Friday, July 3, 2009

ನಮ್ಮ ಜನಕ್ಕೆ ಸಂ.ಕ ಎಂದರೆ ಬೈಬಲ್ ಇದ್ದಂತೆ....

ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದು ೧೯೯೪ ರ ಡಿಸೆಂಬರ್ ೩೧ ರಂದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖಾಂತರ... ನಾನು ಇನ್ನೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದೆ...ಸಂ.ಕ ದವರು ತಾವಾಗಿಯೇ ಕರೆದು ಕೆಲಸ ಕೊಟ್ಟಿದ್ದರು...
ಆಗ ನನಗೆ ಜಿ. ಎಚ್. ರಾಘವೇಂದ್ರ, ಗುರುರಾಜ್ ಜೋಷಿ, ಲಕ್ಷಣ್ ಜೋಷಿ, ಏನ್.ವಿ. ಜೋಷಿ ಮುಂತಾದ ಹಿರಿಯ ಪತ್ರಕರ್ತರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಎಲ್ಲರು ನನ್ನನ್ನು ಎಂದಿಗೂ ಹೊಸಬ ಎಂದು ಕಾಣಲಿಲ್ಲ...ತಮ್ಮ ಸರಿಸಮನಾಗಿ ಕಂಡು ಕೆಲಸ ಕಲಿಸಿದರು... ಜಿ.ಎಚ್ ಅವರೊಂದಿಗೆ ಕೆಲಸ ಮಾಡುವುದೇ ಒಂದು ಸಂತಸದ ಸಂಗತಿ...ಎಲ್ಲರೊಂದಿಗೆ ಬೆರೆತು, ಹಾಸ್ಯದಿಂದ ಇಡೀ ಕಛೇರಿಯನ್ನು ತೇಲಿಸಿ, ತುಂಬ ಲವಲವಿಕೆಯನ್ನು ತುಂಬಿಸುತ್ತಿದ್ದರು...
ಆಗ ನಮ್ಮಲ್ಲಿಗೆ ಬರುತ್ತಿದ್ದ ಬಿಡಿವರದಿಗಾರರನ್ನು ನಾವು ತುಂಬ ಕಾಡಿಸುತ್ತಿದ್ದೆವು...ಚೇಷ್ಟೆ ಮಾಡುತ್ತಿದ್ದೆವು...ಅವರಿಗೆ ನಾವೇನಾದರೂ ಮರ್ಯಾದೆ ಕೊಡದೆ ಹೋದರೆ...ಶ್ಯಾಮರಾಯರಿಂದ ನಮಗೆ ಮೆಮೋ ಗ್ಯಾರಂಟಿ...ಅಂತಹ ಪರಿಸ್ಥಿತಿ ಅಲ್ಲಿತ್ತಾಗ...
ನಾನು ಸಂ.ಕ ಸೇರಿದ ದಿನದಂದೇ ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಉಪಸಂಪಾದಕ/ವರದಿಗಾರನಾಗಿ ಸೇರಿದ್ದ...ಅವನು ಕೆಲಸಕ್ಕೆ ರಜಾ ಹಾಕಿ ಪರೀಕ್ಷೆ ಬರೆಯಲೆಂದು ಧಾರವಾಡಕ್ಕೆ ಬಂದಿದ್ದ...ನನ್ನಲ್ಲಿ ಸ್ವಲ್ಪ ಕೆಲಸವಿತ್ತಾದ್ದರಿಂದ ನಮ್ಮ ಆಫೀಸಿಗೆ ಬರುತ್ತೇನೆಂದು ಹೇಳಿದ್ದ....ನಾನು ಸರಿ ಎಂದಿದ್ದೆ.... ಅಂದು ಅವನು ಬಂದ ಸಮಯದಲ್ಲಿ ಒಬ್ಬ ಬಿಡಿವರದಿಗಾರ ಬಂದು ನನ್ನ ಹಾಗು ಜಿ.ಎಚ್. ಅವರ ತಲೆ ತಿನುತ್ತಿದ್ದ...ನಾವು ಅವನನ್ನು ಹೊತ್ತು ಹಾಕಲು ಎಷ್ಟೇ ಪ್ರಯತ್ನಿಸಿದರೂ ಅವನೇನು ಅಲ್ಲಿಂದ ಹೊರಡುವ ಲಕ್ಷಣಗಳು ಕಾಣಿಸಲಿಲ್ಲ...ಆ ಬಿಡಿವರದಿಗಾರನಿಗೆ ನನ್ನ ಗೆಳೆಯನ ಪರಿಚಯ ಮಾಡಿಸಿ, ಇವರು ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ಎನ್ನುವ ದೊಡ್ಡ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾರೆ ಎಂದದ್ದೇ ತಡ...ಆತ ತಕ್ಷಣ ನನ್ನನ್ನು ತಡವಿ ನನ್ನ ಗೆಳೆಯನಿಗೆ.."ಅದ್ಯಾವ ಪೆಪರ್ರೀ...ಈ ಸಾಹೇಬರಿಗೆ ಹೇಳ್ರಿ ನಿಮಗ ಸಂಯುಕ್ತ ಕರ್ನಾಟಕದಾಗ ಕೆಲಸ ಕೊಡಸ್ತಾರ ...ಇದರಂಥಾ ಪೇಪರ್ ಬ್ಯಾರೆ ಯಾವುದೈತರಿ" ಎಂದ...ಅಲ್ಲಿಯೇ ಕುಳಿತಿದ್ದ ಜಿ.ಎಚ್. ತಕ್ಷಣ "ಗೋವಿಂದಾ...ಗೋವಿಂದಾ...." ಎಂದು ಎದ್ದು ಬೀಡಿ ಸೇದಲು ಹೊರಕ್ಕೆ ನಡೆದರು!!!!

1 comment: