು ಹೇ ನಾಸಿರ್
ಕಸ ಕಡ್ಡಿ ಕೊಳೆ ಮಾಡಿ, ಕೆಸರಲ್ಲಿ ಹೊಸಕಿ, ಕಾಲುವೆಗೆ ತಳ್ಳಿ ಬಿಡಲಾಯಿತು..."

೨. ನಂಬಿಕಿ ಅಂದ್ರ ಏನದು? ಯಾರ ಮನಸ್ಸಿಗೂ ನವ್ವಾಗಬಾರದು
ನಮಗ ಚೊಲೋ ಆಗಬೇಕು ಅಂದ್ರ, ಯಾರಿಗೂ ಕೆಡಕು ಆಗಬಾರದು..

೩. ಯಾ ಮಂದಿ ಹತ್ರ ನಂಬಿಕೀ ಗಂಧ ಅನ್ನುದ ಇಲ್ಲ
ಆ ಮಂದಿಗೂ ನಮಗೂ ಯಾ ಸಂಬಂಧಾನು ಇಲ್ಲ..

೪. ದುಡಿದದ್ದಕ್ಕ ದುಃಖಾನ ಯಾರಿಗೆ ಕೂಲಿ ಆಗಿ ಸಿಗತೈತಿ
ತಡಿಯುದಿಲ್ಲ ಆ ಗ್ವಾಡಿ, ಭಾಳ ಜಲ್ದೀನೇ ಬೀಳತೈತಿ...


ಈ ಮೇಲೆ ನಮೂದಿಸಿದ ಎಲ್ಲಾ ಶಾಯಿರಿಗಳಲ್ಲಿ ನಮ್ಮ ಇಡೀ ಜೀವನವೇ ಅಡಗಿದೆ...ಅಲ್ಲಿ ಆದರ್ಶವಿದೆ, ತತ್ವವಿದೆ...ಬದುಕಿನ ಸತ್ವ ಸಹ ಅಲ್ಲಿ ಅಡಗಿದೆ....ಅದಕ್ಕೆಂದೇ ಇಟಗಿ ಈರಣ್ಣ ಅವರನ್ನು ನಾನು ಯಾವಾಗಲು ಅವರ ಮತ್ತೊಂದು ಮಹತ್ತರವಾದ ಶಾಯಿರಿ ಮೂಲಕ ನೋಡ ಬಯಸುವುದು...

ಬರಿಯಾಕಂತನ ಬದಕೆನಿ ಇನ್ನು ನಾನು..

ಇಲ್ಲಂದ್ರ ಸಾವು ಅನ್ನೋದು ತಿರಾ ಅಷ್ಟ ಕೆಟ್ಟ ಐತೇನು??

1 comment: